- Advertisement -
‘ಎರಡು ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ರೈತರ ನೆರವಿಗೆ ಶಕ್ತಿ ಬರುತ್ತಿಲ್ಲ. ಹೀಗಾಗಿ ರೈತರು, ಅಲೆಮಾರಿಗಳು, ಬುಡಕಟ್ಟುಗಳು, ಮಹಿಳೆಯರು ಮತ್ತು ಇಡೀ ದಕ್ಷಿಣ ಭಾರತವೇ ಅಲ್ಪಸಂಖ್ಯಾತವಾಗಿದ್ದು ಇವರ ನೆರವಿಗೆ ಯಾರೂ ಬರುತ್ತಿಲ್ಲ’ ಎಂದು ಹಿರಿಯ ವಿಮರ್ಶಕ ಡಾ. ನಟರಾಜ್ ಬೂದಾಳ್ ವಿಷಾದ ವ್ಯಕ್ತಪಡಿಸಿದರು.
ಬುಡಕಟ್ಟು ಜನರ ದನಿಗೆ ದನಿಗೂಡುತ್ತಿಲ್ಲ. ಮಹಿಳೆಯರು ಅಲ್ಪಸಂಖ್ಯಾತರಾಗಿಯೇ ಉಳಿದಿದ್ದಾರೆ. ಹಾಗೆಯೇ ಅವರು ಮಾತನಾಡುವ ಭಾಷೆ, ಅಭಿವ್ಯಕ್ತಿ ಲೆಕ್ಕಕ್ಕೇ ಇಲ್ಲದಂತಹ ಪರಿಸ್ಥಿತಿ ಇದೆ. ಲೆಕ್ಕಕ್ಕೆ ಸಿಗದಂತೆ ನೋಡಿ ಕೊಳ್ಳುವ ಜಾಣ್ಮೆಯೂ ಮುಂದುವರಿದಿದೆ. ಅಲ್ಪಸಂಖ್ಯಾತ ದಕ್ಷಿಣ ಭಾರತ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಯಾರ ಗಮನವೂ ಇತ್ತ ಕಡೆ ಇಲ್ಲವಾಗಿದೆ ಎಂದು ಹೇಳಿದರು.
ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ರವಿಕುಮಾರ್ ನೀಹ ಅವರು ಬರೆದಿರುವ ಕೆ.ಬಿ. ಕಾವ್ಯ: ಕಣ್ಣು ಧರಿಸಿ ಕಾಣಿರೋ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ನಾವು ಓದುವ ಓದು ನಮ್ಮ ದಾಗಿಲ್ಲ. ನಾವು ಓದುತ್ತಿರುವುದು ನಮ್ಮದಲ್ಲದ ಬೇರೆ ಪಠ್ಯ. ಹಾಗಾಗಿ ಕಣ್ಣು ಧರಿಸಿಕೊಂಡು ಓದಬೇಕಾದ ಅನಿವಾರ್ಯತೆ ಇದೆ. ಮಂಟೇಸ್ವಾಮಿ, ಮಲೆ ಮಹಾದೇಶ್ವರ, ಜುಂಜಪ್ಪ ಕಾವ್ಯ ನಮ್ಮದಾದರೂ ಇವುಗಳನ್ನು ಓದುವ ಕ್ರಮ ನಮ್ಮದಾಗಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮದೇ ಕ್ರಮದಲ್ಲಿ ಓದಬೇಕು ಎಂದು ಸಲಹೆ ನೀಡಿದರು.
ಇಲ್ಲಿ ನಮ್ಮದೇ ಅಕ್ಷರ, ನಮ್ಮದೇ ಪಠ್ಯವನ್ನು ನಮ್ಮದೇ ರೀತಿಯಲ್ಲಿ ಓದುತ್ತಿಲ್ಲ. ಅಕ್ಷರ ಮತ್ತು ಪಠ್ಯ ಮತ್ತು ಓದನ್ನು ನಿಯಂತ್ರಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಹಾಗಾಗಿ ಓದು ನಮ್ಮದಾಗಬೇಕು. ಆಗ ಪಠ್ಯ ಮತ್ತು ಅಕ್ಷರ ನಮ್ಮದಾಗುತ್ತದೆ. ಮಂಟೇಸ್ವಾಮಿ, ಕಾವ್ಯದಲ್ಲಿ ಬರುವ ನಾಯಕ ತನ್ನದೇ ಲೋಕ ನಿರ್ಮಿಸಿ ದೇವರನ್ನು ಸೃಷ್ಟಿಸುತ್ತಾರೆ. ಅವರಿಗೆ ವಿವಾಹವನ್ನು ಮಾಡುತ್ತಾರೆ. ತಾನೇ ಧರಗೆ ದೊಡ್ಡವನಾಗಿ ಮೆರೆಯುತ್ತಾನೆ. ಇಂತಹ ಕ್ರಿಯೆಗಳು ನಡೆಯಬೇಕು. ಆಗ ಲೋಕ ನಮ್ಮದಾಗುತ್ತದೆ ಎಂದು ಹೇಳಿದರು.
ತುಮಕೂರು ಜಿಲ್ಲೆ ಅತ್ಯಂತ ಪ್ರಮುಖ ಲೇಖಕರು ಮತ್ತು ಗಟ್ಟಿ ಸಾಹಿತ್ಯವನ್ನು ನೀಡಿದೆ ಎಂದು ಬೇರೆ ಕಡೆ ಹೇಳುವುದು ರೂಢಿಯಲ್ಲಿದೆ. ಹಾಗೆಯೇ ಇಲ್ಲಿ ಅಷ್ಟೇ ಭಿನ್ನಧ್ವನಿಯೂ ಇದೆ. ಕೆ.ಬಿ.ಸಿದ್ದಯ್ಯ ಕಾವ್ಯ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಅದು ಕನ್ನಡ ಸಾಹಿತ್ಯ ಲೋಕದಲ್ಲಿ ಬಹುಮುಖ್ಯ ಕಾವ್ಯವಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ಜನಪರ ಚಿಂತಕ ಕೆ.ದೊರೈರಾಜ್, ಲೇಖಕ ಡಾ.ರಾಜಪ್ಪ ದಳವಾಯಿ, ಲೇಖಕಿ ಮಲ್ಲಿಕಾ ಬಸವರಾಜು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಾ.ಹ.ರಮಾಕುಮಾರಿ, ಯುವ ಮುಖಂಡ ಡ್ಯಾಗೇರಹಳ್ಳಿ ವಿರೂಪಾಕ್ಷ, ಉಪನ್ಯಾಸಕ ಕೊಟ್ಟಶಂಕರ್, ಗುಬ್ಬಚ್ಚಿ ಸತೀಶ್, ಕೃತಿಕಾರ ಡಾ. ರವಿಕುಮಾರ್ ನೀಹ ಇದ್ದರು.
- Advertisement -
ಇದನ್ನೂ ಓದಿ; ಬೇಂದ್ರೆ 125; ‘ಜೈಮಿನಿ ಭಾರತ ಬರೆದ ಲಕ್ಷ್ಮೀಶನ ನಂತರ ಭಾಷೆಯ ಜೊತೆಗೆ ಆಟವಾಡಿದ ಕವಿ…