Homeನ್ಯಾಯ ಪಥ’ಬೆಳಗಿನೊಳಗು ಮಹದೇವಿಯಕ್ಕ’: ಹತ್ತಿ ಬೀಜದ ಬಿತ್ತನೆಯಿಂದ ಹತ್ತಿ ಅರಳುವವರೆಗಿನ ಅಕ್ಕನ ಬದುಕು

’ಬೆಳಗಿನೊಳಗು ಮಹದೇವಿಯಕ್ಕ’: ಹತ್ತಿ ಬೀಜದ ಬಿತ್ತನೆಯಿಂದ ಹತ್ತಿ ಅರಳುವವರೆಗಿನ ಅಕ್ಕನ ಬದುಕು

- Advertisement -
- Advertisement -

ಎಚ್.ಎಸ್ ಅನುಪಮಾ ಅವರ ’ಬೆಳಗಿನೊಳಗು ಮಹದೇವಿಯಕ್ಕ’ ಕಾದಂಬರಿ ಓದಿ ಮುಗಿಸಿದ ಮೇಲೆ ಹೆಚ್ಚು ಕಾಡಿದ್ದು ಅಕ್ಕಮಹಾದೇವಿಯ ಬಾಲ್ಯದಿಂದ ಐಕ್ಯವಾಗುವವರೆಗಿನ ಜೀವನ; ಅದು ಒಂದು ರೀತಿ ಹತ್ತಿ ಬೀಜದಿಂದ ಹತ್ತಿಯವರೆಗಿನ ಕಠಿಣ ಪಯಣದಂತೆ.

ಹತ್ತಿ ಬಿತ್ತನೆ ಬಹುಶಃ ಉತ್ತರ ಕರ್ನಾಟಕದ ಜನರಿಗೆ-ರೈತರಿಗೆ ಚೆನ್ನಾಗಿ ಗೊತ್ತಿರುತ್ತೆ. ಹತ್ತಿ ಕೈ ಹಿಡಿಯುತ್ತೆ ನಿಜ ಆದರೆ ಹತ್ತಿ ಬೀಜ ಬಿತ್ತನೆಯಿಂದ ಮೊಳಕೆಯೊಡೆದು ಗಿಡವಾಗಿ, ಬೆಳೆದು ಹೂವಾಗಿ, ಹೂವಿನಿಂದ ಕಾಯಾಗಿ, ಕಾಯಿಯಿಂದ ಹತ್ತಿಯಾಗುವ ಪ್ರಕ್ರಿಯೆ ಏನಿದೆ ಅದು ಅಷ್ಟೇ ಕಷ್ಟದ, ಅಷ್ಟೇ ಸೂಕ್ಷ್ಮದ, ಅಷ್ಟೇ ಶ್ರದ್ಧೆಯ, ಅಷ್ಟೇ ಶಿಸ್ತಿನ ಪ್ರಕ್ರಿಯೆ; ಅಂತಹ ಹತ್ತಿ ಬೆಳೆಯಂತಹ ಅಕ್ಕಮಹಾದೇವಿ ಎಂಬ ಸಾಧಕಿ, ಚಿಂತಕಿ, ಸುಧಾರಕಿ, ಅಪ್ಪಟ ಮನುಷ್ಯಳೊಬ್ಬಳು ನಮಗೆ ಈ ಕಾದಂಬರಿ ಮೂಲಕ ಸಿಕ್ಕಿದಳು.

ಬೆತ್ತಲೆಯಾಗಿ ಭೂಮಿಗೆ ಬಂದ (ಪ್ರತಿ ಮಗುವಿನ ಹಾಗೆ) ಅಕ್ಕನೆಂಬ ಜೀವ, ಅಲ್ಪಸ್ವಲ್ಪ ಬಟ್ಟೆ, ಅತೀವ ಅಕ್ಕರೆ, ಹತ್ತಿಯ ಬೀಜಕ್ಕೆ ಬೇಕಾಗುವ ಫಲವತ್ತಾದ ನೆಲದಂತೆ, ಪೂರಕವಾದ ಬಾಲ್ಯದ ಮನೆಯ ವಾತಾವರಣ- ಇವೆಲ್ಲಾ ಸಿಕ್ಕಿ, ಅಲ್ಲಿಂದ ಮೈಕೈ ತುಂಬಿಕೊಂಡು ಎಲ್ಲವನ್ನೂ ಕೂಡಿಕೊಂಡು, ಕಂಡದೆಲ್ಲ ಗ್ರಹಿಸಿಕೊಂಡು, ಅರಮನೆ ಸೇರಿ, ಸಿರಿಸಿಂಗಾರ ನೋಡಿ, ಇದು ಹತ್ತಿ ಹೂವಿನ ರೀತಿ ಅಂದುಕೊಂಡು, ಅಲ್ಲಿಂದ ಎಲ್ಲವನ್ನೂ ಕಳಚಿ, ತನ್ನದಲ್ಲದ ಬಟ್ಟೆಯನ್ನೂ ಕಳಚಿಟ್ಟು, ಪ್ರಕೃತಿದತ್ತವಾದ ಸ್ರಾವಕ್ಕಾಗುವಷ್ಟು ಬಟ್ಟೆ ಮೈಮೇಲಿಟ್ಟುಕೊಂಡು ಹಗುರಾಗುತ್ತಾ, ಆಗುತ್ತಾ ಅಕ್ಕ ನಿಜಕ್ಕೂ ಹತ್ತಿಯಂತಾಗಿದ್ದು; ಹತ್ತಿ ಬಿತ್ತನೆಯ ಪ್ರಾಕೃತಿಕ ರೀತಿಗೆ ಅಕ್ಕ ಬದಲಾದ ರೀತಿ ಹೋಲಿಕೆಯಿದೆ ಅಂತ ನನಗನ್ನಿಸಿತು.

ತನ್ನದೆಲ್ಲವನ್ನು ಕಳಚಿಕೊಂಡು, ತನ್ನದಲ್ಲದ್ದನ್ನೂ ಕಳಚಿಕೊಂಡು ಹಗುರವಾದ ಹಂತದಲ್ಲಿ ತನ್ನನ್ನು ಪೊರೆದ, ಪ್ರೀತಿಸಿದ, ನಿಂದಿಸಿದ, ಆದರಿಸಿದ, ಒರೆಗೆ ಹಟ್ಟಿದ ಜಗತ್ತಿಗೆ, ಮುಂದಿನ ಪೀಳಿಗೆಗೆ ಅಕ್ಕ ಕೊಟ್ಟಿದ್ದು ಹತ್ತಿಯಂತೆ ಅಪ್ಪಿಕೊಳ್ಳಲು ಯೋಗ್ಯವಾದ ಜೀವನ ಸಾರವನ್ನು.

ಇಂತಹದ್ದೊಂದು ದಿಟ್ಟ ಹೆಜ್ಜೆ ಇಟ್ಟ ಕಾಲಘಟ್ಟ ಯಾವುದೆಂದರೆ, ಹೆಣ್ಣು ಮೈತುಂಬ ಬಟ್ಟೆ ಹೊದ್ದು ಮನೆವಾರ್ತೆಗಷ್ಟೇ ಸೀಮಿತವಾಗಿದ್ದ ಸಮಯವದು. ಇಂತಹ ಅಕ್ಕ ಸಾವಿತ್ರಿಗೂ ಆದರ್ಶವೆನ್ನುವುದರಲ್ಲಿ ಆಶ್ಚರ್ಯವಿಲ್ಲ. ಜಿಜ್ಞಾಸೆಯೆಂದರೆ ಆಕೆ ಯಾರಿಗೆ ಆದರ್ಶ? ಹೆಣ್ಣು ಸಂತತಿಗಾ, ಗಂಡುಮಕ್ಕಳಿಗಾ, ಇಲ್ಲ ಇಡೀ ಮಾನವ ಕುಲಕ್ಕಾ?

“ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ!”

ಎಂದು ದೇಹದೊಂದಿಗೇ ನಡೆಯುವ, ನೆರಳಿನಿಂದ ಹಿಡಿದು ಉಸಿರಿರುವ ತನಕವೂ ಮಿಡಿಯುವ ಮನಸ್ಸನ್ನು ಮಾಯೆಯೆಂದು, ಎಲ್ಲವನ್ನು ಗೆಲ್ಲಬೇಕಿರುವುದು ಒಂದು ದೃಢತೆ, ಶ್ರದ್ಧೆ ಮತ್ತು ಶಿಸ್ತು ಎಂದು, ಎಲ್ಲಿಯವರೆಗೆ ಮನುಷ್ಯ ಇವುಗಳನ್ನು ಸಾಧಿಸುವುದಿಲ್ಲವೊ ಅಲ್ಲಿಯವರೆಗೂ ಎಲ್ಲವೂ ಮಾಯೆಯಂತೆಯೇ ಕಾಡುತ್ತದೆ ಎಂಬರ್ಥದಲ್ಲಿ ಅಕ್ಕ ಅಂದ ಮಾತು 12ನೇ ಶತಮಾನದಿಂದ ಇಂದಿನವರೆಗೂ ಪ್ರಸ್ತುತವಾಗಿದೆ. ಬಹುಶಃ ಮುಂದೆಯೂ ಹಾಗೇ ಇರುತ್ತದೆ.

ಆಕೆ ಹೇಳಿದ ವಿಚಾರಗಳಾದ ಸಕಲರ ಮೇಲೂ ಸಮಾನ ಪ್ರೀತಿ, ಗೌರವ, ಆದರ, ಮಾನವ ಸಂಬಂಧ, ಸ್ನೇಹ, ಜೀವಪರತೆ, ಕ್ರೌರ್ಯವನ್ನು ಮೀರಿದ ಬದುಕು, ಸಮಾನತೆ, ಹೆಣ್ಣು ಗಂಡಿನ ಸಮಾನ ಹಕ್ಕು, ಆತ್ಮ ಶುದ್ಧಿ, ಕಟ್ಟುಪಾಡು ಹೇರದ ಬದುಕು ಇವೆಲ್ಲವನ್ನೂ ಆಕೆ ಸ್ವತಃ ಬಯಸಿ ಅನುಭವಿಸಿ ಹೇಳಿದ್ದನ್ನು ಕೆಲವರು ಮಹಿಳಾವಾದವೆಂದು ಕರೆಯುತ್ತಾರಾದರೂ ಅದನ್ನು ಮಾತವತಾವಾದವೆನ್ನುವುದೇ ಹೆಚ್ಚು ಸೂಕ್ತ. ಹಾಗಾಗಿ ಅಕ್ಕ ಯಾರಿಗೆ ಆದರ್ಶ ಅನ್ನುವುದಕ್ಕೆ ನನ್ನ ಮಟ್ಟಿಗೆ ಆಕೆ ಮನುಕುಲಕ್ಕೆ ಆದರ್ಶ.

ಬಹುಶಃ ಅಕ್ಕ ಆಗ ಸಹಜ ಜೀವನವನ್ನು, ಕಟ್ಟಳೆಯನ್ನು ಮೀರಿದ ಜ್ಞಾನದ ಆಗರವನ್ನು ಹುಡುಕಿ ಹೊರಟಾಗ ಆಕೆಗಿದ್ದದ್ದು ಒಂದೊತ್ತಿನ ಊಟ ಮತ್ತು ಕತ್ತಲಾದಾಗ ಕಣ್ಣುಮುಚ್ಚಲೊಂದು ಜಾಗದ ಅವಶ್ಯಕತೆ ಅಷ್ಟೇ. ಕಾಲ್ನಡಿಗೆಯಲ್ಲೇ ಮಲೆನಾಡಿನ ಈ ತುದಿಯ ಸೀಮೆಯಿಂದ ಕಲ್ಯಾಣಕ್ಕೆ ಹೋಗಿ ಅಲ್ಲಿಂದ ಶ್ರೀಶೈಲದ ಹಾದಿಯಲ್ಲಿ ನಡೆದು ಕದಳಿಯವರೆಗಿನ ಆಕೆಯ ಪಯಣದಲ್ಲಿ ಅಕ್ಕ ಪಡೆದಿದ್ದು ಅನುಭವದ ಬೆಟ್ಟವನ್ನು!

ಕಾದಂಬರಿಯ ಪ್ರತಿ ಪ್ಯಾರಾ, ಪ್ರತಿ ಪುಟ, ಪ್ರತಿ ಅಧ್ಯಾಯವನ್ನು ಓದುವಾಗಲೂ ನನ್ನ ಮನಸ್ಸು ಸಮೀಕರಿಸಿಕೊಂಡಿದ್ದು ಇವತ್ತು ನಾವು ನಿಂತಿರುವ ಈ ಕಾಲವನ್ನು ಮತ್ತು ಈ ನೆಲದ ಇವತ್ತಿನ ಸಂಸ್ಕೃತಿಯನ್ನು.

ಇವತ್ತಿನ ಜನರ ವೇಗದ ಬದುಕು ಮತ್ತು ಮುಂದುವರಿದ ಪರಿಸ್ಥಿತಿಯಲ್ಲಿ ಅಕ್ಕನೇನಾದರೂ ಇದ್ದಿದ್ದರೆ ಆಕೆಯ ಆ ನಿರ್ಧಾರ ಯಾವ ರೀತಿ ಇರುತ್ತಿತ್ತು? ಸಮಾಜ ಆಕೆಯನ್ನು ಹೇಗೆ ನಡೆಸಿಕೊಳ್ಳುತ್ತಿತ್ತು? ಅನ್ನುವುದು ನನ್ನ ಬಹುವಾಗಿ ಕಾಡಿದ್ದು. ಬಹುಶಃ ಆಕೆಗೆ ಹೆಜ್ಜೆಗೊಬ್ಬ ಕಾಮುಕ ಸಿಗುತ್ತಿದ್ದನೇನೋ! ಬಯಲಲ್ಲಿ ಮಲಗುವುದು ಹಾಗಿರಲಿ, ಹೆಣ್ಣುಮಕ್ಕಳಿಗೆ ನೀರು, ಅನ್ನ, ಉಳಿಯುವ ತಾಣವೇ ದೂರದ ಮಾತು. ಮನೆಯೊಳಗೆ ಕರೆಯುವ ಜನರನ್ನು ನಂಬದಿರುವಷ್ಟು ಅಪನಂಬಿಕೆ, ಕ್ರೌರ್ಯ, ಹಿಂಸೆ, ಆತಂಕದ ವಾತಾವರಣ ಈಗ ನಮ್ಮ ಮುಂದೆ ಸೃಷ್ಟಿಯಾಗಿಬಿಟ್ಟಿದೆ.

ಎಲ್ಲವನ್ನು ಕಿತ್ತೆಸೆದು ಬಂಧನಗಳನ್ನು ಮೀರಿ ಸಹಜ ಬದುಕಿನ ಗುರಿಯನ್ನು ಅರಸಿಹೊರಟ ಅಕ್ಕ ಅವತ್ತಿನ ಕಾಲಕ್ಕೆ ಸ್ತ್ರೀ ಸಮಾನತೆಯನ್ನು ಮಾತನಾಡಿದವಳು ಮತ್ತು ಬದುಕಿದವಳು. ಈ ವಿಚಾರವಾಗಿ ನನಗೆ ಗಮನ ಸೆಳೆದದ್ದು ಅಕ್ಕ ಮೊದಲ ಬಾರಿಗೆ ಕಲ್ಯಾಣಕ್ಕೆ ಕಾಲಿಟ್ಟಾಗ ಆಕೆಯ ಆತ್ಮಶುದ್ಧಿ-ಚಿತ್ತಶುದ್ಧಿ ಪರೀಕ್ಷೆ ನಡೆದದ್ದು. ಅಕ್ಕ ಮೊದಲ ದಿನವೇ ತನ್ನತನವನ್ನು ಸಾಬೀತುಪಡಿಸುವುದರ ಜೊತೆಗೆ ಅಲ್ಲಮಪ್ರಭು, ಬಸವಣ್ಣನಂತಹ ಹಿರಿಯರು ಕೂತಿದ್ದ ಸಭೆಯಲ್ಲಿ “ನನಗೆ ಯಾಕೆ ಈ ಪರೀಕ್ಷೆ? ನನ್ನಂತೆ ಇಲ್ಲಿ ಬಂದ ಎಲ್ಲ ಹೆಣ್ಣುಮಕ್ಕಳಿಗೂ ಈ ಪರೀಕ್ಷೆ ನಡೆದಿದೆಯೇ?” ಅನ್ನುವ ಪ್ರಶ್ನೆ ಕೇಳುತ್ತಾಳೆ. ಪ್ರಶ್ನಿಸುವುದನ್ನು ಮಾತು ಕಲಿತಾಗಿನಿಂದ ಬಂದ ಹಕ್ಕೆಂದು ಭಾವಿಸಿದ್ದ ಅಕ್ಕನ ನಿಲುವು ಆಕೆಯ ಮಾತು-ವರ್ತನೆಗಳಲ್ಲಿ ಎದ್ದು ಕಾಣುತ್ತದೆ.

ಸೋಜಿಗವೆಂದರೆ 21ನೇ ಶತಮಾನದಲ್ಲಿ, ಇವತ್ತಿಗೂ ನಾವು ಸ್ತ್ರೀ ಸಮಾನತೆಯ ವಿಚಾರವನ್ನು ಮಾತನಾಡುತ್ತಲೇ ಇದ್ದೇವೆ. ಆ ನಿಟ್ಟಿನಲ್ಲಿ ಇವತ್ತು ನಮ್ಮ ನಡುವಿರುವುದು ಕೋಟ್ಯಂತರ ಅಕ್ಕಮಹಾದೇವಿಯಂತಹ ಹೆಣ್ಣುಮಕ್ಕಳು. ಆದರೆ, ಆಡಳಿತವನ್ನು, ಪ್ರಭುತ್ವಗಳ ದುರಾಡಳಿತವನ್ನು, ತಪ್ಪುಗಳನ್ನು, ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸುವವರನ್ನು ಇವತ್ತಿನ ನಮ್ಮ ದೇಶದ-ಸಮಾಜದ ಒಂದು ವರ್ಗ ದೇಶದ್ರೋಹಿಗಳಂತೆ ಕಾಣುತ್ತದೆ!

ಕಾದಂಬರಿಯಲ್ಲಿ ಬರುವ ಅಕ್ಕನ ಪ್ರಾಣಸ್ನೇಹಿತೆ, ಮುಟ್ಟಿದರೆ ಸಿಡಿದೇಳುವ ಸಿಂಹಿಣಿಯಂಥ, ಕುರುಬರ ಮನೆಯ ಚಂದ್ರಿಯಂತಹ ಗುಂಡಿಗೆಯ ಹೆಣ್ಣುಮಕ್ಕಳು ಇವತ್ತಿಗೂ ನಮ್ಮ ನಡುವಿದ್ದಾರೆ. ಆ ಚಂದ್ರಿ ಕೊನೆಗೊಂದು ದಿನ ಸಂಸಾರ ಸಾಗರದಲ್ಲಿ ಮುಳುಗಿ, ಸಮಾಜ ತಲೆ ಮೇಲೆ ಹೊರಸಿದ ಆದರ್ಶದ ಬದುಕಿನ ಭಾರ ತಡೆಯಲಾರದೆ ಕೊನೆಯಾಗುವಂತೆ ನಮ್ಮ ನಡುವಿರುವ ಅದೆಷ್ಟೋ ಮಂದಿಯ ಸಿಂಹಿಣಿಯರದ್ದು ಕೂಡ ಇವತ್ತಿಗೂ ಅದೇ ಹಾಡು ಅದೇ ಪಾಡು!

ಅವತ್ತಿನ ಎಕ್ಕಮಜ್ಜಿ, ಜಟ್ಟಮ್ಮ, ಸಕ್ಕಮ್ಮ, ರುಕ್ಕಮ್ಮನಂತೆಯೆ ಮನೆ ಸಂಸಾರದ ನೊಗ ಹೊರಲಾಗದೆ ಧಿಕ್ಕರಿಸಿ ತೊರೆದು ಬೀದಿಗೆ ಬಿದ್ದು ಉಳಿಯಲು ಆಗಿನಂತೆ ಕಟ್ಟೆ, ಗುಡಿ, ಗೋಪುರಗಳ ಆಶ್ರಯವೂ ಇಲ್ಲದೆ ಇತ್ತ ಆರ್ಥಿಕ ದೃಢತೆಯೂ ಇಲ್ಲದೆ ಬದುಕು ಮೂರಾಬಟ್ಟೆಯಾಗಿಸಿಕೊಂಡ ಇವತ್ತಿನ ಎಕ್ಕಮ್ಮಗಳು ಲಕ್ಷಾಂತರ ಮಂದಿ ನಮ್ಮ ನಡುವಿದ್ದಾರೆ. ಅವತ್ತು ಸಮಾಜ ಅವರನ್ನು ನೋಡುತ್ತಿದ್ದ ಪರಿಗೂ ಇವತ್ತು ಅವರನ್ನು ನಡೆಸಿಕೊಳ್ಳುವ ಪರಿಗೂ ಜಾಸ್ತಿ ವ್ಯತ್ಯಾಸವೇನಿಲ್ಲ. ಇವತ್ತಿಗೂ ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಹೇಳುವ ಪಾಠವೊಂದೇ, ನೀನು ಅವಳೊಡನೆ ಸೇರಬೇಡ, ಅವಳು ಸರಿಯಿಲ್ಲ!

ಈ ಕಾದಂಬರಿಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಅಕ್ಕಮಹಾದೇವಿ ಹುಟ್ಟಿದ ಮತ್ತು ಬೆಳೆದ ಮನೆಯ ಪರಿಸರ. ಮಹಾದೇವಿ ಅಕ್ಕನಾಗುವುದಕ್ಕೆಂದೇ ಹುಟ್ಟಿದವಳು ಎನ್ನುವ ವಾದವನ್ನು ಹಾಗೇ ಸ್ವೀಕರಿಸಲು ನನ್ನಿಂದ ಸಾಧ್ಯವಿಲ್ಲ. ಆಕೆಯ ಕುತೂಹಲಕ್ಕೆ, ಪ್ರಶ್ನೆ ಮಾಡುವ, ಆ ಮೂಲಕ ತಿಳಿದುಕೊಳ್ಳುವ ಆಕೆಯ ಪ್ರಯತ್ನಕ್ಕೆ ಎಲ್ಲೂ ಆ ವಾತಾವರಣ ಕಡಿವಾಣ ಹಾಕಲಿಲ್ಲ. ಸಹಜವಾಗಿ ಸಮಾಜದ ಉಳಿದ ಹೆಣ್ಣುಮಕ್ಕಳಂತೆ ತನ್ನ ಮಗಳಿಲ್ಲವಲ್ಲ ಎಂದು ಅಕ್ಕಮಹಾದೇವಿಯ ತಂದೆ ದುಗುಡಗೊಂಡಿದ್ದು ಬಿಟ್ಟರೆ ಆಕೆಯ ಕುತೂಹಲದ ಸ್ವಭಾವವನ್ನು ಸಹಜವೆಂಬಂತೆ ಸ್ವೀಕರಿಸಿ ಪೋಷಿಸಲಾಗಿತ್ತು. ಇವತ್ತಿಗೂ ಬಹುತೇಕ ಹೆಣ್ಣುಮಕ್ಕಳು ಇಂತಹ ಕುತೂಹಲದೊಂದಿಗೇ ಬಾಲ್ಯವನ್ನು ಇದಿರುಗೊಳ್ಳುತ್ತಾರೆ; ಆದರೆ ’ನಿನಗ್ಯಾಕಿದೆಲ್ಲ? ನಿನ್ನ ಕೆಲಸ ನೀನು ನೋಡಿಕೊ’ ಅನ್ನುವ ನಿಷಿದ್ಧದ ತೆರೆ ಎಳೆದು ಬಹುತೇಕರನ್ನು ಬಾಯಿ ಮುಚ್ಚಿಸಲಾಗುತ್ತದೆ. ಹಾಗಾಗಿ ಯಾವುದೇ ಡೊಂಕನ್ನು ಸರಿಪಡಿಸಲು ನಾವಿರುವ ಪರಿಸರ ಮತ್ತು ವಾತಾವರಣವೂ ಮುಖ್ಯವಾಗುತ್ತದೆ.

ಹೆಜ್ಜೆಹೆಜ್ಜೆಗೂ ಪರೀಕ್ಷೆಗೊಳಪಟ್ಟ ಮಹಾದೇವಿಯಕ್ಕನ ಬದುಕಿನ ಜೊತೆಜೊತೆಗೇ ಪುಣ್ಯ ಸ್ತ್ರೀಯರು, ಸೂಳೆಯರು, ಮನೆಬಿಟ್ಟು ಸಾಧನೆಯ ಹಾದಿ ಹಿಡಿದ ಒಂಟಿ ಹೆಣ್ಣುಮಕ್ಕಳು, ಸಂಸಾರ ಸಾಗರದಲ್ಲಿದ್ದುಕೊಂಡೇ ಶರಣತ್ವವನ್ನು ಬದುಕಿದ ಹಲವಾರು ಹೆಣ್ಣುಮಕ್ಕಳ ಕಥೆ ಹೇಳುತ್ತದೆ ಕಾದಂಬರಿ. ಬಸವಣ್ಣನವರ ಇಬ್ಬರು ಹೆಂಡತಿಯರ ಹಾಗೂ ಹಿರಿಯಕ್ಕನ ಬದುಕಿನೆಡೆಗಿನ ಜಿಜ್ಞಾಸೆ, ತೊಳಲಾಟ, ಭಾವುಕತೆ ಮತ್ತು ಗೊಂದಲಗಳನ್ನು ಕೂಡ ಕಾದಂಬರಿ ಚರ್ಚಿಸುತ್ತದೆ.

ಇವೆಲ್ಲವನ್ನೂ ನೋಡಿದಾಗ ಆಗಿನಿಂದಲೂ ಬದಲಾದದ್ದು ಶತಮಾನಗಳು ಮಾತ್ರ; ಕಾಲದೊಂದಿಗೆ ಹೆಜ್ಜೆ ಹಾಕಿದ ಈ ಸಮಾಜದ ಕಟ್ಟಳೆಗಳು ಅನುಕೂಲಕ್ಕೆ ತಕ್ಕಂತೆ ಅಲ್ಲಲ್ಲಿ ಮಾರ್ಪಾಡು ಹೊಂದಿದರೂ ಮೂಲಸ್ವರೂಪವನ್ನು ಇನ್ನೂ ಹಾಗೇ ಉಳಿಸಿಕೊಂಡಿವೆ.

“ಧರ್ಮವೆಂದರೆ ದೇವಲೋಕದತ್ತ ಮುಖ ಮಾಡುವುದಲ್ಲ, ಮನುಷ್ಯ ಲೋಕವನ್ನು ಹಸನುಗೊಳಿಸುವುದು” ಅನ್ನುವ ಮಾತು ಈ ಕಾದಂಬರಿಯಲ್ಲಿ ಬರುತ್ತೆ. ಆವತ್ತು ಅಕ್ಕ ’ಸಹಜತೆಯೇ ಬದುಕನ್ನು ಹಸನುಗೊಳಿಸುವುದು’ ಅನ್ನುವುದನ್ನು ಹೇಳಲು ಕಷ್ಟ ಕೋಟಲೆಗಳನ್ನು ಅನುಭವಿಸಿದಳು. ಇವತ್ತಿನ ದಿನದಲ್ಲಿ ನಾವಿದೇ ಮಾನವ ಧರ್ಮವನ್ನು ಪುನರುಚ್ಚರಿಸಿದರೆ ಎಲ್ಲೆಲ್ಲೂ ದ್ವೇಷವೇ ಉಡುಗೊರೆಯಾಗಿ ಸಿಗುತ್ತದೆ. ಬಹುಶಃ ಈ ತಾಕಲಾಟ ಶತಶತಮಾನಗಳಿಂದಲೂ ನಿರಂತರ ಜಾರಿಯಲ್ಲಿದ್ದು ನಡುನಡುವೆ ಕೊಂಚ ಮಾರ್ಪಾಟಾಗಿ ಮತ್ತೆ ಕಚ್ಚಾಟಕ್ಕೆ ಹಿಂತಿರುಗಿ ಪ್ರಕೃತಿಯೊಂದಿಗೇ ಹುಟ್ಟಿ ಪ್ರಕೃತಿಯೊಂದಿಗೇ ಕೊನೆಗೊಳ್ಳುವ ತರ್ಕವೇನೊ!

“ಎಲ್ಲ ಫಂಥಕ್ಕಿಂತ ಹೆಣ್ಣು ಪಂಥವೇ ಹಿರಿದು”, “ಹೆಣ್ಣು ಮಾಡುವ ಎಲ್ಲವೂ ಕಾಯಕ” ಎನ್ನುವ ಚರ್ಚೆ ಆಗಿನ ಅನುಭವ ಮಂಟಪದಲ್ಲೂ ನಡೆಯಿತು. ನಾವೀಗಲೂ ಹೋದಬಂದಲ್ಲಿ ಇದೇ ಚರ್ಚೆ ಮಾಡುತ್ತೇವಾದರೂ ಬಹುಪಾಲು ಹೆಣ್ಣುಮಕ್ಕಳಿಗೆ ಘನತೆಯ ಬದುಕು ಇಂದಿಗೂ ಮರೀಚಿಕೆಯಾಗಿದೆ! ೭೬೨ ಪುಟದ ಈ ಪುಸ್ತಕ ಸ್ತ್ರೀವಾದವೇ ಸಮಾಜವಾದವೆನ್ನುವಂತೆ ಅಥವಾ ಸಮಾಜವಾದವನ್ನು ಮಾತನಾಡಲು ಸ್ತ್ರೀವಾದದ ಅಗತ್ಯವೂ ಇದೆ ಎನ್ನುವುದನ್ನು ಇನ್ನಷ್ಟು ತೀವ್ರವಾಗಿ ಹೇಳುತ್ತದೆ. ಸಮಾಜದ ಎಲ್ಲ ಕಟ್ಟಳೆಗಳನ್ನು ಹುಟ್ಟುತ್ತಲೇ ಹೊತ್ತುಕೊಂಡು ಜೊತೆ ಜೊತೆಗೇ ಸಂತೋಷವನ್ನು, ಸಾರ್ಥಕತೆಯನ್ನು ಹುಡುಕುವ ಹೆಣ್ಣುಮಕ್ಕಳಿಗಿಂತ ಗಂಡಸರು ಇದರ ಸಾರವನ್ನು ಅರಿತು, ಪೋಷಿಸಿ ಸಮಸಮಾಜದ ಅರಿವಿನ ದೀವಿಗೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ.

ಪಲ್ಲವಿ ಇಡೂರು
ಲೇಖಕಿ ಮತ್ತು ರಾಜಕೀಯ ವಿಮರ್ಶಕರು. ’ಜೊಲಾಂಟಾ’ (ಇರೇನಾ ಸ್ಲೆಂಡರ್ ಜೀವನ ಕಥನ) ಮತ್ತು ದೇಶ ವಿಭಜನೆಯ ಬಗ್ಗೆ ’ಆಗಸ್ಟ್ ಮಾಸದ ರಾಜಕೀಯ ಕಥನ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...