Homeಚಳವಳಿಕಾನೂನಿನ ಯೋಧ ಶಮ್ನಾಡ್ ಬಶೀರ್ ಅವರ ಗೌರವಾರ್ಥ ಅವರ ಪರಂಪರೆಯನ್ನು ಮುಂದುವರಿಸೋಣ

ಕಾನೂನಿನ ಯೋಧ ಶಮ್ನಾಡ್ ಬಶೀರ್ ಅವರ ಗೌರವಾರ್ಥ ಅವರ ಪರಂಪರೆಯನ್ನು ಮುಂದುವರಿಸೋಣ

ಶಮ್ನಾಡ್ ಬಶೀರ್ ಅವರು, ಕೇವಲ ಬೌದ್ಧಿಕ ಆಸ್ತಿ ಹಕ್ಕುಗಳ ಪರಿಣತರು ಮಾತ್ರ ಆಗಿರಲಿಲ್ಲ; ಅವರು ವಕೀಲ ವೃತ್ತಿಯಲ್ಲಿ ಕಡೆಗಣಿಸಲ್ಪಟ್ಟ ವರ್ಗಗಳ ವೈವಿಧ್ಯತೆ ಮತ್ತು ಪ್ರಾತಿನಿಧ್ಯಕ್ಕಾಗಿ ದಣಿವಿರದೆ ದುಡಿಯುತ್ತಿದ್ದ ಒಬ್ಬ ಕಾರ್ಯಕರ್ತರೂ ಆಗಿದ್ದರು.

- Advertisement -
- Advertisement -

ಕೃಪೆ: ಮಹ್ತಾಬ್ ಆಲಂ, ದಿ ವೈರ್.ಇನ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊಫೆಸರ್ ಶಮ್ನಾಡ್ ಬಶೀರ್ ಅವರ ಅಕಾಲಿಕ ಮತ್ತು ದುರಂತಮಯ ಮರಣವು ನಮ್ಮಲ್ಲಿ ಅನೇಕರಿಗೆ ಸಿಡಿಲೆರಗಿದಂತೆ ಆಘಾತ ತಂದಿದೆ. ನಂಬಲು ಅಸಾಧ್ಯವಾದುದರ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಾನು ಓಡಾಡುತ್ತಿರುವಾಗ ನನಗೆ ಮನವರಿಕೆಯದುದೇನೆಂದರೆ, ಗೆಳೆಯನೊಬ್ಬನನ್ನು ಕಳೆದುಕೊಂಡದ್ದು ಮಾತ್ರವಲ್ಲ; ದೇಶವು ಅತ್ಯುತ್ತಮವಾದ ಕಾನೂನು ತಜ್ಞರೊಬ್ಬರನ್ನು ಕಳೆದುಕೊಂಡಿದೆ ಎಂಬುದು. ಬೌದ್ಧಿಕ ಆಸ್ತಿ ಹಕ್ಕು ( Intellectual Property Right-ಐಪಿಆರ್)ಗಳ ವಿಷಯದಲ್ಲಿ ಜಾಗತಿಕವಾಗಿ ಪ್ರಸಿದ್ಧರಾಗಿದ್ದ ಅವರ ಮೃತದೇಹವು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಯಲ್ಲಿ ತನ್ನ ಕಾರಿನ ಬಳಿ ಪತ್ತೆಯಾಯಿತು.

ಅವರ ಸಾವಿನ ಸುದ್ದಿಯು ಹರಡುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪದ ಮಹಾಪೂರವೇ ಆರಂಭವಾಗುತ್ತಿದ್ದಂತೆಯೇ ಅವರ ಹಠಾತ್ ಮರಣವು ಜಾಗತಿಕ ಕಾನೂನು ಸಮುದಾಯಕ್ಕೆ ಮಾತ್ರವಲ್ಲ; ಶೈಕ್ಷಣಿಕ ಸಮುದಾಯಕ್ಕೂ ತುಂಬಲಾರದ ನಷ್ಟವಾಗಿದೆ ಎಂಬ ಬಗ್ಗೆ ಯಾವ ಸಂಶಯವೂ ಉಳಿಯುವುದಿಲ್ಲ. ದಣಿವರಿಯದ ಹೋರಾಟಗಾರರಾಗಿದ್ದ ಅವರು, ದಿನರಾತ್ರಿಯೆನ್ನದೆ, ಕಡೆಗಣಿಸಲ್ಪಟ್ಟ ವರ್ಗಗಳ ವೈವಿಧ್ಯತೆ ಮತ್ತು ಪ್ರಾತಿನಿಧ್ಯಕ್ಕಾಗಿ ದುಡಿಯುತ್ತಿದ್ದರು. ಬೆಂಗಳೂರಿನ ರಾಷ್ಟ್ರೀಯ  ಕಾನೂನು ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದ ಅವರು, ಇಂಟರ್ನೆಟ್ ಸಮಾನತೆ, ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿ ನ್ಯಾಯಬದ್ಧತೆ, ಸಾರ್ವಜನಿಕ ಹಿತಾಸಕ್ತಿ, ನ್ಯಾಯಾಂಗದ ಉತ್ತರದಾಯಿತ್ವ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು, ಅಂಧರು, ಮತ್ತು ವಿಶೇಷಚೇತನರ ಹಕ್ಕುಗಳು ಇತ್ಯಾದಿಯಾಗಿ ಹಲವಾರು ಕ್ಷೇತ್ರಗಳಲ್ಲಿ ಸಮರೋಪಾದಿಯಲ್ಲಿ ದುಡಿಯುತ್ತಿದ್ದ ಮನುಷ್ಯರಾಗಿದ್ದರು.

ನನ್ನ ಮಟ್ಟಿಗೆ ಅವರು ಜಾಗತಿಕ ಖ್ಯಾತಿಯ ಭೌದ್ಧಿಕ ಆಸ್ತಿ ಹಕ್ಕುಗಳ ತಜ್ಞರಷ್ಟೇ ಅಲ್ಲ ಅವರೊಬ್ಬರು ಕಾನೂನಿನ ಯೋಧ. ಅವರು ಇನ್‌ಕ್ರೀಸಿಂಗ್ ಡೈವರ್ಸಟಿ ಬೈ ಇನ್‌ಕ್ರೀಸಿಂಗ್ ಎಕ್ಸೆಸ್ ಟು ಲೀಗಲ್ ಎಜುಕೇಶನ್ (IDIA) ಮತ್ತು ಎಕ್ಸೆಸ್ ಟು ಲೀಗಲ್ ಎಜುಕೇಶನ್ ಫಾರ್ ಮುಸ್ಲಿಮ್ಸ್ ಇನ್ ಇಂಡಿಯಾ (ALEM) ಸಂಸ್ಥೆಗಳ ಹಿಂದಿನ ಶಕ್ತಿ ಮಾತ್ರವೇ ಆಗಿರಲಿಲ್ಲ.

ನಾನು ಅವರ ಬಗ್ಗೆ ಮೊದಲ ಬಾರಿಗೆ ಕೇಳಿದ್ದು 2009ರಲ್ಲಿ. ಅದು ಅವರು ಆಗಿನ ಸುಪ್ರೀಂಕೋರ್ಟ್ ನ್ಯಾಯಾಧೀಶ ನ್ಯಾ. ಮಾರ್ಕಾಂಡೇಯ ಕಟ್ಜು ಅವರು ಆಡಿದ ಮಾತೊಂದರ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದಾಗ. ಕಟ್ಜು ಅವರು ನ್ಯಾಯಾಲಯದಲ್ಲಿ ಎಲ್ಲರ ಎದುರಲ್ಲೇ ಗಡ್ಡಧಾರಿ ಮುಸ್ಲಿಮ್ ಯುವಕನೊಬ್ಬನನ್ನು ತಾಲಿಬಾನ್ ಉಗ್ರಗಾಮಿಗೆ ಹೋಲಿಸಿದ್ದರು. ಆ ವರ್ಷ ತನ್ನ ಕಾನ್ವೆಂಟ್ ಶಾಲೆಯಲ್ಲಿ ಗಡ್ಡ ಬಿಡಲು ಅನುಮತಿ ನೀಡಬೇಕೆಂಬ ಮುಸ್ಲಿಂ ಯುವಕನೊಬ್ಬನ ಅರ್ಜಿಯನ್ನು ತಿರಸ್ಕರಿಸಿದ್ದರು. “ನಮಗೆ ದೇಶದಲ್ಲಿ ತಾಲಿಬಾನ್ ಬೇಕಿಲ್ಲ. ನಾಳೆ ಒಬ್ಬಳು ವಿದ್ಯಾರ್ಥಿನಿ ಬಂದು ನನಗೆ ಬುರ್ಖಾ ಧರಿಸಲು ಅನುಮತಿ ನೀಡಬೇಕೆಂದು ಕೋರಬಹುದು. ನಾವು ಅದಕ್ಕೆ ಅವಕಾಶ ನೀಡಲು ಸಾಧ್ಯವೇ?” ಎಂದು ಖಟ್ಜು ಕೇಳಿದ್ದರು.

“ಈ ಪ್ರಕರಣದ ಅರ್ಹತೆ ಏನೇ ಇರಲಿ, ಅದರ ಹೊರತಾಗಿಯೂ ನ್ಯಾ ಕಟ್ಜು ಅವರ ಹೇಳಿಕೆ ನಿರ್ದಯಿ ಮತ್ತು ಅಸೂಕ್ಷ್ಮತೆಯದ್ದಾಗಿದೆ. ಅವರು ಒಬ್ಬ ನಿಷ್ಪಕ್ಷಪಾತಿ ನ್ಯಾಯಾಧೀಶರಾಗಲು ಅನರ್ಹರು” ಎಂದು ಶಮ್ನಾಡ್ ಬರೆದಿದ್ದರು. ಆ ಹೊತ್ತಿಗೆ ಶಮ್ನಾಡ್ ಅವರು ಕೋಲ್ಕತಾರ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯ (NUJS)ದಲ್ಲಿ ಬೌದ್ದಿಕ ಆಸ್ತಿಗಳ ಹಕ್ಕುಗಳ ಕುರಿತು ಪಾಠ ಮಾಡುತ್ತಿದ್ದ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಯ ಪ್ರೊಫೆಸರರಾಗಿದ್ದರು. ತನ್ನ ಬ್ಲಾಗ್‌ನ ಕೊನೆಯಲ್ಲಿ ಅವರು ಹೀಗೆ ಬರೆದಿದ್ದರು:

“ಸಲೀಮನ ಎಸ್‌ಎಲ್‌ಪಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟಿನ ನಿರ್ಧಾರ ಸರಿ ಇದ್ದಿರಬಹುದು. ಎಲ್ಲರ ಮಂದೆ ನ್ಯಾ. ಕಟ್ಜು ಅವರು ಎಲ್ಲಾ ಗಡ್ಡಧಾರಿ ಮುಸ್ಲಿಮರನ್ನು ತಾಲಿಬಾನ್ ಜೊತೆ ಸಮೀಕರಿಸಿದ ಹಿನ್ನೆಲೆಯಲ್ಲಿ ಒಂದು ಸಮುದಾಯದ ವಿರುದ್ಧ ಅವರ ತಾರತಮ್ಯವನ್ನು ನಿರಾಕರಿಸಲಾಗದು. ಮುಖ್ಯ ನ್ಯಾಯಾಧೀಶರ ಈ ಹೇಳಿಕೆಗೆ ವಾಗ್ದಂಡನೆ ವಿಧಿಸಬೇಕು ಮಾತ್ರವಲ್ಲ; ಈ ಪ್ರಕರಣದ ವಿಚಾರಣೆಯನ್ನು ಇನ್ನೊಂದು ಪೀಠದ ಮುಂದೆ ನಡೆಸಬೇಕು. ನ್ಯಾಯ ತೀರ್ಮಾನ ಆಗಬೇಕು ಮಾತ್ರವಲ್ಲ; ನ್ಯಾಯ ತೀರ್ಮಾನ ಆಗಿದೆ ಎಂಬಂತೆ ಕಾಣಲೂಬೇಕು!”

ವರ್ಷಗಳು ಕಳೆದಂತೆ ನಾನು ಬೇರೆಬೇರೆ ಪತ್ರಿಕೆಗಳಲ್ಲಿ ಮತ್ತು ವೆಬ್‌ಸೈಟ್‌ಗಳಲ್ಲಿ ಅವರ ಲೇಖನಗಳು ಮತ್ತು ವಿಶ್ಲೇಷಣೆಗಳನ್ನು ಓದುತ್ತಲೇ ಇದ್ದೆ. ಅವರು ನಿಷ್ಣಾತರಾಗಿದ್ದರು ಮತ್ತು ಕಾನೂನು, ಧೋರಣೆಗಳು ಮತ್ತು ಸಾರ್ವಜನಿಕ ಒಳಿತಿನ ಕುರಿತು ವಿವಿಧ ವಿಷಯಗಳ ಬಗ್ಗೆ ಬರೆಯುತ್ತಿದ್ದರು. 2015ರಲ್ಲಿ ಸಮಾನ ಗೆಳೆಯ ತರುಣಬ್ ಖೈತಾನ್ ನಮ್ಮ ನಡುವಿನ ಕೊಂಡಿಯಾದರು. ಮುಸ್ಲಿಂ ಸಮುದಾಯದತ್ತ ಕೈಚಾಚುವಲ್ಲಿ ಐಡಿಐಎಗೆ ಅವರ ತಂಡದೊಂದಿಗೆ ನೆರವಾಗುವಿರಾ ಎಂದು ಕೇಳಿದರು. ಶಮ್ನಾಡ್ ಅವರ ಬರಹಗಳ ಅಭಿಮಾನಿಯಾಗಿದ್ದ ನನಗೆ ಅವರ ಜೊತೆಗೆ ಕೆಲಸ ಮಾಡುವುದು, ಕನಸು ನನಸಾದಂತೆ ಇತ್ತು. ನಾನು ತಕ್ಷಣ ಒಪ್ಪಿಕೊಂಡೆ ಮತ್ತು ನಾವು ಕ್ರಮೇಣ ಉತ್ತಮ ಗೆಳೆಯರಾದೆವು. ಎಲ್ಲಕ್ಕಿಂತ ಹೆಚ್ಚಾಗಿ ಅವರು ದೇಶದ ಮೂಲೆಮೂಲೆಗಳಿಗೆ ಐಡಿಐಎಯನ್ನು ತಲಪಿಸುವ ದಾರಿಯ ಹುಡುಕಾಟದಲ್ಲಿ ಯಾವತ್ತೂ ಇರುತ್ತಿದ್ದರು.‌

ಇಷ್ಟೆಲ್ಲಾ ಹೋರಾಡಲು ಅವರಿಗೆ ಪ್ರೇರಣೆಯಾಗಿದ್ದ ಅಂಶಗಳು ಯಾವುದಾಗಿರಬಹುದು ಎಂಬ ಬಗ್ಗೆ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನಿಟ್ಟುಕೊಂಡು 2016ರಲ್ಲಿ ತಯಾರಿಸಿದ ವರದಿಯ ಕೆಲವು ಮುಖ್ಯಾಂಶಗಳನ್ನಷ್ಟೇ ಇಲ್ಲಿ ನೋಡಬಹುದು.

ಕಾನೂನು ವಿದ್ಯಾರ್ಥಿಗಳು ಲಿಂಗ, ಜಾತಿ, ಧರ್ಮ, ಆದಾಯಗಳ ವಿಷಯದಲ್ಲಿ ಬಹುತೇಕ ಸಮಾನ ಸ್ಥಾನಗಳನ್ನು ಪಡೆದಿದ್ದರೂ, 50 ಶೇಕಡಾ ಜನರು ಮಾತ್ರ ತಮ್ಮ ಕುಟುಂಬದ ಆದಾಯವು ವಾರ್ಷಿಕ 12 ಲಕ್ಷ ರೂ. ಮೀರಿದೆ ಎಂದವರು. ಇವರಲ್ಲಿ 15 ಶೇಕಡಾ ಮಾತ್ರ ತಮ್ಮ ಕುಟುಂಬದ ಆದಾಯ 36 ಲಕ್ಷ ರೂ. ಮೀರಿದೆ ಎಂದವರು. ರಾಷ್ಟ್ರೀಯ ಕಾನೂನ ಶಾಲೆಯಲ್ಲಿ 82% ಶೇಕಡಾ ಹಿಂದೂಗಳಾಗಿದ್ದರೆ, ಶೇ.5% ರಷ್ಟು ಜೈನ ಸಮುದಾಯದವರಾಗಿದ್ದರು.  ಭಾರತದ ಕೇವಲ 0.5 ಶೇಕಡಾ ಜನಸಂಖ್ಯೆ ಹೊಂದಿರುವ ಶ್ರೀಮಂತ ಜೈನರು ಇಲ್ಲಿ ಶೇ.5% ಇದ್ದರು. ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಶೇ. 14& ಪ್ರಾತಿನಿಧ್ಯ ಹೊಂದಿರುವ ಮುಸ್ಲಿಮರು ಈ ಕಾನೂನು ಶಾಲೆಯಲ್ಲಿ ಕೇವಲ  ಶೇ. 0.5% ಮಾತ್ರ ಇದ್ದರು.  ಇಲ್ಲಿ ಮೇಲ್ಜಾತಿಯವರು 65 ಶೇಕಡಾ ಆಗಿದ್ದು, ಇವರಲ್ಲಿ 27 ಶೇಕಡಾ ಬ್ರಾಹ್ಮಣರಿದ್ದಾರೆ.

ಇಲ್ಲಿ ಇನ್ನೂ ಕೆಲವು ಅಂಶಗಳನ್ನು ಗಮನಿಸಬಹುದಾದರೆ, 2000ದ ಇಸವಿಯಿಂದ ಈಚೆಗೆ, ಸುಪ್ರೀಂಕೋರ್ಟ್ ಕೇವಲ ಒಬ್ಬ ದಲಿತ ವಕೀಲರನ್ನು ಮಾತ್ರ ಹಿರಿಯ ವಕೀಲ ಎಂದು ಘೋಷಿಸಿದೆ. ಮುಸ್ಲಿಂ ಸಮುದಾಯದಿಂದ ಇಬ್ಬರು ಮಾತ್ರ! ಹಿಂದುಳಿದ ರಾಜ್ಯಗಳಾದ ಉತ್ತರ ಪ್ರದೇಶ, ಛತ್ತೀಸ್ ಘಡ, ಜಾರ್ಖಂಡ್ ಅಥವಾ ಬಿಹಾರದ ವಕೀಲರನ್ನು ನೇಮಿಸಲಾಗಿಲ್ಲ. ಗ್ರಾಮೀಣ ಹಿನ್ನೆಲೆಯ ವಕೀಲರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತದೆ. ಕರ್ನಾಟಕದಂತಹ ಪ್ರಗತಿಪರ ರಾಜ್ಯಗಳಲ್ಲೂ  ಕಳೆದ 25 ವರ್ಷಗಳ ಅವಧಿಯಲ್ಲಿ ಒಬ್ಬರನ್ನು ಮಾತ್ರ ನೇಮಿಸಲಾಗಿದೆ. ಕೊನೆಯ ಸುತ್ತಿನ ಹುದ್ದೆಯಲ್ಲಿ, ಗೊತ್ತುಪಡಿಸಿದ ಐದು ವಕೀಲರಲ್ಲಿ, ಅವರಲ್ಲಿ ನಾಲ್ವರು ಒಂದು ಜಾತಿಗೆ ಸೇರಿದವರು…

ಈ ಹಿನ್ನೆಲೆಯಲ್ಲಿ ಬಹುತ್ವಕ್ಕಾಗಿ ಕೆಲಸ ಮಾಡಿದ ಶಮ್ನಾಡ್ ಅವರಿಗೆ ಶ್ರದ್ಧಾಂಜಲಿ! ಈಗ ಶಮ್ನಾಡ್ ಇಲ್ಲವಾಗಿದ್ದಾರೆ ಮತ್ತು ನಾವು ಅವರ ಸ್ಮರಣೆಯನ್ನು ಗೌರವಿಸುತ್ತೇವೆ. ಅವರು ಪ್ರಾರಂಭಿಸಿದ ಕೆಲಸವನ್ನು ಅದೇ ಸ್ಫೂರ್ತಿಯೊಂದಿಗೆ ನಾವು ಯಾವಾಗಲೂ ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಮತ್ತು ಅದು ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ನಾನು ನಂಬುತ್ತೇನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...