Homeಮುಖಪುಟಒಳಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದೆ, ಅಲ್ಲದೇ 13 ರಾಜ್ಯಗಳು ವಿರೋಧಿಸಿವೆ: ಕೇಂದ್ರ ಸಚಿವ ನಾರಾಯಣಸ್ವಾಮಿ

ಒಳಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದೆ, ಅಲ್ಲದೇ 13 ರಾಜ್ಯಗಳು ವಿರೋಧಿಸಿವೆ: ಕೇಂದ್ರ ಸಚಿವ ನಾರಾಯಣಸ್ವಾಮಿ

ಇಷ್ಟು ದಿನಗಳ ಕಾಲ ತಾನು ಒಳಮೀಸಲಾತಿಯ ಪರ ಎಂದು ಸೋಗಲಾಡಿ ನಿಲುವನ್ನು ತೋರುತ್ತಿದ್ದ ಬಿಜೆಪಿಯ ಅಸಲಿಯತ್ತು ನಿನ್ನೆ ಸಂಸತ್ತಿನಲ್ಲಿ ಬಯಲಾಗಿದೆ - ಶಿವಸುಂದರ್

- Advertisement -
- Advertisement -

ಒಳಮೀಸಲಾತಿ ವಿಚಾರವು ನ್ಯಾಯಾಲಯದ ಅಧೀನದಲ್ಲಿರುವುದರಿಂದ, ಅಲ್ಲದೇ ಸಂವಿಧಾನ ತಿದ್ದುಪಡಿಗೆ 13 ರಾಜ್ಯಗಳು ವಿರೋಧಿಸಿರುವುದರಿಂದ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ಮಂತ್ರಿ ನಾರಾಯಣಸ್ವಾಮಿಯವರು ತಿಳಿಸಿದ್ದಾರೆ.

ಬುಧವಾರ ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರಾದ ಜಿ.ವಿ.ಎಲ್ ನರಸಿಂಹರಾವ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಸಚಿವರು, “ಸಂವಿಧಾನದಲ್ಲಿ ಈಗಿರುವ ಅವಕಾಶಗಳಂತೆ ಒಳಮೀಸಲಾತಿಯನ್ನು ಕಲ್ಪಿಸಲು ಸಾಧ್ಯವಾಗದು. ಇದರ ಬಗ್ಗೆ ರಚಿಸಲಾಗಿದ್ದ ರಾಷ್ಟ್ರೀಯ ಆಯೋಗವು ಒಳಮೀಸಲಾತಿಯನ್ನು ಕಲ್ಪಿಸಿಕೊಡುವಂತೆ ಸಂವಿಧಾನದ ಆರ್ಟಿಕಲ್ 341 ಕ್ಕೆ ತಿದ್ದುಪಡಿ ತರಲು ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿನ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಕೋರಲಾಗಿತ್ತು. ಈವರೆಗೆ 20ರಾಜ್ಯ ಸರ್ಕಾರಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಭಿಪ್ರಾಯಗಳನ್ನು ನೀಡಿವೆ. ಅದರಲ್ಲಿ 7 ರಾಜ್ಯಗಳು ಒಳಮೀಸಲಾತಿಯ ಪರವಾಗಿಯೂ, 13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವು ಒಳಮೀಸಲಾತಿಯ ವಿರುದ್ಧವಾಗಿಯೂ ಅಭಿಪ್ರಾಯಗಳನ್ನು ನೀಡಿವೆ” ಎಂದು ತಿಳಿಸಿದ್ದಾರೆ.

ಜಿ.ವಿ.ಎಲ್ ನರಸಿಂಹರಾವ್ ಅವರು, “ಒಳಮೀಸಲಾತಿಯ ಬಗ್ಗೆ ಈವರೆಗೆ ಬೇರೆಬೇರೆ ರಾಜ್ಯಗಳು ನೀಡಿರುವ ಅಭಿಪ್ರಾಯಗಳೇನು?  ಕೇಂದ್ರ ಸರ್ಕಾರದ ಮುಂದೆ ಸಂವಿಧಾನಕ್ಕೆ ತಿದ್ದುಪಡಿ ತಂದು ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಅಧಿಕಾರ ನೀಡುವ ಯೋಜನೆ ಇದೆಯೇ? ಮತ್ತು ಅಂಥ ಯೋಜನೆಯಿದ್ದಲ್ಲಿ ಎಷ್ಟು ಕಾಲಾವಧಿಯೊಳಗೆ ಅದು ಜಾರಿಯಾಗಲಿದೆ ಎಂಬುದರ ಕುರಿತು ಪ್ರಶ್ನೆಗಳನ್ನು ಕೇಳಿದ್ದರು.

ಇದಕ್ಕೆ ಮೇಲಿನಂತೆ ಉತ್ತರಿಸಿರುವ ಸಚಿವರು, “ಹಲವು ರಾಜ್ಯಗಳು ಒಳಮೀಸಲಾತಿಯನ್ನು ವಿರೋಧಿಸಿವೆ. ಎಲ್ಲಕ್ಕಿಂತ ಹೆಚ್ಚಾಗಿ ವಿಚಾರವು ನ್ಯಾಯಾಲಯದ ಅಧೀನದಲ್ಲಿದೆ ಮತ್ತು ಐವರು ನ್ಯಾಯಾಧೀಶರ ಪೀಠವು ಈ ವಿಷಯವನ್ನು ಏಳು ನ್ಯಾಯಾಧೀಶರ ಅಥವಾ ಹೆಚ್ಚಿನ ಪೀಠಕ್ಕೆ ವರ್ಗಾಯಿಸಬೇಕೆಂದು ಕೋರಿದೆ” ಎಂದು ಉತ್ತರವನ್ನು ಮುಗಿಸಿದ್ದಾರೆ. ಅಲ್ಲಿಗೆ ಕೇಂದ್ರ ಸರ್ಕಾರ ಏನು ಮಾಡಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಚಿಂತಕರಾದ ಶಿವಸುಂದರ್, “ಇಷ್ಟು ದಿನಗಳ ಕಾಲ ತಾನು ಒಳಮೀಸಲಾತಿಯ ಪರ ಎಂದು ಸೋಗಲಾಡಿ ನಿಲುವನ್ನು ತೋರುತ್ತಿದ್ದ ಬಿಜೆಪಿಯ ಅಸಲಿಯತ್ತು ನಿನ್ನೆ ಸಂಸತ್ತಿನಲ್ಲಿ ನಡೆದ ಪ್ರಶ್ನೋತ್ತರಗಳಲ್ಲಿ ಬಯಲಾಗಿದೆ” ಎಂದು ಕಿಡಿಕಾರಿದ್ದಾರೆ.

ತಮ್ಮ ಜಸ್ಟ್‌ ಆಸ್ಕಿಂಗ್ ಲೇಖನದಲ್ಲಿ ವಿವರವಾಗಿ ಬರೆದಿರುವ ಅವರು, “ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಘಟಾನುಘಟಿಗಳೆಲ್ಲಾ ಒಳಮೀಸಲಾತಿ ಒದಗಿಸಲು ಮೋದಿ ಸರ್ಕಾರ ಕಟಿಬದ್ಧವಾಗಿದೆ ಎಂದೆಲ್ಲಾ ಬೊಗಳೆ ಬಿಟ್ಟಿದ್ದರು. ಆದರೆ ಮೇಲಿನ ಉತ್ತರದಲ್ಲಿ ಸ್ಪಷ್ಟವಾಗಿರುವಂತೆ ಒಳಮೀಸಲಾತಿಯನ್ನು ಸಂವಿಧಾನ ತಿದ್ದುಪಡಿಯ ಮೂಲಕ ತರುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಸರ್ಕಾರ ಉತ್ತರವನ್ನೇ ಕೊಡದೆ ಜಾರಿ ಕೊಂಡಿದೆ. ಅಷ್ಟು ಮಾತ್ರವಲ್ಲದೇ ಈ ವಿಷಯವು ಸಬ್ ಜುಡೀಸ್- ಅರ್ಥಾತ್ ನ್ಯಾಯಾಲಯದ ಅಧೀನದಲ್ಲಿರುವುದರಿಂದ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗದು ಎಂದು ಸ್ಪಷ್ಟವಾಗಿ ಹೇಳಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೆ ಸುಪ್ರೀಂ ಕೋರ್ಟಿನ ಅಧೀನದಲ್ಲಿರುವ ಅಥವಾ ಸುಪ್ರೀಂ ಕೋರ್ಟು ಆದೇಶ ನೀಡಿದ್ದರು ಅದಕ್ಕೆ ತದ್ವಿರುದ್ಧವಾದ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿಲ್ಲವೇ? ಇತಿಹಾಸದಲ್ಲಿ ಸಂಸತ್ತು ತನ್ನ ಸಾರ್ವಭೌಮತೆಯನ್ನು ಚಲಾಯಿಸಿ ಸಂವಿಧಾನ ತಿದ್ದುಪಡಿಯ ಮೂಲಕ ಸುಪ್ರೀಂ ಕೋರ್ಟು ಆದೇಶಗಳನ್ನು ಅಮಾನ್ಯಗೊಳಿಸಿಲ್ಲವೇ? ಅಷ್ಟೆಲ್ಲ ಏಕೆ? ದೆಹಲಿ ಸರ್ಕಾರಕ್ಕೆ ಅಧಿಕಾರಿಶಾಹಿಯ ಮೇಲಿನ ಅಧಿಕಾರದ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟು ಎತ್ತಿ ಹಿಡಿದರೂ ಮೋದಿ ಸರ್ಕಾರ ಅದನ್ನು ಅಮಾನ್ಯಗೊಳಿಸಲು ಸುಗ್ರೀವಾಜ್ಞೆ ತರಲಿಲ್ಲವೇ? ಈಗ ಅದನ್ನು ಸಂಸತ್ತಿನಲ್ಲಿ ಮಸೂದೆಯಾಗಿ ಮಂಡಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟಿನ ಉನ್ನತ ಪೀಠ ಈ ವಿಷಯದಲ್ಲಿ ಇನ್ನು ರಚನೆಯೇ ಆಗಿಲ್ಲ. ಆದರೆ ಸುಪ್ರೀಂ ಪೀಠ ವಿಚಾರಣಾ ನೋಟೀಸ್ ಕೊಟ್ಟ ವಿಷಯಗಳಲ್ಲೂ ಸಂಸತ್ತು ಕಾನೂನು ಮಾಡಿಲ್ಲವೇ? ಸಂವಿಧಾನ ತಿದ್ದುಪಡಿಗಳನ್ನು ಮಾಡಿಲ್ಲವೇ? ಅಂದರೆ ಮೋದಿ ಸರ್ಕಾರ ಒಳಮೀಸಲಾತಿ ನಿರಾಕರಿಸಲು ಸಬ್ ಜುಡೀಸ್ ಸಬೂಬು ಹೇಳುತ್ತಿದೆಯಷ್ಟೆ. ಅದರ ಜೊತೆಗೆ 20 ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಒಪ್ಪಿರುವುವು ಕೇವಲ 7 ರಾಜ್ಯಗಳು- ಉಳಿದ 13 ರಾಜ್ಯಗಳು ವಿರೋಧಿಸಿವೆ ಎಂಬ ನೆಪವೂ ಈಗ ಮೋದಿ ಸರ್ಕಾರ ಮುಂದಿಟ್ಟಿದೆ ಎಂದು ಕಿಡಿಕಾರಿದ್ದಾರೆ.

ವಾಸ್ತವದಲ್ಲಿ ಸುಪ್ರೀಂನ ಐದು ನ್ಯಾಯಾಧೀಶರ ಪೀಠ ಮುಖ್ಯ ನ್ಯಾಯಾಧೀಶರಿಗೆ ಈ ವಿಷಯದ ಬಗ್ಗೆ, ಏಳು ನ್ಯಾಯಾಧೀಶರ ಪೀಠ ರಚಿಸಲು ಸಲಹೆ ಮಾಡಿದ್ದು 2020ರ ಆಗಸ್ಟ್ 20 ರಂದು. ಅದು ಸಹ ದವಿಂದರ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಪ್ರಕರಣದಲ್ಲಿ. ಹಾಗಿದ್ದರೂ ಕೂಡ ಕಳೆದ ಎರಡು ವರ್ಷಗಳಲ್ಲಿ ಒಳಮೀಸಲಾತಿ ವಿಷಯವು ಸಬ್ ಜುಡೀಸ್ ಆಗಿದೆ ಎಂದು ಒಮ್ಮೆಯೂ ಹೇಳದೆ ಕರ್ನಾಟಕದ ಬಿಜೆಪಿ , ಸಂಘಪರಿವಾರ ಮತ್ತು ಕೇಂದ್ರದ ಮೋದಿ ಸರ್ಕಾರ ಒಳಮೀಸಲಾತಿ ಕಲ್ಪಿಸುವುದಾಗಿ ಭರವಸೆ ಕೊಟ್ಟಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.

ಇದೇ ಪ್ರಶ್ನೆಯನ್ನು ಹೊರಟಗಾರರು ಕೇಳಿದಾಗ ಸಂವಿಧಾನ ತಿದ್ದುಪಡಿಯನ್ನು ಮಾಡದೆ, ಸುಪ್ರೀಂ ಕೋರ್ಟಿಗೂ ಹೋಗದೆ ಹೇಗೋ ಒಳಮೀಸಲಾತಿ ಕೊಟ್ಟೆ ತೀರುವುದಾಗಿ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರು ಸಮುದಾಯಕ್ಕೆ ಮೋಸ ಮಾಡಿದ್ದೇಕೆ? ಇದಕ್ಕೆ ಸಂಘಪರಿವಾರ ಉತ್ತರಿಸುತ್ತದೆಯೇ? ಉತ್ತರಿಸುವಂತೆ ಸಮುದಾಯ ಪಟ್ಟುಹಿಡಿದು ಕೇಳುತ್ತದೆಯೇ? ಅಥವಾ 2024ರ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಣ್ಣದ ಮಾತಾಡಿ ಸಮುದಾಯವನ್ನು ಮೋಸಗೊಳಿಸುವ ಪ್ರಯತ್ನಗಳನ್ನು ಮಾಡುತ್ತದೆಯೇ? ಎಂದು ಶಿವಸುಂದರ್ ಕೇಳಿದ್ದಾರೆ.

ದೇಶಮಟ್ಟದಲ್ಲಿ ಒಳಮೀಸಲಾತಿಗೆ ದೊಡ್ಡ ಹೋರಾಟ ಕಟ್ಟದೆ, ಬಿಜೆಪಿಯನ್ನೂ, ಸಂಘಪರಿವಾರವನ್ನೋ, ಇತರ ಪಕ್ಷಗಳನ್ನೂ ನಂಬಿ ಕೂತರೆ ಒಳಮೀಸಲಾತಿ ಕನ್ನಡಿಯೊಳಗಿನ ಗಂಟಾಗಿಯೇ ಉಳಿಯುವುದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ; ಸೌಜನ್ಯ ಪ್ರಕರಣ: SIT ತನಿಖೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯಿಂದ ಜು.28ಕ್ಕೆ ಧರಣಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಪ್ರಚಾರಕ್ಕೆ ಸಿಂಗಾಪುರದ ರೈಲ್ವೆ ನಿಲ್ದಾಣದ ಫೋಟೋ ಬಳಸಿದ ಬಿಜೆಪಿ

0
ಬಿಜೆಪಿಯ ವಿವಿಧ ರಾಜ್ಯ ಮತ್ತು ಜಿಲ್ಲಾ ಘಟಕಗಳ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇತ್ತೀಚೆಗೆ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮತ್ತು ಹಿಂಭಾಗದಲ್ಲಿ ಮೆಟ್ರೋ ರೈಲು ಸಾಗುತ್ತಿರು ಚಿತ್ರವಿರುವ ಈ ಪೋಸ್ಟರ್‌...