ಟೊಮೆಟೊ ಬೆಲೆ ಕೆಜಿಗೆ 4 ರೂ.ಗೆ ಕುಸಿದಿದ್ದು, ಇದರಿಂದ ಕಂಗಾಲಾಗಿರುವ ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ಬೀದಿಗೆ ಎಸೆದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ನಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ರಸ್ತೆಗೆ ಎಸೆದು ಪ್ರತಿಭಟನೆಯನ್ನು ನಡೆಸಿದ್ದಾರೆ. ಈ ಹಿಂದೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 200 ರೂ.ಗೆ ಏರಿತ್ತು, ಆದರೆ ಈಗ ಟೊಮೆಟೋ ಬೆಲೆಯಲ್ಲಿ ಪಾತಾಳಕ್ಕೆ ಕುಸಿತ ಕಂಡಿದೆ.
ರೈತರು ಟೊಮೆಟೋ ಬೆಲೆ ಇಳಿಕೆಯಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವುದಾಗಿ ಹೇಳಿದ್ದು, ಸದ್ಯ ಟೊಮೇಟೊ ಬೆಲೆಯಿಂದ ಮೂಲ ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಮಾರುಕಟ್ಟೆಗೆ ತಂದಿದ್ದ ಟೊಮೇಟೊವನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ತಮ್ಮ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ ಎಂದು ರೈತರು ಕಂಗಾಲಾಗಿದ್ದು, ಬೆಳೆ ಬೆಳೆಯಲು ಹೂಡಿದ ಬಂಡವಾಳವನ್ನೇ ವಾಪಾಸ್ಸು ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಸಾರಿಗೆ, ರಸಗೊಬ್ಬರಗಳು ಮತ್ತು ಕೀಟನಾಶಕಗಳಂತಹ ಹೆಚ್ಚುವರಿ ವೆಚ್ಚಗಳು ನಮಗೆ ಭಾರೀ ನಷ್ಟ ಉಂಟುಮಾಡಿದೆ. ಸಾಗಾಣಿಕೆ ವೆಚ್ಚ ಹೆಚ್ಚಿರುವ ಕಾರಣ ಕೆಲ ರೈತರು ಕಟಾವು ಮಾಡಿದ ಟೊಮೇಟೊವನ್ನು ರಸ್ತೆಯಲ್ಲೇ ಎಸೆಯುತ್ತಿದ್ದಾರೆ. ಸರಕಾರ ತಮ್ಮ ಕಷ್ಟವನ್ನು ನಿವಾರಿಸಲು ಮಧ್ಯಪ್ರವೇಶ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಇದನ್ನು ಓದಿ: ಭಾರತ ಉಳಿಸಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ: ಸಿದ್ದರಾಮಯ್ಯ