ಉದ್ಧವ್ ಠಾಕ್ರೆ ಬಣದಿಂದ ಸಿಎಂ ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆಯ ಎಲ್ಲಾ ಆಸ್ತಿ ವರ್ಗಾಹಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್ ನರಸಿಂಹರವರಿದ್ದ ಪೀಠವು ಅರ್ಜಿದಾರ ವಕೀಲ ಆಶಿಸ್ ಗಿರಿಯವರನ್ನು ನೀವು ಯಾರು? ನಿಮ್ಮ ಸ್ಥಾನವೇನು? ಎಂದು ಪ್ರಶ್ನಿಸಿ ಅರ್ಜಿ ವಜಾಗೊಳಿಸಿದೆ.
ಅರ್ಜಿದಾರ ಆಶಿಶ್ ಗಿರಿಯವರು, “ಸುಪ್ರೀಂ ಕೋರ್ಟ್ನಲ್ಲಿ ಉದ್ಧವ್ ಠಾಕ್ರೆ ಬಣದ ಪರವಾಗಿ ಮತ್ತು ಏಕನಾಥ್ ಶಿಂಧೆಯವರ ಶಿವಸೇನೆಯ ಪರವಾಗಿ ಹಲವಾರು ಅರ್ಜಿಗಳು ದಾಖಲಾಗಿವೆ. ಹಾಗಾಗಿ ಶಿವಸೇನೆಯ ಎಲ್ಲಾ ಆಸ್ತಿ ಏಕನಾಥ್ ಶಿಂಧೆಯವರ ಬಣಕ್ಕೆ ಸೇರಬೇಕಲ್ಲವೇ” ಎಂದು ವಾದಿಸಿದರು.
ಇದು ಯಾವ ರೀತಿಯ ಅರ್ಜಿ? ಇದನ್ನು ಸಲ್ಲಿಸಲು ನೀವು ಯಾರು ಎಂದು ಪ್ರಶ್ನಿಸಿದ ನ್ಯಾಯಾಲಯ, ಇದನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಹೇಳಿದೆ.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಮತ್ತು ಸಿಎಂ ಏಕನಾಥ್ ಶಿಂಧೆ ಬಣಗಳ ಹಲವು ಅರ್ಜಿಗಳ ಮೇಲಿನ ತೀರ್ಪನ್ನು ಮಾರ್ಚ್ 16 ರಂದು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಈ ನಡುವೆ ಚುನಾವಣಾ ಆಯೋಗವು ಶಿವಸೇನೆ ಬಿಲ್ಲು ಬಾಣದ ಚಿಹ್ನೆಯನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡಿದೆ.
ಈ ಹಿಂದೆ, ಮಹಾರಾಷ್ಟ್ರದಲ್ಲಿ ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳ ಸಮ್ಮಿಶ್ರ ಸರ್ಕಾರವಿತ್ತು. ಆದರೆ, ಕಳೆದ ವರ್ಷ ಜೂನ್ನಲ್ಲಿ ಠಾಕ್ರೆ ನಾಯಕತ್ವದ ವಿರುದ್ಧ ಶಿಂಧೆ ಹಾಗೂ ಅವರ ಬೆಂಬಲಿತ ಶಾಸಕರ ಗುಂಪು ಬಂಡಾಯವೆದ್ದಿತು. ಆ ಶಾಸಕರು ಬಿಜೆಪಿಗೆ ಬೆಂಬಲ ನೀಡಿದರು. ಇದರಿಂದ ಶಿವಸೇನೆ ವಿಭಜನೆಯಾಗಿ ಸರ್ಕಾರ ಪತನವಾಯಿತು.
ಇದನ್ನೂ ಓದಿ; ಮಹಾರಾಷ್ಟ್ರ: ಶಿಂಧೆ ಸರ್ಕಾರ 15 ದಿನಗಳಲ್ಲಿ ಪತನ: ಸಂಜಯ್ ರಾವತ್