ಕಾಂಗ್ರೆಸ್ ಕೈಗೊಂಡಿರುವ ಮಹತ್ವಕಾಂಕ್ಷೆಯ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸೋನಿಯಾ ಗಾಂಧಿ ಅವರು ಗುರುವಾರ (ಅಕ್ಟೋಬರ್ 6) ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ಮೂಲಗಳು ಭಾನುವಾರ ತಿಳಿಸಿವೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎನ್.ಡಿ.ಟಿ.ವಿ. ವರದಿ ಮಾಡಿದೆ.
ಪಾದಯಾತ್ರೆ ಆರಂಭವಾದ ಸಂದರ್ಭದಲ್ಲಿ ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ್ದ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾದ ಸೋನಿಯಾ ಅವರು ಇದೇ ಮೊದಲ ಬಾರಿಗೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಡ್ಯ ಜಿಲ್ಲೆಯಿಂದ ಪಾದಯಾತ್ರೆಗೆ ಸೇರಿಕೊಳ್ಳಲಿದ್ದಾರೆ. ಅವರು ನಾಳೆ ಕರ್ನಾಟಕಕ್ಕೆ ಆಗಮಿಸಲಿದ್ದು, ಎರಡು ದಿನಗಳ ನಂತರ ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಹಿಂದೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅರು ಈ ಕುರಿತು ಸುಳಿವು ನೋಡಿದ್ದರು. ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜ್ಯದಲ್ಲಿ ಪ್ರತ್ಯೇಕವಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲಿದ್ದು, ಶೀಘ್ರದಲ್ಲೇ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದರು.
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭವಾದ ‘ಭಾರತ್ ಜೋಡೋ ಯಾತ್ರೆ’ ತಮಿಳುನಾಡು ಮತ್ತು ಕೇರಳದ ನಂತರ ಕರ್ನಾಟಕವನ್ನು ಪ್ರವೇಶಿಸಿದ್ದು, 21 ದಿನಗಳ ಕಾಲ ಇಲ್ಲಿ ಸಾಗಲಿದೆ. ಐದು ತಿಂಗಳಲ್ಲಿ 12 ರಾಜ್ಯಗಳಲ್ಲಿ ಈ ಯಾತ್ರೆ ನಡೆಯಲಿದೆ.
ಅಭಿವ್ಯಕ್ತಿಗಾಗಿ ಇತರ ಎಲ್ಲಾ ವೇದಿಕೆಗಳು ಮುಚ್ಚಲ್ಪಟ್ಟಿರುವುದರಿಂದ ಜನಸಾಮಾನ್ಯರನ್ನು ತಲುಪಲು ಪಕ್ಷಕ್ಕೆ ಉಳಿದಿರುವ ಏಕೈಕ ಆಯ್ಕೆ ‘ಭಾರತ್ ಜೋಡೋ ಯಾತ್ರೆ’ ಎಂದು ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
“ಸರ್ಕಾರದ ಸಂಪೂರ್ಣ ನಿಯಂತ್ರಣವಿದೆ. ಸಂಸತ್ತಿನಲ್ಲಿ ನಮ್ಮ ಮೈಕ್ಗಳನ್ನು ಮ್ಯೂಟ್ ಮಾಡಲಾಗಿದೆ, ಅಸೆಂಬ್ಲಿಗಳು ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ. ಪ್ರತಿಪಕ್ಷಗಳಿಗೆ ಕಿರುಕುಳ ನೀಡಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ನಮಗೆ ಉಳಿದಿರುವ ಏಕೈಕ ಆಯ್ಕೆ ಭಾರತ್ ಜೋಡೋ ಯಾತ್ರೆ” ಎಂದು ಸಾರ್ವಜನಿಕ ಸಭೆಯಲ್ಲಿ ಅವರು ತಿಳಿಸಿದ್ದಾರೆ.
ಈ ಯಾತ್ರೆಯನ್ನು ದೇಶದ ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ. ಏಕೆಂದರೆ ಇದು ‘ಭಾರತದ ಮೆರವಣಿಗೆ’ ಎಂದು ಬಣ್ಣಿಸಿದ್ದಾರೆ. “ಇದು ಭಾರತದ ಮೆರವಣಿಗೆ ಮತ್ತು ಭಾರತದ ಧ್ವನಿಯನ್ನು ಕೇಳುವ ಮೆರವಣಿಗೆ, ಇದನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ” ಎಂದಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ನಡೆಯಲಿರುವ ಪಾದಯಾತ್ರೆಯು ಪಕ್ಷದ ಕಾರ್ಯಕರ್ತರಿಗೆ ಚೈತನ್ಯ ತುಂಬಲಿದೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ.
ಇದನ್ನೂ ಓದಿರಿ: ವರುಣನ ನಡುವೆಯೇ ರಾಹುಲ್ ಭಾಷಣ; ‘ಮೆಚ್ಚುಗೆಯ ಮಳೆ’ ಸುರಿಸಿದ ಜನತೆ
ಕರ್ನಾಟಕದ ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದೆ. ರಾಯಚೂರು ಬಳಿಕ ಮೆರವಣಿಗೆ ತೆಲಂಗಾಣ ಪ್ರವೇಶಿಸಲಿದೆ.
ರಾಯಚೂರು ಮೂಲಕ ರಾಜ್ಯದಿಂದ ನಿರ್ಗಮಿಸುವ ಮೊದಲು ಅಕ್ಟೋಬರ್ 19 ರಂದು ಬಳ್ಳಾರಿಯಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಯೋಜಿಸಲಾಗಿದೆ.
ಈ ಹಿಂದೆ ಸೋನಿಯಾ ಗಾಂಧಿ ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರಿಂದ ಬಳ್ಳಾರಿ, ಕಾಂಗ್ರೆಸ್ಗೆ ಮಹತ್ವದ್ದಾಗಿದೆ. 2013ರಲ್ಲಿ ಬಿಜೆಪಿ ಸರ್ಕಾರ ಮತ್ತು ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಪಕ್ಷವು ಬಳ್ಳಾರಿಗೆ ಪಾದಯಾತ್ರೆಯನ್ನು ನಡೆಸಿತ್ತು. ಅದು ಚುನಾವಣೆಯಲ್ಲೂ ಪ್ರಭಾವ ಬೀರಿತ್ತು. ನಂತರದಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿತ್ತು.