ನಮ್ಮ ವಿತ್ತ ಮಂತ್ರಿ ರೂ.45.03 ಲಕ್ಷ ಕೋಟಿಯ 2023-24ನೆಯ ಸಾಲಿನ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ವೆಚ್ಚಗಳನ್ನು ಕಡಿತ ಮಾಡಲಾಗಿದೆ. ಕಾರ್ಪೋರೇಟ್ ತೆರಿಗೆ ಭಾರ ಕಡಿಮೆಯಾಗುತ್ತಿರುವುದರಿಂದ ಉಳ್ಳವರ ಹಿತಾಸಕ್ತಿಯ ರಕ್ಷಣೆಯಾಗಿದೆ. ಅಪ್ರತ್ಯಕ್ಷ ತೆರಿಗೆ ಜಿಎಸ್ಟಿ ಭಾರ ಅಧಿಕವಾಗುತ್ತಿರುವುರಿಂದ ಉಳಿದವರ ಬಾಳು ಗೋಳಾಗುತ್ತಿದೆ.
ರಸಗೊಬ್ಬರ ಮತ್ತು ಆಹಾರ ಸಬ್ಸಿಡಿಯು 2022-23ನೆಯ ಸಾಲಿನಲ್ಲಿ ರೂ.5.12 ಲಕ್ಷ ಕೋಟಿಯಿತ್ತು. ಇದನ್ನು 2023-24ನೆಯ ಸಾಲಿನಲ್ಲಿ ರೂ.3.72 ಲಕ್ಷ ಕೋಟಿಗಿಳಿಸಲಾಗಿದೆ (- ಶೇ.27.34). ಭಾರತೀಯ ಆಹಾರ ಕಾರ್ಪೋರೇಶನ್ನಿಗೆ ನೀಡುತ್ತಿದ್ದ ಸಬ್ಸಿಡಿಯನ್ನು 2022-23ನೆಯ ಸಾಲಿನ ರೂ.2.86 ಲಕ್ಷ ಕೋಟಿಯಿಂದ 23-24ನೆಯ ಸಾಲಿನಲ್ಲಿ ರೂ.1.96 ಲಕ್ಷ ಕೋಟಿಗಿಳಿಸಲಾಗಿದೆ (- ಶೇ.31.47) ಪ್ರಧಾನಮಂತ್ರಿ ಕಿಸಾನ್ ಸಿಂಚನ ನಿಧಿಗೆ 2021-22ರಲ್ಲಿ ರೂ. 66825 ಕೋಟಿ ಅನುದಾನವಿತ್ತು. ಈ ವರ್ಷ ಇದನ್ನು ರೂ.60000 ಕೋಟಿಗೆ ಇಳಿಸಲಾಗಿದೆ.
ತೆರಿಗೆ ಬಾರ ಉಳ್ಳವರಿಗೆ ಕಡಿಮೆಯಾಗುತ್ತಿದ್ದರೆ ಉಳಿದವರಿಗೆ ಅಧಿಕವಾಗುತ್ತಿದೆ
ಕಾರ್ಪೋರೇಟ್ ತೆರಿಗೆಯು 2021-22 ಮತ್ತು 2022-23ರ ನಡುವೆ ಜಿಡಿಪಿಯ ಶೇ. 3.06 ರಷ್ಟಿದ್ದುದು 2023-24ರಲ್ಲಿಯೂ ಸ್ಥಿರವಾಗಿದೆ. ಆದರೆ ಜಿಎಸ್ಟಿಯು 2021-22ರಲ್ಲಿ ಜಿಡಿಪಿಯ ಶೇ. 3.00ರಷ್ಟಿದ್ದುದು 2022-23ರಲ್ಲಿ ಜಿಡಿಪಿಯ ಶೇ. 3.12 ರಷ್ಟಾಗಿತ್ತು. ಮತ್ತೆ 2023-24ರಲ್ಲಿ ಇದು ಜಿಡಿಪಿಯ ಶೇ. 3.16ರಷ್ಟಾಗಿದೆ. ಕಾರ್ಪೋರೇಟ್ ತೆರಿಗೆ ರಾಶಿಯ ಬೆಳವಣಿಗೆ 2021-24ರ ನಡುವೆ ಶೇ.29.49 ರಷ್ಟಿದ್ದರೆ ಜಿಎಸ್ಟಿಯ ಬೆಳವಣಿಗೆಯು ಇದೇ ಅವಧಿಯಲ್ಲಿ ಶೇ.36.96 ರಷ್ಟಾಗಿದೆ.
ನರೇಗಾಕ್ಕೆ ಅನುದಾನ ಕಡಿತ
ಗ್ರಾಮೀಣ ಬಡವರ ಪಾಲಿನ ಅಮೃತವಾಗಿರುವ ಮನ್ರೇಗಾಕ್ಕೆ 2021-22ರಲ್ಲಿ ಅನುದಾನ ರೂ.98467 ಕೋಟಿಯಿದ್ದುದನ್ನು 2022-23ರಲ್ಲಿ ರೂ. 89400 ಕೋಟಿಗೆ ಮತ್ತು 2023-24ರಲ್ಲಿ ರೂ. 60000 ಕೋಟಿಗೆ ತಗ್ಗಿಸಲಾಗಿದೆ.
ಬಜೆಟ್ ಗಾತ್ರ
ಬಜೆಟ್ಟಿನ ಒಟ್ಟು ಗಾತ್ರವು 2021-22ರಲ್ಲಿ ಜಿಡಿಪಿಯ (ರೂ.232.14 ಲಕ್ಷ ಕೋಟಿ) ಶೇ.16.33 ರಷ್ಟಿತ್ತು. ಇದು 2022-23ರಲ್ಲಿ ಜಿಡಿಪಿಯ(ರೂ.273.07 ಲಕ್ಷ ಕೋಟಿ) ಶೇ.15.33 ಕ್ಕಿಳಿದು ಮತ್ತು 2023-24ರಲ್ಲಿ ಜಿಡಿಪಿಯ(ರೂ.301.75 ಲಕ್ಷ ಕೋಟಿ) ಶೇ.14.18ಕ್ಕಿಳಿದಿದೆ.
ಸಾಲದ ಮೇಲಿನ ಬಡ್ಡಿಯಲ್ಲಿ ಹೆಚ್ಚಳ
ಆರ್ಥಿಕತೆಯ ಸಾಲದ ಮೇಲಿನ ವಾರ್ಷಿಕ ಬಡ್ಡಿ ಪಾವತಿಯು ಒಕ್ಕೂಟದ 2021-22ನೆಯ ಸಾಲಿನ ಒಟ್ಟು ತೆರಿಗೆ ರಾಶಿಯಲ್ಲಿ(ರೂ. 21.69 ಲಕ್ಷ ಕೋಟಿ) ಶೇ.37.11 ರಷ್ಟಿದ್ದುದು 2023-24 ರಲ್ಲಿ ತೆರಿಗೆ ರಾಶಿಯ(ರೂ.26.32 ಲಕ್ಷ ಕೋಟಿ)ಯ ಶೇ.40.99ರಷ್ಟಾಗಿದೆ. ಆದ್ದರಿಂದ 2023-24ರ ಬಜೆಟ್ಟು ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳೆಯರ ಪಾಲಿಗೆ ‘ಕಡಿತ-ಬಡಿತ’ಗಳ ಬಜೆಟ್ಟಾಗಿದೆ.
- ಟಿ. ಆರ್. ಚಂದ್ರಶೇಖರ
(ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ – ಸಂಸ್ಕೃತಿಗಳ ಬಗ್ಗೆಯೂ ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸುವ ಪ್ರೊ. ಟಿ.ಆರ್.ಸಿ ಅವರು ಇತ್ತೀಚೆಗೆ ‘ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ – ಒಂದು ಅಧ್ಯಯನ’ ಎಂಬ ಪುಸ್ತಕವನ್ನು ರಚಿಸಿದ್ದಾರೆ.)
ಇದನ್ನೂ ಓದಿ: ಇದೊಂದು ಕಾರ್ಪೊರೇಟ್ ಪರ ಬಜೆಟ್: ಆರ್ಥಿಕ ವಿಶ್ಲೇಷಕರು ಹೇಳುವುದೇನು?