Homeಅಂಕಣಗಳುಅಪ್ಪನ ಕನವರಿಕೆ, ಕನಸುಗಳ ಮರುಹುಟ್ಟು: ಗೌರಿಯವರ ಮೊದಲ ಕಣ್ಣೋಟ ಇದು

ಅಪ್ಪನ ಕನವರಿಕೆ, ಕನಸುಗಳ ಮರುಹುಟ್ಟು: ಗೌರಿಯವರ ಮೊದಲ ಕಣ್ಣೋಟ ಇದು

ಅಪ್ಪನ ‘ಪತ್ರಿಕೆ' ಈಗ ಅವರ 70ನೇ ಹುಟ್ಟು ಹಬ್ಬದ ದಿನವೇ ಹೊಸ ಹುಟ್ಟು ಪಡೆದು ನಿಮ್ಮ ಕೈಯಲ್ಲಿಇಟ್ಟಿದ್ದೇನೆ. ಹಳೆಯದರ ಮುಂದುವರಿಕೆ, ಹೊಸ ಕಾಲದ ಸ್ಪಂದನೆಗೆ ತಕ್ಕ ಹಾಗೆ ಮಾರ್ಪಾಡು- ಇವು ಒಂದು ಪತ್ರಿಕೆಯನ್ನು ಸದಾ ಕಾಲ ಜೀವಂತವಾಗಿಡುವ ಸೂತ್ರಗಳು. ಈ ಸೂತ್ರ ಹೇಳಿಕೊಟ್ಟವರು ನೀವು. ಅದನ್ನು ಪಾಲಿಸುವ ಕರ್ತವ್ಯ ಮಾತ್ರ ನನ್ನದು.

- Advertisement -
- Advertisement -

ಅತ್ಯಂತ ದುಗುಡ, ಆತಂಕ ಹಾಗೂ ನಿರ್ಭಯತೆಯಿಂದ ಈ ಅಂಕಣವನ್ನು ಇಂದು ಬರೆಯುತ್ತಿದ್ದೇನೆ. ಕಳೆದ ನಾಲ್ಕು ವಾರಗಳಲ್ಲಿ ಕರ್ನಾಟಕದ ಒಟ್ಟು ಸಂದರ್ಭದಲ್ಲಿ ಮತ್ತು ನನ್ನ ವೈಯಕ್ತಿಕ ಬದುಕಿನಲ್ಲಿ ನಡೆದು ಹೋದ ಘಟನೆಗಳು ತೆರೆದ ಪುಸ್ತಕದಂತೆ. ಎಲ್ಲರಿಗೂ ತಿಳಿದಿದೆ. ಮಹಿಳಾ ವಾದದಲ್ಲಿ ‘ಖಾಸಗಿ ಎಂಬುದು ಕೂಡ ರಾಜಕೀಯ’ (The Personal is also political) ಎಂಬ ಪ್ರಸಿದ್ಧ ಮಾತಿದೆ. ನನ್ನ ಬದುಕಿನಲ್ಲಿ ಇದು ಅಕ್ಷರಶಃ ನಿಜವಾಗಿದೆ.

ಪತ್ರಿಕಾ ರಂಗ ನನಗೆ ಹೊಸದೇನಲ್ಲ. ಆದರೆ ಐದು ವರ್ಷಗಳ ಹಿಂದೆ ಅಪ್ಪನ ಪತ್ರಿಕೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಾಗ ನಾನೊಂದು ಮರು ಹುಟ್ಟನ್ನೇ ಪಡೆದೆ. ಯಾವ ವಿಶ್ವವಿದ್ಯಾನಿಲಯದಲ್ಲೂ ಕಲಿಯಲಾಗದಷ್ಟನ್ನು ಕಳೆದ ಐದು ವರ್ಷಗಳಲ್ಲಿ ಕಲಿತೆ. ಅಂದಿನಿಂದ ಇವತ್ತಿನವರೆಗೂ ಅಪ್ಪನ ಧ್ಯೇಯೋದ್ದೇಶಗಳು ಮತ್ತು ಕರ್ನಾಟಕದ ಓದುಗರು ನನ್ನ ಕೈ ಹಿಡಿದು ಮುನ್ನೆಡೆಸಿದ್ದಾರೆ.

ನನ್ನ ಮುಂದೆ ಅಂದು ಇದ್ದ ಧ್ಯೇಯಗಳು ಮೂರು: ಅಧಿಕಾರ ವರ್ಗದ ಬಗ್ಗೆ ನಿಷ್ಠುರತೆ, ಜನಸಾಮಾನ್ಯರ ಬಗ್ಗೆ ಪ್ರೀತಿ ಮತ್ತು ಎಂತಹ ಕಠಿಣ ಸಂದರ್ಭದಲ್ಲೂ ಅನ್ಯಾಯದೊಂದಿಗೆ ರಾಜಿ ಮಾಡಿಕೊಳ್ಳದಂತೆ ಆತ್ಮ ಸ್ಥೈರ್ಯವನ್ನು ಕಾಪಾಡಿಕೊಳ್ಳುವುದು. ಇವು ಮೂರು ನನ್ನನ್ನು ಇಂದಿಗೂ ಕಾಪಾಡಿಕೊಂಡು ಬಂದಿವೆ. ನನ್ನ ಬದುಕಿನ ಈ ಹೊಸ ಅಧ್ಯಾಯದ ಹೊಸ್ತಿಲಲ್ಲಿ ಇವೇ ನನಗೆ ಶ್ರೀರಕ್ಷೆ ಕೂಡ ಆಗಿವೆ; ಅಪ್ಪನ ‘ಪತ್ರಿಕೆ’ಗೆ ಮರುಹುಟ್ಟು ನೀಡುವ ಶಕ್ತಿಯನ್ನು ಕೊಟ್ಟಿವೆ.

ಕಳೆದ ಐದು ವರ್ಷ ನಾನು ಅನುಭವಿಸಿದ ಯಾತನೆ ನನಗೆ ಮಾತ್ರ ಗೊತ್ತು. ನನ್ನನ್ನು ಹಾದಿ ತಪ್ಪಿಸುವ ಕ್ಷುದ್ರ ಶಕ್ತಿಗಳು ಬಗಲಲ್ಲೇ ಇದ್ದವು. ಅಪ್ಪನ ಆದರ್ಶಗಳನ್ನು ಎಂದೋ ಗಾಳಿಗೆ ತೂರಿ, ಪತ್ರಿಕಾ ಧರ್ಮವನ್ನು ಮರೆತು ಅನೇಕ ಆಮಿಷ-ಅಸೂಯೆಗಳಿಗೆ ಶರಣಾಗಿದ್ದ ಕೆಲ ಜನರ ನಡುವೆ ನಾನು ಇಷ್ಟು ದಿನ ಮೂಕವೇದನೆ ಅನುಭವಿಸಿದ್ದೆ. ಅದಕ್ಕೆ ಏಕೈಕ ಕಾರಣ ಅಪ್ಪನ ಪತ್ರಿಕೆಯನ್ನು ಹೇಗಾದರೂ ಮಾಡಿ ಮುನ್ನಡೆಸಬೇಕು ಎಂಬ ಒಂದೇ ಒಂದು ಉದ್ದೇಶ ನನ್ನದಾಗಿತ್ತು.

ನನ್ನ ವೈಕ್ತಿಕ ಒದುಕು, ಆಸೆಗಳನ್ನು ಪಕ್ಕಕ್ಕೆ ಸರಿಸಿದೆ. ನಮ್ಮದೇ ಆಗಿದ್ದ ಸಂಸ್ಥೆಯಲ್ಲಿ ಸಂಬಳ ಪಡೆದು ದುಡಿದೆ. ಈ ವಿಚಾರ ನನ್ನ ಆಪ್ನ ಗೆಳೆಯರಿಗೂ ತಿಳಿದರಲಿಲ್ಲ. ಆದರೆ ಎಂತಹದೇ ಬಿಕ್ಕಟ್ಟಿನ ಸಂದರ್ಭದಲ್ಲೂ ನನಗೆ ಹಣ ಎಂದೂ ಮುಖ್ಯವಾಗಿರಲಿಲ್ಲ. ಆದರೆ ಯಾವಾಗ `ಪತ್ರಿಕೆ’ ಬಳಗದ ಹಲವರು ಸರ್ಕಾರದ ಮುಂದೆ ಸೈಟು ಇತ್ಯಾದಿಗಳಿಗೆ ಕೈಯ್ಯೊಡ್ಡಿದರೋ ಆಂದು ನಾನು ಕುಸಿದು ಹೋದೆ. ಅವರ ಆ ಕ್ರಿಯೆ ಅಪ್ಪ ನಿಂತು ಬೆಳೆಸಿದ್ದ `ಪತ್ರಿಕೆ’ಯ ಬುಡಕ್ಕೇ ಹಾಕಿದ ಕೊಡಲಿ ಏಟಾಗಿತ್ತು. ಅದನ್ನು ಪ್ರತಿಭಟಿಸಿದ್ದೆನಾದರೂ ಆಗಲೂ ಅಪ್ಪನ ಹಿತೈಷಿಗಳ ಸಲಹೆಯಂತೆ ಅಪ್ಪನ ಪತ್ರಿಕೆಯನ್ನು ಮುಂದುವರಿಸಲೇಬೇಕು ಎಂದು ನನ್ನ ವೃತ್ತಿ ಧರ್ಮವನ್ನು ಪಾಲಿಸುತ್ತಾ ಬಂದೆ.

ಕೇವಲ ಬರವಣಿಗೆ ಮಾತ್ರ ಸಾಲದು; ಜನರ ಹತ್ತಿರ ಹೋಗಬೇಕು; ಅವರ ಆಳದ ನೋವನ್ನು ಅವರಿಂದಲೇ ಕೇಳಬೇಕು ಎನ್ನವುದೂ ಈ ವೃತ್ತಿಧರ್ಮದ ವಿಸ್ತರಣೆ. ಹೀಗಾಗಿ ನಾನು ಜನರ ಹೋರಾಟಗಳಲ್ಲಿ ಪಾಲ್ಗೊಂಡೆ. ಅಪ್ಪ ಯಾವಾಗಲೂ ಹೇಳುತ್ತಿದ್ದರು “ಬೀದಿಗಳಿದು ಜನರ ಪರವಾಗಿ ಪ್ರತಿಭಟಿಸದಿದ್ದರೆ, ಅನ್ಯಾಯದ ವಿರುದ್ದ ಹೋರಾಡದಿದ್ದರೆ, ಸಮಾಜದ ಒಳಿತಿಗಾಗಿ ದುಡಿಯದಿದ್ದರೆ ನಾವು ಬದುಕಿದ್ದೂ useless” ಎಂದು.

ಆದರೆ ನಾನು ಹೀಗೆ ಜನಪರವಾಗಿ ಸಕ್ರಿಯವಾಗಿದ್ದನ್ನೇ ಹಲವರಿಗೆ ಸಹಿಸಲಾಗಲಿಲ್ಲ. ನನಗಾಗಿ ನಾನು ಏನನ್ನೂ ಆಶಿಸದಿದ್ದರೂ ಅಸೂಯೆಪಟ್ಟರು; ಅವಮಾನ-ಮಾನಸಿಕ ಹಿಂಸೆ ನೀಡಲಾರಂಭಿಸಿದರು. ಇದೆಲ್ಲ ಯಾವ ಹಂತ ಮುಟ್ಟಿತೆಂದರೆ ನಾನು ನಮ್ಮ ರಾಜ್ಯದಲ್ಲಿ ಶಾಂತಿ ನೆಲಸಬೇಕು, ಇಲ್ಲಿ ಹಿಂಸೆ-ಪ್ರತಿಹಿಂಸೆ ನಡೆದರೆ ಜನರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಪದೇಪದೇ ಹೇಳುತ್ತಾ ಬಂದಿದ್ದರೂ ನಾನು ನಕ್ಸಲರ ಪರ ಎಂದು ನನ್ನ ಮೇಲೆ ಗೂಬೆ ಕೂರಿಸಲಾಯಿತು. ಶಾಂತಿಯ ಪರವಾಗಿ, ರಕ್ತದೋಕುಳಿಯ ವಿರುದ್ಧವಾಗಿ ಧ್ವನಿ ಎತ್ತುವುದೇ ಒಂದು ಕ್ರೈಂ ಎಂಬಂತೆ ಬಿಂಬಿಸಲಾಯಿತು.

ಇದೇ ಹೋತ್ತಿಗೆ ‘ಪತ್ರಿಕೆ’ಯ ಹೊರಗಡೆ ತುರ್ತುಪರಿಸ್ಥಿತಿಯನ್ನು ನೆನಪಿಸುವಂತಹ ದಿಗ್ಬಂಧನವನ್ನು ಸರ್ಕಾರ ನಮ್ಮ ಸುತ್ತ ನೇಯತೊಡಗಿತ್ತು. ಶಾಂತಿ-ಅಹಿಂಸೆಯನ್ನು ಬಯಸುವ ‘ಶಾಂತಿಗಾಗಿ ನಾಗರಿಕರ ವೇದಿಕೆಯ ಸಂಚಾಲಕರ ಮೇಲೆಯೇ ಅಶಾಂತಿ- ಹಿಂಸೆಯನ್ನು ಕದಡುವ ಆರೋಪವನ್ನು ಹೊರಿಸಲಾಯಿತು. ಬಾಬಾಬುಡನ್‍ಗಿರಿಯಲ್ಲಿ ನ್ಯಾಯಬದ್ಧವಾಗಿ ಹೋರಾಟ ನಡೆಸಿ ವೇದಿಕೆ ಪಡೆದುಕೊಂಡಿದ್ದ ಜಯಕ್ಕೆ ಪ್ರತೀಕಾರ ತೋರಲು ಕಾಯ್ದುಕೊಂಡಿದ್ದ ಸಂಘ ಪರಿವಾರಕ್ಕೆ ನಕ್ಸಲೀಯರ ವಿಚಾರ ಒಂದು ನೆಪವಾಯಿತು. ಪ್ರಭುತ್ವದ ಕೆಲವು ಶಕ್ತಿಗಳು ಸಂಘ ಪರಿವಾರವನ್ನು ಮುಂದಿಟ್ಟುಕೊಂಡು ಪ್ರೊ. ವಿ. ಎಸ್ ಶ್ರೀಧರ ಅವರ ಮೇಲೆ ನೇರ ಹಲ್ಲೆ ನಡೆಸಿದವು. ಇಂತಹದ್ದೇ ಮಹತ್ಕಾರ್ಯವನ್ನು ನನ್ನ ಮೇಲೆ ಸಾಧಿಸಲು ಸಂಘ ಪರಿವಾರದ ಸ್ಥಾನದಲ್ಲಿ ಪತ್ರಕೆಯ ಹಲವರೇ ಸಿದ್ಧರಾಗಿ ನಿಂತಿದ್ದರು. ಕೊನೆಗೆ ನಾನು ಬರೆದಿದ್ದ ಲೇಖನವನ್ನೇ ಓದದೆ ನನ್ನನ್ನ ಪತ್ರಿಕೆಯಿಂದ ಹೊರದೂಡಲಾಯಿತು.

ಆದರೆ ಯಾವ ದಿಕ್ಕಿನಿಂದ ಚಂಡಮಾರುತಗಳೂ ಬಿರುಗಾಳಿಯೂ ಬೀಸುತ್ತವೆಯೋ, ಆದೇ ದಿಕ್ಕಿನಿಂದ ದಾರಿ ತೋರುವ ಬೆಳಕೂ ಮೂಡಿಬರುತ್ತದೆ. ಪ್ರತಿವಾರದ ಕಿರಿ-ಕಿರಿ, ಅವಮಾನ, ದಬ್ಬಾಳಿಕೆಯಿಂದ ಜರ್ಜರಿತಳಾಗಿದ್ದ ನನಗೆ ಇದೊಂದು ರೀತಿಯಲ್ಲಿ ಬಿಡುಗಡೆ ನೀಡಿತು. ಆದರೆ ಈ ಬಿಡುಗಡೆ ಪಡೆದ ನಂತರ ನನ್ನ ಮುಂದೆ ಇದ್ದದ್ದು ಮೂರು ಆಯ್ಕೆಗಳು: ಒಂದು ಪತ್ರಿಕೋದ್ಯಮದಲ್ಲಿ ಎರಡು ದಶಕಗಳ ಅನುಭವವಿರುವ ನನಗೆ ಕೈತುಂಬ ಸಂಬಳ ಸಿಗುವ ಕೆಲಸಕ್ಕೇನು ತೊಂದರೆ ಇಲ್ಲ, ದೆಹಲಿಗೋ, ಮುಂಬೈಗೋ ಹೋಗಿ ಆರಾಮವಾಗಿ ಜೀವಿಸಬಲ್ಲೆ. ಎರಡನೆಯದು, ಇದೆಲ್ಲಕ್ಕೂ ತಿಲಾಂಜಲಿ ಹೇಳಿ ನೆಲಮಂಗಲದ ಬಳಿ ಇರುವ ಅಮ್ಮನ ಐದು ಎಕರೆ ತೋಟವನ್ನು ನೋಡಿಕೊಳ್ಳುತ್ತಾ, ರೈತ ಮಹಿಳೆಯಾಗಿ ಜೀವನ ಸಾಗಿಸುವುದು. ಕಳೆದ ಒಂದು ವರ್ಷದಿಂದ ತೋಟದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ನನಗೆ ಅಲ್ಲಿನ ತೆಂಗು, ಮಾವು ಮತ್ತು ಅಡಿಕೆ ಮರಗಳ ನೀಡುವ ಸಂತೋಷ ಮತ್ತು ಆರ್ಥಿಕ ಭಾರ ಎರಡ ಸಾಮಾನ್ಯವಾಗಿದೆ. ಇರಲಿ. ನನ್ನ ಮುಂದೆ ಇದ್ದ ಮೂರನೇ ಆಯ್ಕೆ: ಇನ್ನು ಮುಂದೆ ಯಾವ ಮುಲಾಜು, ಸಣ್ಣತನ ಸ್ವಾರ್ಥದಿಂದ ಹುಟ್ಟುವ ಖುಣಗಳ ಭಾರವಿಲ್ಲದೆ ಅಪ್ಪನ ಹೆಸರಿನಲ್ಲಿ ಇನ್ನೊಂದು ಪತ್ರಿಕೆ ಸ್ಥಾಪಿಸಿ ಅವರ ಧ್ಯೇಯ್ಯೋದ್ದೇಶಗಳನ್ನು ಮುನ್ನಡೆಸುವುದು. ಈ ಮೂರರಲ್ಲಿ ಕೊನೆಯದ್ದು ಬಹಳ ಕಷ್ಟದಿಂದ ಕೂಡಿರುವಂತದ್ದು. ಆದರೆ ಕೊನೆಗೆ ಅದನ್ನೇ ಆಯ್ಕೆ ಮಾಡಿಕೊಂಡಿದ್ದೇನೆ.

ನಿಮ್ಮೆಲ್ಲರಿಗೂ ಗೊತ್ತಿರುವಂತೆ ನಿಮ್ಮ ಕೈಯಲ್ಲಿರು ಈ ಪತ್ರಿಕೆ ಯಾವ ಪಕ್ಷಕ್ಕೂ, ಸಂಘಟನೆಗೂ ಮುಖವಾಣಿಯಲ್ಲ; ಹಾಗೆ ಎಂದೂ ಆಗುವುದೂ ಇಲ್ಲ. ಪ್ರಜಾತಾಂತ್ರಿಕ ಆಶಯ, ಸಮಾಜವಾದಿ ನಿಲುವು, ಶಾಂತಿ ಮತ್ತು ಸೌಹಾರ್ದದ ಪರ, ಹಿಂಸೆಯ ವಿರುದ್ಧ ಹಾಗೂ ಸಂವಿಧಾನದ ಮೂಲಭೂತ ಉದ್ದೇಶಗಳಿಗೆ ಮಾತ್ರ ಈ ಪತ್ರಿಕೆ ಬದ್ಧವಾಗಿರುತ್ತದೆ. ಮತ್ತು ಎಂದಿನಂತೆ ಖಾಯಂ ವಿರೋಧ ಪಕ್ಷವಾಗಿರುತ್ತದೆ.

ಹಿಂದಿನ ಕಹಿಯನ್ನೆಲ್ಲ ಬಿಟ್ಟು ಮುಂದೆ ಸಾಗಬೇಕಾದದ್ದು ಜೀವನದ ಧರ್ಮ. ನನ್ನ ಜೀವನದ ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿ ನಾನು ಏಕಾಂಗಿಯಲ್ಲ ಎಂದು ಪತ್ರಿಕೆಯ ಅಸಂಖ್ಯಾತ ಓದುಗರು ಹೆಗಲಿಗೆ ಹೆಗಲು ಕೊಟ್ಟಿದಾರೆ. ‘ಲಂಕೇಶರ ಹೋರಾಟವನ್ನು ಮುಂದುವರೆಸು’ ಎಂದು ನನ್ನ ಬೆನ್ನು ತಟ್ಟಿದ್ದಾರೆ. ನಾನು ಎಂದೂ ನೋಡದೆ ಇದ್ದವರೂ ನನ್ನ ಆಫೀಸನ್ನು ಹುಡುಕಿಕೊಂಡು ಬಂದು, ಕಂಪ್ಯೂಟರ್, ಹಣ, ಇತ್ಯಾದಿಗಳನ್ನು ನೆರವಾಗಿ ನೀಡಿದ್ದಾರೆ. ತೀರಾ ಸಂಕೋಚದಿಂದ “ನನ್ನ ನೆರವು ಇದು” ಎಂದು ಹೇಳಿ 50,000 ರೂ.ಗಳ ಚೆಕ್ ಅನ್ನು ನನ್ನ ಕೈಯ್ಯಲ್ಲಿಟ್ಟು ನಾನು ಥ್ಯಾಂಕ್ಸ್ ಹೇಳುವುದನ್ನೂ ಕೇಳಿಸಿಕೊಳ್ಳದೆ ಹೊರಟುಹೋದ ಆಪತ್ಬಾಂಧವರಿದ್ದಾರೆ. ಕನ್ನಡದ ಹೆಸರಾಂತ ರಂಗಕರ್ಮಿ ಪ್ರಸನ್ನರವರು “ನಿನ್ನ ಜೀವನದ ದೊಡ್ಡ ಕ್ರೈಸಿಸ್ ಇದು; ಹಾಗೆಯೇ ನಿನ್ನ ಜೀವನದ ಅತಿ ಕ್ರಿಯಾಶೀಲ ಸಂದರ್ಭವೂ ಇದಾಗಿದೆ. ಜೀವನದಲ್ಲಿ ಒಮ್ಮೆ ಮಾತ್ರ ಹೀಗಾಗುತ್ತದೆ. ಅದನ್ನು ಎದುರಿಸಿ ನಿಂತು ಕ್ರಿಯಾಶೀಲರಾಗುವುದೇ ಬದುಕಿನ ನಿಜವಾದ ಅರ್ಥ” ಎಂದು ಹೇಳಿದ್ದು ನನ್ನ ಕಿವಿಯಲ್ಲಿ ಇನ್ನೂ ರಿಂಗಣಿಸುತ್ತಿದೆ….……

ಇಷ್ಟೊಂದು ಜನರ ವಿಶ್ವಾಸ, ಬೆಂಬಲ, ಸ್ಪೂರ್ತಿ ನನಗಿರುವುದು ಅಪ್ಪನ ನಿಲುವುಗಳನ್ನು ನಾನು ಪಾಲಿಸಿಕೊಂಡು ಬಂದಿದ್ದರಿಂದಲೇ ಎಂಬುದು ಸ್ಪಷ್ಟ… ಎಲ್ಲಿಯವರೆಗೆ ಈ ಧ್ಯೇಯ ನನ್ನದಾಗಿರುವುದೋ ಅಲ್ಲಿಯವರೆಗೂ ಇದೇ ಜನರ ಪ್ರೀತಿ ನನ್ನ ಮೇಲಿರುತ್ತದೆ ಎಂಬ ನಂಬಿಕೆ ನನಗಿದೆ. ನನ್ನ ಮೇಲಿನ ಅನುಕಂಪದಿಂದ ಮಾತ್ರ ಈ ಸಹಾಯ ಬಂದಿದ್ದರೆ, ನಾನು ಋಣದ ಭಾರದಲ್ಲಿ ಕುಸಿಯುತ್ತಿದ್ದೆ. ಆದರೆ ವೈಯಕ್ತಿಕ ಋಣದ ಲೇಪ ಸ್ವಲ್ಪವೂ ಇಲ್ಲದ ಹಾಗೆ ನನಗೆ ಬೆಂಬಲದ ಮಹಾಪೂರ ಹರಿದು ಬಂದಿರುವುದು ನನಗೆ ಅತ್ಯಂತ ಹೆಮ್ಮೆ, ಸಂತೋಷ ತಂದಿದೆ; ಮತ್ತು ಹುರುಪನ್ನು ನೀಡಿದೆ.

ಅಪ್ಪನ ‘ಪತ್ರಿಕೆ’ ಈಗ ಅವರ 70ನೇ ಹುಟ್ಟು ಹಬ್ಬದ ದಿನವೇ ಹೊಸ ಹುಟ್ಟು ಪಡೆದು ನಿಮ್ಮ ಕೈಯಲ್ಲಿಇಟ್ಟಿದ್ದೇನೆ. ಹಳೆಯದರ ಮುಂದುವರಿಕೆ, ಹೊಸ ಕಾಲದ ಸ್ಪಂದನೆಗೆ ತಕ್ಕ ಹಾಗೆ ಮಾರ್ಪಾಡು- ಇವು ಒಂದು ಪತ್ರಿಕೆಯನ್ನು ಸದಾ ಕಾಲ ಜೀವಂತವಾಗಿಡುವ ಸೂತ್ರಗಳು. ಈ ಸೂತ್ರ ಹೇಳಿಕೊಟ್ಟವರು ನೀವು. ಅದನ್ನು ಪಾಲಿಸುವ ಕರ್ತವ್ಯ ಮಾತ್ರ ನನ್ನದು.

ನಿಮ್ಮ ಈ ‘ಪತ್ರಿಕೆ’ಗೆ ನನ್ನ ಪ್ರೀತಿಯ ಸ್ವಾಗತ.

ಮಾರ್ಚ್ 16, 2005


ಇದನ್ನೂ ಓದಿ: ಗೌರಿ ಲಂಕೇಶ್ ಇಲ್ಲದ ಈ ಮೂರು ವರುಷಗಳು : ಪ್ರೊ.ಸಬಿಹಾ ಭೂಮಿಗೌಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...