Homeನ್ಯಾಯ ಪಥ’ಬೆಳಗಿನೊಳಗು ಮಹದೇವಿಯಕ್ಕ’: ಹತ್ತಿ ಬೀಜದ ಬಿತ್ತನೆಯಿಂದ ಹತ್ತಿ ಅರಳುವವರೆಗಿನ ಅಕ್ಕನ ಬದುಕು

’ಬೆಳಗಿನೊಳಗು ಮಹದೇವಿಯಕ್ಕ’: ಹತ್ತಿ ಬೀಜದ ಬಿತ್ತನೆಯಿಂದ ಹತ್ತಿ ಅರಳುವವರೆಗಿನ ಅಕ್ಕನ ಬದುಕು

- Advertisement -
- Advertisement -

ಎಚ್.ಎಸ್ ಅನುಪಮಾ ಅವರ ’ಬೆಳಗಿನೊಳಗು ಮಹದೇವಿಯಕ್ಕ’ ಕಾದಂಬರಿ ಓದಿ ಮುಗಿಸಿದ ಮೇಲೆ ಹೆಚ್ಚು ಕಾಡಿದ್ದು ಅಕ್ಕಮಹಾದೇವಿಯ ಬಾಲ್ಯದಿಂದ ಐಕ್ಯವಾಗುವವರೆಗಿನ ಜೀವನ; ಅದು ಒಂದು ರೀತಿ ಹತ್ತಿ ಬೀಜದಿಂದ ಹತ್ತಿಯವರೆಗಿನ ಕಠಿಣ ಪಯಣದಂತೆ.

ಹತ್ತಿ ಬಿತ್ತನೆ ಬಹುಶಃ ಉತ್ತರ ಕರ್ನಾಟಕದ ಜನರಿಗೆ-ರೈತರಿಗೆ ಚೆನ್ನಾಗಿ ಗೊತ್ತಿರುತ್ತೆ. ಹತ್ತಿ ಕೈ ಹಿಡಿಯುತ್ತೆ ನಿಜ ಆದರೆ ಹತ್ತಿ ಬೀಜ ಬಿತ್ತನೆಯಿಂದ ಮೊಳಕೆಯೊಡೆದು ಗಿಡವಾಗಿ, ಬೆಳೆದು ಹೂವಾಗಿ, ಹೂವಿನಿಂದ ಕಾಯಾಗಿ, ಕಾಯಿಯಿಂದ ಹತ್ತಿಯಾಗುವ ಪ್ರಕ್ರಿಯೆ ಏನಿದೆ ಅದು ಅಷ್ಟೇ ಕಷ್ಟದ, ಅಷ್ಟೇ ಸೂಕ್ಷ್ಮದ, ಅಷ್ಟೇ ಶ್ರದ್ಧೆಯ, ಅಷ್ಟೇ ಶಿಸ್ತಿನ ಪ್ರಕ್ರಿಯೆ; ಅಂತಹ ಹತ್ತಿ ಬೆಳೆಯಂತಹ ಅಕ್ಕಮಹಾದೇವಿ ಎಂಬ ಸಾಧಕಿ, ಚಿಂತಕಿ, ಸುಧಾರಕಿ, ಅಪ್ಪಟ ಮನುಷ್ಯಳೊಬ್ಬಳು ನಮಗೆ ಈ ಕಾದಂಬರಿ ಮೂಲಕ ಸಿಕ್ಕಿದಳು.

ಬೆತ್ತಲೆಯಾಗಿ ಭೂಮಿಗೆ ಬಂದ (ಪ್ರತಿ ಮಗುವಿನ ಹಾಗೆ) ಅಕ್ಕನೆಂಬ ಜೀವ, ಅಲ್ಪಸ್ವಲ್ಪ ಬಟ್ಟೆ, ಅತೀವ ಅಕ್ಕರೆ, ಹತ್ತಿಯ ಬೀಜಕ್ಕೆ ಬೇಕಾಗುವ ಫಲವತ್ತಾದ ನೆಲದಂತೆ, ಪೂರಕವಾದ ಬಾಲ್ಯದ ಮನೆಯ ವಾತಾವರಣ- ಇವೆಲ್ಲಾ ಸಿಕ್ಕಿ, ಅಲ್ಲಿಂದ ಮೈಕೈ ತುಂಬಿಕೊಂಡು ಎಲ್ಲವನ್ನೂ ಕೂಡಿಕೊಂಡು, ಕಂಡದೆಲ್ಲ ಗ್ರಹಿಸಿಕೊಂಡು, ಅರಮನೆ ಸೇರಿ, ಸಿರಿಸಿಂಗಾರ ನೋಡಿ, ಇದು ಹತ್ತಿ ಹೂವಿನ ರೀತಿ ಅಂದುಕೊಂಡು, ಅಲ್ಲಿಂದ ಎಲ್ಲವನ್ನೂ ಕಳಚಿ, ತನ್ನದಲ್ಲದ ಬಟ್ಟೆಯನ್ನೂ ಕಳಚಿಟ್ಟು, ಪ್ರಕೃತಿದತ್ತವಾದ ಸ್ರಾವಕ್ಕಾಗುವಷ್ಟು ಬಟ್ಟೆ ಮೈಮೇಲಿಟ್ಟುಕೊಂಡು ಹಗುರಾಗುತ್ತಾ, ಆಗುತ್ತಾ ಅಕ್ಕ ನಿಜಕ್ಕೂ ಹತ್ತಿಯಂತಾಗಿದ್ದು; ಹತ್ತಿ ಬಿತ್ತನೆಯ ಪ್ರಾಕೃತಿಕ ರೀತಿಗೆ ಅಕ್ಕ ಬದಲಾದ ರೀತಿ ಹೋಲಿಕೆಯಿದೆ ಅಂತ ನನಗನ್ನಿಸಿತು.

ತನ್ನದೆಲ್ಲವನ್ನು ಕಳಚಿಕೊಂಡು, ತನ್ನದಲ್ಲದ್ದನ್ನೂ ಕಳಚಿಕೊಂಡು ಹಗುರವಾದ ಹಂತದಲ್ಲಿ ತನ್ನನ್ನು ಪೊರೆದ, ಪ್ರೀತಿಸಿದ, ನಿಂದಿಸಿದ, ಆದರಿಸಿದ, ಒರೆಗೆ ಹಟ್ಟಿದ ಜಗತ್ತಿಗೆ, ಮುಂದಿನ ಪೀಳಿಗೆಗೆ ಅಕ್ಕ ಕೊಟ್ಟಿದ್ದು ಹತ್ತಿಯಂತೆ ಅಪ್ಪಿಕೊಳ್ಳಲು ಯೋಗ್ಯವಾದ ಜೀವನ ಸಾರವನ್ನು.

ಇಂತಹದ್ದೊಂದು ದಿಟ್ಟ ಹೆಜ್ಜೆ ಇಟ್ಟ ಕಾಲಘಟ್ಟ ಯಾವುದೆಂದರೆ, ಹೆಣ್ಣು ಮೈತುಂಬ ಬಟ್ಟೆ ಹೊದ್ದು ಮನೆವಾರ್ತೆಗಷ್ಟೇ ಸೀಮಿತವಾಗಿದ್ದ ಸಮಯವದು. ಇಂತಹ ಅಕ್ಕ ಸಾವಿತ್ರಿಗೂ ಆದರ್ಶವೆನ್ನುವುದರಲ್ಲಿ ಆಶ್ಚರ್ಯವಿಲ್ಲ. ಜಿಜ್ಞಾಸೆಯೆಂದರೆ ಆಕೆ ಯಾರಿಗೆ ಆದರ್ಶ? ಹೆಣ್ಣು ಸಂತತಿಗಾ, ಗಂಡುಮಕ್ಕಳಿಗಾ, ಇಲ್ಲ ಇಡೀ ಮಾನವ ಕುಲಕ್ಕಾ?

“ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ!”

ಎಂದು ದೇಹದೊಂದಿಗೇ ನಡೆಯುವ, ನೆರಳಿನಿಂದ ಹಿಡಿದು ಉಸಿರಿರುವ ತನಕವೂ ಮಿಡಿಯುವ ಮನಸ್ಸನ್ನು ಮಾಯೆಯೆಂದು, ಎಲ್ಲವನ್ನು ಗೆಲ್ಲಬೇಕಿರುವುದು ಒಂದು ದೃಢತೆ, ಶ್ರದ್ಧೆ ಮತ್ತು ಶಿಸ್ತು ಎಂದು, ಎಲ್ಲಿಯವರೆಗೆ ಮನುಷ್ಯ ಇವುಗಳನ್ನು ಸಾಧಿಸುವುದಿಲ್ಲವೊ ಅಲ್ಲಿಯವರೆಗೂ ಎಲ್ಲವೂ ಮಾಯೆಯಂತೆಯೇ ಕಾಡುತ್ತದೆ ಎಂಬರ್ಥದಲ್ಲಿ ಅಕ್ಕ ಅಂದ ಮಾತು 12ನೇ ಶತಮಾನದಿಂದ ಇಂದಿನವರೆಗೂ ಪ್ರಸ್ತುತವಾಗಿದೆ. ಬಹುಶಃ ಮುಂದೆಯೂ ಹಾಗೇ ಇರುತ್ತದೆ.

ಆಕೆ ಹೇಳಿದ ವಿಚಾರಗಳಾದ ಸಕಲರ ಮೇಲೂ ಸಮಾನ ಪ್ರೀತಿ, ಗೌರವ, ಆದರ, ಮಾನವ ಸಂಬಂಧ, ಸ್ನೇಹ, ಜೀವಪರತೆ, ಕ್ರೌರ್ಯವನ್ನು ಮೀರಿದ ಬದುಕು, ಸಮಾನತೆ, ಹೆಣ್ಣು ಗಂಡಿನ ಸಮಾನ ಹಕ್ಕು, ಆತ್ಮ ಶುದ್ಧಿ, ಕಟ್ಟುಪಾಡು ಹೇರದ ಬದುಕು ಇವೆಲ್ಲವನ್ನೂ ಆಕೆ ಸ್ವತಃ ಬಯಸಿ ಅನುಭವಿಸಿ ಹೇಳಿದ್ದನ್ನು ಕೆಲವರು ಮಹಿಳಾವಾದವೆಂದು ಕರೆಯುತ್ತಾರಾದರೂ ಅದನ್ನು ಮಾತವತಾವಾದವೆನ್ನುವುದೇ ಹೆಚ್ಚು ಸೂಕ್ತ. ಹಾಗಾಗಿ ಅಕ್ಕ ಯಾರಿಗೆ ಆದರ್ಶ ಅನ್ನುವುದಕ್ಕೆ ನನ್ನ ಮಟ್ಟಿಗೆ ಆಕೆ ಮನುಕುಲಕ್ಕೆ ಆದರ್ಶ.

ಬಹುಶಃ ಅಕ್ಕ ಆಗ ಸಹಜ ಜೀವನವನ್ನು, ಕಟ್ಟಳೆಯನ್ನು ಮೀರಿದ ಜ್ಞಾನದ ಆಗರವನ್ನು ಹುಡುಕಿ ಹೊರಟಾಗ ಆಕೆಗಿದ್ದದ್ದು ಒಂದೊತ್ತಿನ ಊಟ ಮತ್ತು ಕತ್ತಲಾದಾಗ ಕಣ್ಣುಮುಚ್ಚಲೊಂದು ಜಾಗದ ಅವಶ್ಯಕತೆ ಅಷ್ಟೇ. ಕಾಲ್ನಡಿಗೆಯಲ್ಲೇ ಮಲೆನಾಡಿನ ಈ ತುದಿಯ ಸೀಮೆಯಿಂದ ಕಲ್ಯಾಣಕ್ಕೆ ಹೋಗಿ ಅಲ್ಲಿಂದ ಶ್ರೀಶೈಲದ ಹಾದಿಯಲ್ಲಿ ನಡೆದು ಕದಳಿಯವರೆಗಿನ ಆಕೆಯ ಪಯಣದಲ್ಲಿ ಅಕ್ಕ ಪಡೆದಿದ್ದು ಅನುಭವದ ಬೆಟ್ಟವನ್ನು!

ಕಾದಂಬರಿಯ ಪ್ರತಿ ಪ್ಯಾರಾ, ಪ್ರತಿ ಪುಟ, ಪ್ರತಿ ಅಧ್ಯಾಯವನ್ನು ಓದುವಾಗಲೂ ನನ್ನ ಮನಸ್ಸು ಸಮೀಕರಿಸಿಕೊಂಡಿದ್ದು ಇವತ್ತು ನಾವು ನಿಂತಿರುವ ಈ ಕಾಲವನ್ನು ಮತ್ತು ಈ ನೆಲದ ಇವತ್ತಿನ ಸಂಸ್ಕೃತಿಯನ್ನು.

ಇವತ್ತಿನ ಜನರ ವೇಗದ ಬದುಕು ಮತ್ತು ಮುಂದುವರಿದ ಪರಿಸ್ಥಿತಿಯಲ್ಲಿ ಅಕ್ಕನೇನಾದರೂ ಇದ್ದಿದ್ದರೆ ಆಕೆಯ ಆ ನಿರ್ಧಾರ ಯಾವ ರೀತಿ ಇರುತ್ತಿತ್ತು? ಸಮಾಜ ಆಕೆಯನ್ನು ಹೇಗೆ ನಡೆಸಿಕೊಳ್ಳುತ್ತಿತ್ತು? ಅನ್ನುವುದು ನನ್ನ ಬಹುವಾಗಿ ಕಾಡಿದ್ದು. ಬಹುಶಃ ಆಕೆಗೆ ಹೆಜ್ಜೆಗೊಬ್ಬ ಕಾಮುಕ ಸಿಗುತ್ತಿದ್ದನೇನೋ! ಬಯಲಲ್ಲಿ ಮಲಗುವುದು ಹಾಗಿರಲಿ, ಹೆಣ್ಣುಮಕ್ಕಳಿಗೆ ನೀರು, ಅನ್ನ, ಉಳಿಯುವ ತಾಣವೇ ದೂರದ ಮಾತು. ಮನೆಯೊಳಗೆ ಕರೆಯುವ ಜನರನ್ನು ನಂಬದಿರುವಷ್ಟು ಅಪನಂಬಿಕೆ, ಕ್ರೌರ್ಯ, ಹಿಂಸೆ, ಆತಂಕದ ವಾತಾವರಣ ಈಗ ನಮ್ಮ ಮುಂದೆ ಸೃಷ್ಟಿಯಾಗಿಬಿಟ್ಟಿದೆ.

ಎಲ್ಲವನ್ನು ಕಿತ್ತೆಸೆದು ಬಂಧನಗಳನ್ನು ಮೀರಿ ಸಹಜ ಬದುಕಿನ ಗುರಿಯನ್ನು ಅರಸಿಹೊರಟ ಅಕ್ಕ ಅವತ್ತಿನ ಕಾಲಕ್ಕೆ ಸ್ತ್ರೀ ಸಮಾನತೆಯನ್ನು ಮಾತನಾಡಿದವಳು ಮತ್ತು ಬದುಕಿದವಳು. ಈ ವಿಚಾರವಾಗಿ ನನಗೆ ಗಮನ ಸೆಳೆದದ್ದು ಅಕ್ಕ ಮೊದಲ ಬಾರಿಗೆ ಕಲ್ಯಾಣಕ್ಕೆ ಕಾಲಿಟ್ಟಾಗ ಆಕೆಯ ಆತ್ಮಶುದ್ಧಿ-ಚಿತ್ತಶುದ್ಧಿ ಪರೀಕ್ಷೆ ನಡೆದದ್ದು. ಅಕ್ಕ ಮೊದಲ ದಿನವೇ ತನ್ನತನವನ್ನು ಸಾಬೀತುಪಡಿಸುವುದರ ಜೊತೆಗೆ ಅಲ್ಲಮಪ್ರಭು, ಬಸವಣ್ಣನಂತಹ ಹಿರಿಯರು ಕೂತಿದ್ದ ಸಭೆಯಲ್ಲಿ “ನನಗೆ ಯಾಕೆ ಈ ಪರೀಕ್ಷೆ? ನನ್ನಂತೆ ಇಲ್ಲಿ ಬಂದ ಎಲ್ಲ ಹೆಣ್ಣುಮಕ್ಕಳಿಗೂ ಈ ಪರೀಕ್ಷೆ ನಡೆದಿದೆಯೇ?” ಅನ್ನುವ ಪ್ರಶ್ನೆ ಕೇಳುತ್ತಾಳೆ. ಪ್ರಶ್ನಿಸುವುದನ್ನು ಮಾತು ಕಲಿತಾಗಿನಿಂದ ಬಂದ ಹಕ್ಕೆಂದು ಭಾವಿಸಿದ್ದ ಅಕ್ಕನ ನಿಲುವು ಆಕೆಯ ಮಾತು-ವರ್ತನೆಗಳಲ್ಲಿ ಎದ್ದು ಕಾಣುತ್ತದೆ.

ಸೋಜಿಗವೆಂದರೆ 21ನೇ ಶತಮಾನದಲ್ಲಿ, ಇವತ್ತಿಗೂ ನಾವು ಸ್ತ್ರೀ ಸಮಾನತೆಯ ವಿಚಾರವನ್ನು ಮಾತನಾಡುತ್ತಲೇ ಇದ್ದೇವೆ. ಆ ನಿಟ್ಟಿನಲ್ಲಿ ಇವತ್ತು ನಮ್ಮ ನಡುವಿರುವುದು ಕೋಟ್ಯಂತರ ಅಕ್ಕಮಹಾದೇವಿಯಂತಹ ಹೆಣ್ಣುಮಕ್ಕಳು. ಆದರೆ, ಆಡಳಿತವನ್ನು, ಪ್ರಭುತ್ವಗಳ ದುರಾಡಳಿತವನ್ನು, ತಪ್ಪುಗಳನ್ನು, ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸುವವರನ್ನು ಇವತ್ತಿನ ನಮ್ಮ ದೇಶದ-ಸಮಾಜದ ಒಂದು ವರ್ಗ ದೇಶದ್ರೋಹಿಗಳಂತೆ ಕಾಣುತ್ತದೆ!

ಕಾದಂಬರಿಯಲ್ಲಿ ಬರುವ ಅಕ್ಕನ ಪ್ರಾಣಸ್ನೇಹಿತೆ, ಮುಟ್ಟಿದರೆ ಸಿಡಿದೇಳುವ ಸಿಂಹಿಣಿಯಂಥ, ಕುರುಬರ ಮನೆಯ ಚಂದ್ರಿಯಂತಹ ಗುಂಡಿಗೆಯ ಹೆಣ್ಣುಮಕ್ಕಳು ಇವತ್ತಿಗೂ ನಮ್ಮ ನಡುವಿದ್ದಾರೆ. ಆ ಚಂದ್ರಿ ಕೊನೆಗೊಂದು ದಿನ ಸಂಸಾರ ಸಾಗರದಲ್ಲಿ ಮುಳುಗಿ, ಸಮಾಜ ತಲೆ ಮೇಲೆ ಹೊರಸಿದ ಆದರ್ಶದ ಬದುಕಿನ ಭಾರ ತಡೆಯಲಾರದೆ ಕೊನೆಯಾಗುವಂತೆ ನಮ್ಮ ನಡುವಿರುವ ಅದೆಷ್ಟೋ ಮಂದಿಯ ಸಿಂಹಿಣಿಯರದ್ದು ಕೂಡ ಇವತ್ತಿಗೂ ಅದೇ ಹಾಡು ಅದೇ ಪಾಡು!

ಅವತ್ತಿನ ಎಕ್ಕಮಜ್ಜಿ, ಜಟ್ಟಮ್ಮ, ಸಕ್ಕಮ್ಮ, ರುಕ್ಕಮ್ಮನಂತೆಯೆ ಮನೆ ಸಂಸಾರದ ನೊಗ ಹೊರಲಾಗದೆ ಧಿಕ್ಕರಿಸಿ ತೊರೆದು ಬೀದಿಗೆ ಬಿದ್ದು ಉಳಿಯಲು ಆಗಿನಂತೆ ಕಟ್ಟೆ, ಗುಡಿ, ಗೋಪುರಗಳ ಆಶ್ರಯವೂ ಇಲ್ಲದೆ ಇತ್ತ ಆರ್ಥಿಕ ದೃಢತೆಯೂ ಇಲ್ಲದೆ ಬದುಕು ಮೂರಾಬಟ್ಟೆಯಾಗಿಸಿಕೊಂಡ ಇವತ್ತಿನ ಎಕ್ಕಮ್ಮಗಳು ಲಕ್ಷಾಂತರ ಮಂದಿ ನಮ್ಮ ನಡುವಿದ್ದಾರೆ. ಅವತ್ತು ಸಮಾಜ ಅವರನ್ನು ನೋಡುತ್ತಿದ್ದ ಪರಿಗೂ ಇವತ್ತು ಅವರನ್ನು ನಡೆಸಿಕೊಳ್ಳುವ ಪರಿಗೂ ಜಾಸ್ತಿ ವ್ಯತ್ಯಾಸವೇನಿಲ್ಲ. ಇವತ್ತಿಗೂ ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಹೇಳುವ ಪಾಠವೊಂದೇ, ನೀನು ಅವಳೊಡನೆ ಸೇರಬೇಡ, ಅವಳು ಸರಿಯಿಲ್ಲ!

ಈ ಕಾದಂಬರಿಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಅಕ್ಕಮಹಾದೇವಿ ಹುಟ್ಟಿದ ಮತ್ತು ಬೆಳೆದ ಮನೆಯ ಪರಿಸರ. ಮಹಾದೇವಿ ಅಕ್ಕನಾಗುವುದಕ್ಕೆಂದೇ ಹುಟ್ಟಿದವಳು ಎನ್ನುವ ವಾದವನ್ನು ಹಾಗೇ ಸ್ವೀಕರಿಸಲು ನನ್ನಿಂದ ಸಾಧ್ಯವಿಲ್ಲ. ಆಕೆಯ ಕುತೂಹಲಕ್ಕೆ, ಪ್ರಶ್ನೆ ಮಾಡುವ, ಆ ಮೂಲಕ ತಿಳಿದುಕೊಳ್ಳುವ ಆಕೆಯ ಪ್ರಯತ್ನಕ್ಕೆ ಎಲ್ಲೂ ಆ ವಾತಾವರಣ ಕಡಿವಾಣ ಹಾಕಲಿಲ್ಲ. ಸಹಜವಾಗಿ ಸಮಾಜದ ಉಳಿದ ಹೆಣ್ಣುಮಕ್ಕಳಂತೆ ತನ್ನ ಮಗಳಿಲ್ಲವಲ್ಲ ಎಂದು ಅಕ್ಕಮಹಾದೇವಿಯ ತಂದೆ ದುಗುಡಗೊಂಡಿದ್ದು ಬಿಟ್ಟರೆ ಆಕೆಯ ಕುತೂಹಲದ ಸ್ವಭಾವವನ್ನು ಸಹಜವೆಂಬಂತೆ ಸ್ವೀಕರಿಸಿ ಪೋಷಿಸಲಾಗಿತ್ತು. ಇವತ್ತಿಗೂ ಬಹುತೇಕ ಹೆಣ್ಣುಮಕ್ಕಳು ಇಂತಹ ಕುತೂಹಲದೊಂದಿಗೇ ಬಾಲ್ಯವನ್ನು ಇದಿರುಗೊಳ್ಳುತ್ತಾರೆ; ಆದರೆ ’ನಿನಗ್ಯಾಕಿದೆಲ್ಲ? ನಿನ್ನ ಕೆಲಸ ನೀನು ನೋಡಿಕೊ’ ಅನ್ನುವ ನಿಷಿದ್ಧದ ತೆರೆ ಎಳೆದು ಬಹುತೇಕರನ್ನು ಬಾಯಿ ಮುಚ್ಚಿಸಲಾಗುತ್ತದೆ. ಹಾಗಾಗಿ ಯಾವುದೇ ಡೊಂಕನ್ನು ಸರಿಪಡಿಸಲು ನಾವಿರುವ ಪರಿಸರ ಮತ್ತು ವಾತಾವರಣವೂ ಮುಖ್ಯವಾಗುತ್ತದೆ.

ಹೆಜ್ಜೆಹೆಜ್ಜೆಗೂ ಪರೀಕ್ಷೆಗೊಳಪಟ್ಟ ಮಹಾದೇವಿಯಕ್ಕನ ಬದುಕಿನ ಜೊತೆಜೊತೆಗೇ ಪುಣ್ಯ ಸ್ತ್ರೀಯರು, ಸೂಳೆಯರು, ಮನೆಬಿಟ್ಟು ಸಾಧನೆಯ ಹಾದಿ ಹಿಡಿದ ಒಂಟಿ ಹೆಣ್ಣುಮಕ್ಕಳು, ಸಂಸಾರ ಸಾಗರದಲ್ಲಿದ್ದುಕೊಂಡೇ ಶರಣತ್ವವನ್ನು ಬದುಕಿದ ಹಲವಾರು ಹೆಣ್ಣುಮಕ್ಕಳ ಕಥೆ ಹೇಳುತ್ತದೆ ಕಾದಂಬರಿ. ಬಸವಣ್ಣನವರ ಇಬ್ಬರು ಹೆಂಡತಿಯರ ಹಾಗೂ ಹಿರಿಯಕ್ಕನ ಬದುಕಿನೆಡೆಗಿನ ಜಿಜ್ಞಾಸೆ, ತೊಳಲಾಟ, ಭಾವುಕತೆ ಮತ್ತು ಗೊಂದಲಗಳನ್ನು ಕೂಡ ಕಾದಂಬರಿ ಚರ್ಚಿಸುತ್ತದೆ.

ಇವೆಲ್ಲವನ್ನೂ ನೋಡಿದಾಗ ಆಗಿನಿಂದಲೂ ಬದಲಾದದ್ದು ಶತಮಾನಗಳು ಮಾತ್ರ; ಕಾಲದೊಂದಿಗೆ ಹೆಜ್ಜೆ ಹಾಕಿದ ಈ ಸಮಾಜದ ಕಟ್ಟಳೆಗಳು ಅನುಕೂಲಕ್ಕೆ ತಕ್ಕಂತೆ ಅಲ್ಲಲ್ಲಿ ಮಾರ್ಪಾಡು ಹೊಂದಿದರೂ ಮೂಲಸ್ವರೂಪವನ್ನು ಇನ್ನೂ ಹಾಗೇ ಉಳಿಸಿಕೊಂಡಿವೆ.

“ಧರ್ಮವೆಂದರೆ ದೇವಲೋಕದತ್ತ ಮುಖ ಮಾಡುವುದಲ್ಲ, ಮನುಷ್ಯ ಲೋಕವನ್ನು ಹಸನುಗೊಳಿಸುವುದು” ಅನ್ನುವ ಮಾತು ಈ ಕಾದಂಬರಿಯಲ್ಲಿ ಬರುತ್ತೆ. ಆವತ್ತು ಅಕ್ಕ ’ಸಹಜತೆಯೇ ಬದುಕನ್ನು ಹಸನುಗೊಳಿಸುವುದು’ ಅನ್ನುವುದನ್ನು ಹೇಳಲು ಕಷ್ಟ ಕೋಟಲೆಗಳನ್ನು ಅನುಭವಿಸಿದಳು. ಇವತ್ತಿನ ದಿನದಲ್ಲಿ ನಾವಿದೇ ಮಾನವ ಧರ್ಮವನ್ನು ಪುನರುಚ್ಚರಿಸಿದರೆ ಎಲ್ಲೆಲ್ಲೂ ದ್ವೇಷವೇ ಉಡುಗೊರೆಯಾಗಿ ಸಿಗುತ್ತದೆ. ಬಹುಶಃ ಈ ತಾಕಲಾಟ ಶತಶತಮಾನಗಳಿಂದಲೂ ನಿರಂತರ ಜಾರಿಯಲ್ಲಿದ್ದು ನಡುನಡುವೆ ಕೊಂಚ ಮಾರ್ಪಾಟಾಗಿ ಮತ್ತೆ ಕಚ್ಚಾಟಕ್ಕೆ ಹಿಂತಿರುಗಿ ಪ್ರಕೃತಿಯೊಂದಿಗೇ ಹುಟ್ಟಿ ಪ್ರಕೃತಿಯೊಂದಿಗೇ ಕೊನೆಗೊಳ್ಳುವ ತರ್ಕವೇನೊ!

“ಎಲ್ಲ ಫಂಥಕ್ಕಿಂತ ಹೆಣ್ಣು ಪಂಥವೇ ಹಿರಿದು”, “ಹೆಣ್ಣು ಮಾಡುವ ಎಲ್ಲವೂ ಕಾಯಕ” ಎನ್ನುವ ಚರ್ಚೆ ಆಗಿನ ಅನುಭವ ಮಂಟಪದಲ್ಲೂ ನಡೆಯಿತು. ನಾವೀಗಲೂ ಹೋದಬಂದಲ್ಲಿ ಇದೇ ಚರ್ಚೆ ಮಾಡುತ್ತೇವಾದರೂ ಬಹುಪಾಲು ಹೆಣ್ಣುಮಕ್ಕಳಿಗೆ ಘನತೆಯ ಬದುಕು ಇಂದಿಗೂ ಮರೀಚಿಕೆಯಾಗಿದೆ! ೭೬೨ ಪುಟದ ಈ ಪುಸ್ತಕ ಸ್ತ್ರೀವಾದವೇ ಸಮಾಜವಾದವೆನ್ನುವಂತೆ ಅಥವಾ ಸಮಾಜವಾದವನ್ನು ಮಾತನಾಡಲು ಸ್ತ್ರೀವಾದದ ಅಗತ್ಯವೂ ಇದೆ ಎನ್ನುವುದನ್ನು ಇನ್ನಷ್ಟು ತೀವ್ರವಾಗಿ ಹೇಳುತ್ತದೆ. ಸಮಾಜದ ಎಲ್ಲ ಕಟ್ಟಳೆಗಳನ್ನು ಹುಟ್ಟುತ್ತಲೇ ಹೊತ್ತುಕೊಂಡು ಜೊತೆ ಜೊತೆಗೇ ಸಂತೋಷವನ್ನು, ಸಾರ್ಥಕತೆಯನ್ನು ಹುಡುಕುವ ಹೆಣ್ಣುಮಕ್ಕಳಿಗಿಂತ ಗಂಡಸರು ಇದರ ಸಾರವನ್ನು ಅರಿತು, ಪೋಷಿಸಿ ಸಮಸಮಾಜದ ಅರಿವಿನ ದೀವಿಗೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ.

ಪಲ್ಲವಿ ಇಡೂರು
ಲೇಖಕಿ ಮತ್ತು ರಾಜಕೀಯ ವಿಮರ್ಶಕರು. ’ಜೊಲಾಂಟಾ’ (ಇರೇನಾ ಸ್ಲೆಂಡರ್ ಜೀವನ ಕಥನ) ಮತ್ತು ದೇಶ ವಿಭಜನೆಯ ಬಗ್ಗೆ ’ಆಗಸ್ಟ್ ಮಾಸದ ರಾಜಕೀಯ ಕಥನ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...