“ಐತಿಹಾಸಿಕ ಪುರಾವೆಗಳಿಲ್ಲದ ಉರಿಗೌಡ, ನಂಜೇಗೌಡರ ಕತೆಗಳಿಂದ ಸಮುದಾಯದ ಭಾವನೆಗೆ ಧಕ್ಕೆ ಉಂಟಾಗುತ್ತದೆ” ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
‘ಉರಿಗೌಡ- ನಂಜೇಗೌಡ’ ಸಿನಿಮಾ ನಿರ್ಮಾಣ ಮಾಡುವುದಾಗಿ ಸಚಿವ ಮುನಿರತ್ನ ಮುಂದಾದ ಬೆನ್ನಲ್ಲೇ ಸ್ವಾಮೀಜಿಯವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮುನಿರತ್ನ ಅವರನ್ನು ಕರೆಸಿ ಮಾತನಾಡಿದ್ದು, ಗೊಂದಲಗಳನ್ನು ಸೃಷ್ಟಿಸದಂತೆ ಮನವರಿಕೆ ಮಾಡಿರುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.
ಡಾ.ದೇ.ಜವರೇಗೌಡರು ಸಂಪಾದಿಸಿರುವ ‘ಸುವರ್ಣ ಮಂಡ್ಯ’ ಕೃತಿಯಲ್ಲಿನ ಹ.ಕ.ರಾಜೇಗೌಡರು ಬರೆದಿರುವ ಲೇಖನದಲ್ಲಿ ಉರಿಗೌಡ, ನಂಜೇಗೌಡರ ಪ್ರಸ್ತಾವಿದೆ ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಟಿಪ್ಪುವನ್ನು ಉರಿಗೌಡ, ನಂಜೇಗೌಡರು ಕೊಂದಿರುವುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯವರು ಮಾತನಾಡಿದ್ದು ಸಮುದಾಯದ ಭಾವನೆಗೆ ಧಕ್ಕೆಯಾಗದಿರಲಿ ಎಂದು ಆಶಿಸಿದ್ದಾರೆ.
ಸ್ವಾಮೀಜಿಯವರು ಹೇಳಿರುವುದೇನು?
ದೇಜಗೌ ಅವರು ಸಂಪಾದನೆ ಮಾಡಿರುವ ‘ಸುವರ್ಣ ಮಂಡ್ಯ’ ಕೃತಿಯಲ್ಲಿನ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಹ.ಕ.ರಾಜೇಗೌಡರು ಬರೆದಿದ್ದಾರೆ. ಒಂದೊಂದು ವಿಚಾರಗಳು ಒಂದೊಂದು ಕೃತಿಯಲ್ಲಿ ಸಾಮಾನ್ಯವಾಗಿ ಬಂದಿರುತ್ತವೆ. ಹ.ಕ.ರಾಜೇಗೌಡರು ಬರೆದಿರುವುದರಲ್ಲಿ ನೇರವಾಗಿ ಟಿಪ್ಪು ಮತ್ತು ಉರಿಗೌಡ, ನಂಜೇಗೌಡರ ವಿಚಾರ ಪ್ರಸ್ತಾಪವಾಗಿಲ್ಲ.
ಇದುವರೆಗೆ ಗೊಂದಲಗಳು ಉಂಟಾಗಿವೆ. ಯುವಕರ ಅಮೂಲ್ಯವಾದ ಸಮಯವನ್ನು ವಿನಾಕಾರಣವಾದ ಚರ್ಚೆಯ ಮೂಲಕ ಹಾಳು ಮಾಡಬಾರದು. ಆಧುನಿಕ ಜಗತ್ತಿಗೆ ಸರಿಯಾದ ಮಾಹಿತಿಯನ್ನು ಕೊಡದೆ ದಾರಿ ತಪ್ಪಿಸುವ ಕೆಲಸ ಆಗಬಾರದು.
ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿರುವವರಿಗೆ ತಿಳಿಹೇಳಲಾಗಿದೆ. ಸಿ.ಟಿ.ರವಿ ಇರಬಹುದು, ಅಶ್ವತ್ಥ ನಾರಾಯಣ ಇರಬಹುದು, ಗೋಪಾಲಯ್ಯ ಇರಬಹುದು. ಇವರೆಲ್ಲರಿಗೂ ಇತಿಹಾಸದ ಹಿನ್ನೆಲೆಯನ್ನು ಸರಿಯಾಗಿ ಮನದಟ್ಟು ಮಾಡಿಕೊಟ್ಟಿದ್ದರಿಂದ ಸುಮ್ಮನಾಗುತ್ತಾರೆಂದು ಭಾವಿಸುತ್ತೇನೆ.
ಕಲ್ಪನೆ ಮಾಡಿಕೊಂಡು ಬರೆಯುವಂತಹದ್ದು ಕಾದಂಬರಿಯಾಗುತ್ತದೆ. ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯಲ್ಲಿ ಬರೆದಿರುವಂತಹದ್ದು ಮುಂದಿನ ಪೀಳಿಗೆಗೆ ಒಂದಿಷ್ಟು ಶಕ್ತಿಯಾಗುತ್ತದೆ. ಅಂಥಹದ್ದು ಯಾವುದು ಕೂಡ ಇಲ್ಲಿಯವರೆಗೂ ಕಂಡುಬಂದಿಲ್ಲ. ಹೀಗಾಗಿ ಇಂತಹ ಹೇಳಿಕೆಗಳ ಮೂಲಕ ಯುವಕರಲ್ಲಿ, ಸಮಕಾಲೀನ ಜಗತ್ತಿನಲ್ಲಿ ಗೊಂದಲ ಸೃಷ್ಟಿ ಮಾಡಿ ಶಕ್ತಿಯನ್ನು ಹಾಳು ಮಾಡಬಾರದು, ಸಮುದಾಯಕ್ಕೆ ಧಕ್ಕೆಯನ್ನು ಉಂಟುಮಾಡಬಾರದು.
ಮುನಿರತ್ನ ಅವರು ನಮ್ಮಲ್ಲಿ ಮಾತನಾಡಿದ್ದಾರೆ. ‘ಯಾರಿಗೂ ಕೂಡ ನೋವುಂಟು ಮಾಡುವ ಉದ್ದೇಶ ನಮಗೆ ಇಲ್ಲ, ಅಂತಹ ಕೆಲಸ ಮಾಡುವುದಿಲ್ಲ’ ಎಂಬ ಮಾತು ಕೊಟ್ಟು ಹೋಗಿದ್ದಾರೆ. ಐತಿಹಾಸಿಕ ಹಿನ್ನೆಲೆಯ ಸ್ಪಷ್ಟತೆ ಇರುವ ಕಾಲಘಟ್ಟದಲ್ಲಿ, ಸಮುದಾಯವನ್ನು ಪ್ರತಿನಿಧಿಸುವಂತಹ ಇಬ್ಬರು ವ್ಯಕ್ತಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಸೂಚ್ಯವಲ್ಲ, ಸೂಕ್ತವೂ ಅಲ್ಲ ಅಂತ ಅವರಿಗೆ ಹೇಳಿದ್ದೇವೆ.
ಸಾಕಷ್ಟು ದಿನಗಳಿಂದ ಗೊಂದಲಗಳು ಸೃಷ್ಟಿಯಾಗಿವೆ. ಇದಕ್ಕೆ ಸಂಬಂಧಪಟ್ಟಂತೆ ಮೊನ್ನೆ ಒಂದು ಪೋಸ್ಟರ್ ಕೂಡ ನೋಡಿದೆ. ರಾಜಕಾರಣಿ, ಮಂತ್ರಿ ಹಾಗೂ ನಿರ್ಮಾಪಕರೂ ಆಗಿರುವಂತಹ ಮುನಿರತ್ನ ಅವರು ಉರಿಗೌಡ, ನಂಜೇಗೌಡರ ಸಿನಿಮಾ ಮಾಡುತ್ತೇನೆ ಎಂದಿದ್ದರು. ಸರಿಯಾಗಿ ಸಂಶೋಧನೆಯಾಗದೆ ಎಲ್ಲಿ ಬೇಕಾದರೂ ಅಲ್ಲಿ ಮಾತನಾಡುವುದು ಸೂಕ್ತವಲ್ಲ.
ಇದನ್ನೂ ಓದಿರಿ: ಬಿಜೆಪಿ ಸೃಷ್ಟಿಸಿದ ನಕಲಿ ಇತಿಹಾಸ: ಇಲ್ಲಿ ಉರಿಗೌಡ, ನಂಜೇಗೌಡ; ಉತ್ತರ ಭಾರತದಲ್ಲಿ ಗುರ್ಜರ್ ರಾಣಿ
ಇತಿಹಾಸವನ್ನು ಅರಿತವರು ಇತಿಹಾಸ ಸೃಷ್ಟಿಸಲು ಸಾಧ್ಯ. ಇತಿಹಾಸ ಅರಿಯುವುದು ಎಂದರೆ- ಆಯಾ ಕಾಲದಲ್ಲಿದ್ದ ವ್ಯಕ್ತಿಗಳಿಗೆ ಪೂರಕವಾಗಿ ಬೇಕಾದ ಶಿಲಾಶಾಸನಗಳು, ತಾಳೆಗರಿಗಳು ಇರಬಹುದು ಅಥವಾ ಅಂದಿನ ಸಮಕಾಲೀನರು ಬರೆದ ಚರಿತ್ರೆಗಳು ಇರಬಹುದು. ಇಷ್ಟು ಸಿಗದೆ ಬರೆದದ್ದು ಗೊಂದಲ ಮತ್ತು ಅನುಮಾನಕ್ಕೆ ಕಾರಣವಾಗುತ್ತದೆ.
ಉರಿಗೌಡ, ನಂಜೇಗೌಡರ ಬಗೆಗೆ ಇತಿಹಾಸವನ್ನು ಸಾರುವಂತಹ ಶಾಸನಗಳು ಸಿಕ್ಕದ್ದೇಯಾದರೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಒದಗಿಸಬಹುದು. ಅವುಗಳನ್ನು ನಂತರದಲ್ಲಿ ಕ್ರೂಢೀಕರಿಸಿ ಸಂಶೋಧನೆ ಮಾಡಲಾಗುವುದು. ಶಾಸನ ತಜ್ಞರು, ಸಂಶೋಧಕರು ನಮ್ಮಲ್ಲಿ ಇದ್ದಾರೆ. ತಂತ್ರಜ್ಞಾನವೂ ಇದೆ. ಸಂಶೋಧಕರೂ ಇದ್ದಾರೆ. ತಂದುಕೊಟ್ಟ ಮಾಹಿತಿಯನ್ನು ಇವರೆಲ್ಲರ ಮೂಲಕ ಓರೆಗೆ ಹಚ್ಚಲಾಗುತ್ತದೆ. ಆದರೆ ಪ್ರಸ್ತುತ ನಡೆಯುತ್ತಿರುವಂತಹದ್ದು ಗೊಂದಲಕ್ಕೆ ಮತ್ತು ಒಂದು ಸಮುದಾಯದ ಭಾವನೆಗೆ ಧಕ್ಕೆ ತರುವ ಕೆಲಸವಾಗಿದೆ.
-ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರು
(ಮಾಧ್ಯಮಗಳು ಮಾಡಿರುವ ವಿಡಿಯೊ ವರದಿಯ ಸಂಕ್ಷಿಪ್ತ ಸಾರಾಂಶ)