ತನ್ನ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಮುಂದಿಟ್ಟುಕೊಂಡು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಜನಸಂಖ್ಯೆಯ ಸ್ಫೋಟವನ್ನು ಸ್ಥಿರಗೊಳಿಸುವುದು ಸೇರಿದಂತೆ ಇತರ ಸಮಸ್ಯೆಗಳನ್ನು ನೀಗಿಸಲು ಎಂಟು ಉಪ ಗುಂಪುಗಳನ್ನು ರಚಿಸುವುದಾಗಿ ಪ್ರಕಟಿಸಿದ್ದಾರೆ. ಸ್ಥಳೀಯ ಮುಸ್ಲಿಂ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಹಿಮಾಂತ ಬಿಸ್ವಾ ಈ ಘೋಷಣೆ ಮಾಡಿದ್ದಾರೆ.
ಸಭೆಯಲ್ಲಿ ಭಾಗವಹಿಸಿದವವರು ಜನಸಂಖ್ಯೆಯ ಸ್ಫೋಟವು ರಾಜ್ಯದ ಅಭಿವೃದ್ಧಿಗೆ, ವಿಶೇಷವಾಗಿ ಆರ್ಥಿಕತೆಗೆ ಪ್ರಮುಖ ಬೆದರಿಕೆಯಾಗಿದೆ ಎಂದು ಒಪ್ಪಿಕೊಂಡಿದ್ದು, ಉಪ-ಗುಂಪುಗಳ ರಚನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಹಿಮಾಂತ್ ಬಿಸ್ವಾ ಹೇಳಿದ್ದಾರೆ. “ನಾವು ಅಗ್ರ ಐದು ರಾಜ್ಯಗಳಲ್ಲಿ ಇರಬೇಕಾದರೆ, ನಮ್ಮ ಜನಸಂಖ್ಯೆಯ ಸ್ಫೋಟವನ್ನು ನಾವು ನಿರ್ವಹಣೆ ಮಾಡಬೇಕು” ಎಂದು ಹಿಮಾಂತ ಬಿಸ್ವಾ ಹೇಳಿದ್ದಾರೆ.
ಇದನ್ನೂ ಓದಿ: ‘ನಮ್ಮ ಮಾತನ್ನೂ ಕೇಳಿ’- ಪ್ರಧಾನಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಾರ್ಖಂಡ್ ಸಿಎಂ
ಜನಸಂಖ್ಯೆ ಸ್ಥಿರೀಕರಣ, ಆರೋಗ್ಯ, ಶಿಕ್ಷಣ, ಸಾಂಸ್ಕೃತಿಕ ಗುರುತು, ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಈ ಉಪ ಗುಂಪುಗಳು ಕಾರ್ಯನಿರ್ವಹಿಸುತ್ತವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. “ಉಪ-ಗುಂಪುಗಳಲ್ಲಿ ಸಂಪೂರ್ಣ ಸಮಸ್ಯೆಗಳನ್ನು ಚರ್ಚಿಸಲಾಗುವುದು. ಮೂರು ತಿಂಗಳ ನಂತರ, ಐದು ವರ್ಷದ ಮಾರ್ಗಸೂಚಿಯನ್ನು ಸಿದ್ಧಪಡಿಸಲು ನಾವು ಮತ್ತೆ ಸಭೆ ನಡೆಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯದ ನಂತರ ಸ್ಥಳೀಯ ಮುಸ್ಲಿಂ ನಾಯಕರೊಂದಿಗೆ ಅಸ್ಸಾಂ ಸರ್ಕಾರ ನಡೆಸಿದ ಮೊದಲ ಸಭೆ ಇದಾಗಿದೆ ಎಂದು TNIE ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಈ ಸಭೆಯ ನಂತರ, ವಲಸೆ ಬಂದ ಮುಸ್ಲಿಂ ಪ್ರತಿನಿಧಿಗಳೊಂದಿಗೂ ಚರ್ಚಿಸುವುದಾಗಿ ಹಿಮಾಂತ ಬಿಸ್ವಾ ಹೇಳಿದ್ದಾರೆ. ಅವರು ನಡೆಸುತ್ತಿರುವ ಸರಣಿ ಸಭೆಯು, ಜನಸಂಖ್ಯಾ ನಿರ್ವಹಣೆ ಕುರಿತು ರಾಜಕೀಯ ಮತ್ತು ಸಾಮಾಜಿಕ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಕೊರೊನಾ ಇಲ್ಲ, ಮಾಸ್ಕ್ ಬೇಡ ಹೇಳಿಕೆ ನೀಡಿ ಟ್ರೋಲ್ ಆದ ಬಿಜೆಪಿ ಸಚಿವ