ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳು ಅನುಭವಿಸುತ್ತಿರುವ ತಾರತಮ್ಯ ಹಾಗೂ ಕಿರುಕುಳದ ಬಗ್ಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಬೇಸರ ವ್ಯಕ್ತಪಡಿಸಿದ್ದಾರೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾನುಭೂತಿ (ಇನ್ನೊಬ್ಬರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಹಂಚಿಕೊಳ್ಳುವ ಸಾಮರ್ಥ್ಯ) ಅಗತ್ಯವಿದೆ ಎಂದಿರುವ ಅವರು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಒಡಿಶಾದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಕಳೆದ ವರ್ಷ ಆದಿವಾಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಉಲ್ಲೇಖಿಸಿರುವ ಸಿಜೆಐ, “ಈ ವಿದ್ಯಾರ್ಥಿಗಳ ಸಂತ್ರಸ್ತ ಕುಟುಂಬವನ್ನು ಕಂಡು ನನ್ನ ಹೃದಯವು ದುಃಖಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಥೆಗಳು ಎಲ್ಲಿ ತಪ್ಪೆಸಗುತ್ತಿವೆ ಎಂದು ಆಶ್ಚರ್ಯವಾಗುತ್ತಿದೆ” ಎಂದಿದ್ದಾರೆ.
ಹೈದರಾಬಾದ್ನಲ್ಲಿರುವ ದಿ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್ (NALSAR) ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅವರು ಮಾತನಾಡಿದ್ದು, “ಗುಜರಾತ್ ಮೂಲದ ಪ್ರಥಮ ವರ್ಷದ ವಿದ್ಯಾರ್ಥಿ ದರ್ಶನ್ ಸೋಲಂಕಿ ಫೆಬ್ರವರಿ 12 ರಂದು ಐಐಟಿ ಬಾಂಬೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅಂಚಿಗೆ ತಳ್ಳಲ್ಪಷ್ಟ ಸಮುದಾಯಗಳ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಸಾಮಾನ್ಯವಾಗುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಈ ಸಂಖ್ಯೆಗಳು ಕೇವಲ ಅಂಕಿಅಂಶಗಳಲ್ಲ. ಅವು ಕೆಲವೊಮ್ಮೆ ಶತಮಾನಗಳ ಹೋರಾಟದ ಕಥೆಗಳಾಗಿವೆ. ನಾವು ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಬಯಸುವುದಾದರೆ, ಮೊದಲು ಸಮಸ್ಯೆಯನ್ನು ಒಪ್ಪಿಕೊಂಡು ಅದನ್ನು ಗುರುತಿಸಬೇಕು ಎಂದು ನಾನು ನಂಬುತ್ತೇನೆ” ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯದ ನಂತರದ 75 ವರ್ಷಗಳ ನಮ್ಮ ಪಯಣದಲ್ಲಿ, ನಾವು ‘ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ (ಉನ್ನತ ದರ್ಜೆಯ ಬೋಧನಾ ವ್ಯವಸ್ಥೆ) ಅನ್ನು ರಚಿಸುವತ್ತ ಗಮನಹರಿಸಿದ್ದೇವೆ, ಆದರೆ ಅದಕ್ಕಿಂತ ಹೆಚ್ಚಾಗಿ ನಮಗೆ ‘ಇನ್ಸ್ಟಿಟ್ಯೂಷನ್ಸ್ ಆಫ್ ಎಂಪಥಿ’ (ಸಹಾನುಭೂತಿಯ ಸಂಸ್ಥೆಗಳು) ಅಗತ್ಯವಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯ ನ್ಯಾಯಾಧೀಶರು ಈ ವಿಷಯದ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ ಎಂದು ನಿಮ್ಮಲ್ಲಿ ಕೆಲವರು ಆಶ್ಚರ್ಯ ಪಡಬಹುದು. ಏಕೆಂದರೆ ತಾರತಮ್ಯದ ವಿಷಯವು ಶಿಕ್ಷಣ ಸಂಸ್ಥೆಗಳಲ್ಲಿನ ಸಹಾನುಭೂತಿಯ ಕೊರತೆಯೊಂದಿಗೆ ನೇರ ಸಂಬಂಧ ಹೊಂದಿವಬೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ ನ್ಯಾಯಾಧೀಶರು ಸಾಮಾಜಿಕ ವಾಸ್ತವಗಳಿಂದ ದೂರ ಸರಿಯುವಂತಿಲ್ಲ ಎಂದು ತಿಳಿಸಿದ್ದಾರೆ.
ಜಾರ್ಜ್ ಫ್ಲಾಯ್ಡ್ ಹತ್ಯೆಯ ನಂತರ ಯುನೈಟೆಡ್ ಸ್ಟೇಟ್ಸ್ನಲ್ಲಿ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಚಳವಳಿ ಹುಟ್ಟಿಕೊಂಡಿತು. ಆಗ ವಾಷಿಂಗ್ಟನ್ ಸುಪ್ರೀಂ ಕೋರ್ಟ್ನ ಎಲ್ಲಾ ಒಂಬತ್ತು ನ್ಯಾಯಾಧೀಶರು, “ಕಪ್ಪು ಜೀವಗಳ ಅವನತಿ ಮತ್ತು ಅಪಮೌಲ್ಯೀಕರಣ” ಕುರಿತು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು ಎಂದು ಸಿಜೆಐ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿರಿ: ಬಿಬಿಸಿ ಮೇಲೆ ಕೈ ಹಾಕಿದರೆ ಇಂದಿರಾ ಗಾಂಧಿಗೆ ಆದಂತೆ ಮೋದಿಜಿಗೂ ಆಗಲಿದೆ!
ಸಾಮಾಜಿಕ ಬದಲಾವಣೆಗೆ ಒತ್ತಡ ತರಲು ನ್ಯಾಯಾಲಯದ ಒಳಗೆ ಮತ್ತು ಹೊರಗೆ ಸಮಾಜದೊಂದಿಗೆ ಸಂವಾದ ನಡೆಸುವಲ್ಲಿ ಭಾರತದ ನ್ಯಾಯಾಧೀಶರು ನಿರ್ಣಾಯಕ ಪಾತ್ರವನ್ನು ಹೊಂದಿದ್ದಾರೆ ಎಂದು ವಿವರಿಸಿದ್ದಾರೆ.
ಪ್ರಮುಖ ನ್ಯಾಯಾಂಗ ಕೆಲಸ ಮತ್ತು ಆಡಳಿತಾತ್ಮಕ ಕರ್ತವ್ಯಗಳ ಹೊರತಾಗಿ, ನಮ್ಮ ಸಮಾಜ ಎದುರಿಸುತ್ತಿರುವ ರಚನಾತ್ಮಕ ಸಮಸ್ಯೆಗಳ ಮೇಲೆ ಮುಖ್ಯ ನ್ಯಾಯಮೂರ್ತಿಯಾಗಿ ಬೆಳಕು ಚೆಲ್ಲಬೇಕಾಗುತ್ತದೆ ಎಂದು ಆಶಿಸಿದ್ದಾರೆ.
“ಆದ್ದರಿಂದ, ಸಹಾನುಭೂತಿಯನ್ನು ಉತ್ತೇಜಿಸುವುದು ಶಿಕ್ಷಣ ಸಂಸ್ಥೆಗಳು ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆಯಾಗಿರಬೇಕು. ಸಹಾನುಭೂತಿ ಬೆಳೆಸುವುದರಿಂದ ಮೇಲರಿಮೆ ಮತ್ತು ಹೊರಗಿಡುವ ಸಂಸ್ಕೃತಿಯನ್ನು ಕೊನೆಗೊಳಿಸಬಹುದು. ಇದನ್ನು ಸಣ್ಣ ಹೆಜ್ಜೆಗಳಿಂದ ಪ್ರಾರಂಭಿಸುವ ಮೂಲಕ ಮಾಡಬಹುದು” ಎಂದು ಸಲಹೆ ನೀಡಿದ್ದಾರೆ.