ಸ್ವಾತಂತ್ರ್ಯ
ಒಂದು ದಿನ ಚುವಾಂಗ್ ತ್ಸು ಮೀನು ಹಿಡಿಯುತ್ತಾ ಇರುವ ಸಮಯದಲ್ಲಿ, ಚು ರಾಜ್ಯದ ರಾಜ ಆತನಿಗೆ ತನ್ನ
ಅಧಿಕಾರಿಗಳ ಮೂಲಕ ಹೇಳಿಕಳಿಸಿದನು. ಆ ಪ್ರಕಾರ ಸರ್ಕಾರದ ಆಡಳಿತದಲ್ಲಿ ಚುವಾಂಗ್ ತ್ಸುವಿನ ಸಲಹೆ ಮತ್ತು ಸಹಾಯವನ್ನು ರಾಜ ನಿರೀಕ್ಷಿಸುತ್ತಿರುವುದಾಗಿ ತಿಳಿಸಲಾಯಿತು. ಇದರಿಂದ ರಾಜ ಸಂತುಷ್ಟನಾಗಲಿದ್ದಾನೆ ಎಂಬ ವಿಷಯವನ್ನೂ ಹೇಳಲಾಯಿತು.
ಆದರೆ ಹಿಂತಿರುಗಿ ನೋಡದೆ ಮೀನು ಹಿಡಿಯುವುದನ್ನು ಮುಂದುವರೆಸಿದ ತ್ಸು ಹೀಗೆ ಪ್ರತಿಕ್ರಿಯಿಸಿದನು: “ಚು ರಾಜ್ಯದಲ್ಲಿ ಒಂದು ಆಮೆಯಿದೆ ಎಂದು ಕೇಳಲ್ಪಟ್ಟಿದ್ದೇನೆ. ಅದು ಸತ್ತು ಮೂರು ಸಾವಿರ ವರ್ಷಗಳಾಗಿದ್ದರೂ ರಾಜ ತನ್ನ ಪೂರ್ವಿಕರ ಪವಿತ್ರ ದೇವಸ್ಥಾನದ ಗರ್ಭಗುಡಿಯಲ್ಲಿ ಅದರ ಕಳೇಬರವನ್ನು ಸಂರಕ್ಷಿಸಿ ಇಟ್ಟಿದ್ದಾನೆಂದು” ಕೂಡ. “ಈಗ ನೀವೇ ಹೇಳಿ, ಆ ಆಮೆ ಸತ್ತು ತನ್ನ ಕಳೇಬರವನ್ನು ಗೌರವಿಸಬೇಕು ಅಂತ ನಿರೀಕ್ಷಿಸುತ್ತದೆಯೇ ಅಥವಾ ಕೆಸರಿನಲ್ಲಿ ಬಾಲವಲ್ಲಾಡಿಸುತ್ತಾ ಬದುಕಿರಬೇಕೆಂದೆಣಿಸುತ್ತಾ?” ಆಗ ಆ ಆಧಿಕಾರಿಗಳು ಒಮ್ಮೆಗೇ “ಅದು ಬದುಕಿ ಕೆಸರಿನಲ್ಲಿ ಬಾಲವಲ್ಲಾಡಿಸುವುದನ್ನು ಇಷ್ಟ ಪಡುತ್ತದೆ” ಎಂದು ಉತ್ತರಿಸಿದರು.
ತತ್ಕ್ಷಣವೇ ಚುವಾಂಗ್ ತ್ಸು ಕೂಗಿ ಹೇಳಿದ “ಸರಿಯಾಗಿ ಹೇಳಿದಿರಿ! ನಾನು ಕೂಡ ಕೆಸರಿನಲ್ಲಿ ಬಾಲ ಅಲ್ಲಾಡಿಸಿಕೊಂಡಿರಲು ಇಷ್ಟ ಪಡುತ್ತೇನೆ”.
ಹುಲಿಯಿದ್ದರೂ ಕಾಡು ತೊರೆಯಲಾರೆ
ಥೈ ಶಿಖರದ ಬಳಿಯಲ್ಲಿ ಹಾದು ಹೋಗಬೇಕಾದರೆ, ಕಂಫ್ಯುಶಿಯಸ್, ಒಂದು ಸಮಾಧಿ ಬಳಿ ಜೋರಾಗಿ ಅಳುತ್ತಿದ್ದ ಹೆಂಗಸನ್ನು ಕಂಡು, ಅವಳ ಬಳಿಗೆ ನಡೆದು, ಜೊತೆಗಿದ್ದ ತನ್ನ ಶಿಷ್ಯನಿಗೆ ಕಾರಣ ವಿಚಾರಿಸುವಂತೆ ಹೇಳಿದ. “ಯಾಕವ್ವ ಅಳುತ್ತಿದ್ದೀಯ, ದುಃಖದ ಮೇಲೆ ದುಃಖ ಅನುಭವಿಸುತ್ತಿರುವ ತಾಯಿಯೇ” ಎಂದು ಶಿಷ್ಯ ತ್ಸೆ-ಲು ಕೇಳಿದ್ದಕ್ಕೆ, ಆ ಮಹಿಳೆ “ಹೌದಪ್ಪ, ಹಿಂದೊಮ್ಮೆ ನನ್ನ ಗಂಡನ ಅಪ್ಪನನ್ನು ಹುಲಿಯೊಂದು ಇಲ್ಲೇ ಕೊಂದು ಹಾಕಿತ್ತು, ನನ್ನ ಗಂಡನನ್ನೂ ಕೊಂದಿತು, ಈಗ ನನ್ನ ಮಗನನ್ನು ಕೊಂದು ಹಾಕಿದೆ” ಎಂದು ದುಃಖಿಸತೊಡಗಿದಳು. ಆಗ ಮಾಸ್ಟರ್ “ನೀನು ಈ ಜಾಗವನ್ನೇಕೆ ತೊರೆದು ಬೇರೆಡೆಗೆ ಹೋಗುತ್ತಿಲ್ಲ ತಾಯಿ” ಎಂದು ಕೇಳಿದ್ದಕ್ಕೆ, ಆಕೆ “ಇಲ್ಲಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ತುಳಿಯುವ ಸರ್ಕಾರ ಇಲ್ಲ ಎಂದು ಉತ್ತರಿಸಿದಳಂತೆ.
ಅದಕ್ಕೆ ಕಂಫ್ಯುಶಿಯಸ್ ಶಿಷ್ಯಂದಿರಿಗೆ “ನೋಡಿ ಮಕ್ಕಳೇ ಯಾವ ಸರ್ಕಾರವು ಹುಲಿಗಳಿಗಿಂತ ಕ್ರೂರವಾಗಬಾರದು” ಎಂದು ಹಿತವಚನ ನುಡಿದು ಮುಂದೆ ಸಾಗಿದರಂತೆ.
ಇದನ್ನೂ ಓದಿ: ಹೋರಾಟದ ಬದುಕಿನ ಎರಡು ಆತ್ಮಕಥೆಗಳು ಒಂದು ಆತ್ಮಕಥಾನಕ ಕಾದಂಬರಿ