ಶಿವಮೊಗ್ಗದಲ್ಲಿ ಸಂಜೆ ಬಳಿಕ ವ್ಯಾಪಾರ ವಹಿವಾಟಿನ ಮೇಲೆ ಹೇರಲಾಗಿರುವ ನಿರ್ಬಂಧವನ್ನು ಹಿಂಪಡೆದು ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳು ಜಿಲ್ಲಾಧಿಕಾರಿ ಡಾ. ಆರ್ ಸೆಲ್ವಾಮಣಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸ್ವಾತಂತ್ರ್ಯ ದಿನದಂದು ಸಾವರ್ಕರ್ ಫ್ಲೆಕ್ಸ್ ವಿಚಾರವಾಗಿ ಶಿವಮೊಗ್ಗದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಹಾಗಾಗಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ವ್ಯಾಪಾರ ವಹಿವಾಟನ್ನು ನಿರ್ಬಂಧಿಸಲಾಗಿತ್ತು.
ಸದ್ಯದ ನಿರ್ಬಂಧದಿಂದಾಗಿ ಸರಿಯಾಗಿ ವ್ಯಾಪಾರ ನಡೆಯುತ್ತಿಲ್ಲ. ಬಹಳಷ್ಟು ವ್ಯಾಪಾರಸ್ಥರಿಗೆ ನಷ್ಟ ಉಂಟಾಗಿದೆ. ದಯವಿಟ್ಟು ಪೂರ್ಣ ಪ್ರಮಾಣದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ ಎಂದು ಸಂಘವು ಮನವಿ ಮಾಡಿದೆ.
“ಪ್ರಸ್ತುತ ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಹಾಗಾಗಿ, ಇನ್ನು ಮುಂದೆ ಸಂಜೆ ನಂತರವೂ ವ್ಯಾಪಾರ ವಹಿವಾಟಿಗೆ ನಿಯಮಾನುಸಾರ ಅನುಮತಿ ನೀಡಬೇಕು” ಎಂದು ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹಕಾರ್ಯದರ್ಶಿ ಜಿ.ವಿಜಯಕುಮಾರ್ ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಿಟಿ ಸೆಂಟರ್ ಮಾಲ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಮಧ್ಯದಲ್ಲಿದ್ದ ವಿ.ಡಿ.ಸಾವರ್ಕರ್ ಫೋಟೋವನ್ನು ಜನರೇ ತೆರವು ಮಾಡಿಸಿದ್ದರು. “ಬ್ರಿಟಿಷರ ಬೂಟು ನೆಕ್ಕಿ, ಕ್ಷಮಾಪಣೆ ಭಿಕ್ಷೆ ಕೇಳಿದ್ದ ಸಾವರ್ಕರ್ ಭಾವಚಿತ್ರವನ್ನು ತೆಗೆದು ಹಾಕಬೇಕು” ಎಂದು ಆಗ್ರಹಿಸುತ್ತಿರುವ ಯುವಕನಿಗೆ ಇನ್ನಿತರರು ಸಾಥ್ ನೀಡಿರುವುದು ವಿಡಿಯೊದಲ್ಲಿ ದಾಖಲಾಗಿತ್ತು.
ಅದಾದ ನಂತರ ಗಾಂಧಿ ಬಜಾರ್ನ ತರಕಾರಿ ಮಾರ್ಕೆಟ್ ಬಳಿಯೂ ಸಾವರ್ಕರ್ ಫೋಟೊ ಹಾಕಲಾಗಿತ್ತು. ಈ ಕುರಿತು ಗಲಾಟೆ ಆರಂಭವಾಗಿ ಪ್ರೇಮ್ ಸಿಂಗ್ ಎಂಬಾತನಿಗೆ ಚೂರಿಯಿಂದ ಇರಿಯಲಾಗಿತ್ತು. ಆದರ ಆರೋಪಿಗಳಲ್ಲಿ ಒಬ್ಬನಾದ ಮಹಮ್ಮದ್ ಜಬಿ ಎಂಬಾತನನ್ನು ಬಂಧಿಸುವ ವೇಳೆ ಪರಾರಿಯಾಗಲು ಯತ್ನಿಸಿದ ಎಂಬ ಆರೋಪ ಮೇಲೆ ಆತನ ಕಾಲಿಗೆ ಗುಂಡು ಹಾರಿಸಲಾಗಿತ್ತು. ಈ ಎಲ್ಲ ಘಟನೆಗಳಿಂದ ಶಿವಮೊಗ್ಗದಲ್ಲಿ ನಿಷೇದಾಜ್ಞೆ ಜಾರಿಗೊಳಿಸಿದ್ದು, ಸಂಜೆ ವೇಳೆ ವ್ಯಾಪಾರ ವಹಿವಾಟನ್ನು ನಿಷೇಧಿಸಲಾಗಿತ್ತು. ಇದರಿಂದಾಗಿ ಅಂದಿನ ದುಡಿಮೆಯನ್ನು ನಂಬಿ ಬದುಕುತ್ತಿದ್ದ ಬಡವರಿಗೆ ತೊಂದರೆಯಾಗಿತ್ತು.
ಇದನ್ನೂ ಓದಿ: ಶಿವಮೊಗ್ಗ: ಸಾವರ್ಕರ್ ಫೋಟೋ ತೆರವು ಮಾಡಿಸಿದ ಜನತೆ; ವಿಡಿಯೊ ವೈರಲ್