Homeಕರ್ನಾಟಕರಾಯಚೂರಿನಲ್ಲಿ ಅನಾವರಣಗೊಂಡ ಅಲೆಮಾರಿಗಳ ಸಾಂಸ್ಕೃತಿಕ ಕಲೆ

ರಾಯಚೂರಿನಲ್ಲಿ ಅನಾವರಣಗೊಂಡ ಅಲೆಮಾರಿಗಳ ಸಾಂಸ್ಕೃತಿಕ ಕಲೆ

- Advertisement -
- Advertisement -

ಅವರು ಅಲೆಮಾರಿಗಳು, ಒಂದು ಕಡೆ ನಿಂತವರಲ್ಲ, ನಿಲ್ಲುವವರೂ ಅಲ್ಲ, ನೆಲೆ ನಿಂತರೂ ಒಂದು ಹಗಲು ಒಂದು ರಾತ್ರಿ ಮಾತ್ರ. ಮತ್ತೆ ಮನಸ್ಸು ಹರಿದತ್ತ ಹೆಜ್ಜೆ ಹಾಕುತ್ತಲೇ ಬದುಕು ಕಟ್ಟಿಕೊಂಡವರು. ಆಧುನಿಕತೆ ವ್ಯಾಪಿಸಿದಂತೆ ಈ ಅಲೆಮಾರಿ ಕುಟುಂಬಗಳು ನೆಲೆ ಕಂಡುಕೊಂಡು ಅವರ ಮಕ್ಕಳು ಶಾಲೆಯ ಮುಖವನ್ನು ಕಾಣುವಂತೆ ಆಗಿದೆ. ಇಂತಹ ಅಲೆಮಾರಿ ಸಮುದಾಯ ತಮ್ಮ ಸಾಂಸ್ಕೃತಿಕ ಕಥನಗಳನ್ನು ಕಟ್ಟಿಕೊಡುವ, ಸಾಂಸ್ಕೃತಿಕ ಕಲೆಗಳನ್ನು ನಗರೀಕರಣದ ಮುಂದೆ ಅನಾವರಣಗೊಳಿಸುವ ಕೆಲಸ ರಾಯಚೂರಿನಲ್ಲಿ ನಡೆಯಿತು. ನೆಲಮೂಲ ಸಂಸ್ಕೃತಿಯ ಒಂದೊಂದು ಕಲೆಯೂ ನಗರೀಕರಣಕ್ಕೆ ಸವಾಲೊಡ್ಡುವ ರೀತಿಯಲ್ಲಿ ವ್ಯಕ್ತವಾಯಿತು.

ಕೊಳೆಗೇರಿ ಪ್ರದೇಶದಲ್ಲಿ ವಾಸಿಸುವ ಬಗೆಬಗೆಯ ಬುಡಕಟ್ಟುಗಳು ಮತ್ತು ಅಲೆಮಾರಿ ಸಮುದಾಯ ತಮ್ಮಲ್ಲಿನ ಸಾಂಸ್ಕೃತಿಕ ಸಂಪತ್ತನ್ನು ಪ್ರದರ್ಶನಗೊಳಿಸುವುದಕ್ಕೆ ವೇದಿಕೆ ಒದಗಿಸಲಾಗಿತ್ತು. ಸ್ಲಂ ಜನಾಂದೋಲನ – ಕರ್ನಾಟಕ ನೇತೃತ್ವದಲ್ಲಿ ನಮ್ ಹಾಡು, ನಮ್ ಕುಣಿತ, ನಮ್ ಖುಷಿ ಶೀರ್ಷಿಕೆಯಡಿ ಸಾಂಸ್ಕೃತಿಕ ಕಲೆಗಳ ಸ್ಲಂಹಬ್ಬ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಅಳಿವಿನಂಚಿನಲ್ಲಿರುವ ಹಕ್ಕಿಪಿಕ್ಕಿಯವರ ಕಾಡಿನ ಹಾಡುಗಳು, ಪೋತರಾಜರ ನೃತ್ಯ, ಅಸ್ಪೃಶ್ಯಯ ಸಮುದಾಯಕ್ಕೆ ಸೇರಿದ ದರವೇಸಿಗಳ ಜನಸಮೂಹದ ಕಷ್ಟಕೋಟಲೆಗಳನ್ನು ಒಳಗೊಂಡ ಕವಾಲಿಗಳು, ಸುಡುಗಾಡು ಸಿದ್ದರ ಮಾಯಾಜಾಲ ಅಥವಾ ಕಣ್ಕಟ್ಟು, ಶಿಳ್ಳೇಕ್ಯಾತರ ಆಟಗಳು, ದುರ್ಗಿಮುರ್ಗಿಯ ಕುಣಿತ, ಲಂಬಾಣಿ ಜನರ ಕೋಲಾಟ, ಮಂಗಳಮುಖಿಯರ ಕಲೆಗಳು ವೇದಿಕೆಯಲ್ಲಿ ಅನಾವರಣಗೊಂಡು ಪ್ರೇಕ್ಷಕರ ಗಮನ ಸೆಳೆದವು.

2007 ರಿಂದ ಆರಂಭವಾಗಿರುವ ಸ್ಲಂಹಬ್ಬ ಇದುವರೆಗೆ ಮೂರು ರಾಜ್ಯಮಟ್ಟದ ಸಾಂಸ್ಕೃತಿಕ ಕಲಾ ಸ್ಲಂಹಬ್ಬ ಗಳನ್ನು ಆಯೋಜಿಸಿ ರಾಜ್ಯದ ಗಮನ ಸೆಳೆಯಲಾಗಿದೆ. ಈ ಮೂಲಕ ಅಲೆಮಾರಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ. ನಗರದ ಜಂಝಡದ ಗದ್ದಲದ ನಡುವೆ ಶ್ರಮದಾನದಿಂದಲೇ ನಲುಗಿ ಹೋಗುತ್ತಿರುವ ಈ ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಮುಖ್ಯವಾಹಿನಿಗೆ ತಲುಪಿಸುವ ಉದ್ದೇಶವನ್ನು ಇಟ್ಟುಕೊಂಡು ಸ್ಲಂಹಬ್ಬಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಡೊಮಿನಿಕ್, “ಅಸ್ಪೃಶ್ಯರು ಮತ್ತು ಅಲೆಮಾರಿ ಸಮುದಾಯಗಳ ಕಲಾ ಪ್ರಕಾರಗಳು ಸ್ಥಾಪಿತ ಪರಂಪರೆ, ಅಮಾನವೀಯ ಸಾಂಸ್ಕೃತಿಕ ಪರಿಸರವನ್ನು ಬದಿಗೆ ಸರಿಸಿ, ಕೇವಲ ಮನೋರಂಜನೆಗಾಗಿ ಪ್ರದರ್ಶನಗೊಳ್ಳುವ ಕಲೆಗಳೆಂದು ಭಾವಿಸಲಾಗಿದ್ದ ಆಚರಣೆಗಳನ್ನು ಇಂದು ಸ್ಲಂ-ನಿವಾಸಿಗಳು ತಮ್ಮ ದುಡಿಮೆ ಸಾಂಸ್ಕೃತಿಕ ಗುರುತುಗಳನ್ನಾಗಿ ನೆಲೆಗೊಳಿಸುತ್ತಿದ್ದಾರೆ. ಹೀಗೆ ಮಾಡುವ ಮೂಲಕ, ಆ ಕಲೆಗಳ ಹಿಂದಿರುವ ಶ್ರೀಮಂತಿಕೆ ಹಾಗೂ ಮಾನವೀಯ ಮೌಲ್ಯಗಳನ್ನು ಮತ್ತೆ ಹೊಸ ಸಮಾಜ ನಿರ್ಮಾಣಕ್ಕೆ ಕೊಳಗೇರಿ ಸಮುದಾಯಗಳು ತೊಡಗಿರುವುದನ್ನು ನಾವು ನೋಡಬಹುದು” ಎಂದು ಹೇಳಿದ್ದಾರೆ.

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ನಾನುಗೌರಿ.ಕಾಂ ಜೊತೆ ಮಾತನಾಡಿ ನಗರದಲ್ಲಿ ಅಲೆಮಾರಿ ಸಂಸ್ಕೃತಿಗಳ ಮೇಲೆ ದಾಳಿ, ದೌರ್ಜನ್ಯ ದಬ್ಬಾಳಿಕೆ ನಡೆದರೂ ಅದರ ವಿರುದ್ಧವೇ ತಿರುಗಿಬಿದ್ದಿರುವ ನೆಲಮೂಲ ಸಂಸ್ಕೃತಿಯ ಕಲೆಯ ಅನಾವರಣದ ಮೂಲಕ ಈ ಸಮುದಾಯದ ಜನರಿಗೆ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಆಧುನಿಕತೆಯ ಪರಿಣಾಮ ಅಲೆಮಾರಿಗಳು ಇಂದು ನೆಲೆ ನಿಲ್ಲುವಂತಹ ಸ್ಥಿಗೆ ಬರುವಂತೆ ಆಗಿದೆ. ಇದರಿಂದ ಆಧಾರ್, ರೇಷನ್ ಕಾರ್ಡುಗಳು ದೊರೆತಿವೆ. ಕೆಲ ಸಮುದಾಯಗಳಿಗೆ ಈ ಸೌಲಭ್ಯಗಳು ದೊರೆತಿಲ್ಲ. ಅಲೆಮಾರಿ ಕುಟುಂಬಗಳ ಮಕ್ಕಳು ಶಾಲೆಯ ಮುಖ ನೋಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.

ಪ್ರತಿವರ್ಷ ಸರ್ಕಾರಗಳು ಕೊಳೆಗೇರಿಗಳಲ್ಲಿ ವಾಸಿಸುವ ಅಲೆಮಾರಿಗಳ ಶೈಕ್ಷಣಿಕ ಮೊದಲಾದ ಅಭಿವೃದ್ಧಿ ಕೆಲಸಗಳಿಗೆ 50-70 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ. ಈ ಹಣದಲ್ಲಿ ಕೇವಲ ಪ್ರತಿಶತ 20ರಷ್ಟು ಹಣ ಮಾತ್ರ ವೆಚ್ಚವಾಗುತ್ತಿದೆ. ಉಳಿದ ಹಣ ಸರ್ಕಾರಕ್ಕೆ ವಾಪಸ್ಸಾಗುತ್ತಿದೆ. ಕಾರಣ ಅಲೆಮಾರಿ ಸಮುದಾಯ ಶಿಕ್ಷಣ ಪಡೆದಿಲ್ಲ. ಹಾಗಾಗಿ ಸರ್ಕಾರ ಕೇಳುವ ದಾಖಲೆಗಳು ಅವರ ಬಳಿ ಸಿಗುತ್ತಿಲ್ಲ. ಇದು ಕೂಡ ಅಲೆಮಾರಿ ಗಳಿಗೆ ಮೀಸಲಿಟ್ಟ ಹಣ ಹಾಗೇ ಉಳಿಯಲು ಕಾರಣ’ ಎಂದು ತಿಳಿಸಿದರು.

ಸರ್ಕಾರ ಭೂ ಮಂಜೂರಾತಿ ಕೊಡುತ್ತಿದೆ. ಅಲೆಮಾರಿ ಸಮುದಾಯಗಳಿಗೂ ಭೂಮಿ ಕೊಡಬೇಕು. ಘನತೆ ಗೌರವದಿಂದ ಬದುಕಲು ವಸತಿ ವ್ಯವಸ್ಥೆ ಮಾಡಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಸಮನ್ವಯ ಸಾಧಿಸಿ ಕೆಲಸ ಮಾಡಿದರೆ ಈ ಸಮುದಾಯಗಳ ಅಭಿವೃದ್ಧಿ ಸಾಧ್ಯ. ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಅಲೆಮಾರಿಗಳಲ್ಲಿ ಕೆಲ ಸಮುದಾಯಗಳು ಹಿಂದುಳಿದ ವರ್ಗಕ್ಕೆ ಬರುತ್ತವೆಯೇ? ಪರಿಶಿಷ್ಟ ಸಮುದಾಯಕ್ಕೆ ಸೇರುತ್ತವೆಯೇ ಎಂಬುದೇ ಗೊತ್ತಿಲ್ಲ. ಇದು ಕೂಡ ಈ ಅಲೆಮಾರಿಗಳು ಹಿಂದುಳಿಯಲು ಕಾರಣವಾಗಿದೆ. ಸರ್ಕಾರ ಈಗಲಾದರೂ ಅಲೆಮಾರಿಗಳ ಜನಗಣತಿ ಮಾಡಿ ಅವರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಬೇಕಾಗಿದೆ.


ಇದನ್ನೂ ಓದಿ; ತುಮಕೂರಿನಲ್ಲಿ ‘ಕೆ.ಬಿ. ಕಾವ್ಯ: ಕಣ್ಣು ಧರಿಸಿ ಕಾಣಿರೋ’ ಕೃತಿ ಬಿಡುಗಡೆಗೊಳಿಸಿದ ನಟರಾಜ್ ಬೂದಾಳ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ: ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಹಿಡಿದು ತಮಿಳುನಾಡಿನ ರೈತರಿಂದ ಪ್ರತಿಭಟನೆ

0
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಸುಮಾರು 200ರೈತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ತಮಿಳುನಾಡಿನಿಂದ ದೆಹಲಿಗೆ ಹೊತ್ತೊಯ್ದಿದ್ದಾರೆ. ಕೃಷಿಯಲ್ಲಿ...