ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಪದೇ ಪದೇ ಸಿಬಿಐನಿಂದ ವಿಚಾರಣೆಗೆ ಒಳಗಾಗಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇಂದು ಮತ್ತೆ CBI ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಅವರು ಜೈಲಿಗೆ ಹೆದರುವುದಿಲ್ಲ ಎಂದಿದ್ದಾರೆ.
ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಸಮಯ ನಿಗಧಿ ಮಾಡಲಾಗಿತ್ತು. ಅದಕ್ಕೂ ಮೊದಲು ಸಿಸೋಡಿಯಾ ಅಪಾರ ಬೆಂಬಲಿಗರೊಂದಿಗೆ ದೆಹಲಿಯಲ್ಲಿ ರೋಡ್ ಶೋ ನಡೆಸಿದ್ದಾರೆ. ರಾಜ್ಘಾಟ್ಗೆ ಭೇಟಿ ನೀಡಿ ಮಹಾತ್ಮ ಗಾಂಧಿಯವರ ಸಮಾಧಿಗೆ ನಮನ ಸಲ್ಲಿಸಿದ್ದಾರೆ.
ಇಂದಿನ ವಿಚಾರಣೆಯ ನಂತರ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಲಿದೆ ಎಂದು ಆಮ್ ಆದ್ಮಿ ಪಕ್ಷದ ಹಲವಾರು ನಾಯಕರು ಆರೋಪಿಸಿದ್ದಾರೆ. ಹಲವು ಆಪ್ ಮುಖಂಡರನ್ನ ದೆಹಲಿ ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ದೂರಿದ್ದಾರೆ.
ಈ ಕುರಿತು ಮಾತನಾಡಿರುವ ಮನೀಶ್ ಸಿಸೋಡಿಯಾ, “ಹಲವು ದಿನಗಳು ನಾನು ಜೈಲಿನಲ್ಲಿರುವ ಸಜ್ಜಾಗಿದ್ದೇನೆ. ಕೇಂದ್ರ ಸರ್ಕಾರಕ್ಕೆ ದೇಶದಲ್ಲಿ ಉಳಿದೆಲ್ಲ ಪಕ್ಷಗಳಿಗಿಂತ ಆಪ್ ಕಂಡರೆ ಭಯ. ಅವರಿಗೆ ರಾಹುಲ್ ಗಾಂಧಿ ಕುರಿತು ಭಯವಿಲ್ಲ. ಆದರೆ ಕೇಜ್ರಿವಾಲ್ರವರ ಬೆಳವಣಿಗೆ ಕುರಿತು ಆತಂಕಗೊಂಡಿದ್ದಾರೆ. ಹಾಗಾಗಿ ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಹೆದರಿಸುತ್ತಿದ್ದಾರೆ. ಆದರೆ ಕೇಜ್ರಿವಾಲ್ ದೇಶದ ಭವಿಷ್ಯದ ನಾಯಕರೆಂಬುದು ನಿಜ” ಎಂದಿದ್ದಾರೆ.
ನಾನು ಹಲವಾರು ಬಾರಿ ಜೈಲಿಗೆ ಹೋಗಲು ಸಿದ್ದನಿದ್ದೇನೆ. ನಾನು ಪತ್ರಕರ್ತನ ಕೆಲಸ ಬಿಟ್ಟಾಗ ನನ್ನ ಪತ್ನಿ ಕುಟುಂಬ ನನ್ನೊಂದಿಗೆ ನಿಂತಿದೆ. ಈಗಲೂ ಸಹ ನನ್ನ ಜೊತೆಗಿರುತ್ತಾರೆ. ನನ್ನ ಪಕ್ಷದ ಕಾರ್ಯಕರ್ತರು ನನ್ನ ಕುಟುಂಬವನ್ನು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಇದನ್ನೂ ಓದಿ; ಬಿಬಿಸಿ ಮೇಲೆ ಕೈ ಹಾಕಿದರೆ ಇಂದಿರಾ ಗಾಂಧಿಗೆ ಆದಂತೆ ಮೋದಿಜಿಗೂ ಆಗಲಿದೆ!