ಉತ್ತರ ಪ್ರದೇಶ ಸರ್ಕಾರವು ನವೆಂಬರ್ 2020ರಲ್ಲಿ ಅಂಗೀಕರಿಸಲ್ಪಟ್ಟ ಕಾನೂನುಬಾಹಿರ ಧರ್ಮ ಪರಿವರ್ತನೆಯ ನಿಷೇಧದ ಸುಗ್ರೀವಾಜ್ಞೆಯ ಅಡಿಯಲ್ಲಿ ದಾಖಲಾಗಿದ ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 19ರಂದು ಕೋರ್ಟ್ ಶಿಕ್ಷೆ ವಿಧಿಸಲಾಗಿದೆ. ಅಮ್ರೋಹಾ ಜಿಲ್ಲಾ ನ್ಯಾಯಾಲಯವು 25 ವರ್ಷದ ಮೊಹಮ್ಮದ್ ಅಫ್ಜಲ್ಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದು, 40,000 ರೂ. ದಂಡವನ್ನು ಪಾವತಿಸುವಂತೆ ಸೂಚಿಸಿದೆ.
ಅಫ್ಜಲ್ ತನ್ನ ಧರ್ಮದ ಬಗ್ಗೆ ಸುಳ್ಳು ಹೇಳಿ 16 ವರ್ಷದ ಹಿಂದೂ ಹುಡುಗಿಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಆರೋಪದ ಮೇಲೆ ಕಾನೂನು ಕ್ರಮ ಜರುಗಿಸಲಾಯಿತು. ಸಂಭಾಲ್ ಜಿಲ್ಲೆಯ ಹಯಾತ್ನಗರ್ ಗ್ರಾಮದಲ್ಲಿ ವಾಸಿಸುವ 25 ವರ್ಷದ ಅಫ್ಜಲ್, ತಮ್ಮ ಜೀವನೋಪಾಯಕ್ಕಾಗಿ ಸಸಿಗಳನ್ನು ಮಾರಾಟ ಮಾಡುತ್ತಿದ್ದನು. ಮರಗೆಲಸದ ಕೆಲಸ ನಡೆಸುತ್ತಿದ್ದನು. ಈಗ ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅಪಹರಣ, ಮಹಿಳೆಯ ನಮ್ರತೆಯನ್ನು ಆಕ್ರೋಶಗೊಳಿಸುವೆ ಮತ್ತು ಕ್ರಿಮಿನಲ್ ಬೆದರಿಕೆ ಅಡಿಯಲ್ಲಿ ಅಮ್ರೋಹಾ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಲೈಂಗಿಕ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿದ್ದಕ್ಕಾಗಿ ಆತನ ವಿರುದ್ಧ ಪೋಕ್ಸೋ ಅಡಿಯಲ್ಲೂ ಶಿಕ್ಷೆಗೆ ಗುರಿ ಮಾಡಲಾಗಿದೆ.
ಅಫ್ಜಲ್ ಪರ ವಾದ ಮಂಡಿಸಿದ ವಕೀಲ ಅಶೋಕ್ ಕುಮಾರ್, “ಶಿಕ್ಷೆಯನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ಗೆ ಹೋಗುತ್ತೇವೆ. ತಪ್ಪು ತೀರ್ಪು ಬಂದಿದೆ. ಮತಾಂತರ ಮಾಡಲು ಯತ್ನಿಸಿದ್ದಾರೆಂಬ ಆರೋಪ ಸುಳ್ಳಿನಿಂದ ಕೂಡಿದೆ. ಅಫ್ಜಲ್ ಅಪ್ರಾಪ್ತ ವಯಸ್ಕಳನ್ನು ಬಲವಂತವಾಗಿ ಮತಾಂತರಿಸಲು ಪ್ರಯತ್ನಿಸಿದ್ದಾನೆಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ” ಎಂದಿದ್ದಾರೆ.
“ಅಫ್ಜಲ್ ಮತ್ತು ಹುಡುಗಿ ಸ್ನೇಹಿತರಾಗಿದ್ದರು. ಆಕೆಯ ತಂದೆಯೊಂದಿಗಿನ ಭಿನ್ನಾಭಿಪ್ರಾಯದಿಂದ ಅಫ್ಜಲ್ ವಿರುದ್ಧ ಪ್ರಕರಣ ದಾಖಲಿಸಲಾಯಿತು” ಎಂದು ದೂರಿದ್ದಾರೆ.
2020ರ ಸುಗ್ರೀವಾಜ್ಞೆಯನ್ನು ಜನಪ್ರಿಯವಾಗಿ “ಲವ್ ಜಿಹಾದ್ ಕಾನೂನು” ಎಂದು ಕರೆಯಲಾಗುತ್ತಿದೆ. “ಲವ್ ಜಿಹಾದ್” ಎಂಬುದು ಹಿಂದುತ್ವವಾದಿಗಳು ಪ್ರಸಾರ ಮಾಡಿದ ಪಿತೂರಿ ಸಿದ್ಧಾಂತವಾಗಿದ್ದು, ಮುಸ್ಲಿಂ ಪುರುಷರು ಹಿಂದೂ ಯುವತಿಯರನ್ನು ಇಸ್ಲಾಂಗೆ ಮತಾಂತರಿಸಲು ಮದುವೆಯಾಗುತ್ತಾರೆಂದು ಬಿಂಬಿಸಲಾಗಿದೆ.
ಇಂತಹ ಕಾನೂನನ್ನು ಜಾರಿಗೆ ತಂದ ಮೊದಲ ರಾಜ್ಯ ಉತ್ತರ ಪ್ರದೇಶ. ಬಲ, ವಂಚನೆ ಅಥವಾ ಮದುವೆಯ ಮೂಲಕ ಧಾರ್ಮಿಕ ಮತಾಂತರ ಮಾಡಿದರೆ ಅಪರಾಧ ಎಂದು ಈ ಕಾನೂನು ಪರಿಗಣಿಸುತ್ತದೆ. ಮದುವೆಯನ್ನು “ಧಾರ್ಮಿಕ ಮತಾಂತರದ ಏಕೈಕ ಉದ್ದೇಶಕ್ಕಾಗಿ” ನಡೆಸಿದರೆ ಅಥವಾ ಧಾರ್ಮಿಕ ಪರಿವರ್ತನೆಯು ಸುಗ್ರೀವಾಜ್ಞೆಯಲ್ಲಿ ನಿಗದಿಪಡಿಸಿದ ವಿಧಾನವನ್ನು ಅನುಸರಿಸದಿದ್ದರೆ ಅದನ್ನು ಅನೂರ್ಜಿತ ಎಂದು ಘೋಷಿಸಬಹುದು. ಅಪರಾಧಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಉತ್ತರ ಪ್ರದೇಶದ ನಂತರ ಹತ್ತು ರಾಜ್ಯಗಳು ಇದೇ ರೀತಿಯ ಕಾನೂನುಗಳನ್ನು ಜಾರಿಗೆ ತಂದಿವೆ.
ಅಫ್ಜಲ್ ವಿರುದ್ಧದ ಆರೋಪಗಳು ಮಾರ್ಚ್ 2021ರ ವೇಳೆಯಲ್ಲಿ ಕೇಳಿಬಂದವು. ನ್ಯಾಯಾಲಯದ 21 ಪುಟಗಳ ಆದೇಶದ ಪ್ರಕಾರ, “ಅಫ್ಜಲ್ ಕೆಲವು ಸಸಿಗಳನ್ನು ತೆಗೆದುಕೊಳ್ಳಲು ಹುಡುಗಿಯ ತಂದೆ ನಡೆಸುತ್ತಿದ್ದ ನರ್ಸರಿಗೆ ಹೋಗಿದ್ದನು. ಒಂದು ತಿಂಗಳ ನಂತರ ಏಪ್ರಿಲ್ 2ರಂದು ಬೆಳಿಗ್ಗೆ ಹುಡುಗಿ ನಾಪತ್ತೆಯಾಗಿದ್ದಳು.”
ಆಕೆಯನ್ನು ಪತ್ತೆಹಚ್ಚಲು ವಿಫಲವಾದ ನಂತರ, ಕುಟುಂಬವು ಏಪ್ರಿಲ್ 2 ರಂದು ಎಫ್ಐಆರ್ ದಾಖಲಿಸಿದೆ. ಏಪ್ರಿಲ್ 4 ರಂದು ದೆಹಲಿಯ ಉಸ್ಮಾನ್ಪುರದಲ್ಲಿ ಇವರನ್ನು ಪತ್ತೆ ಹಚ್ಚಲಾಗಿತ್ತು.
ಬಾಲಕಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದಾಗ, “ಅಫ್ಜಲ್ ತನ್ನ ಹೆಸರನ್ನು ಅರ್ಮಾನ್ ಕೊಹ್ಲಿ ಎಂದು ಹೇಳಿದ್ದಾನೆ. ಮಾರ್ಚ್ನಲ್ಲಿ ನರ್ಸರಿಗೆ ಮೊದಲ ಬಾರಿಗೆ ಭೇಟಿ ನೀಡಿದಾಗ ತನ್ನನ್ನು ಶಿವನ ಭಕ್ತ ಎಂದು ಪರಿಚಯಿಸಿಕೊಂಡಿದ್ದ. ನನ್ನೊಂದಿಗೆ ನಿಯಮಿತವಾಗಿ ಫೋನ್ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದನು” ಎಂದು ಹೇಳಿದ್ದಳು.
“ಆತನೊಂದಿಗೆ ದೆಹಲಿಗೆ ಹೋದ ನಂತರವಷ್ಟೇ ಆತ ಮುಸ್ಲಿಂ ಎಂದು ತಿಳಿಯಿತು. ಮದುವೆ ಮತ್ತು ಮತಾಂತರಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ” ಎಂದು ಬಾಲಕಿ ಆರೋಪಿಸಿರುವುದಾಗಿ ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಬಲವಂತದ ಮತಾಂತರಕ್ಕೆ ತೋರಿಸಲು ‘ಸಾಕ್ಷ್ಯವಿಲ್ಲ’
ಅಫ್ಜಲ್ ಬಾಲಕಿಯನ್ನು ಮತಾಂತರಗೊಳಿಸಲು ಯತ್ನಿಸಿದ್ದನ್ನು ಸಾಬೀತುಪಡಿಸಲು ತನಿಖೆ ಅಥವಾ ವಿಚಾರಣೆಯ ಸಮಯದಲ್ಲಿ ಯಾವುದೇ ಸಾಕ್ಷ್ಯವನ್ನು ನೀಡಲಾಗಿಲ್ಲ ಎಂದು ವಕೀಲರು ಪುನರುಚ್ಚರಿಸಿದ್ದಾರೆ. “ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಸಲ್ಲಿಸಿದ ಯಾವುದೇ ಪೇಪರ್ಗಳು ಅಥವಾ ಅಫಿಡವಿಟ್ ಮತಾಂತರವನ್ನು ದೃಢೀಕರಿಸುವುದಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಉತ್ತರ ಪ್ರದೇಶ: ಟ್ರ್ಯಾಕ್ಟರ್-ಟ್ರಾಲಿ ಉರುಳಿ 26 ಮಂದಿ ದುರ್ಮರಣ
ಅಫ್ಜಲ್ ಕುಟುಂಬ ಮಾಧ್ಯಮಗಳೊಂದಿಗೆ ಮಾತನಾಡಿಲ್ಲ. ಆದರೆ, ವೈಯಕ್ತಿಕ ದ್ವೇಷದಿಂದ ಪ್ರಕರಣ ನಡೆದಿದೆ ಎಂದು ವಕೀಲರು ಪ್ರತಿಪಾದಿಸಿದ್ದಾರೆ.
“ಅಫ್ಜಲ್ ಸಂತ್ರಸ್ತೆಯ ತಂದೆಯ ಒಡೆತನದ ನರ್ಸರಿಯಿಂದ ಕೆಲವು ಸಸಿಗಳನ್ನು ತೆಗೆದುಕೊಂಡಿದ್ದನು, ಅದಕ್ಕಾಗಿ ಅವನು ಹಣ ನೀಡಬೇಕಾಗಿತ್ತು. ಇದು ಅವರ ನಡುವೆ ಸಮಸ್ಯೆಗಳಿಗೆ ಕಾರಣವಾಯಿತು. ವಾಸ್ತವವಾಗಿ, ಸಂತ್ರಸ್ತೆ ಹಾಗೂ ಅಫ್ಜಲ್ ಸ್ನೇಹಿತರಾಗಿದ್ದರು” ಎಂದು ವಿವರಿಸಿದ್ದಾರೆ.
ನ್ಯಾಯಾಲಯದ ತನ್ನ ಆದೇಶದಲ್ಲಿ, “ಸಂತ್ರಸ್ತರ ಹೇಳಿಕೆಯು ಸಹಜ ಮತ್ತು ವಿಶ್ವಾಸಾರ್ಹವಾಗಿದೆ” ಎಂದಿದೆ.