ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಮಿಷನರ್ ಮಿಚೆಲ್ ಬ್ಯಾಚೆಲೆಟ್ CAA ವಿರುದ್ಧ ಭಾರತದ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕಾನೂನು ಭಾರತ ಸಹಿ ಹಾಕಿರುವ ಜನಾಂಗೀಯ ತಾರತಮ್ಯದ ವಿರುದ್ಧದ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ವಿರುದ್ಧವಾಗಿದೆ ಎಂದವರು ಅರ್ಜಿಯಲ್ಲಿ ದೂರಿದ್ದಾರೆ.
“ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಆಂತರಿಕ ವಿಷಯವಾಗಿದೆ ಮತ್ತು ಕಾನೂನುಗಳನ್ನು ರೂಪಿಸುವ ಭಾರತೀಯ ಸಂಸತ್ತಿನ ಸಾರ್ವಭೌಮ ಹಕ್ಕಿಗೆ ಸಂಬಂಧಿಸಿದೆ. ಭಾರತದ ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹಸ್ತಕ್ಷೇಪ್ರ ಮಾಡಲು ಯಾವುದೇ ವಿದೇಶಿ ಪಕ್ಷಕ್ಕೆ ಅವಕಾಶವಿಲ್ಲ ಎಂದು ನಾವು ಬಲವಾಗಿ ನಂಬುತ್ತೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರತಿಕ್ರಿಯಿಸಿದ ನಂತರ ಅವರು ಸುಪ್ರೀಂ ಮೆಟ್ಟಿಲೇರಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆಗಳ ಮಧ್ಯೆ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಸಿಎಎ ಸಾಂವಿಧಾನಿಕವಾಗಿ ಮಾನ್ಯವಾಗಿದೆ ಮತ್ತು ನಮ್ಮ ಸಾಂವಿಧಾನಿಕ ಮೌಲ್ಯಗಳ ಎಲ್ಲಾ ಅವಶ್ಯಕತೆಗಳನ್ನು ಅನುಸರಿಸಿದೆ ಎಂದು ಎಂಇಎಯ ರವೀಶ್ ಕುಮಾರ್ ಪ್ರತಿಪಾದಿಸಿದ್ದಾರೆ.
“ಇದು ಭಾರತದ ವಿಭಜನೆಯ ದುರಂತದಿಂದ ಉದ್ಭವಿಸುವ ಮಾನವ ಹಕ್ಕುಗಳ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ದೀರ್ಘಕಾಲದ ರಾಷ್ಟ್ರೀಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಸಚಿವಾಲಯ ಹೇಳಿದೆ.
ಸಂಸತ್ತು ಅಂಗೀಕರಿಸಿದ ಸಿಎಎ ಕುರಿತು ವಿಶ್ವಸಂಸ್ಥೆಯು “ಮೂಲಭೂತವಾಗಿ ತಾರತಮ್ಯವನ್ನು ಹೊಂದಿರುವ” ಕಾನೂನಿನ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಯುಎನ್ ಮಾನವ ಹಕ್ಕುಗಳ ಉನ್ನತ ಆಯುಕ್ತರ ಕಚೇರಿಯ ವಕ್ತಾರರು, 1955 ರ ಕಾನೂನಿನ ತಿದ್ದುಪಡಿಗಳು ಈ ಕಾನೂನು ಭಾರತ ಸಹಿ ಹಾಕಿರುವ ಜನಾಂಗೀಯ ತಾರತಮ್ಯದ ವಿರುದ್ಧದ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ವಿರುದ್ಧವಾಗಿದೆ ಎಂದು ಅದು ಪ್ರತಿಪಾದಿಸಿದೆ.
ಕಳೆದ ವಾರ, ಯುಎನ್ ಮಾನವ ಹಕ್ಕುಗಳ ಹೈಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಸಿಎಎ ಮತ್ತು ದೆಹಲಿ ಗಲಭೆಗಳ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದರು. ಹೆಚ್ಚಿನ ಹಿಂಸಾಚಾರವನ್ನು ತಡೆಗಟ್ಟಲು ಭಾರತದ ನಾಯಕತ್ವವನ್ನು ಒತ್ತಾಯಿಸಿದ್ದರು.
ಯುಎಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (ಯುಎಸ್ಸಿಐಆರ್ಎಫ್) ಕೂಡ ಸಿಎಎ ಕಾಯ್ದೆಯ ವಿರುದ್ಧ ಟ್ರಂಪ್ ಆಡಳಿತಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು. ಕಾನೂನನ್ನು ಅಂಗೀಕರಿಸಿದರೆ ಭಾರತದ ಉನ್ನತ ನಾಯಕತ್ವದ ವಿರುದ್ಧ ನಿರ್ಬಂಧಗಳನ್ನು ಪರಿಗಣಿಸುವಂತೆ ಅದು ಈ ಹಿಂದೆ ಟ್ರಂಪ್ ಆಡಳಿತವನ್ನು ಕೇಳಿಕೊಂಡಿತ್ತು.