ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿಯುತ್ತಾ ಬಂದಿದ್ದು, ಬಿಜೆಪಿ ಭರ್ಜರಿ ಜಯದತ್ತ ದಾಪುಗಾಲಿಟ್ಟಿದೆ. ಅದರಂತೆಯೇ ಗೋರಖ್ಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭರ್ಜರಿ ಮುನ್ನಡೆ ಸಾಧಿಸಿದ್ದು ಗೆಲುವಿನ ಕಡೆ ಮುಖ ಮಾಡಿದ್ದಾರೆ.
15ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡ ನಂತರ ಯೋಗಿ ಆದಿತ್ಯನಾಥ್ 70,296 ಮತಗಳನ್ನು ಪಡೆದು ಸಮೀಪದ ಸಮಾಜವಾದ ಅಭರ್ಥಿ ಎದುರು 46,672 ಮತಗಳ ಮುನ್ನಡೆ ಸಾಧಿಸಿದ್ದು, ಗೆಲುವಿನತ್ತ ಮುನ್ನುಗ್ಗಿದ್ದಾರೆ.
ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಶುಭವತಿ ಉಪೇಂದ್ರ ದತ್ ಶುಕ್ಲಾ 23,624 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಬಿಎಸ್ಪಿ ಅಭ್ಯರ್ಥಿ ಕ್ವಾಜಾ ಸಂಶುದ್ದೀನ್ 4,195 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಭಾರೀ ಗಮನ ಸೆಳೆದಿದ್ದ ಯುವ ಹೋರಾಟಗಾರ, ಆಜಾದ್ ಸಮಾಜ್ ಪಕ್ಷದ ಚಂದ್ರಶೇಖರ್ ಆಜಾದ್ 3723 ಮತಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಉತ್ತರ ಪ್ರದೇಶದ ಸಹ್ರರಾನ್ಪುರದಲ್ಲಿ ದಲಿತ ಹೋರಾಟದ ಮೂಲಕ ಮುನ್ನೆಲೆಗೆ ಬಂದಿದ್ದ ಕಾನೂನು ಪದವೀಧರರಾಗಿರುವ ಚಂದ್ರಶೇಖರ್ ಆಜಾದ್ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು. ನಂತರದಲ್ಲಿ ಆಜಾದ್ ಸಮಾಜ್ ಪಕ್ಷ ಸ್ಥಾಪಿಸಿದ್ದರು. ಆದರೆ ಅವರು ಚುನಾವಣೆಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ.
403 ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ ಬಿಜೆಪಿ 266 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಬೃಹತ್ ವಿಜಯದತ್ತ ಸಾಗಿದೆ. ಸಮಾಜವಾದಿ ಪಕ್ಷ 132 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಸೋಲೊಪ್ಪಿಕೊಂಡಿದೆ. ಕಾಂಗ್ರೆಸ್, ಬಿಎಸ್ಪಿ ಸೇರಿದಂತೆ ಉಳಿದ ಪಕ್ಷಗಳು ಧೂಳಿಪಟವಾಗಿವೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಜೈಲಿನಲ್ಲಿರುವ ಎಸ್ಪಿ ಅಭ್ಯರ್ಥಿ ಅಜಂ ಖಾನ್ ಭರ್ಜರಿ ಮುನ್ನಡೆ