ರಾಜ್ಯ ಕಾರ್ಮಿಕ ಇಲಾಖೆ ಪ್ರಾರಂಭಿಸಿದ್ದ ಕೊರೊನಾ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೂಲಿಕಾರರ ಸಹಾಯವಾಣಿ (155214) ಪ್ರಾರಂಭವಾಗಿ ಒಂದು ತಿಂಗಳಾದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಮಾರ್ಚ್ 28 ರಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೊರೊನಾ ಲಾಕ್ ಡೌನ್ ನಿಂದಾಗಿ ಅನ್ನವಿಲ್ಲದೆ ಕಷ್ಟಪಡುವ ಕೂಲಿ ಕಾರ್ಮಿಕರಿಗೆ ನೆರವಾಗಲು ರಾಜ್ಯ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಈ ಸಹಾಯವಾಣಿಯನ್ನು ಲೋಕಾರ್ಪಣೆ ಮಾಡಿದ್ದರು.
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಅನ್ನವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕೂಲಿಕಾರರು ಸಹಾಯವಾಣಿಗೆ ಕರೆ ಮಾಡಿದಲ್ಲಿ ಅವರು ಎಲ್ಲಿಂದ ಕರೆ ಮಾಡಿದ್ದಾರೆ ಎಂಬುದನ್ನು ದೃಢಪಡಿಸಿಕೊಂಡು ಸಮೀಪದ ಇಂದಿರಾ ಕ್ಯಾಂಟೀನ್ ಅಥವಾ ಸರ್ಕಾರೇತರ ಸಂಘ-ಸಂಸ್ಥೆಗಳ ನೆರವಿನಿಂದ ಅವರು ಇದ್ದಲ್ಲೇ ಊಟದ ವ್ಯವಸ್ಥೆ ಮಾಡಲು ಸಹಾಯವಾಣಿ ನೆರವು ಒದಗಿಸಲಿದೆ ಎಂದಿದ್ದರು.
ದ.ಕ ಗ್ರಾಹಕ ರಕ್ಷಣಾ ಪರಿಷತ್ತಿನ ಮಾಜಿ ಸದಸ್ಯರಾದ ಸುಳ್ಯದ ಸಚಿನ್ ರಾಜ್ ಶೆಟ್ಟಿ “ಕಾರ್ಮಿಕ ಇಲಾಖೆ ಸಹಾಯ ವಾಣಿಯೂ ನಿಷ್ಪ್ರಯೋಜಕ” ಎಂದು ದೂರಿದ್ದಾರೆ. “ಕಾರ್ಮಿಕ ಇಲಾಖೆಯಿಂದ ದಿನಸಿ ಸಾಮಗ್ರಿ, ಬಿಸಿಯೂಟ ಹಾಗೂ ಇತರ ಸೇವೆಗಳಿಗಾಗಿ 155214 ಸಹಾಯವಾಣಿಯನ್ನು ರೂಪಿಸಿದ್ದು ಇದರಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಸರಿಯಾದ ಮಾಹಿತಿ ನೀಡದೆ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಹೆಸರಿಗೆ ಮಾತ್ರ ಇಂತಹ ಸಹಾಯವಾಣಿ ಮಾಡಿರುವುದನ್ನು ನೋಡಿದಾಗ ಸರಕಾರ ಎಡವಿದೆ ಎಂಬುದು ಸ್ಪಷ್ಟ” ಎಂದು ಹೇಳಿದ್ದಾರೆ.
ಕನಿಷ್ಠ ಹತ್ತು ಬಾರಿಯಾದರೂ ಕರೆ ಮಾಡಿದ್ದೇನೆ ಸಹಾಯವಾಣಿಯಲ್ಲಿ ಸರಿಯಾದ ಮಾಹಿತಿ ನೀಡುತ್ತಿಲ್ಲ, ಕರೆಯನ್ನು ಸ್ವೀಕರಿಸಿದರೆ ಸಹಾಯವಾಣಿ ಕೇವಲ ಬೆಂಗಳೂರಿಗೆ ನೀವು ಜಿಲ್ಲೆ, ಗ್ರಾಮ ಪಂಚಾಯತ್ ಕಚೇರಿಗೆ ಸಂಪರ್ಕಿಸಬೇಕಾಗುತ್ತದೆ ಎಂದಿರುವ ಕರೆಯ ಆಡಿಯೋ ರೆಕಾರ್ಡ್ ಗಳು ಹರಿದಾಡುತ್ತಿದೆ. ಸಹಾಯವಾಣಿ ಇಡೀ ಕರ್ನಾಟಕಕ್ಕೆ ಅನ್ವಯವಾಗುತ್ತಿದ್ದರೂ ಸಹಯವಾಣಿ ಸಿಬ್ಬಂದಿಗಳು ಮಾತ್ರ ಇದು ಕೇವಲ ಬೆಂಗಳೂರಿಗೆ ಎಂದು ಹೇಳುವುದನ್ನು ಈ ಕರೆಯ ರೆಕಾರ್ಡಿನಲ್ಲಿ ಕೇಳಬಹುದಾಗಿದೆ.
ಇದರ ಬಗ್ಗೆ ನಾನುಗೌರಿ.ಕಾಮ್ ಹಿಂದೆಯೆ ವರದಿ ಮಾಡಿದ್ದು ಆದರೂ ಸರ್ಕರ ಎಚ್ಚೆತ್ತುಕೊಂಡಿಲ್ಲ.
ಇದನ್ನೂ ಓದಿ: ಕೊರೋನಾ ಆಹಾರ ಸಹಾಯವಾಣಿ 155214ಕೆಲಸ ಮಾಡುತ್ತಿದೆಯೇ?: ನಾನುಗೌರಿ.ಕಾಂಗೆ ಆಘಾತ ತಂದ ಅನುಭವ