ಬಾಂಗ್ಲಾದೇಶದಿಂದ ಹೊರಟ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತ ದೋಣಿ ಇಂಜಿನ್ ವೈಫಲ್ಯದಿಂದ ಹಿಂದೂ ಮಹಾಸಾಗರದಲ್ಲಿ ಸಿಲುಕಿಕೊಂಡಿದ್ದು, ಬಡಪಾಯಿ ಜನರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಅಲ್-ಜಝೀರಾ ವರದಿ ತಿಳಿಸಿದೆ.
ಹೆಚ್ಚಾಗಿ ಮಹಿಳೆಯರು, ಮಕ್ಕಳು ಇರುವ ಸುಮಾರು 185 ರೊಹಿಂಗ್ಯಾಗಳನ್ನು ಹೊತ್ತ ದೋಣಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಸಂಕಷ್ಟಕ್ಕೆ ಸಿಲುಕಿದೆ. ದೋಣಿಯಲ್ಲಿರುವ ಜನರ ರಕ್ಷಣೆಯ ತುರ್ತು ಅವಶ್ಯಕತೆಯಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (ಯುಎನ್ಹೆಚ್ಸಿಆರ್)ಕಳವಳ ವ್ಯಕ್ತಪಡಿಸಿದೆ.
ತಮ್ಮ ತಾಯ್ನಾಡಿನಿಂದ ಹೊರದಬ್ಬಲ್ಪಟ್ಟ ಸಾವಿರಾರು ರೋಹಿಂಗ್ಯಾಗಳು ಬಾಂಗ್ಲಾದೇಶದ ಜನನಿಬಿಡ ನಿರಾಶ್ರಿತರ ಶಿಬಿರಗಳಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಇಂತಹ ಶಿಬಿರಗಳಿಂದ ಇವರು ಆಗಾಗ ಇಂಡೋನೇಶ್ಯಾ ಅಥವಾ ಮಲೇಶ್ಯಾಗೆ ಅಪಾಯಕಾರಿ ಮಾರ್ಗದ ಮೂಲಕ ತೆರಳುತ್ತಿರುತ್ತಾರೆ. ಹೀಗೆ ತೆರಳುತ್ತಿದ್ದವರು ಸಾಗರದಲ್ಲಿ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಯುಎನ್ಹೆಚ್ಸಿಆರ್ ತಿಳಿಸಿದೆ.
2017ರಲ್ಲಿ ಮ್ಯಾನ್ಮಾರ್ ಸೇನೆ ಅಲ್ಲಿನ ಮುಸ್ಲಿಂ ಸಮುದಾಯದ ಜನರಾದ ರೋಹಿಂಗ್ಯಾಗಳ ಮೇಲೆ ದಬ್ಬಾಳಿಕೆ ನಡೆಸಿ, ಅವರ ಮನೆ-ಆಸ್ತಿ ಪಾಸ್ತಿಗಳನ್ನು ಸುಟ್ಟು ಹಾಕಿತ್ತು. ಆ ಬಳಿಕ ಬದುಕಲು ಬೇರೆ ವಿಧಿಯಿಲ್ಲದೆ 750,000ಕ್ಕೂ ಹೆಚ್ಚು ರೋಹಿಂಗ್ಯಾಗಳು ತಮ್ಮ ತಾಯ್ನಾಡು ಬಿಟ್ಟು ಪಲಾಯನ ಮಾಡಿದ್ದಾರೆ. ಅವರು, ಭಾರತ, ಬಾಂಗ್ಲಾ ದೇಶದಂತಹ ಸಮೀಪದ ದೇಶಗಳಲ್ಲಿ ನೆಲೆಸಿದ್ದಾರೆ.
ಮ್ಯಾನ್ಮಾರ್ ಸೇನೆ ನಡೆಸಿದ ರೋಹಿಂಗ್ಯಾಗಳ ನರಮೇಧ ಪ್ರಕರಣ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿದೆ. ಆದರೆ, ಇದರಿಂದ ನೆಲೆ ಕಳೆದುಕೊಂಡ ಜನರಿಗೆ ಜೀವನ ನಡೆಸಲು ದಾರಿ ಸಿಗಲಿದೆ ಎಂಬ ಖಾತ್ರಿಯಿಲ್ಲ.
ಪ್ರಸ್ತುತ, ಹಿಂದೂ ಮಹಾಸಾಗರದಲ್ಲಿ ಸಿಲುಕಿರುವ ರೋಹಿಂಗ್ಯಾಗಳನ್ನು ರಕ್ಷಿಸುವಂತೆ ಸಮೀಪದ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಮನವಿ ಮಾಡಿದೆ. ದೋಣಿಯಲ್ಲಿದ್ದ ಜನರ ಪೈಕಿ ಒಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ. ಇನ್ನಷ್ಟು ಜನರು ಪ್ರಾಣ ಕಳೆದುಕೊಳ್ಳುವ ಮುನ್ನ ಕಾಪಾಡಿ ಎಂದು ವಿಶ್ವ ಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಕೋರಿದೆ.
ಯುಎನ್ಹೆಚ್ಸಿಆರ್ ಪ್ರಕಾರ, 2022ರಲ್ಲಿ 2,000 ಕ್ಕೂ ಹೆಚ್ಚು ರೋಹಿಂಗ್ಯಾಗಳು ಆಗ್ನೇಯ ಏಷ್ಯಾದ ದೇಶಗಳಿಗೆ ಅಪಾಯಕಾರಿ ಪ್ರಯಾಣ ಮಾಡುವ ಪ್ರಯತ್ನ ನಡೆಸಿದ್ದಾರೆ. ಈ ಪೈಕಿ ಎಷ್ಟೋ ಜನರು ಸಮುದ್ರ ದಾರಿಯಲ್ಲಿ ಜಲ ಸಮಾಧಿಯಾಗಿದ್ದಾರೆ. ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುವುದು ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಏಕೆಂದರೆ, ಇವರ ಬಗ್ಗೆ ಕಾಳಜಿ ವಹಿಸುವವರೇ ಇಲ್ಲ.
ತಂಬ್ನೈಲ್ ಚಿತ್ರ ಸಾಂಧರ್ಬಿಕ
ಇದನ್ನೂ ಓದಿ : ಡ್ರೋನ್ ದಾಳಿ: ಅಮೆರಿಕದ ಆರೋಪವನ್ನು ‘ಆಧಾರ ರಹಿತ’ ಎಂದ ಇರಾನ್