ಹಿಂಸಾಚಾರ ಪೀಡಿತ ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಅಪರಿಚಿತ ಶಶ್ತ್ರಾಸ್ತ್ರದಾರಿಗಳು ಮತ್ತೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ನಾಗರಿಕರು ಬಲಿಯಾಗಿದ್ದಾರೆ.
ಮೃತರನ್ನು ಸಾಟ್ನಿಯೊ ತುಬೊಯ್, ನ್ಗಮಿನ್ಲುನ್ ಲೌವುಮ್ ಮತ್ತು ಲಾಂಗ್ಕಿಚೋಯ್ನ ನ್ಗಮಿನ್ಲುನ್ ಕಿಪ್ಗೆನ್ ಎಂದು ಗುರುತಿಸಲಾಗಿದೆ.
ಬೆಳಿಗ್ಗೆ 8.30ರ ವೇಳೆ ಜಿಲ್ಲೆಯ ಕಂಗ್ಗುಯಿ ಪ್ರದೇಶದ ಇರೆಂಗ್ ಮತ್ತು ಕರಮ್ ವೈಫೇಯ್ ಗ್ರಾಮಗಳ ನಡುವೆ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳು ಶಂಕಿತರನ್ನು ಪತ್ತೆಹಚ್ಚಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಮೂವರು ಕುಕಿ ಸಮುದಾಯದ ಜನರು ವಾಹನದಲ್ಲಿ ಹೋಗುವಾಗ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅವರ ದಾರಿ ತಪ್ಪಿಸಿ ಎಳೆದುಕೊಂಡು ಹೋಗಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಕಾಂಗ್ಪೊಕ್ಪಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಥೋಲು ರಾಕಿ ಖಚಿತಪಡಿಸಿದ್ದಾರೆ.
ಆದರೆ ಕೆಲವು ವರದಿಗಳು ಗುಂಡಿನ ಚಕಮಕಿ ನಡೆದಿಲ್ಲ ಎಂದು ಉಲ್ಲೇಖಿಸಿರುವುದು ಗಮನಾರ್ಹ. ಆದರೆ ಹತ್ಯೆ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದೇವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಕಿ ತಿಳಿಸಿದ್ದಾರೆ.
ಇಂಫಾಲ್ ಪಶ್ಚಿಮ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ದಾಳಿ ನಡೆಸಲಾಗಿದ್ದು, ಶಂಕಿತರು ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ನ ಪಡೆಗಳು ಸ್ಥಳಕ್ಕೆ ತಲುಪಿವೆ. ಭದ್ರತಾ ಪಡೆಗಳು ಜಂಟಿಯಾಗಿ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.
ಕಳೆದ ಮೇ.ನಲ್ಲಿ ಮಣಿಪುರದಲ್ಲಿ ನಡೆದ ಕುಕಿ ಮತ್ತು ಮೈತೈ ಸಮುದಾಯಗಳ ನಡುವಿನ ಘರ್ಷಣೆಯಲ್ಲಿ 162 ಮಂದಿ ಮೃತಪಟ್ಟಿದ್ದರು. 50,000 ಮಂದಿ ನಿರಾಶ್ರಿತರಾಗಿದ್ದಾರೆ.
ಆಗಸ್ಟ್ 29, ಮತ್ತು ಆಗಸ್ಟ್ 31 ರಂದು, ಬುಡಕಟ್ಟು ಕುಕಿಗಳು ಮತ್ತು ಮೈತೈ ಸಮುದಾಯಗಳ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದರು. ಈ ವೇಳೆ ಮೂವರು ಭಾರತೀಯ ರಿಸರ್ವ್ ಬೆಟಾಲಿಯನ್ ಸಿಬ್ಬಂದಿ ಸೇರಿದಂತೆ 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಇದನ್ನು ಓದಿ: ಸರ್ಕಾರಿ ಯೋಜನೆಯ ಬಗ್ಗೆ ಸುಳ್ಳು ವರದಿ: ವಾಹಿನಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ ಪ್ರಿಯಾಂಕ್ ಖರ್ಗೆ