ಉತ್ತರಪ್ರದೇಶ ಪೊಲೀಸರ ವಶದಲ್ಲಿದ್ದ ಮುಸ್ಲಿಂ ಯುವಕನಿಗೆ ಪೊಲೀಸರು ಎನ್ಕೌಂಟರ್ ಮಾಡಿರುವ ಘಟನೆ ನಡೆದಿದ್ದು, ಸಂತ್ರಸ್ತ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿರುವ ಆರೋಪವನ್ನು ಪೊಲೀಸರು ಮಾಡಿದ್ದಾರೆ.
ಕೊಟ್ರಾದ ಮೊಹಲ್ಲಾ ಸರೈ ನಿವಾಸಿ ಶಹಬಾಜ್ ಎಂಬಾತನ ಎನ್ಕೌಂಟರ್ ನಡೆದಿದೆ.
ಉತ್ತರಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಕೆಲವು ದುಷ್ಕರ್ಮಿಗಳು ದರೋಡೆ ಮಾಡುವ ಉದ್ದೇಶದಿಂದ ನಗರದ ಕತ್ರಾ ಪ್ರದೇಶದಲ್ಲಿ ವ್ಯಾಪಾರಿ ಅಲೋಕ್ ಗುಪ್ತಾ ಅವರ ಮನೆಗೆ ನುಗ್ಗಿದ್ದು, ಬಳಿಕ ಅಲೋಕ್ ಗುಪ್ತಾ ಮತ್ತು ಮನೆಯವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಗಾಯಗೊಂಡವರನ್ನು ನೆರೆಯ ಬರೇಲಿ ಜಿಲ್ಲೆಗೆ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಲ್ಲಿ ಅಲೋಕ್ ಗುಪ್ತಾ ಅವರು ಮೃತಪಟ್ಟಿದ್ದಾರೆ.
ಈ ಕೊಲೆಯು ಸ್ಥಳೀಯರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವರ್ತಕರ ಗುಂಪು ಗುಪ್ತಾ ನಿವಾಸದಲ್ಲಿ ಒಟ್ಟುಗೂಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳೀಯ ವರ್ತಕರ ಸಂಘವು ಅಂಗಡಿ ಮುಂಗಟ್ಟು ಬಂದ್ ಮಾಡುವ ಬೆದರಿಕೆ ಹಾಕಿದ್ದರು. ಬರೇಲಿಯ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ರಾಕೇಶ್ ಸಿಂಗ್ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಘಟನೆ ಬಗ್ಗೆ ಗುಪ್ತಾ ಕುಟುಂಬದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕಟ್ರಾದ ಮೊಹಲ್ಲಾ ಸರೈ ನಿವಾಸಿ ಶಹಬಾಜ್ ಎಂಬಾತನಿಗೆ ಪೊಲೀಸರು ಬಂಧಿಸಿದ್ದರು.
ಶಹಬಾಜ್ನನ್ನು ಸಂಜೆ ವೈದ್ಯಕೀಯ ಪರೀಕ್ಷೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದುಕೊಂಡು ಹೋಗುವಾಗ ಪೊಲೀಸ್ ವಾಹನದ ಮುಂದೆ ದನಗಳು ಅಡ್ಡಬಂದಿದ್ದು, ವಾಹನ ಸ್ಥಗಿತಗೊಂಡಿದೆ. ಈ ವೇಳೆ ಶಹಬಾಜ್ ಪೊಲೀಸ್ ಇನ್ಸ್ಪೆಕ್ಟರ್ನಿಂದ ಪಿಸ್ತೂಲ್ ಕಸಿದುಕೊಂಡು ಹೊಲಕ್ಕೆ ಓಡಿ ಹೋಗಿ ಪೊಲೀಸರ ಮೇಲೆ ಫೈರಿಂಗ್ಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಶರಣಾಗುವಂತೆ ಶಹಬಾಜ್ಗೆ ಪದೇ ಪದೇ ಎಚ್ಚರಿಕೆ ನೀಡಲಾಯಿತು ಆದರೆ ಅವನು ಪೊಲೀಸರ ಮೇಲೆ ಗುಂಡು ಹಾರಿಸುವುದನ್ನು ಮುಂದುವರೆಸಿದನು. ಆತ್ಮರಕ್ಷಣೆಗೆ ಪೊಲೀಸರು ಗುಂಡು ಹಾರಿಸಿದರು. ಇದರಲ್ಲಿ ಶಹಬಾಜ್ ಗಾಯಗೊಂಡರು. ಶಹಬಾಜ್ಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಎಂದು ಎಸ್ಪಿ ಮೀನಾ ಹೇಳಿದರು.
ಇದನ್ನು ಓದಿ: ದಲಿತ ಬಾಲಕಿಯ ಮೇಲೆ ಅತ್ಯಾಚಾರ: ಪ್ರಕರಣ ದಾಖಲು