ಗುಬ್ಬಿ ತಹಶೀಲ್ದಾರ್ ವರ್ಗಾವಣೆಯನ್ನು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳು ತುಮಕೂರಿನಲ್ಲಿ ಪ್ರತಿಭಟನೆ ಧರಣಿ ನಡೆಸಿದ್ದು, ಸಂಸದ ಬಸವರಾಜು ಷಡ್ಯಂತ್ರ ರೂಪಿಸಿ ತಹಶೀಲ್ದಾರ್ ವರ್ಗಾವಣೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಹೊದಲೂರು ಕೆರೆಯಲ್ಲಿ 252 ಎಕರೆ ಒತ್ತುವರಿ ಮಾಡಿಕೊಂಡಿರುವುದರ ಹಿಂದೆ ಸಂಸದ ಬಸವರಾಜುರವರ ಕೈವಾಡ ಇದೆ. ತನ್ನ ಅಕ್ರಮ ಒತ್ತುವರಿ ಜಮೀನನ್ನು ಉಳಿಸಿಕೊಳ್ಳಲು ಕಂದಾಯ ಮತ್ತು ಗ್ರಾಮ ಲೆಕ್ಕಿಗನ ಮೇಲೆ ಪ್ರಭಾವ ಬಳಸಿ ಅಡಿಕೆ ತೆಂಗು ಗಿಡಗಳನ್ನು ಕಡಿಯಲು ಕಾರಣರಾಗಿದ್ದಾರೆ. ಜೊತೆಗೆ ತಹಶೀಲ್ದಾರ್ ಮಮತ ಮಾರ್ಚ್ 13ರಂದು ಕೆರೆ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕ ಅಧಿಕಾರಿಯನ್ನು ವರ್ಗಾವಣೆ ಮಾಡಿಸಲಾಗಿದೆ ಎಂದು ದಲಿತಪರ ಸಂಘಟನೆಗಳು ಆಪಾದಿಸಿವೆ.
ವಿಡಿಯೋ ನೋಡಿ
ಗುಬ್ಬಿಯ ತಿಪ್ಪೂರಿನಲ್ಲಿ ಮರ ಕಡಿಯಲು, ಗುಬ್ಬಿ ತಹಶೀಲ್ದಾರ್ ವರ್ಗಾವಣೆಯಾಗಲು ತುಮಕೂರು ಸಂಸದ ಬಸವರಾಜ್ ಕಾರಣ. ದಲಿತ ಸಂಘಟನೆಗಳಿಂದ ಪ್ರತಿಭಟನೆ..
Posted by Naanu Gauri on Friday, March 13, 2020
ಗ್ರಾಮಲೆಕ್ಕಿಗನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ತಹಶೀಲ್ದಾರ್ ವರ್ಗಾವಣೆ ಮಾಡಲಾಗಿದೆ. ಆದರೆ ಕಂದಾಯ ಅಧಿಕಾರಿಯನ್ನು ರಕ್ಷಣೆ ಮಾಡಿದ್ದಾರೆ. ಸಂಸದ ಬಸವರಾಜು ಈ ಎಲ್ಲಾ ಷಡ್ಯಂತ್ರಕ್ಕೆ ಕಾರಣ ಎಂದು ದೂರಿದರು.
ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ತಹಶೀಲ್ದಾರ್ ಮಮತಾ ಅವರನ್ನು ಗುಬ್ಬಿಗೆ ಮರು ನಿಯೋಜನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಈ ಸಂಬಂಧ ಸಮಗ್ರ ತನಿಖೆ ನಡೆಸಲಾಗುವುದು. ತನಿಖೆಯಲ್ಲಿ ತಪ್ಪು ಕಂಡುಬಂದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಲಲಾಗುವುದು ಎಂದು ಭರವಸೆ ನೀಡಿದರು.