ದೇವಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ನಡೆಸುವ ಸಾಮೂಹಿಕ ತರಬೇತಿ, ನಾಮಜಪ ಮತ್ತು ಆರೆಸ್ಸೆಸ್ ಸಂಬಂಧಿತ ಅಕ್ರಮ ಸಭೆಗಳನ್ನು ನಿಷೇಧಿಸಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೊಸ ಸುತ್ತೋಲೆ ಹೊರಡಿಸಿದೆ.
ದೇವಾಲಯದ ಆವರಣದಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸಿ ಟಿಡಿಬಿ ಈ ಹಿಂದೆ ಎರಡು ಸುತ್ತೋಲೆಗಳನ್ನು ಹೊರಡಿಸಿತ್ತು. ಹೊಸ ಸುತ್ತೋಲೆಯಲ್ಲಿ ದೇವಾಲಯದ ಆವರಣದಲ್ಲಿ ಆರೆಸ್ಸೆಸ್ ಅಕ್ರಮ ಸಭೆಗಳು ಮತ್ತು ತರಬೇತಿಗಳನ್ನು ನಡೆಸುತ್ತಿದೆಯಾ ಎಂದು ಪರಿಶೀಲನೆಗೆ ಮಂಡಳಿಯ ಅಧಿಕಾರಿಗಳಿಗೆ ಹಠಾತ್ ದಾಳಿ ನಡೆಸುವಂತೆ ಕೂಡ ಮಂಡಳಿಯು ತನ್ನ ಆದೇಶದಲ್ಲಿ ತಿಳಿಸಿದೆ.
ಇತ್ತೀಚಿಗೆ ಕೆಲವು ದೇವಸ್ಥಾನಗಳಲ್ಲಿ ಮಂಡಳಿಯ ಹಿಂದಿನ ಆದೇಶದ ವಿರುದ್ಧ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ನಾಮಜಪ ಪ್ರತಿಭಟನೆಗೆ ನಿಷೇಧ ಹೇರಲಾಗಿದೆ.
ಆರೆಸ್ಸೆಸ್ ಒಳಗೊಂಡಂತೆ ಮೂಲಭೂತವಾದವನ್ನು ಹರಡುವ ಯಾವುದೇ ಸಂಘಟನೆಗೆ ತನ್ನ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿ ಕಾರ್ಯಾಚರಣೆ ನಡೆಸಲು ಅವಕಾಶ ನೀಡಯವುದಿಲ್ಲವೆಂದು ನೂರಾರು ದೇವಾಲಯಗಳ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿಯನ್ನು ನೋಡುಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿಯು ಹೇಳಿದೆ.
ಇದಲ್ಲದೆ ರಾಜಕೀಯ ಕೋಮು ಸಂಘಟನೆಗಳ ಚಿಹ್ನೆ ಹೊಂದಿರುವ ಜಾಹೀರಾತು ಫಲಕಗಳು ಮತ್ತು ದೇವಾಲಯಗಳೊಂದಿಗೆ ಸಂಬಂಧವಿಲ್ಲದ ವ್ಯಕ್ತಿಗಳ ಭಾವಚಿತ್ರವಿರುವ ಬಿತ್ತಿ ಫಲಕಗಳನ್ನು ಕೂಡ ಕೂಡಲೇ ತೆರವುಗೊಳಿಸಬೇಕು ಎಂದು ಅದು ಆದೇಶಿಸಿದೆ.