ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮರ ಇರಲಿಲ್ಲ, ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಖುಷ್ಬೂ ಸುಂದರ್ ರಾಷ್ಟ್ರೀಯ ಮಹಿಳಾ ಆಯೋಗದ ಪ್ರತಿನಿಧಿ ಖುಷ್ಬೂ ಸುಂದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜೊಂದರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಮಾತನಾಡಿರುವ ಅವರು, “ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇದೆ ಎಂಬ ವದಂತಿ ಹರಡಿದೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುಳ್ಳು ವೀಡಿಯೋ ಹರಿದಾಡುತ್ತಿದೆ. ಇದೊಂದು ಶೈಕ್ಷಣಿಕ ಸಂಸ್ಥೆ. ಹಾಗಾಗಿ ಹಿಡನ್ ಕ್ಯಾಮೆರಾಗಳು ಇರಲು ಸಾಧ್ಯವಿಲ್ಲ” ಎಂದಿದ್ದಾರೆ.
ಯಾರಾದರೂ ಆರೋಪ ಮಾಡಿದ್ದಾರೆ ಎಂಬ ಕಾರಣಕ್ಕೆ ಅದನ್ನು ನಾವು ಪುರಸ್ಕರಿಸಲು ಆಗಲ್ಲ. ನಮಗೆ ದಾಖಲೆಗಳು ಬೇಕು. ಅದಕ್ಕಾಗಿ ತಾಳ್ಮೆಯಿಂದ ಕಾಯಬೇಕು ಎಂದು ಖುಷ್ಬೂ ತಿಳಿಸಿದರು.
‘ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇದೆ ಎಂಬುದು ಕೇವಲ ವದಂತಿಯಷ್ಟೇ. ಮಾಧ್ಯಮದವರೂ ಕೂಡ ಇದೇ ವದಂತಿಯನ್ನು ನಂಬಿಕೊಂಡು ನನ್ನಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ. ಇದು ಬೇಸರ ತರಿಸುತ್ತಿದೆ. ಈ ಪ್ರಕರಣದ ಕುರಿತು ಈಗಲೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.
ಕಾಲೇಜಿನಲ್ಲಿ ನಾಲ್ಕು ಗಂಟೆ ತಪಾಸಣೆ ನಡೆಸಿಯೂ ಏನೂ ಸಿಕ್ಕಿಲ್ಲವೇ ಎಂದು ಕೇಳಿದ ಪತ್ರಕರ್ತನಿಗೆ ಉತ್ತರ ನೀಡಿದ ಖುಷ್ಬೂ ಸುಂದರ್, ‘ಇದು ಬ್ರೇಕಿಂಗ್ ನ್ಯೂಸ್ ಅಲ್ಲ. ಇದು ವಿದ್ಯಾರ್ಥಿಗಳ ಬಗೆಗಿನ ವಿಷಯ. ಮಹಿಳೆಯರ ವಿಚಾರ. ಎಲ್ಲರೂ ತಾಳ್ಮೆಯಿಂದ ವರ್ತಿಸಬೇಕು. ಇದು ಎರಡು ನಿಮಿಷದಲ್ಲಿ ತಯಾರಾಗುವ ನೂಡಲ್ಸ್ ಅಲ್ಲ” ಎಂದು ಖಡಕ್ ಆಗಿಯೇ ಉತ್ತರಿಸಿದರು.
‘ರಾಷ್ಟ್ರೀಯ ಮಹಿಳಾ ಆಯೋಗವು ಪೊಲೀಸರೊಂದಿಗೆ ಸೇರಿ ಕೆಲಸ ಮಾಡುತ್ತಿದೆ. ನಾವೂ ಕೂಡ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಮೊಬೈಲ್ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದೇವೆ. ಹಾಗಾಗಿ ಯಾವುದೇ ಮಾಹಿತಿಗಳನ್ನು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ತಿಳಿಸಿದ್ದಾರೆ.
#WATCH | Udupi Video Incident: NCW (National Commission for Women) member Khushbu Sundar says, "There are rumours that there were hidden cameras in toilets. There is no truth in it. False videos are going around. It is an institution so there can't be any hidden cameras. We are… pic.twitter.com/zhDDSevgIX
— ANI (@ANI) July 27, 2023
ಇಂದು ಬೆಳಿಗ್ಗೆ ಮಾತನಾಡಿದ್ದ ಅವರು, ‘ಉಡುಪಿ ಪ್ರಕರಣವನ್ನು ರಾಜಕೀಕರಣಗೊಳಿಸಬೇಡಿ, ಪೊಲೀಸರು ಕಾನೂನಿನಂತೆ ನಡೆದುಕೊಂಡಿದ್ದಾರೆ’ ಎಂದಿದ್ದರು.
ಯಾರು ವದಂತಿಗಳನ್ನು ಹರಡಬಾರದು. ಯುವತಿಯರ ರಕ್ಷಣೆ ನಮಗೆ ಮುಖ್ಯ. ಯುವತಿಯರು ನಮ್ಮ ಕುಟುಂಬದವರು. ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿರುವುದು ಮುಖ್ಯ. ನಾನು ಧಾರ್ಮಿಕ ಅಥವಾ ರಾಜಕೀಯ ಮಾಡಲು ಇಲ್ಲಿ ಬಂದಿಲ್ಲ, ಒಬ್ಬ ಪೋಷಕರಾಗಿ ಇದನ್ನು ಬಗೆಹರಿಸಬೇಕು. ರಾಜಕಾರಣಿಗಳು ರಾಜಕೀಯ ಪಕ್ಷಗಳು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ತಿಳಿಸಿದ್ದರು.
ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ಆಡಳಿತಾಧಿಕಾರಿಗಳು, ಸಂತ್ರಸ್ತೆ ಹಾಗೂ ಪೊಲೀಸರು ಸೇರಿದಂತೆ ಹಲವು ಜನರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ: ಉಡುಪಿ ಪ್ರಕರಣ ರಾಜಕೀಕರಣಗೊಳಿಸಬೇಡಿ, ಪೊಲೀಸರು ಕಾನೂನಿನಂತೆ ನಡೆದುಕೊಂಡಿದ್ದಾರೆ: ಖುಷ್ಬೂ ಸುಂದರ್