ನಿಷೇಧದ ಹೊರತಾಗಿಯೂ ದೆಹಲಿಯಲ್ಲಿ ಪಟಾಕಿಗಳನ್ನು ಸಿಡಿಸಲಾಗಿರುವ ಕಾರಣ, ದೀಪಾವಳಿಯ ಮರುದಿನ ಬೆಳಿಗ್ಗೆ ದೆಹಲಿಯ ವಾತಾವರಣವು ತೀವ್ರವಾಗಿ ಕಲುಷಿತಗೊಂಡಿದೆ ಎಂದು ವರದಿಯಾಗಿದೆ. ಗುರುವಾರ ರಾತ್ರಿಯಿಂದ ಮಾಲಿನ್ಯಕಾರಕಗಳ ಮಟ್ಟವು ತೀವ್ರವಾಗಿ ಏರಿದೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಅಂಕಿಅಂಶಗಳು ಸೂಚಿಸಿವೆ.
ಕಳೆದ 24 ಗಂಟೆಗಳ ಸರಾಸರಿಯಂತೆ, ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಹಲವಾರು ಮೇಲ್ವಿಚಾರಣಾ ಕೇಂದ್ರಗಳಲ್ಲಿನ ವಾಯು ಗುಣಮಟ್ಟ ಸೂಚ್ಯಂಕ ‘ತೀವ್ರ’ ವಿಭಾಗದಲ್ಲಿದೆ. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ, ವಾಯು ಗುಣಮಟ್ಟ ಸೂಚ್ಯಂಕ 470 ಆಗಿತ್ತು, ಅಶೋಕ್ ವಿಹಾರ್ನಲ್ಲಿ ಇದು 469 ರಷ್ಟಿತ್ತು. 401 ಮತ್ತು 500 ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕವನ್ನು ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್
“ತೀವ್ರ ವಿಭಾಗದಲ್ಲಿರುವ ವಾಯು ಗುಣಮಟ್ಟ ಸೂಚ್ಯಂಕವು ಆರೋಗ್ಯಕರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇರುವ ಕಾಯಿಲೆಗಳ ಮೇಲೆ ಕೂಡಾ ಗಂಭೀರವಾಗಿ ಪರಿಣಾಮ ಬೀರುತ್ತದೆ” ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(CPCB) ಹೇಳಿದೆ. ಜಹಾಂಗೀರ್ಪುರಿ ನಿಲ್ದಾಣದಲ್ಲಿ 487 ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದ್ದ, ಲೋಧಿ ರಸ್ತೆಯಲ್ಲಿ 465 ದಾಖಲಾಗಿದೆ.
ದೆಹಲಿಯ ಮಂಜಿನ ಪರಿಸ್ಥಿತಿಗಳು ಶುಕ್ರವಾರ ಬೆಳಿಗ್ಗೆ ತೀವ್ರಗೊಂಡಿದ್ದು, ಸಫ್ದರ್ಜಂಗ್ ಮತ್ತು ಪಾಲಂ ವಿಮಾನ ನಿಲ್ದಾಣಗಳಲ್ಲಿ 200 ಮೀ ನಿಂದ 500 ಮೀ ವ್ಯಾಪ್ತಿಯವರೆಗೆ ಗೋಚರತೆ ಕುಸಿದಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ವಿಜ್ಞಾನಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹರಿಯಾಣ: ದೆಹಲಿ ಸಮೀಪದ 14 ಜಿಲ್ಲೆಗಳಲ್ಲಿ ಪಟಾಕಿ ಮಾರಾಟ, ಬಳಕೆ ನಿಷೇಧ