ಮಣಿಪುರದ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಯ ವಿವಾದ ಮುಂದುವರೆದಿದ್ದು, ಮಾಜಿ ಸಂಸದ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಅಧಿಕಾರಕ್ಕಾಗಿ ಮಣಿಪುರವನ್ನು ಸುಡುತ್ತಾರೆ, ಇಡೀ ದೇಶವನ್ನು ಸುಡುತ್ತಾರೆ ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ಮಾತನಾಡಿರುವ ತಮ್ಮ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಅವರು, ”ಬಿಜೆಪಿ-ಆರ್ಎಸ್ಎಸ್ ಕೇವಲ ಅಧಿಕಾರವನ್ನು ಬಯಸುತ್ತದೆ ಮತ್ತು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಅಧಿಕಾರಕ್ಕಾಗಿ, ಅವರು ಮಣಿಪುರವನ್ನು ಸುಡುತ್ತಾರೆ, ಇಡೀ ದೇಶವನ್ನೂ ಸುಡುತ್ತಾರೆ. ಅವರು ಜನರ ದುಃಖ ಮತ್ತು ನೋವಿನ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದಿದ್ದಾರೆ.
BJP-RSS सिर्फ सत्ता चाहती है और सत्ता पाने के लिए ये कुछ भी कर सकती है।
सत्ता के लिए ये मणिपुर को जला देंगे, सारे देश को जला देंगे।
इनको देश के दुख और दर्द से कोई फर्क नहीं पड़ता।
: @RahulGandhi जी pic.twitter.com/7Cp7cWXsjX
— Congress (@INCIndia) July 27, 2023
”ನೀವು ಭಾರತವನ್ನು ಪ್ರೀತಿಸುತ್ತಿದ್ದರೆ, ದೇಶದ ಯಾವುದೇ ಭಾಗದಲ್ಲಿ ಯಾವುದೇ ಹಿಂಸಾಚಾರ ಸಂಭವಿಸಿದಾಗ ಅದು ನಿಮಗೆ ನೋವುಂಟು ಮಾಡುತ್ತದೆ. ಆದರೆ ಬಿಜೆಪಿ ಮತ್ತು ಆರ್ಎಸ್ಎಸ್ಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ” ಎಂದು ರಾಹುಲ್ ಗುಡುಗಿದ್ದಾರೆ.
ಪ್ರತಿಪಕ್ಷಗಳ ಒಕ್ಕೂಟ INDIA ಹೆಸರಿನ ವಿರುದ್ಧ ಪ್ರಧಾನಿ ಮೋದಿ ಟೀಕಿಸಿದ್ದರು. ”ಈಸ್ಟ್ ಇಂಡಿಯಾ ಕಂಪನಿ, ಪಿಎಫ್ಐ, ಇಂಡಿಯನ್ ಮುಜಾಹಿದ್ದೀನ್ನಂತಹ ಸಂಘಟನೆಗಳ ಹೆಸರಿನಲ್ಲೂ ಇಂಡಿಯಾ ಎನ್ನುವ ಪದವಿದೆ. ಭಾರತ ಎಂದು ಹೆಸರಿದ್ದ ಮಾತ್ರಕ್ಕೆ ಅದು ಭಾರತವಾಗುವುದಿಲ್ಲ. ದೇಶದ ಹೆಸರನ್ನು ಬಳಸುವುದರಿಂದ ಜನರನ್ನು ದಾರಿ ತಪ್ಪಿಸಲಾಗುವುದಿಲ್ಲ” ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ”ಮಿಸ್ಟರ್ ಮೋದಿ, ನೀವು ಏನು ಬೇಕಾದರೂ ನಮಗೆ ಕರೆಯಿರಿ. ನಾವು ಭಾರತ. ನಾವು ಮಣಿಪುರವನ್ನು ಗುಣಪಡಿಸಲು ಪ್ರಯತ್ನ ಮಾಡುತ್ತೇವೆ. ಪ್ರತಿ ಮಹಿಳೆ ಮತ್ತು ಮಗುವಿನ ಕಣ್ಣೀರು ಒರೆಸುತ್ತೇವೆ. ನಾವು ಮಣಿಪುರದ ಎಲ್ಲಾ ಜನರಿಗೆ ಪ್ರೀತಿ ಮತ್ತು ಶಾಂತಿಯನ್ನು ಮರಳಿ ತರುವುದಕ್ಕಾಗಿ ಹೋರಾಡುತ್ತೇವೆ. ನಾವು ಮಣಿಪುರದಲ್ಲಿ ಭಾರತದ ಕಲ್ಪನೆಯನ್ನು ಮರುನಿರ್ಮಾಣ ಮಾಡುತ್ತೇವೆ” ಎಂದು ಟ್ವೀಟ್ ಮಾಡಿದ್ದರು.
ಸಂಸತ್ತಿನ ಮುಂಗಾರು ಅಧಿವೇಶನ ಕಳೆದ ಗುರುವಾರ ಆರಂಭಗೊಂಡಿದ್ದು, ಮಣಿಪುರ ಕುರಿತು ವಿಸ್ತೃತ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿವೆ. ಕೇಂದ್ರವು ಚರ್ಚೆಗೆ ಸಿದ್ಧವಾಗಿದೆ ಎಂದು ಹೇಳಿದೆ ಆದರೆ ಮಣಿಪುರ ಚರ್ಚೆಗಾಗಿ ಎಲ್ಲಾ ವ್ಯವಹಾರಗಳನ್ನು ಸ್ಥಗಿತಗೊಳಿಸಬೇಕೆಂದು ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದರಿಂದ ಬಿಕ್ಕಟ್ಟು ಮುಂದುವರೆಯಿತು. ಈ ವಿಷಯದ ಬಗ್ಗೆ ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರದ ನಿಲುವನ್ನು ಮುಂದಿಡಲು ಸಿದ್ಧ ಎಂದು ಹೇಳಿದರು, ಆದರೆ ಪ್ರತಿಪಕ್ಷಗಳು ಪ್ರಧಾನಿಯವರ ಹೇಳಿಕೆಯ ಬೇಡಿಕೆಯಿಂದ ಮಣಿಯಲಿಲ್ಲ.
ಇದನ್ನೂ ಓದಿ: ‘ಮಿಸ್ಟರ್ ಮೋದಿ, ಏನು ಬೇಕಾದರೂ ಕರೆಯಿರಿ, ಮಣಿಪುರದಲ್ಲಿ ಶಾಂತಿಯನ್ನು ಮರುನಿರ್ಮಾಣ ಮಾಡುತ್ತೇವೆ’: ರಾಹುಲ್ ಗಾಂಧಿ