ಒಡಿಶಾದ ಸಂಬಲ್ಪುರದಲ್ಲಿ ಬಿಜೆಪಿ ಪಕ್ಷದವರು ಪ್ರತಿಭಟನೆ ನಡೆಸುತ್ತಿರುವ ವೇಳೆ ವಿರೋಧ ಪಕ್ಷದ ನಾಯಕ ಜಯನಾರಾಯಣ ಮಿಶ್ರಾ ಅವರು, ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದಲ್ಲದೇ, ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆದಾಗ್ಯೂ, ಜಯನಾರಾಯಣ ಮಿಶ್ರಾ ಅವರು, ”ತಾವು ಹಲ್ಲೆ ನಡೆಸಿಲ್ಲ, ಧನುಪಾಲಿ ಪೊಲೀಸ್ ಠಾಣೆ ಪ್ರಭಾರಿ ಇನ್ಸ್ಪೆಕ್ಟರ್ ಅನಿತಾ ಪ್ರಧಾನ್ ಅವರೇ ನನ್ನನ್ನು ತಳ್ಳಿದ್ದಾರೆ” ಎಂದು ಆರೋಪಿಸಿದ್ದಾರೆ.
ರಾಜ್ಯಾದ್ಯಂತ “ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ” ವಿಚಾರಕ್ಕೆ ಪ್ರತಿಭಟನೆ ನಡೆಸಲಾಗುತ್ತಿತ್ತು. ಅದರ ಭಾಗವಾಗಿ ಸಂಬಲ್ಪುರದ ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ಸಂದರ್ಭದಲ್ಲಿ ಬುಧವಾರ ಸಂಭವಿಸಿದ ಘಟನೆ ಬಗ್ಗೆ ಇಬ್ಬರೂ ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ.
ಮಹಿಳಾ ಪೊಲೀಸ್ ಅಧಿಕಾರಿ ಅನಿತಾ ಪ್ರಧಾನ್ ಪ್ರಕಾರ, ”ಬಿಜೆಪಿ ಕಾರ್ಯಕರ್ತರು ಆವರಣಕ್ಕೆ ನುಗ್ಗಲು ಪ್ರಯತ್ನಿಸುತ್ತಿರುವಾಗ, ಮಿಶ್ರಾ ಅವರು ನನಗೆ ಎದುರಾದರು, ಆಗ ಅವರು ನನ್ನನ್ನು ತೋರಿಸಿ ಆಕೆ ಯಾರು ಎಂದು ಕೇಳಿದರು. ಮತ್ತೆ ನಾನು ಲಂಚ ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ಆರೋಪಿಸಿದರು. ಅಷ್ಟೇ ಅಲ್ಲದೇ ನನ್ನನ್ನು ಡಕಾಯಿತ ಎಂದು ಕರೆದರು. ಆಗ ನಾನು ಅವರನ್ನು ಪ್ರಶ್ನೆ ಮಾಡಿದಾಗ, ಅವರು ನನ್ನ ಮುಖದ ಮೇಲೆ ಕೈಯಿಟ್ಟು ತಳ್ಳಿದರು” ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದು ಕೊಲೆಗೆ ಕರೆ ಕೊಟ್ಟ ಅಶ್ವತ್ಥ ನಾರಾಯಣ: ಬೊಮ್ಮಾಯಿಯ ಮೌನ, ಸಮ್ಮತಿಯ ಲಕ್ಷಣವೇ?; ಸಿದ್ದರಾಮಯ್ಯ ಪ್ರತಿಕ್ರಿಯೆ
ಮಹಿಳಾ ಅಧಿಕಾರಿಯ ಆರೋಪ ತಳ್ಳಿಹಾಕಿದ ಬಿಜೆಪಿ ನಾಯಕ, ”ಪೊಲೀಸರು ಮಹಿಳಾ ಕಾರ್ಮಿಕರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಅದನ್ನು ಪ್ರಶ್ನೆ ಮಾಡಲು ನಾನು ಮುಂದೆ ಬಂದು ಪೊಲೀಸರ ವಿರುದ್ಧ ಸಾಕಷ್ಟು ವಾಗ್ದಾಳಿ ನಡೆಸಿದೆನು. ಆಗ ಪೊಲೀಸರು ನನ್ನನ್ನೇ ತಳ್ಳಿದ್ದಾರೆ, ಆದರೆ ನಾನು ಅವರನ್ನು ತಳ್ಳಲಿಲ್ಲ. ಪೊಲೀಸರ ವಿರುದ್ಧ ಆರೋಪಗಳನ್ನು ಹೊರಿಸಿದ್ದರಿಂದ, ಅವರು ನನ್ನ ವಿರುದ್ಧ ಸಂಚು ರೂಪಿಸಿದ್ದಾರೆ.. ನನಗೆ ಆಕೆಯ ಪರಿಚಯವೂ ಇಲ್ಲ” ಎಂದು ಪ್ರತಿಪಕ್ಷದ ನಾಯಕ ಹೇಳಿದ್ದಾರೆ.
ಸಂಬಲ್ಪುರ ಪೊಲೀಸ್ ವರಿಷ್ಠಾಧಿಕಾರಿ ಬಿ ಗಂಗಾಧರ್ ಅವರು ಘಟನೆಯ ವರದಿಯನ್ನು ಕೇಳಿದ್ದು, ಈ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಒಡಿಶಾ ಪೊಲೀಸ್ ಸರ್ವಿಸ್ ಅಸೋಸಿಯೇಷನ್, ಸಂಬಲ್ಪುರ ವಿಭಾಗವು ಉತ್ತರ ವಲಯದ ಡಿಐಜಿಗೆ ಮನವಿ ಸಲ್ಲಿಸಿದೆ.