ನಾಲ್ವರು ವಿದ್ಯಾರ್ಥಿಗಳು ಡಿ ಫಾರ್ಮಾ ಕೋರ್ಸ್ನ ಪರೀಕ್ಷೆಯ ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀ ರಾಮ್’ ಮತ್ತು ಭಾರತೀಯ ತಂಡದ ಕ್ರಿಕೆಟಿಗರ ಹೆಸರುಗಳನ್ನು ಬರೆದ ನಂತರ ಪರೀಕ್ಷೆಯಲ್ಲಿ ಶೇಕಡಾ 56ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ ಎಂದು RTI ಮಾಹಿತಿಯಿಂದ ಬಹಿರಂಗವಾದ ಬೆನ್ನಲ್ಲಿ ಸರ್ಕಾರಿ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ.
ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ವಂದನಾ ಸಿಂಗ್ ಈ ಕುರಿತು ಮಾತನಾಡಿದ್ದು, ವಿಶ್ವವಿದ್ಯಾನಿಲಯದ ಪರೀಕ್ಷಾ ಸಮಿತಿಯು ಬುಧವಾರ ಈ ವಿಷಯದ ಬಗ್ಗೆ ಸಭೆ ನಡೆಸಿದೆ ಮತ್ತು ಇಬ್ಬರು ಶಿಕ್ಷಕರಾದ ಡಾ ಅಶುತೋಷ್ ಗುಪ್ತಾ ಮತ್ತು ಡಾ ವಿನಯ್ ವರ್ಮಾ ತಪ್ಪು ಮೌಲ್ಯಮಾಪನದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ. ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸಲು ಶಿಸ್ತು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದ್ದು, ಅಂತಿಮ ನಿರ್ಧಾರಕ್ಕಾಗಿ ಅದನ್ನು ಕಾರ್ಯಕಾರಿ ಮಂಡಳಿಯ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಡಿ ಫಾರ್ಮಾ ಕೋರ್ಸ್ನ ಮೊದಲ ಮತ್ತು ಎರಡನೇ ಸೆಮಿಸ್ಟರ್ನ ಕೆಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತಪ್ಪು ಉತ್ತರಗಳನ್ನು ಬರೆದರೂ ಉತ್ತೀರ್ಣರಾದ ಬಗ್ಗೆ ತಿಳಿದ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ದಿವ್ಯಾಂಶು ಸಿಂಗ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ ವಿಷಯ ಬೆಳಕಿಗೆ ಬಂದಿದೆ.
ಡಿ.ಫಾರ್ಮಾ (ಡಿಪ್ಲೊಮಾ ಇನ್ ಫಾರ್ಮಸಿ) ಕೋರ್ಸ್ನ ನಾಲ್ವರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ಹಲವೆಡೆ ‘ಜೈ ಶ್ರೀ ರಾಮ್’ ಎಂಬ ಬರಹ ಮತ್ತು ಅನೇಕ ಪ್ರಮುಖ ಭಾರತೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟಿಗರ ಹೆಸರು ಬರೆಯಲಾಗಿತ್ತು. ಈ ನಾಲ್ವರು ವಿದ್ಯಾರ್ಥಿಗಳು ಶೇಕಡಾ 50ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ ಎಂದು ಆರ್ಟಿಐ ಮಾಹಿತಿ ಬಹಿರಂಗಪಡಿಸಿದೆ. ಉತ್ತರ ಪುಸ್ತಕಗಳನ್ನು ಮರು ಮೌಲ್ಯಪನ ಮಾಡಿದಾಗ ನಾಲ್ಕು ವಿದ್ಯಾರ್ಥಿಗಳಿಗೆ ಶೂನ್ಯ ಅಂಕಗಳನ್ನು ಪಡೆದಿದ್ದಾರೆ.
ಆರ್ಟಿಐ ಮಾಹಿತಿ ಪಡೆದ ದಿವ್ಯಾಂಶು ಸಿಂಗ್, ವಿವಿಯ ಕುಲಪತಿಯಾಗಿರುವ ರಾಜ್ಯಪಾಲರಿಗೆ ಈ ಕುರಿತು ವಿವರಗಳನ್ನು ಕಳುಹಿಸಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ರಾಜಭವನ ತನಿಖೆಗೆ ಆದೇಶಿಸಿತ್ತು. ತನಿಖೆಗೆ ವಿಶ್ವವಿದ್ಯಾಲಯದಿಂದ ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿಯ ವರದಿಯನ್ನು ಆಧರಿಸಿ, ಸಂಬಂಧಪಟ್ಟ ಇಲಾಖೆಯ ಇಬ್ಬರು ಅಧ್ಯಾಪಕರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.
ಇದನ್ನು ಓದಿ: ಹಾಸನದ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಪ್ರಕರಣ: ಎಸ್ಐಟಿ ತನಿಖೆಗೆ ರಾಜ್ಯ ಸರಕಾರ ಆದೇಶ