ಭಾರತದ ಆರ್ಥಿಕತೆಯನ್ನು ದೇವರೇ ಕಾಪಾಡಬೇಕು ಎಂದು ಮಾಜಿ ಆರ್ಥಿಕ ಸಚಿವ ಚಿದಂಬರಂ ಗೇಲಿ ಮಾಡಿದ್ದಾರೆ.
ಭಾರತದ ಆರ್ಥಿಕ ಬೆಳವಣಿಗೆಯ ಸೂಚಕವಾಗಿ ಭವಿಷ್ಯದಲ್ಲಿ ಜಿಡಿಪಿಯು ಉಪಯೋಗವಿಲ್ಲದ್ದು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮೇಲಿನ ಹೇಳಿಕೆಯ ಮೂಲಕ ವ್ಯಂಗ್ಯ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು “ಜಿಡಿಪಿ ಸಂಖ್ಯೆಗಳು ಅಪ್ರಸ್ತುತವಾಗಿವೆ, ವೈಯಕ್ತಿಕ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ, ಆಮದು ಸುಂಕವನ್ನು ಹೆಚ್ಚಿಸಲಾಗುತ್ತದೆ. ಇವು ಬಿಜೆಪಿಯ ಸುಧಾರಣೆಗಳ ಕಲ್ಪನೆಗಳು. ಭಾರತದ ಆರ್ಥಿಕತೆಯನ್ನು ಆ ದೇವರೇ ಉಳಿಸಬೇಕು” ಎಂದಿದ್ದಾರೆ.
GDP numbers are irrelevant, personal tax will be cut, import duties will be increased.
These are BJP’s ideas of reforms.
God save India’s economy.
— P. Chidambaram (@PChidambaram_IN) December 3, 2019
ಸಂಸತ್ತಿನಲ್ಲಿ ತರಿಗೆ ಕಾನೂನು ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಸಂಸದ ನಿಶಿಕಾಂತ್ ದುಬೆ ಈಗ ಆರ್ಥಿಕತೆಯ ಸೂಚಕವಾಗಿ ಜಿಡಿಪಿ ಪ್ರಸ್ತುತವಲ್ಲ. ಅದನ್ನು ಬೈಬಲ್, ರಾಮಾಯಣ ಮತ್ತು ಮಹಾಭಾರತದಂತೆ ಪರಿಗಣಿಸಬೇಕಾಗಿಲ್ಲ ಎಂದು ಹೇಳಿದ್ದರು.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 4.5 ಕ್ಕೆ ಇಳಿದಿದೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿದ ಮೂರು ದಿನಗಳ ನಂತರ ಸೋಮವಾರ ಜಿಡಿಪಿ ಪ್ರಸ್ತುತವಾಗುವುದನ್ನು ನಿಲ್ಲಿಸುತ್ತದೆ ಎಂದು ಬಿಜೆಪಿಯ ನಿಶಿಕಾಂತ್ ದುಬೆ ಸಂಸತ್ತಿನಲ್ಲಿ ತಿಳಿಸಿದ್ದಾರೆ. 1934 ಕ್ಕಿಂತ ಮೊದಲು ಆರ್ಥಿಕ ಸೂಚಕ ಅಸ್ತಿತ್ವದಲ್ಲಿಲ್ಲದ ಕಾರಣ ಅದು “ಅಂತಿಮ ಸತ್ಯ” ಅಲ್ಲ ಎಂದು ದುಬೆ ವಾದಿಸಿದ್ದಾರೆ.
ಐಎನ್ಎಕ್ಸ್ ಮೀಡಿಯಾದಲ್ಲಿ ಪ್ರಕರಣದಲ್ಲಿ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿರುವ ಚಿದಂಬರಂ ಸರ್ಕಾರವನ್ನು ಆರ್ಥಿಕ ವಿಷಯಗಳ ಕುರಿತು ಕುಟುಕುತ್ತಲೇ ಇದ್ದಾರೆ.
ಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಸಹ ನಿಶಿಕಾಂತ್ ದುಬೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ದೇವರು ನಮ್ಮನ್ನು ನವ ಭಾರತದ ಅನನುಭವಿ ಅರ್ಥಶಾಸ್ತ್ರಜ್ಞರಿಂದ ರಕ್ಷಿಸುತ್ತಾನೆ! ಎಂದು ಟ್ವೀಟ್ ಮಾಡಿದ್ದಾರೆ.