ರಾಜ್ಯದಲ್ಲಿ ವ್ಯಾಪಕವಾಗಿರುವ ಮಾದಕ ದ್ರವ್ಯ ದಂಧೆ ಜೊತೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಸಂಬಂಧ ಕಲ್ಪಿಸಿ ಭಾಷಣ ಮಾಡಿದ್ದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ತಮಿಳುನಾಡು ಸರ್ಕಾರ ಚೆನ್ನೈನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಎರಡು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದೆ.
ರಾಜ್ಯದಲ್ಲಿ ಮಾದಕ ದ್ರವ್ಯ ದಂಧೆಕೋರರಿಗೆ ನೆರವು ನೀಡುವ ಮೂಲಕ ಮುಖ್ಯಮಂತ್ರಿ ದಂಧೆಯಲ್ಲಿ ಶಾಮಿಲಾಗಿದ್ದಾರೆ ಎಂದು ಅಣ್ಣಾಮಲೈ ಮತ್ತು ಪಳನಿಸ್ವಾಮಿ ಇಬ್ಬರೂ ಆರೋಪಿಸಿದ್ದರು.
Tamil Nadu Govt Files Criminal Defamation Case Against K Annamalai & Edappadi Palaniswami For Statements Linking CM Stalin To Drug Peddling In State | @UpasanaSajeev#TamilNaduhttps://t.co/J5cQisAyGK
— Live Law (@LiveLawIndia) March 14, 2024
ಸಿಆರ್ಪಿಸಿಯ ಸೆಕ್ಷನ್ 199(2) ರ ಅಡಿಯಲ್ಲಿ ಸಿಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಮೂಲಕ ಇಬ್ಬರು ನಾಯಕರ ವಿರುದ್ಧ ದೂರು ದಾಖಲಿಸಲಾಗಿದೆ. ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಮತ್ತು ಮುಖ್ಯಮಂತ್ರಿಯ ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ಹೇಳಿಕೆಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಮಾದಕ ವ್ಯಸನ ಮುಕ್ತ ರಾಜ್ಯ ಮಾಡಲು ಮುಖ್ಯಮಂತ್ರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ರಾಜ್ಯದ ಮಾದಕ ದ್ರವ್ಯ ವಿತರಣೆ ಜೊತೆ ಸಿಎಂಗೆ ಸಂಬಂಧ ಕಲ್ಪಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಾಧಕ ದ್ಯವ್ಯ ದಂಧೆ ಮಟ್ಟ ಹಾಕಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ದೂರಿನಲ್ಲಿ ಎತ್ತಿ ತೋರಿಸಲಾಗಿದೆ. ಸರ್ಕಾರ ಗಾಂಜಾ ಶೂನ್ಯ ಕೃಷಿ ಸ್ಥಿತಿ ಕಾಯ್ದುಕೊಂಡಿದೆ. ಅಂತಾರಾಜ್ಯ ಡ್ರಗ್ ಕಾರ್ಟೆಲ್ಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತಿದೆ. ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಯುವ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಲಾಗಿದೆ.
ಡ್ರಗ್ಸ್ ದಂಧೆ-ನಿರ್ಮಾಪಕ, ಮಾಜಿ ಡಿಎಂಕೆ ನಾಯಕನ ಬಂಧನ
ಬರೋಬ್ಬರಿ 2000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ವಿದೇಶಕ್ಕೆ ಸಾಗಿಸಿದ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಸಿನಿಮಾ ನಿರ್ಮಾಪಕ ಮತ್ತು ಮಾಜಿ ಡಿಎಂಕೆ ನಾಯಕ ಜಾಫರ್ ಸಾದಿಕ್ ಅವರನ್ನು ಬಂಧಿಸಿದೆ.
ನಾಲ್ಕು ತಿಂಗಳಿನಿಂದ ಜಾಫರ್ಗಾಗಿ ಎನ್ಸಿಬಿ ಹುಡುಕಾಟ ನಡೆಸುತ್ತಿತ್ತು. ಭಾರತ-ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಡ್ರಗ್ಸ್ ಕಳ್ಳಸಾಗಣೆ ಜಾಲದ ಕಿಂಗ್ಪಿನ್ ಸಾದಿಕ್ ಎಂದು ಎನ್ಸಿಬಿ ಬಣ್ಣಿಸಿದೆ. ಇವರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗೆ 2,000 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಎನ್ಸಿಬಿ ಪ್ರಕಾರ, ಜಾಫರ್ ಸಾದಿಕ್ 3,500 ಕೆಜಿ ಸೂಡೊಫೆಡ್ರಿನ್ ಅನ್ನು ವಿದೇಶಕ್ಕೆ 45 ಕ್ಕೂ ಹೆಚ್ಚು ಬಾರಿ ಕಳುಹಿಸಿದ್ದಾರೆ. ಫೆಬ್ರವರಿ 29 ರಂದು ಮಧುರೈನಲ್ಲಿ 36 ಕೆಜಿ ಡ್ರಗ್ಸ್ ಕಳ್ಳಸಾಗಣೆಗಾಗಿ ಒಂದೆರಡು ರೈಲು ಪ್ರಯಾಣಿಕರನ್ನು ಅಧಿಕಾರಿಗಳು ಬಂಧಿಸಿದ್ದರು. ಅವರು ನೀಡಿದ ಮಾಹಿತಿ ಆಧರಿಸಿ ಚೆನ್ನೈನ ಕೊಡುಂಗೈಯೂರ್ ಡಂಪಿಂಗ್ ಯಾರ್ಡ್ ನಿಂದ 180 ಕೋಟಿ ರೂಪಾಯಿ ಮೌಲ್ಯದ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ. ಈ ಮಾದಕ ದ್ರವ್ಯಗಳನ್ನು ಶ್ರೀಲಂಕಾಕ್ಕೆ ಕಳ್ಳಸಾಗಣೆ ಮಾಡಲು ಸಿದ್ದತೆ ನಡೆಸಲಾಗಿತ್ತು.
ಸಾದಿಕ್ ಚಿತ್ರರಂಗದ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿದ್ದಾರೆ. ಅವರು ಇದುವರೆಗೆ ನಾಲ್ಕು ಸಿನಿಮಾ ಮಾಡಿದ್ದಾರೆ. ಇರೈವನ್ ಮಿಗ ಪೆರಿಯವನ್, ಮಾಯಾವಲೈ ಮತ್ತು ಮಂಗೈ ಈ ಮೂರು ಚಿತ್ರಗಳು ಬಿಡುಗಡೆಯಾಗಿವೆ. ಅವರ ನಾಲ್ಕನೇ ಚಿತ್ರ VR07 ಈ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.
ಜಾಫರ್ ಸಾದಿಕ್ ಯಾರು?
ನಿರ್ಮಾಪಕ ಜಾಫರ್ ಸಾದಿಕ್ 2010ರಲ್ಲಿ ರಾಜಕೀಯ ಪ್ರವೇಶಿಸಿದ್ದರು. ಅವರು ಡಿಎಂಕೆಯ ಎನ್ಆರ್ಐ ವಿಭಾಗದ ಚೆನ್ನೈ ವೆಸ್ಟ್ ಉಪ ಸಂಘಟಕರಾಗಿದ್ದರು. ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಾದಿಕ್ ಅವರನ್ನು ಕಳೆದ ತಿಂಗಳು ಡಿಎಂಕೆಯಿಂದ ಉಚ್ಛಾಟಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರು ಜಾಫರ್ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ರಾಜ್ಯ ಸಚಿವ ಉದಯನಿಧಿ ಸ್ಟಾಲಿನ್ ಸೇರಿದಂತೆ ಹಲವು ರಾಜಕಾರಣಿಗಳೊಂದಿಗೆ ಜಾಫರ್ ಅವರ ಫೋಟೋಗಳನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ : ಶರದ್ ಪವಾರ್ ಹೆಸರು, ಫೋಟೋ ದುರ್ಬಳಕೆ ಆರೋಪ: ಅಜಿತ್ ಪವಾರ್ ಬಣದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್