ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ಬೆದರಿಕೆ ಹಾಕಿದ್ದರು. ಅದರಂತೆ ಇದೀಗ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ನಿರಾಕರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಗತ್ಯವಿರುವ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿರುವುದನ್ನು ಪ್ರಸ್ತಾಪಿಸಿ ಟ್ವಿಟ್ ಮಾಡಿರುವ ಅವರು, ”ಜನವರಿ 1, 2023 ರಿಂದ ಮೇ 24, 2023 ರವರೆಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕರ್ನಾಟಕವೊಂದರಲ್ಲೇ ಎಲ್ಲಾ ರಾಜ್ಯ ಸರ್ಕಾರಗಳು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) ಅಡಿಯಲ್ಲಿ ಪ್ರತಿ ಕ್ವಿಂಟಲ್ಗೆ 13,400 ದರದಲ್ಲಿ ಸಂಗ್ರಹಿಸಿದ ಶೇ 95 ಕ್ಕಿಂತ ಹೆಚ್ಚು ಅಕ್ಕಿಯನ್ನು ತೆಗೆದುಕೊಂಡಿದೆ. ಬಹುಶಃ ಇದು ಮೋದಿ ಜೀಯವರ ಆಶೀರ್ವಾದದಿಂದಲೇ ಆಗಿರಬೇಕು” ಎಂದು ಟೀಕಿಸಿದ್ದಾರೆ.
”ಬಡವರು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ಗೆ ಮತ ಚಲಾಯಿಸಿದ ಏಕೈಕ ಕಾರಣಕ್ಕೆ ಶಿಕ್ಷೆ ನೀಡುತ್ತಿರುವುದು ಕರ್ನಾಟಕದ ದೌರ್ಭಾಗ್ಯವಲ್ಲದೆ ಮತ್ತೇನಲ್ಲ” ಎಂದು ರಮೇಶ್ ವಾಗ್ದಾಳಿ ನಡೆಸಿದ್ದಾರೆ.
From January 1st 2023 till May 24th, 2023, the BJP-led state government in Karnataka alone lifted more than 95% of the rice procured by all State governments under the Open Market Sale Scheme (Domestic) at a rate of Rs 3,400 per quintal, presumably with Modi-ji’s “Aashirwaad”.… pic.twitter.com/u8Du59xNbk
— Jairam Ramesh (@Jairam_Ramesh) June 25, 2023
”ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಲ್ಲೇ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆದರಿಕೆಯಂತೆ ಈ ಮೋದಿ ಜೀ ಅವರು ಆಶೀರ್ವಾದವನ್ನು ಅತ್ಯಂತ ವೇಗದಲ್ಲಿ ಹಿಂತೆಗೆದುಕೊಳ್ಳಲಾಗಿದೆ” ಎಂದು ಕಿಡಿಕಾರಿದ್ದಾರೆ.
”ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಗಳನ್ನು ಮಾಡುತ್ತದೆ. ಜತೆಗೆ, ಪ್ರತಿಯೊಬ್ಬರಿಗೂ ತಲಾ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲು ಅನ್ನ ಭಾಗ್ಯ 2.0 ಖಾತ್ರಿಯನ್ನು ಶೀಘ್ರವಾಗಿ ಜಾರಿಗೆ ತರಲಾಗುತ್ತದೆ” ಎಂದು ರಮೇಶ್ ಭರವಸೆ ನೀಡಿದ್ದಾರೆ.
ಮುನಿಯಪ್ಪ ಮೂರು ದಿನ ಕಾದ ಬಳಿಕ ಕೇಂದ್ರ ಸಚಿವರ ಭೇಟಿ
ಜೂನ್ 23ರಂದು ದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರನ್ನು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭೇಟಿ ಮಾಡಿದರು. ಈ ವೇಳೆ ಕರ್ನಾಟಕಕ್ಕೆ ಅಕ್ಕಿ ಪೂರೈಸುವಂತೆ ಮನವಿ ಮಾಡಿದರು. ಆದರೆ, ಪಿಯೂಷ್ ಗೋಯಲ್ ಅವರು ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ಮುನಿಯಪ್ಪ ಹೇಳಿದ್ದಾರೆ.
ಪಿಯೂಷ್ ಗೋಯಲ್ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮುನಿಯಪ್ಪ, ”ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದ್ದರೂ ರಾಜಕೀಯ ದುರುದ್ದೇಶದಿಂದ ಸಚಿವರು ನಮ್ಮ ಬೇಡಿಕೆಯನ್ನು ನಿರಾಕರಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
”ಅಕ್ಕಿ ಕೊಡಲು ಆಗುವುದಿಲ್ಲ ಎಂದು ಗೋಯಲ್ ಹೇಳಿದ್ದಾರೆ. ಹೆಚ್ಚುವರಿ ಅಕ್ಕಿ ಪೂರೈಸಲು ಆಗಲ್ಲ ಎಂದಿದ್ದಾರೆ. ಹಣ ನೀಡುತ್ತೇವೆ ಅಕ್ಕಿ ಪೂರೈಸಿ ಎಂದು ಕೇಳಿದೆ. ಆದರೆ ಕೇಂದ್ರ ಸಚಿವ ಗೋಯಲ್ ಹಾರಿಕೆ ಉತ್ತರ ಕೊಟ್ಟಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದರು.
”ಎಷ್ಟೇ ಕಷ್ಟವಾದರೂ ಉಚಿತವಾಗಿ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ. ಅಕ್ಕಿ ಕೊಡಲು ಸ್ವಲ್ಪ ವಿಳಂಬವಾಗಹುದು ಅಷ್ಟೇ. ಏಜೆನ್ಸಿಗಳ ಮೂಲಕ ಅಕ್ಕಿ ಖರೀದಿಸುವ ಪ್ರಯತ್ನ ಮಾಡುತ್ತಿದ್ದೇವೆ. ರಾಜಕೀಯ ಉದ್ದೇಶದಿಂದ ಅಕ್ಕಿ ಪೂರೈಕೆ ಮಾಡುತ್ತಿಲ್ಲ. ಸ್ಟಾಕ್ ಇದ್ದರೂ ಅಕ್ಕಿ ಕೊಡಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಅಕ್ಕಿ ವಿಚಾರವಾಗಿ ನಮ್ಮ ದಾರಿಯನ್ನು ನಾವು ಕಂಡುಕೊಳ್ಳಬೇಕಿದೆ. ರಾಜಕೀಯ ದುರುದ್ದೇಶ ಇದೆ ಎನ್ನುವ ಭಾವನೆ ಬರುತ್ತಿದೆ. ಈ ವಾರದಲ್ಲಿ ಅಂತಿಮ ತೀರ್ಮಾನ ಆಗಲಿದೆ” ಎಂದು ಹೇಳಿದ್ದಾರೆ.