ರಾಜಸ್ಥಾನದಲ್ಲಿ ಇಬ್ಬರು ಮುಸ್ಲಿಂ ಯುವಕರ ಹತ್ಯೆಗೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಸ್ವಯಂಘೋಷಿತ ಗೋರಕ್ಷಕ ಮೋನು ಮಾನೇಸರ್ನನ್ನು ಹರ್ಯಾಣ ಪೊಲೀಸರು ಬಂಧಿಸಿದ್ದು, ಆತನನ್ನು ರಾಜಸ್ಥಾನ ಪೊಲೀಸರಿಗೆ ಹಸ್ತಾಂತರ ಮಾಡಲಿದ್ದಾರೆ.
ರಾಜಸ್ಥಾನದ ಇಬ್ಬರು ಮುಸ್ಲಿಂ ಯುವಕರನ್ನು ಅಪಹರಣ ಮಾಡಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೋನು ಮಾನೇಸರ್ ವಿರುದ್ಧ ಫೆಬ್ರವರಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈತ ಹಲವು ತಿಂಗಳುಗಳಿಂದ ನಾಪತ್ತೆಯಾಗಿದ್ದ.
ಬಜರಂಗದಳದ ಪ್ರಮುಖ ನಾಯಕನಾಗಿರುವ ಈತ ಹರಿಯಾಣದಲ್ಲಿ 2015ರಲ್ಲಿ ಗೋಸಂರಕ್ಷಣಾ ಕಾನೂನನ್ನು ಜಾರಿಗೊಳಿಸಿದ ಬಳಿಕ ಹರ್ಯಾಣ ಸರ್ಕಾರ ಸ್ಥಾಪಿಸಿದ್ದ ಜಿಲ್ಲಾ ಗೋಸಂರಕ್ಷಣಾ ಕಾರ್ಯಪಡೆಯ ಸದಸ್ಯನಾಗಿದ್ದ. ಈತ ತನ್ನ ಸಂಗಡಿಗರೊಂದಿಗೆ ಗೋವು ವ್ಯಾಪಾರಿಗಳ ಮೇಲೆ ದಾಳಿ ನಡೆಸಿ ಅದರ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುತ್ತಿದ್ದ.
ನೂಹ್ನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಮೆರವಣಿಗೆಯಲ್ಲಿ ತಾನು ಪಾಲ್ಗೊಳ್ಳುವುದಾಗಿ ಹೇಳಿಕೊಂಡು ವಿಡಿಯೋ ಬಿಡುಗಡೆ ಮಾಡಿದ್ದ ಮೋನು ಮನೇಸರ್, ನೂಹ್ ಘರ್ಷನೆಗೆ ಪ್ರಚೋದನೆ ನೀಡಿದ್ದ ಎಂಬ ಆರೋಪ ಕೂಡ ಕೇಳಿ ಬಂದಿತ್ತು.
ರಾಜಸ್ಥಾನದ ಭರತ್ಪುರ ಜಿಲ್ಲೆಯ ಘಾಟ್ಮೀಕಾ ಗ್ರಾಮದ ನಿವಾಸಿಗಳಾದ ನಾಸಿರ್ ಮತ್ತು ಜುನೈದ್ ಅವರನ್ನು ಫೆಬ್ರವರಿ 15 ರಂದು ಗೋರಕ್ಷಕರು ಅಪಹರಿಸಿದ್ದರು. ಮರುದಿನ ಹರಿಯಾಣದ ಭಿವಾನಿಯ ಲೋಹರು ಎಂಬಲ್ಲಿ ಸುಟ್ಟ ಕಾರಿನಲ್ಲಿ ಅವರ ಶವಗಳು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಮೋನು ಮಾನೇಸರ್ ಅವರನ್ನು ಆರೋಪಿ ಎಂದು ಹೆಸರಿಸಿದ್ದಾರೆ.
ಇದಲ್ಲದೆ ಗುರುಗ್ರಾಮ್ನ ನುಹ್ನಲ್ಲಿ ವಾರಿಸ್ ಎಂಬ 21 ವರ್ಷದ ಯುವಕನ ಹತ್ಯೆ ನಡೆದಿತ್ತು. ವಾರಿಸ್ ಅವರ ಕುಟುಂಬವು ಮೋನು ಮಾನೇಸರ್ ನೇತೃತ್ವದ ಗೋ ರಕ್ಷಕರು ಹತ್ಯೆ ಮಾಡಿದ್ದಾರೆಂದು ಆರೋಪಿಸಿದ್ದರು.
ಇದನ್ನು ಓದಿ: ವಿದ್ಯಾರ್ಥಿಗಳನ್ನು ಮಸೀದಿಗೆ ಕಾರ್ಯಾಗಾರಕ್ಕೆ ಕರೆದೊಯ್ದ ಪ್ರಾಂಶುಪಾಲರ ವಿರುದ್ಧ ದೂರು ದಾಖಲು