ಚಂದ್ರಶೇಖರ್ ಅಜಾದ್ರವರಿಗೆ ಸೂಕ್ತ ಚಿಕಿತ್ಸೆ ನೀಡದ ತಿಹಾರ್ ಜೈಲು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ದೆಹಲಿ ಕೋರ್ಟ್ ಕೂಡಲೇ ಅವರನ್ನು ಏಮ್ಸ್ಗೆ ದಾಖಲಿಸಿ ವಿಶೇಷ ಚಿಕಿತ್ಸೆ ನೀಡುವಂತೆ ತಾಕೀತು ಮಾಡಿದೆ.
ಟಿಸ್ ಹಜಾರಿಯಾ ಮ್ಯಾಜಿಸ್ಟ್ರೇಟ್ ಕೋರ್ಟ್ನ ನ್ಯಾಯಾಧೀಶರಾದ ಅರುಲ್ ವರ್ಮಾ “ಅವರಿಗೆ ವಿಶೇಷ ಕಾಯಿಲೆ ಇರುವುದು ಗೊತ್ತಿದ್ದರೂ ಸಮರ್ಪಕ ಚಿಕಿತ್ಸೆ ಕೊಡದ ತಿಹಾರ್ ಜೈಲು ಅಧಿಕಾರಗಳ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಿಎಎ ವಿರುದ್ಧ ಹಳೆ ದೆಹಲಿ ದರಿಯಾಗಂಜ್ ನಲ್ಲಿ ಕಳೆದ ಡಿಸೆಂಬರ್ 20 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಜಾದ್ರವರನ್ನು ಬಂಧಿಸಿದ್ದುಇನ್ನು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಚಂದ್ರಶೇಖರ್ ಅಜಾದ್ ಫ್ಲೆಬೋಟಮಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಆಜಾದ್ ಅವರ ವೈಯಕ್ತಿಕ ವೈದ್ಯ ಹರ್ಜೀತ್ ಸಿಂಗ್ ಭಟ್ಟಿ ಹೇಳಿದ್ದರು. “ಕೆಲವು ರಕ್ತದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ರಕ್ತದಿಂದ ಹೆಚ್ಚುವರಿ ಕೆಂಪು ರಕ್ತ ಕಣಗಳನ್ನು ತೆಗೆದುಹಾಕುವ ವಿಧಾನ”ಕ್ಕೆ ಫ್ಲೆಬೋಟಮಿ ಎಂದು ಕರೆಯಲ್ಪಡುತ್ತಿದ್ದು ಈ ಸಂಬಂಧ ಅವರು ಕಳೆದ ಒಂದು ವರ್ಷದಿಂದ ಏಮ್ಸ್ ನ ಹೆಮಟಾಲಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಜೈಲಿನಲ್ಲಿ ಚಿಕಿತ್ಸೆ ನೀಡದಿರುವುದರಿಂದ ಹಾಗೆ ಬಿಟ್ಟರೆ ಅವರಿಗೆ ಹೃದಯಾಘಾತ ಸಂಭವಿಸಬಹುದು ಎಂದು ವಕೀಲರಾದ ಮಹ್ಮಮದ್ ಪ್ರಾಶ ವಾದ ಮಾಡಿದ್ದಾರೆ.
ಆದರೆ ಜೈಲು ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅವರು ಅಜಾದ್ ರವರನ್ನು ಒರಟಾಗಿ ನಡೆಸಿಕೊಳ್ಳುತ್ತಿದ್ದಾರೆ. ಅವರು ಸಾಮಾನ್ಯ ಖೈದಿಯಲ್ಲ, ರಾಜಕೀಯ ಖೈದಿಯಾಗಿದ್ದು ಆ ಪ್ರಕಾರವೇ ಅವರನ್ನು ನಡೆಸಿಕೊಳ್ಳಬೇಕು ಎಂದು ವಕೀಲರು ಒತ್ತಾಯಿಸಿದ್ದಾರೆ.
ಚಂದ್ರಶೇಖರ್ರವರನ್ನು ಅವರನ್ನು ಬಂಧಿಸಿದಾಗ ಅವರು, ಸಂಗಾತಿಗಳೇ, ಹೋರಾಟವನ್ನು ಮುನ್ನಡೆಸಿ, ಸಂವಿಧಾನವನ್ನು ರಕ್ಷಿಸಲು ಒಂದಾಗಿರಿ ಎಂದು ಟ್ವೀಟ್ ಮಾಡಿದ್ದರು.