1. ಬಿಹಾರಿಗಳು 500 ಬಸ್ ಚಾರ್ಜ್ನಲ್ಲಿ ದಿಲ್ಲಿಗೆ ಬಂದು 5 ಲಕ್ಷದ ಚಿಕಿತ್ಸೆ ಪಡೆದು ದೋಚುತ್ತಿದ್ದಾರೆ: ಕೇಜ್ರಿವಾಲ್..
ನಿಜವಾಗಿಯೂ ಕೇಜ್ರಿವಾಲ್ ಹೇಳಿದ್ದೇನು?
ಬಿಹಾರದ ವ್ಯಕ್ತಿಯೊಬ್ಬರು 500 ರೂ.ಗೆ ಟಿಕೆಟ್ ಖರೀದಿಸಿ ದೆಹಲಿಗೆ ಬರುತ್ತಾರೆ. 5 ಲಕ್ಷ ರೂಪಾಯಿ ಮೌಲ್ಯದ ಉಚಿತ ಚಿಕಿತ್ಸೆ ಪಡೆದ ನಂತರ ಹಿಂದಿರುಗುತ್ತಾರೆ. ಅವರು ನಮ್ಮ ದೇಶದ ಜನರಾಗಿರುವುದರಿಂದ ಅದು ನಮಗೆ ಸಂತೋಷವನ್ನು ನೀಡುತ್ತದೆ, ಆದರೆ ದೆಹಲಿಗೆ ತನ್ನದೇ ಆದ ಸಾಮಥ್ರ್ಯವಿದೆ. ದೆಹಲಿ ಇಡೀ ದೇಶದ ಜನರಿಗೆ ಹೇಗೆ ಸೇವೆ ಸಲ್ಲಿಸಲು ಸಾಧ್ಯ? ಆದ್ದರಿಂದ ದೇಶಾದ್ಯಂತ ಈ ಸೌಲಭ್ಯಗಳನ್ನು ಸುಧಾರಿಸುವ ಅವಶ್ಯಕತೆಯಿದೆ. (ಗೋಡಿ ಮೀಡಿಯಾ ತಮ್ಮ ವರದಿಗಳಲ್ಲಿ ಮೊದಲೆರಡು ಸಾಲನ್ನು ಮಾತ್ರ ಪ್ರಸಾರ ಮಾಡಿ ಕೊನೆಯ ಸಾಲುಗಳನ್ನು ಕತ್ತರಿಸುತ್ತಾರೆ. ಆದರೆ ಅದು ವೀಡಿಯೊದಲ್ಲಿದೆ)
ಗೋದಿ ಮೀಡಿಯಾ ಹೇಗೆ ವರದಿ ಮಾಡಿತು?
ಬಿಹಾರಿಗಳು 500 ರೂ.ಗೆ ಪ್ರಯಾಣ ಮಾಡಿ, 5 ಲಕ್ಷ ರೂ. ಉಚಿತ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ: ಅರವಿಂದ್ ಕೇಜ್ರಿವಾಲ್ ಪೂವಾರ್ಂಚಲಿಸ್ ಮೇಲೆ ದಾಳಿ…
ಬಿಜೆಪಿ ಹೇಗೆ ಪ್ರತಿಕ್ರಿಯಿಸಿತು?
ಮನೋಜ್ ತಿವಾರಿ: ದೆಹಲಿಯಲ್ಲಿ ನಿಮ್ಮ ಆಟ ಮುಗಿದಿದೆ ಎಂದು ನಿಮಗೆ ತಿಳಿದಿದೆ. ಹಾಗಾಗಿ ಪೂವಾರ್ಂಚಲಿಸ್ ಬಗ್ಗೆ ನಿಮ್ಮ ದ್ವೇಷವು ಮುಂಚೂಣಿಗೆ ಬಂದಿದೆ. ಶೀಘ್ರದಲ್ಲಿಯೇ ದೆಹಲಿಯ ಜನರು ನಿಮಗೆ ಉತ್ತರವನ್ನು ನೀಡುತ್ತಾರೆ.
ಐಟಿ ಸೆಲ್ ಹೇಗೆ ಟ್ರೋಲ್ ಮಾಡಿದರು:
ಕೇಜ್ರಿವಾಲ್ರ ವಿಡಿಯೋದಲ್ಲಿ ಕೊನೆಯ ಸಾಲುಗಳನ್ನು ಕತ್ತರಿಸಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಗೋಡಿ ಮೀಡಿಯಾದ ತುಣುಕುಗಳನ್ನು ಮತ್ತು ಬಿಜೆಪಿ ರಾಜಕಾರಣಿಗಳ ಹೇಳಿಕೆಗಳನ್ನು ಬಳಸಿ ವೈರಲ್ ಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟಿಸಿ ಕೇಜ್ರಿವಾಲ್ ವಿರುದ್ಧ ಕಾರಿಕೊಂಡರು.
ಹಣಬಲ + ಕೊಂಡುಕೊಂಡ ಮಾಧ್ಯಮ + ಐಟಿ ಸೆಲ್ ಇವಿಷ್ಟು ಒಗ್ಗೂಡಿದರೆ ಏನು ಮಾಡಬಹುದು ಎಂಬುದಕ್ಕೆ ಇದು ಒಂದು ವಿಶಿಷ್ಟ ಉದಾಹರಣೆಯಾಗಿದೆ. ಯಾರನ್ನಾದರೂ ದೂಷಿಸಲು, ಜನರ ಮನಸ್ಸಿನಲ್ಲಿ ಯಾರನ್ನಾದರೂ ರಾಷ್ಟ್ರ ವಿರೋಧಿಗಳನ್ನಾಗಿ ಮಾಡಲು ಅಥವಾ ವೈದ್ಯರನ್ನು ದೆವ್ವದಂತೆ ಕಾಣುವಂತೆ ಮಾಡಲು ಇದು ಸುಲಭವಾದ ಮಾರ್ಗವಾಗಿದೆ…
2. ಬಾಲಕೋಟ್ನ ಪ್ರಮೋಷನಲ್ ವಿಡಿಯೋವನ್ನು ರಿಯಲ್ ಫೂಟೆಜ್ ಎಂದು ತಿರುಚಿದ ಮಾಧ್ಯಮಗಳು
ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಝೀ ಹಿಂದಿ ನ್ಯೂಸ್, ಎಬಿಪಿ ನ್ಯೂಸ್, ಇಂಡಿಯಾ ಟುಡೇ ಇತ್ಯಾದಿ ಚಾನೆಲ್ಗಳ ಜೊತೆಗೆ ಕೆಲವು ಪ್ರಾದೇಶಿಕ ಚಾನೆಲ್ಗಳು ಮತ್ತು ಪತ್ರಿಕೆಗಳು ತಮ್ಮ ವೀಕ್ಷಕರು ಮತ್ತು ಓದುಗರ ಮೇಲೆ ಈ ‘ಫೇಕ್ ದಾಳಿ’ ನಡೆಸಿದವು. ಅವು ಭಾರತೀಯ ವಾಯುಸೇನೆ ಬಿಡಿಗಡೆ ಮಾಡಿದ್ದ ವಿಡಿಯೋ ಒಂದನ್ನು ತೋರಿಸಿ ಅದು ಬಾಲಾಕೋಟ್ ದಾಳಿಯ ರಿಯಲ್ ಫೂಟೇಜ್ ಎಂದವು.
IAF releases Balakot video, Major Gaurav Arya calls it a positive move https://t.co/pS7EPFlQEv
— Republic (@republic) October 4, 2019
ಕೆಲವು ಚಾನೆಲ್ಗಳಂತೂ ‘ಪ್ರೂಫ್ ಬೇಕಾ ಪ್ರೂಫ್? ಇಲ್ಲಿದೆ ನೋಡಿ’ ಎಂದವು. ಪಂಜಾಬ್ ಕೇಸರಿ ಮತ್ತು ಗುಜರಾತ್ ಸಮಾಚಾರ್ ಪತ್ರಿಕೆಗಳು ಪುಟಗಟ್ಟಲೇ ಬರೆದವು.
ಅಸಲಿಗೆ ಯಾವುದೇ ದಾಳಿಯ ವಿಡಿಯೋಗಳನ್ನು ಸೇನೆ ಬಿಡುಗಡೆ ಮಾಡುವುದಿಲ್ಲ. ಅದು ಅಕ್ಟೋಬರ್ 4ರಂದು ಬಿಡುಗಡೆ ಮಾಡಿದ್ದು ಬಾಲಾಕೋಟ್ ದಾಳಿ ಹೇಗೆ ಯೋಜಿತವಾಗಿತು ಎಂದು ತೋರಿಸುವ ಪ್ರಮೋಷನಲ್ (ರೆಪ್ರೆಸೆಂಟೆಟಿವ್ ವಿಡಿಯೋ ಅಂದರೆ ಪ್ರಾತಿನಿಧಿಕ ವಿಡಿಯೋ) ವಿಡಿಯೋವನ್ನಷ್ಟೇ. ಆದರೆ ಬಹುಪಾಲು ಚಾನೆಲ್ಗಳು ಬಾಲಾಕೋಟ್ ದಾಳಿಯ ರಿಯಲ್ ಫೂಟೇಜ್ ಎಂದೆಲ್ಲ ಬೊಬ್ಬೆ ಹೊಡೆದವು.
3. ಮಹಾತ್ಮನ ವಿರುದ್ಧವೇ ಸಂಚು.. ಫೋಟೋಶಾಪ್ ಮಾಡಿದ ಭಕ್ತರು..
ಮಹಾತ್ಮ ಗಾಂಧಿ ಮಹಿಳೆಯೊಂದಿಗೆ ಅಸಭ್ಯ ಭಂಗಿಯಲ್ಲಿರುವ ಚಿತ್ರ ಎಂದು ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಗಾಂಧಿ ವಿರೋಧಿಗಳು ಹಂಚಿಕೊಳ್ಳುತ್ತಿದ್ದಾರೆ. ಟ್ವಿಟರ್ ಬಳಕೆದಾರ ಸಂಜಯ್ ಗುಪ್ತಾ ಬಿಜೆಪಿ ಈ ಚಿತ್ರವನ್ನು ಮೊದಲು ಹಂಚಿಕೊಂಡಿದ್ದು “ರಾಷ್ಟ್ರದ ಪಿತಾಮಹ, ನೀವು ಏನು ಮಾಡುತ್ತಿದ್ದೀರಿ? ಎಂಬ ತಲೆಬರಹವನ್ನು ನೀಡಿದ್ದಾನೆ. ಪ್ರತಿವರ್ಷ ಗಾಂಧಿಜಯಂತಿ ಮತ್ತು ಗಾಂಧಿ ಹತಾತ್ಮರಾದ ದಿನಗಳ ಸುತ್ತಾಮುತ್ತಾ ಈ ಫೇಕ್ ಫೋಟೊವನ್ನು ವೈರಲ್ ಮಾಡಲಾಗುತ್ತಿದೆ. ಕಾರಣ ಗಾಂಧಿ ದ್ವೇಷ ಅಷ್ಟೇ.
ಸತ್ಯ ಏನೆಂದರೆ ಜುಲೈ 6, 1946 ರಂದು ಭಾರತದ ಬಾಂಬೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಗಾಂಧಿ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರೊಂದಿಗೆ ಕುಳಿತು ಮಾತಾಡುತ್ತಿರುವ ಛಾಯಾಚಿತ್ರವು ಅಸೋಸಿಯೇಟೆಡ್ ಪ್ರೆಸ್ನ ಆರ್ಕೈವ್ನಲ್ಲಿದೆ. ಇದನ್ನು ಯಾರೋ ಕಿಡಿಗೇಡಿಗಳು ಹಲವು ವರ್ಷಗಳ ಹಿಂದೆಯೇ ಫೋಟೊಶಾಪ್ ಮಾಡಿದ್ದು ನೆಹರು ಜಾಗದಲ್ಲಿ ಯುವತಿಯೊಬ್ಬಳ ಫೋಟೊವನ್ನು ಕೂರಿಸಿದ್ದಾರೆ. ಗಾಂಧಿ ಬಗ್ಗೆ ವಿಕೃತ ಸುಳ್ಳುಗಳನ್ನು ಹಂಚಿರುವ ಈ ವಂಚಕರು ಚಿತ್ರ ನೋಡಿದವರಿಗೆ ಅನುಮಾನ ಬರಲೆಂದು ಈ ಕೆಲಸ ಮಾಡಿದ್ದಾರೆ.
4. ಕೈಗೆ ದೊಡ್ಡ ಗಾಯವಾಗಿದೆ ಎಂದು ಶಿವರಾಜ್ಸಿಂಗ್ ನಾಟಕವಾಡುತ್ತಿದ್ದಾರ?
ಈ ಫೊಟೊ ನೋಡಿ ಒಮ್ಮೆ ಬಲಗೈಗೆ ಬ್ಯಾಂಡೇಜ್ ಹಾಕಿಕೊಂಡರೆ ಮತ್ತೊಮ್ಮೆ ಎಡಗೈಗೆ ಬ್ಯಾಂಡೇಜ್ ಹಾಕಿಕೊಂಡು ಸಿಕ್ಕಿಹಾಕಿಕೊಂಡಿದ್ದಾರೆ..
ಈ ಸಂದೇಶ ಮೇಲಿನ ಫೋಟೊ ಜೊತೆ ಎಲ್ಲಾ ಕಡೆ ವೈರಲ್ ಆಗಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಶಿವರಾಜ್ಸಿಂಗ್ರವರ ತೆಜೋವಧೆ ಮಾಡಲು ಈ ಫೋಟೊವನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿದೆ.
ಆದರೆ ವಾಸ್ತವ ಏನೆಂದರೆ ಇದೆಲ್ಲವೂ ಸುಳ್ಳು ಸಂದೇಶವಾಗಿದೆ. ನಿಜವಾಗಿಯೂ ಅವರ ಬಲಗೈಗೆ ಗಾಯವಾಗಿದೆ ಮತ್ತು ಆ ಒಂದು ಕೈಗೆ ಮಾತ್ರ ಬ್ಯಾಂಡೇಜ್ ಹಾಕಲಾಗಿದೆ. ಮೊಲದ ಚಿತ್ರ.. ಎರಡನೇ ಚಿತ್ರದಲ್ಲಿ ಎಡಗೈಗೆ ಗಾಯವಾಗಿ ಬ್ಯಾಂಡೇಜ್ ಹಾಕಿರುವಂತೆ ಕಾಣುತ್ತಿರುವುದು ಏಕೆಂದರೆ ಅದು ಸೆಲ್ಫಿ ಚಿತ್ರವಾಗಿದೆ. ಆ ಫೋಟೊವನ್ನು ಸೂಕ್ಷ್ಮವಾಗಿ ಗಮನಿಸಿ ಅಭಿಮಾನಿಯೊಬ್ಬ ತನ್ನ ಕೈಯಿಂದ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬರುತ್ತದೆ. ಕೆಲವೊಮ್ಮೆ ಸೆಲ್ಫಿ ತೆಗೆಯುವಾಗ ನಮ್ಮ ಚಿತ್ರಗಳು ಕನ್ನಡಿಯಲ್ಲಿ ಕಾಣುವಂತೆ ಉಲ್ಟಾ ಬರುತ್ತವೆ. ಹಾಗಾಗಿ ಇಲ್ಲ ಅವರ ಎಡಗೈಗೆ ಬ್ಯಾಂಡೇಜ್ ಹಾಕಿದಂತೆ ಚಿತ್ರ ಬಂದಿದೆ ಅಷ್ಟೇ.
5. ಕರ್ನಾಟಕದ ಪ್ರವಾಹ ಪರಿಹಾರಕ್ಕೆ ಕೇಂದ್ರ ಸರ್ಕಾರ 3800 ಕೋಟಿ, ರಾಜ್ಯ ಸರ್ಕಾರ 6200ಕೋಟಿ ಬಿಡುಗಡೆ ಮಾಡಿದೆ: ಬಿಜಪಿ ಬಾಗಲಕೋಟ
ಫೇಸ್ಬುಕ್ನಲ್ಲಿ ಇಂತಹ ಒಂದು ಪೋಸ್ಟರ್ ಸಾಕಷ್ಟು ಓಡಾಡುತ್ತಿದೆ. ಅದೂ ಅಲ್ಲದೇ ತತ್ ಕ್ಷಣದ ಪರಿಹಾರ ಎಂದೂ ಬೂಸಿ ಬಿಡಲಾಗಿದೆ.
ಸತ್ಯ: ಕರ್ನಾಟಕದಲ್ಲಿ ಪ್ರವಾಹ ಸಂಭವಿಸಿ ಒಂದೂವರೆ ತಿಂಗಳ ನಂತರ ಕೇಂದ್ರ ಸರ್ಕಾರದ ಗೃಹ ಇಲಾಕೆ 1200 ಕೋಟಿ ಬಿಡುಗಡೆಗೆ ಮನವಿ ಮಾಡಿದೆ. ಆದರೆ ಎನ್ಡಿಆರ್ಎಫ್ ಅದಕ್ಕೂ ಕಡಿಮೆ ಹಣ ಬಿಡುಗಡೆ ಮಾಡಬಹುದೆಂಬ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ ಬಿಜೆಪಿ ಭಕ್ತರು ಮಾತ್ರ ಮೋದಿಯನ್ನು ಹೊಗಳುವ ಭರದಲ್ಲಿ ಮನಸ್ಸಿಗೆ ಬಂದ ಸಂಖ್ಯೆಗಳನ್ನು ಬರೆದು 10000 ಕೋಟಿ ಎಂದು ಬೊಬ್ಬೆಯೊಡೆಯುತ್ತಿದ್ದಾರೆ. ಅಲ್ಲದೇ ಇನ್ನು ಹಣ ಬರುತ್ತದೆ ಎಂದು ಬಳಾಂಗ್ ಬಿಡುತ್ತಿದ್ದಾರೆ ಅಷ್ಟೇ.