ಭಾರತೀಯ ಕುಸ್ತಿಪಟುಗಳ ವಿರುದ್ಧ ದೆಹಲಿ ಪೊಲೀಸರ ದೌರ್ಜನ್ಯ ನಡೆಸಿದ ಬಳಿಕ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)ಯು ಮಾತನಾಡಿದ್ದು, ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ.
”ಕುಸ್ತಿಪಟುಗಳ ಆರೋಪಗಳನ್ನು ಸ್ಥಳೀಯ ಕಾನೂನಿಗೆ ಅನುಗುಣವಾಗಿ ನಿಷ್ಪಕ್ಷಪಾತ, ಕ್ರಿಮಿನಲ್ ತನಿಖೆಯ ಮೂಲಕ ಕ್ರಮ ಜರುಗಿಸಬೇಕು ಎಂದು IOC ಒತ್ತಾಯಿಸುತ್ತದೆ” ಎಂದು IOC ವಕ್ತಾರರು ಸ್ಪೋರ್ಟ್ಸ್ಟಾರ್ಗೆ ತಿಳಿಸಿದರು.
”ಆರೋಪಿಯ ವಿರುದ್ಧ ತನಿಖೆ ನಡೆಸಿ ನಿರ್ಧಿಷ್ಟ ಕ್ರಮ ಜರುಗಿಸುವ ಜೊತೆಗೆ ಹೆಚ್ಚಿನ ಕ್ರಮಗಳನ್ನು ಅನುಸರಿಸಬೇಕು. ಈ ಪ್ರಕ್ರಿಯೆಯ ಉದ್ದಕ್ಕೂ ಈ ಕ್ರೀಡಾಪಟುಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಸರಿಯಾಗಿ ಪರಿಗಣಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಮತ್ತು ಈ ತನಿಖೆಯನ್ನು ತ್ವರಿತವಾಗಿ ಮುಕ್ತಾಯಗೊಳಿಸಬೇಕು” ಎಂದು ಹೇಳಿದ್ದಾರೆ.
ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ಧ ಪೊಲೀಸ್ ಕ್ರಮವನ್ನು ಖಂಡಿಸಿದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW), ಸಿಂಗ್ ವಿರುದ್ಧ ಸರಿಯಾದ ತನಿಖೆ ನಡೆಯುತ್ತಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ ನಂತರ IOC ಹೇಳಿಕೆ ಬಂದಿದೆ.
”ಭಾರತದಲ್ಲಿ ಕುಸ್ತಿ ಕ್ರೀಡೆಯ ಆಡಳಿತಕ್ಕೆ ಸಂಬಂಧಿಸಿದಂತೆ ಈ ಸಮಸ್ಯೆಯನ್ನು ಪರಿಹರಿಸಲು UWW ಅನ್ನು ಸಮರ್ಥ ಕ್ರೀಡಾ ಪ್ರಾಧಿಕಾರವಾಗಿ IOC ಬೆಂಬಲಿಸುತ್ತದೆ. ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷರು ಪ್ರಸ್ತುತ ಉಸ್ತುವಾರಿ ವಹಿಸುವುದಿಲ್ಲ ಎಂದು ಯುಡಬ್ಲ್ಯೂಡಬ್ಲ್ಯು ನಮಗೆ ತಿಳಿಸಿದೆ” ಎಂದು ಐಒಸಿ ವಕ್ತಾರರು ಸ್ಪೋರ್ಟ್ಸ್ಟಾರ್ಗೆ ತಿಳಿಸಿದ್ದಾರೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ)ಗೆ ಕ್ರೀಡಾಪಟುಗಳನ್ನು ರಕ್ಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಐಒಸಿ ಒತ್ತಾಯಿಸಿತು.
ಮಂಗಳವಾರ, ಕುಸ್ತಿಪಟುಗಳು ತಮ್ಮ ದೂರುಗಳ ಬಗ್ಗೆ ಸರ್ಕಾರ ಕಿವಿಗೊಡುತ್ತಿಲ್ಲ ಎಂದು ಪ್ರತಿಭಟನೆಯ ಸಂಕೇತವಾಗಿ ಒಲಿಂಪಿಕ್ಸ್ ಮತ್ತು ಇತರ ಉನ್ನತ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಗೆದ್ದಿದ್ದ ಪದಕಗಳನ್ನು ಗಂಗಾ ನದಿಗೆ ಎಸೆಯಲು ಯೋಜಿಸಿದ್ದರು. ಆದರೆ ರೈತ ಮುಖಂಡ ನರೇಶ್ ಟಿಕಾಯತ್ ಅವರು ಮನವೊಲಿಸಿ ಅದನ್ನು ತಡೆದರು.
ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಮ್ಯಾನ್ಹ್ಯಾಂಡ್ ಮಾಡಿ ಬಂಧಿಸಿದರು ಮತ್ತು ಜಂತರ್ ಮಂತರ್ನಲ್ಲಿ ಅವರ ಪ್ರತಿಭಟನೆಗೆ ನಿರ್ಬಂಧ ಹೇರಿದರು. ಜಂತರ್ ಮಂತರ್ಗೆ ಹಿಂತಿರುಗಲು ಬಿಡುವುದಿಲ್ಲ ಎಂದು ಪೊಲೀಸರು ಹೇಳಿದ್ದು, ಕುಸ್ತಿಪಟುಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಅಂತರಾಷ್ಟ್ರೀಯ ಖಂಡನೆಗಳು ಹರಿದುಬರುತ್ತಿದ್ದರೂ, ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ಧದ ಕ್ರಮದ ಬಗ್ಗೆ ಕೇಂದ್ರ ಸರ್ಕಾರ ಏನನ್ನೂ ಹೇಳಿಲ್ಲ. ಬದಲಾಗಿ, ಲೈಂಗಿಕ ಕಿರುಕುಳದ ಆರೋಪಿ ಸಿಂಗ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.