ಪ್ರತಿಪಕ್ಷಗಳ ಮೈತ್ರಿಕೂಟ INDIA ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ತಿರುಗೇಟು ನೀಡಿದ್ದಾರೆ. ”ನಿಮಗೆ ಬೇಕಾದುದನ್ನು ನಮ್ಮನ್ನು ಕರೆಯಿರಿ ಆದರೆ ನಾವು ಮಣಿಪುರದಲ್ಲಿ ಭಾರತದ ಕಲ್ಪನೆಯನ್ನು ಮರುನಿರ್ಮಾಣ ಮಾಡುತ್ತೇವೆ” ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಪ್ರತಿಪಕ್ಷಗಳ ಒಕ್ಕೂಟ INDIA ಒತ್ತಾಯಿಸುತ್ತಿದೆ ಆದರೆ ಮೋದಿ ಅವರು ಒಕ್ಕೂಟದ ಹೆಸರಿನ ವಿರುದ್ಧ ಟೀಕೆ ಮಾಡಿದ್ದಾರೆ. ”ಈಸ್ಟ್ ಇಂಡಿಯಾ ಕಂಪನಿ, ಪಿಎಫ್ಐ, ಇಂಡಿಯನ್ ಮುಜಾಹಿದ್ದೀನ್ನಂತಹ ಸಂಘಟನೆಗಳ ಹೆಸರಿನಲ್ಲೂ ಇಂಡಿಯಾ ಎನ್ನುವ ಪದವಿದೆ. ಭಾರತ ಎಂದು ಹೆಸರಿದ್ದ ಮಾತ್ರಕ್ಕೆ ಅದು ಭಾರತವಾಗುವುದಿಲ್ಲ. ದೇಶದ ಹೆಸರನ್ನು ಬಳಸುವುದರಿಂದ ಜನರನ್ನು ದಾರಿ ತಪ್ಪಿಸಲಾಗುವುದಿಲ್ಲ” ಎಂದು ಮೋದಿ ಮಾತನಾಡಿದ್ದಾರೆ.
ಮೋದಿಯವರ ಈ ಹೇಳಿಕೆಯು ಪ್ರತಿಪಕ್ಷಗಳು ಮತ್ತು ಬಿಜೆಪಿ ನಾಯಕರ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಯಿತು. ಮಣಿಪುರದಲ್ಲಿ ನಾವು ಭಾರತದ ಕಲ್ಪನೆಯನ್ನು ಪುನರ್ ನಿರ್ಮಿಸುತ್ತೇವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
”ವಿರೋಧ ಪಕ್ಷಗಳು ಮುಂಭಾಗವು ಮಣಿಪುರವನ್ನು ಗುಣಪಡಿಸಲು ಪ್ರಯತ್ನಿಸುತ್ತಿವೆ ಮತ್ತು ಈಶಾನ್ಯ ರಾಜ್ಯದಲ್ಲಿ ಭಾರತದ ಕಲ್ಪನೆಯನ್ನು ಪುನರ್ನಿರ್ಮಿಸುತ್ತದೆ” ಎಂದು ಹೇಳಿದ್ದಾರೆ.
Call us whatever you want, Mr. Modi.
We are INDIA.
We will help heal Manipur and wipe the tears of every woman and child. We will bring back love and peace for all her people.
We will rebuild the idea of India in Manipur.
— Rahul Gandhi (@RahulGandhi) July 25, 2023
”ಮಿಸ್ಟರ್ ಮೋದಿ, ನೀವು ಏನು ಬೇಕಾದರೂ ನಮಗೆ ಕರೆಯಿರಿ. ನಾವು ಭಾರತ. ನಾವು ಮಣಿಪುರವನ್ನು ಗುಣಪಡಿಸಲು ಪ್ರಯತ್ನ ಮಾಡುತ್ತೇವೆ. ಪ್ರತಿ ಮಹಿಳೆ ಮತ್ತು ಮಗುವಿನ ಕಣ್ಣೀರು ಒರೆಸುತ್ತೇವೆ. ನಾವು ಮಣಿಪುರದ ಎಲ್ಲಾ ಜನರಿಗೆ ಪ್ರೀತಿ ಮತ್ತು ಶಾಂತಿಯನ್ನು ಮರಳಿ ತರುವುದಕ್ಕಾಗಿ ಹೋರಾಡುತ್ತೇವೆ. ನಾವು ಮಣಿಪುರದಲ್ಲಿ ಭಾರತದ ಕಲ್ಪನೆಯನ್ನು ಮರುನಿರ್ಮಾಣ ಮಾಡುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಮೋದಿಯವರ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ್ದ, ”ಮಣಿಪುರದಲ್ಲಿ ನಡೆಯುತ್ತಿರುವ 83 ದಿನಗಳ ನಿರಂತರ ಹಿಂಸಾಚಾರಕ್ಕೆ ಪ್ರಧಾನಿಯವರು ಸಂಸತ್ತಿನಲ್ಲಿ ಸಮಗ್ರ ಹೇಳಿಕೆ ನೀಡುವ ಅಗತ್ಯವಿದೆ” ಎಂದು ಖರ್ಗೆ ಹೇಳಿದರು.
”ಸಂಪೂರ್ಣ ಭಯಾನಕ ಕಥೆಗಳು ಈಗ ನಿಧಾನವಾಗಿ ಹೊರಬರುತ್ತಿವೆ. ಮಣಿಪುರ ಹಿಂಸಾಚಾರದ ಬಗ್ಗೆ ಭಾರತವು ಮೋದಿ ಸರ್ಕಾರದಿಂದ ಉತ್ತರವನ್ನು ಕೇಳುತ್ತದೆ” ಎಂದು ಅವರು ಟ್ವಿಟರ್ನಲ್ಲಿ ಹೇಳಿದ್ದಾರೆ.
”ಮೋದಿ ಅವರು ತಮ್ಮ ಅಹಂಕಾರವನ್ನು ತೊಡೆದುಹಾಕಿ, ಮಣಿಪುರದ ವಿಚಾರದ ಬಗ್ಗೆ ಮಾತನಾಡಿ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಇದು ಸೂಕ್ತ ಸಮಯ” ಎಂದು ಖರ್ಗೆ ಹೇಳಿದರು.
”ಭಾರತೀಯ ಪ್ರಜಾಸತ್ತಾತ್ಮಕ ರಾಜಕೀಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಮಣಿಪುರದ ಜ್ವಲಂತ ಮತ್ತು ಭಾವನಾತ್ಮಕ ವಿಷಯದ ಬಗ್ಗೆ ಪ್ರಧಾನಿಯವರು ಸದನದಲ್ಲಿ ಹೇಳಿಕೆ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ. ವಿವರವಾದ ಮತ್ತು ಸಮಗ್ರ ಚರ್ಚೆಯ ನಂತರ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರ ಮುಂದುವರೆದಿದೆ” ಎಂದು ಖರ್ಗೆ ತಮ್ಮ ನೋಟಿಸ್ನಲ್ಲಿ ತಿಳಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರತಿಕ್ರಿಯಿಸಿದ್ದು, ”ಸಂಸತ್ತಿನಲ್ಲಿ ಉತ್ತರ ನೀಡಲು ಹೆದರುವ ಇಂತಹ ಪ್ರಧಾನಿಯನ್ನು ನಾವು ನೋಡಿಲ್ಲ ಮತ್ತು ಅವರಿಗೆ ‘INDIA’ ಎಂಬ ಪದದಲ್ಲಿ ಸಮಸ್ಯೆಗಳಿದ್ದರೆ, ಅವರು ಸ್ಟಾರ್ಟ್ಅಪ್ ಇಂಡಿಯಾ ಮತ್ತು ಬಿಜೆಪಿಯಿಂದ ‘ಭಾರತೀಯ’ ಎನ್ನುವ ಪದವನ್ನು ತೆಗೆದುಹಾಕಬೇಕು. ನಾವು ‘INDIA’ ಎಂಬ ಹೆಸರಿನ ಬಗ್ಗೆ ಹೆಮ್ಮೆಪಡುತ್ತೇವೆ” ಎಂದು ವಾಗ್ದಾಳಿ ನಡೆಸಿದರು.