ಸುಳ್ಳು 1: ಶಾಹೀನ್ ಬಾಗ್ ಪ್ರತಿಭಟನಾಕಾರರಲ್ಲೊಬ್ಬರಿಗೆ ಕೊರೊನಾ ಸೋಂಕು ಹರಡಿದೆ
ಇದೀಗ ಬಂದ ಸುದ್ದಿ, ಶಾಹೀನ್ ಬಾಗ್ ಪ್ರತಿಭಟನೆಯಲ್ಲಿದ್ದ 43 ವರ್ಷದ ನಜ್ಮಾ ಬೇಗಂ ಎಂಬ ಮಹಿಳೆಗೆ ಕೊರೊನಾ ವೈರಸ್ ಹರಡಿದೆ. ಆದರೆ ಆಕೆ ಚಿಕಿತ್ಸೆಗೆ ನಿರಾಕರಿಸಿದ್ದಾಳೆ ಎಂಬ ಸುದ್ದಿಯನ್ನು ಟ್ವಿಟ್ಟರ್ ಮತ್ತು ವಾಟ್ಸಾಪ್ನಲ್ಲಿ ಹರಡಲಾಗಿದೆ.
ವಿಭೋರ್ ಆನಂದ್ ಎಂಬುವವರು ಈ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. 1600 ಜನ ಲೈಕ್ ಮಾಡಿದರೆ 750 ಜನ ಷೇರ್ ಮಾಡಿದ್ದಾರೆ.
ಸತ್ಯ: ಈ ಕುರಿತು ಫ್ಯಾಕ್ಟ್ ಚೆಕ್ ಮಾಡಿದಾಗ ಮೊದಲನೆಯದಾಗಿ ಶಾಹೀನ್ ಬಾಗ್ ಸಂಘಟಕರು ಇದು ಸುಳ್ಳು ಸುದ್ದಿ ಎಂಬುದನ್ನು ಖಚಿತಪಡಿಸಿದ್ದಾರೆ. ಎರಡನೆಯದಾಗಿ ಈ ಕುರಿತು ಯಾವುದೇ ಪತ್ರಿಕೆಯಲ್ಲಿ ವರದಿಯಾಗಿಲ್ಲ. ಮೂರನೆಯದಾಗಿ ಅಲ್ಲಿನ ಸಫ್ದರ್ಜಂಗ್ ಮತ್ತು ಡಾ.ರಾಮ್ ಮನೋಹರ್ ಲೋಹಿಯ ಆಸ್ಪತ್ರೆಯ ವೈದ್ಯರು ಇಲ್ಲಿ ಯಾವುದೇ ಕೊರೊನಾ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುಳ್ಳು 2: ಅಲ್ಜಜೀರಾ ವರದಿಗಾರ ಹಿಂದೂಗಳನ್ನು ಕೊಚ್ಚಿಹಾಕಬೇಕು ಎಂದು ಹೇಳಿದ್ದಾನೆ.
ದಿಲ್ವಾರ್ ಶೇಖ್ ಎನ್ನುವ ವ್ಯಕ್ತಿಯ ಟ್ವಿಟ್ಟರ್ ಖಾತೆಯಿಂದ ಹಿಂದೂಗಳನ್ನು ಕೊಚ್ಚಿಹಾಕುವ ಕೆಲಸ ನಡೆಯುತ್ತಿದೆ. ಆಗ ಮಾತ್ರ ಅವರು ಬುದ್ಧಿ ಕಲಿಯುತ್ತಾರೆ ಎಂದು ಸರಣಿ ಟ್ವೀಟ್ಗಳನ್ನು ಮಾಡಲಾಗಿದೆ. ಅಲ್ಲದೇ ಹಿಂದೂ ಧರ್ಮದ ವಿರುದ್ಧ ಪ್ರಚೋದನಾಕಾರಿಯಾಗಿ ಹಲವು ಟ್ವೀಟ್ಗಳನ್ನು ಮಾಡಲಾಗಿದೆ.
ಆ ಖಾತೆಯ ಬಯೋನಲ್ಲಿ ಅಲ್ಜಜೀರಾ ಮತ್ತು ದಿ ವೈರ್ ವರದಿಗಾರ ಎಂದು ಬರೆಯಲಾಗಿದೆ. ಹಾಗಾಗಿ ಬಲಪಂಥೀಯ ಸಂಘಟನೆಗಳು ಮತ್ತು ವ್ಯಕ್ತಿಗಳು ಟ್ವಿಟ್ಟರ್ನಲ್ಲಿ ಅಲ್ಜಜೀರಾ ಮತ್ತು ದಿ ವೈರ್ ಮಾಧ್ಯಮಗಳ ಮೇಲೆ ಮುಗಿಬೀಳಲಾಗಿದೆ.
ಸತ್ಯ: ಆದರೆ ದಿಲ್ವಾರ್ ಶೇಖ್ ಎನ್ನುವ ಖಾತೆಯೇ ನಕಲಿ ಖಾತೆಯಾಗಿದೆ. ಅಲ್ಲದೇ ಅಲ್ಜಜೀರಾ ಮತ್ತು ದಿ ವೈರ್ ಮಾಧ್ಯಮಗಳಲ್ಲಿ ಅಂತಹ ಯಾವುದೇ ವ್ಯಕ್ತಿ ನಮ್ಮಲ್ಲಿ ಕೆಲಸದಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸುಳ್ಳು 3: ಪ್ರಿಯಾಂಕ ಗಾಂಧಿಗೆ ಯೆಸ್ ಬ್ಯಾಂಕ್ನ ರಾಣಾ ಕಪೂರ್ ಎರಡು ಕೋಟಿ ಕೊಟ್ಟು ಪಡೆದಿದ್ದು ಕತ್ತೆ ಫೋಟೊ ಇರುವ ಪೇಂಟಿಂಗ್..
ದಿವಾಳಿಯಾಗಿರುವ ಯೆಸ್ ಬ್ಯಾಂಕ್ ಸುತ್ತಾ ನೂರಾರು ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿ ಪ್ರಿಯಾಂಕ ಗಾಂಧಿಗೆ ಯೆಸ್ ಬ್ಯಾಂಕ್ನ ರಾಣಾ ಕಪೂರ್ ಎರಡು ಕೋಟಿ ಕೊಟ್ಟು ಪಡೆದಿದ್ದು ಕತ್ತೆ ಫೋಟೊ ಇರುವ ಪೇಂಟಿಂಗ್ ಎಂದು ಸುದ್ದಿ ಹಬ್ಬಿಸಲಾಗಿದೆ. ಆದರೆ ಇದು ಅಪ್ಪಟ ಸುಳ್ಳು ಸುದ್ದಿಯಾಗಿದೆ.
ಸತ್ಯ: ರಾಜೀವ್ ಗಾಂಧಿಯವರ ಚಿತ್ರವಿರುವ ಪೇಂಟಿಂಗ್ ಅನ್ನು ಪ್ರಿಯಾಂಕ ಗಾಂಧಿ ರಾಣಾ ಕಪೂರ್ಗೆ ಮಾರಾಟ ಮಾಡಿದ್ದರು. ಕಿಡಿಗೇಡಿಗಳು ಕತ್ತೆ ಫೋಟೊ ಇರುವ ಪೇಂಟಿಂಗ್ ಎಂದು ಸುಳ್ಳು ಹಬ್ಬಿಸಿದ್ದಾರೆ.
ನಿಜವಾದ ಫೋಟೊ ಇಲ್ಲಿದೆ ನೋಡಿ
ಸುಳ್ಳು 4: ಯೆಸ್ ಬ್ಯಾಂಕ್ ಮುಳುಗಲು ಮನಮೋಹನ್ ಸಿಂಗ್, ಚಿದಂಬರಂ ಕಾರಣ..
ಯೆಸ್ ಬ್ಯಾಂಕ್ 2004ರಲ್ಲಿ ಸ್ಥಾಪನೆಯಾಯಿತು. ಆಗ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಯುಪಿಎ ಎರಡನೇ ಅವಧಿಗೆ ಪಿ ಚಿದಂಬರಂ ಹಣಕಾಸು ಸಚಿವರಾಗಿದ್ದರು. ಪಿ ಚಿದಂಬರಂ ಯೆಸ್ ಬ್ಯಾಂಕ್ನ ಸ್ಥಾಪಕ ರಾಣಾ ಕಪೂರ್ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಹಾಗಾಗಿ ಇಂದು ಯೆಸ್ ಬ್ಯಾಂಕ್ ಮುಳುಗಿಹೋಗಲು ಇವರಿಬ್ಬರೂ ಕಾರಣ ಎಂದು ಫೇಕ್ ಸುದ್ದಿ ಹರಡುವ ಪೋಸ್ಟ್ಕಾರ್ಡ್ ಕನ್ನಡ ಹೇಳಿದೆ.
ಸತ್ಯ: ಮೋದಿ ಅಧಿಕಾರಕ್ಕೆ ಬರುವವರೆಗೂ ಅಂದರೆ 2014ರವರೆಗೆ ಯೆಸ್ ಬ್ಯಾಂಕ್ ಸುಸ್ಥಿತಿಯಲ್ಲಿತ್ತು. ಆದರೆ ಮೋದಿ ಬಂದನಂತರ ಅವರ ಸ್ನೇಹಿತರಾದ ಮುಖೇಶ್ ಅಂಬಾನಿ, ಅದಾನಿ ಮತ್ತು ವೇದಾಂತ ಕಂಪನಿಗೆ ಇದೇ ಯೆಸ್ ಬ್ಯಾಂಕ್ ಸಾವಿರಾರು ಕೋಟಿ ರೂಗಳನ್ನು ಸಾಲ ನೀಡಿದೆ. 2014: 55,000 ಕೋಟಿ ಸಾಲ ನೀಡಿದ್ದ ಬ್ಯಾಂಕ್ 2019ರಷ್ಟರಲ್ಲಿ 2,41,000 ಕೋಟಿಗೆ ತಲುಪಿದೆ. ಆ ರೀತಿ ಸಾಲ ಪಡೆದವರೆಲ್ಲಾ ಬೇಕಂತಲೇ ಸಾಲವನ್ನು ವಾಪಸ್ ಮಾಡಿಲ್ಲ. ಸಾಲ ಕಟ್ಟದವರು ಮೋದಿಯ ಪರಮಾಪ್ತರು ಎಂಬುದನ್ನು ಮರೆಯಬಾರದು. ಹಾಗಾಗಿ ಯೆಸ್ ಬ್ಯಾಂಕ್ ದಿವಾಳಿಯಾಗಿದೆ.
ಸುಳ್ಳು 5: ಉತ್ತರ ಪ್ರದೇಶದ ಸಾಮಾಜಿಕ ಕಾರ್ಯಕರ್ತೆ ಸದಾಫ್ ಜಫರ್ ಮನೆ ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ.
ಪೋಸ್ಟ್ ಕಾರ್ಡ್ ಕನ್ನಡ ಈ ರೀತಿಯ ಸುಳ್ಳನ್ನು ಹರಡಿದೆ. ಯೋಗಿ ಸರ್ಕಾರ ಸಿಎಎ ವಿರುದ್ಧದ ರ್ಯಾಲಿಯಲ್ಲಿ ಗಲಭೆಯೆಬ್ಬಿಸಿದವರು ಎಂದು ಕೆಲವರನ್ನು ಟಾರ್ಗೆಟ್ ಮಾಡಿ ಬಹಿರಂಗ ಸ್ಥಳಗಳಲ್ಲಿ ಅವರ ಫೋಟೊ ಮತ್ತು ವಿಳಾಸವಿರುವ ಹೋರ್ಡಿಂಗ್ಗಳನ್ನು ಹಾಕಿತ್ತು.
ಸತ್ಯ: ಇದನ್ನು ಗಮನಿಸಿದ ಅಲಹಾಬಾದ್ ಹೈಕೋರ್ಟ್ ಭಾನುವಾರವೇ ವಿಶೇಷ ವಿಚಾರಣೆ ನಡೆಸಿ ಯೋಗಿ ಸರ್ಕಾರಕ್ಕೆ ತಪರಾಕಿ ಹಾಕಿದೆ. ಕೂಡಲೇ ಹೋರ್ಡಿಂಗ್ಗಳನ್ನು ತೆಗೆದುಹಾಕುವಂತೆ ತಾಕೀತು ಮಾಡಿದೆ. ಯೋಗಿ ಸರ್ಕಾರ ಹೋರ್ಡಿಂಗ್ಗಳನ್ನು ತೆಗೆದುಹಾಕಿ ಮುಖಭಂಗ ಅನುಭವಿಸಿದೆ.