”ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಲಿದೆ ಮತ್ತು ಎನ್ಡಿಎ ಭಾಗವಾಗುವುದಿಲ್ಲ” ಎಂದು ಮಂಗಳವಾರ ಪಕ್ಷದ ಮುಖ್ಯಸ್ಥ ಎಚ್ಡಿ ದೇವೇಗೌಡ ಅವರು ಘೋಷಿಸಿದ್ದಾರೆ.
”ಜೆಡಿಎಸ್ ಪಕ್ಷ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ನಾವು (ಪಕ್ಷ) ಐದು, ಆರು, ಮೂರು, ಎರಡು ಅಥವಾ ಒಂದು ಸ್ಥಾನಗಳನ್ನು ಗೆಲ್ಲುವುದಾದರೂ ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಹೋರಾಡುತ್ತೇವೆ” ಎಂದು ದೇವೇಗೌಡರು ಪ್ರತಿಪಾದಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, ಲೋಕಸಭೆ ಚುನಾವಣೆಗೆ ಮುನ್ನ ಎನ್ಡಿಎ ಪುನಶ್ಚೇತನಕ್ಕೆ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ದೇವೇಗೌಡರು ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ.
ಬಿಜೆಪಿಯನ್ನು ಎದುರಿಸಲು ಇಪ್ಪತ್ತಾರು ವಿರೋಧ ಪಕ್ಷಗಳು ಕೈಜೋಡಿಸಿ ಒಕ್ಕೂಟವನ್ನು ರಚಿಸಿವೆ. INDIA ಹೆಸರಿನಲ್ಲಿ ಮೈತ್ರಿಕೂಟ ರಚನೆ ಆಗಿದೆ. ”ಸಂವಿಧಾನದಲ್ಲಿ ಪ್ರತಿಪಾದಿಸಿರುವ ಭಾರತದ ಕಲ್ಪನೆಯನ್ನು ರಕ್ಷಿಸಲು” ಪ್ರತಿಜ್ಞೆ ಮಾಡಿದೆ.
ಕಳೆದ ವಾರ, ದೇವೇಗೌಡರ ಪುತ್ರ ಎಚ್ಡಿ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಪ್ರತಿಪಕ್ಷವಾಗಿ ಕೆಲಸ ಮಾಡಲು ನಿರ್ಧರಿಸಿದೆ ಎಂದು ಹೇಳಿದ್ದರು. ಅವರ ಈ ಹೇಳಿಕೆಗಳು ಲೋಕಸಭೆ ಚುನಾವಣೆಗೆ ಜೆಡಿಎಸ್ ಪಕ್ಷವು ಎನ್ಡಿಎ ಸೇರಬಹುದು ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿತ್ತು. ಕುಮಾರಸ್ವಾಮಿ ಅವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ ಎಂಬ ವರದಿಗಳು ಬಿತ್ತರವಾಗಿದ್ದವು.
ಕರ್ನಾಟಕ ವಿಧಾನಸಭೆಯ ಅಧಿವೇಶನದ ವೇಳೆ ಜುಲೈ 19 ರಂದು ”ಅಸಭ್ಯ ಮತ್ತು ಅಗೌರವದ ನಡವಳಿಕೆ”ಯ ಕಾರಣಕ್ಕೆ ಸದನದಿಂದ 10 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ ನಂತರ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಕಲಾಪವನ್ನು ಬಹಿಷ್ಕರಿಸಿದ್ದರು.
ಇದನ್ನೂ ಓದಿ: ಯಾರೊಂದಿಗೂ ಮೈತ್ರಿ ಇಲ್ಲ, ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ: ಎಚ್.ಡಿ ದೇವೇಗೌಡ