ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸೃತಿ ಇಲಾಖೆಯು `ಕನ್ನಡಕ್ಕಾಗಿ ನಾವು’ ಅಭಿಯಾನ ಆರಂಭಿಸಿದ್ದು, ಈ ಅಭಿಯಾನದ ಭಾಗವಾಗಿ ಹಮ್ಮಿಕೊಂಡಿರುವ ‘ಶುದ್ಧ ಕನ್ನಡ ಮಾತನಾಡುವ ಸ್ಪರ್ಧೆ’ ಈಗ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ‘ನಾನುಗೌರಿ.ಕಾಂ’ ಜೊತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎಸ್.ರಂಗಪ್ಪ ಮಾತನಾಡಿದ್ದರೆ.
“ಶುದ್ಧ, ಅಶುದ್ಧ ಎಂದು ಹೇಳಿಲ್ಲ. ಕನ್ನಡ ಭಾಷೆಯ ಕುರಿತು ನವೆಂಬರ್ ತಿಂಗಳು ಜಾಗೃತಿ ಮೂಡಿಸುವ ಉದ್ದೇಶದಿಂದ ಕನ್ನಡ ಪದಗಳನ್ನೇ ಬಳಸಿ ಸ್ಪರ್ಧೆ ನಡೆಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಒಂದು ಸಮಿತಿ ಇರುತ್ತದೆ. ಅದು ಆಯ್ಕೆ ಮಾಡುತ್ತದೆ. ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ ಇದ್ಯಾವುದನ್ನೂ ಬಳಸದೆ ಮಾತನಾಡುವ ಸ್ಪರ್ಧೆ ಅದು” ಎದು ತಿಳಿಸಿದ್ದಾರೆ.
ಸಂಸ್ಕೃತ ಭಾಷೆಯಿಂದ ಸಾಕಷ್ಟು ಪದಗಳು ಬಂದಿವೆ. ಜನರು ಸಾಮಾನ್ಯವಾಗಿ ಬಳಸುವ ಇಂಜಿಯರಿಂಗ್ ಎಂಬುದನ್ನು ‘ಅಭಿಯಂತರ’ ಎಂದು ತರ್ಜುಮೆ ಮಾಡಿದೆ ಸಂಸ್ಕೃತ ಆಗುತ್ತದೆಯಲ್ಲ, ಕನ್ನಡ ಬಳಕೆ ಹೇಗೆ ಸಾಧ್ಯ? ಎಂದು ಕೇಳಿದಾಗ, “ನೀವು ಹೇಳುವುದು ಸತ್ಯವಿದೆ. ಒಂದು ಸಮಿತಿ ಮಾಡಿದ್ದೇವೆ. ಕೆಲವು ಪದಗಳು ಕನ್ನಡಮಯ ಆಗಿ ಹೋಗಿವೆ. ಅವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ” ಎಂದರು.
ಮುಂದುವರಿದು, “ಸ್ಪರ್ಧೆಯಲ್ಲಿ ಯಾರು ಹೆಚ್ಚು ಕನ್ನಡ ಬಳಸುತ್ತಾರೆ, ಕಡಿಮೆ ಯಾರು ಬಳಸುತ್ತಾರೆ ಎಂಬುದನ್ನು ಜಿಲ್ಲಾ ಮಟ್ಟದ ಸಮಿತಿಯಲ್ಲಿ ಇರುವವರು ಪರಿಶೀಲಿಸುತ್ತಾರೆ. ನಾನು ಮಾತನಾಡುವಾಗಲೂ ಮಧ್ಯೆ ಮಧ್ಯೆ ಇಂಗ್ಲಿಷ್ ಪದ ಬಳಸುತ್ತೇನೆ. ಆದರೂ ಹೆಚ್ಚು ಕನ್ನಡ ಪದಗಳನ್ನು ಬಳಸಿರುತ್ತೇನೆಲ್ಲವೇ? ಅದರ ಆಧಾರದಲ್ಲಿ ಸಮಿತಿ ನಿರ್ಧಾರ ಮಾಡುತ್ತದೆ” ಎಂದು ಪ್ರತಿಕ್ರಿಯಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿರುವ ‘ಶುದ್ಧ ಕನ್ನಡ ಪದಗಳ ಸ್ಪರ್ಧೆ’ ಒಕ್ಕಣೆ ಇರುವ ಪೋಸ್ಟರ್ ಕುರಿತು ಕೇಳಿದಾಗ, “ಶುದ್ಧ, ಅಶುದ್ಧ ಎನ್ನಲು ಸಾಧ್ಯವಿಲ್ಲ. ಕನ್ನಡ ಪದಗಳು ಯಾವುದೂ ಅಶುದ್ಧವಲ್ಲ. ಪೋಸ್ಟರ್ಅನ್ನು ಪರಿಶೀಲಿಸಲಾಗುವುದು” ಎಂದು ಸ್ಪಷ್ಟಪಡಿಸಿದರು.
ಏನಿದು ಸ್ಪರ್ಧೆ?
ಅನ್ಯಭಾಷೆಯ ಪದಗಳ ಬಳಕೆ ಮಾಡದೆ ನಿರರ್ಗಳವಾಗಿ ಕನ್ನಡದಲ್ಲಿ ನಾಲ್ಕು ನಿಮಿಷಗಳ ಕಾಲ ಕನ್ನಡ ನಾಡು, ನುಡಿ, ಪರಂಪರೆಗೆ ಸಂಬಂಧಿಸಿದ ವಿಷಯಗಳ ಕುರಿತ ವಿಡಿಯೊ ಸೆಲ್ಫಿ ತೆಗೆದು ಕಳುಹಿಸಬೇಕು. ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೂವರಿಗೆ ಐದು ಸಾವಿರ ರೂ., ಮೂರು ಸಾವಿರ ರೂ. ಮತ್ತು ಎರಡು ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೇಳಿತ್ತು.
ಜಿಲ್ಲಾ ಮಟ್ಟದಲ್ಲಿ ವಿಜೇತರಾದವರನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಪರಿಗಣಿಸಿ ಅಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 50 ಸಾವಿರ ರೂ. ದ್ವಿತೀಯ ಬಹುಮಾನ 30 ಸಾವಿರ ರೂ., ತೃತೀಯ ಬಹುಮಾನ 20 ಸಾವಿರ ರೂ. ನೀಡಲಾಗುತ್ತದೆ. ಅ.28ರೊಳಗೆ ವಿಡಿಯೋ ಕಳುಹಿಸಬೇಕು ಎಂದು ಇಲಾಖೆ ತಿಳಿಸಿದೆ. ಅಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಫೇಸ್ಬುಕ್ ಪೇಜ್ನಲ್ಲಿ ‘ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ’ಯ ಪೋಸ್ಟರ್ ಹಂಚಿಕೊಳ್ಳಲಾಗಿತ್ತು. ಸಚಿವ ಸುನೀಲ್ಕುಮಾರ್ ಭಾವಚಿತ್ರ, ಸರ್ಕಾರದ ಲೋಗೋವನ್ನು ಕಾಣಬಹುದಾಗಿತ್ತು.
ಇದನ್ನೂ ಓದಿರಿ: ‘ಶುದ್ಧ ಕನ್ನಡ’ ವಿವಾದ: ಕನ್ನಡ-ಸಂಸ್ಕೃತಿ ಇಲಾಖೆಗೆ ಸಾಹಿತಿಗಳ ತರಾಟೆ