ದೇಶದಲ್ಲಿ ಕೊರೊನಾ ಪ್ರಕರಣಗಳ ಜೊತೆಗೆ ಓಮಿಕ್ರಾನ್ ರೂಪಾಂತರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಆಯೋಜಿಸಿರುವ ಎಲ್ಲಾ ಚುನಾವಣಾ ರ್ಯಾಲಿ ಮತ್ತು ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ.
ಮಂಗಳವಾರ ಬರೇಲಿಯಲ್ಲಿ ರ್ಯಾಲಿ ವೇಳೆ ನೂರಾರು ಮಹಿಳೆಯರು ಮತ್ತು ಹುಡುಗಿಯರು ಮಾಸ್ಕ್ ಇಲ್ಲದೆ ಕಾಣಿಸಿಕೊಂಡಿದ್ದು ಮತ್ತು ಕಾಲ್ತುಳಿತ ಸಂಭವಿಸಿದ ನಂತರ ಕಾಂಗ್ರೆಸ್ ಈ ನಿರ್ಧಾರ ತೆಗೆದುಕೊಂಡಿದೆ.
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಗುರುವಾರ ನಡೆಯಲಿದ್ದ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಗೌತಮ್ ಬುದ್ಧ ನಗರ ರಾಜ್ಯದಲ್ಲಿಯೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ.
ಇದನ್ನೂ ಓದಿ: ಶೀಘ್ರದಲ್ಲೇ ರಾಜ್ಯಕ್ಕೆ ಅಮಿತ್ ಶಾ ಭೇಟಿ: BJP ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು, ಸಿಎಂ ಬದಲಾವಣೆ ಸಾಧ್ಯತೆ?
ಸಾವಿರಾರು ಮಂದಿ ಸೇರುವ ಚುನಾವಣಾ ರ್ಯಾಲಿಗಳಲ್ಲಿ ಕೊರೊನಾ ಸುರಕ್ಷತಾ ಪ್ರೋಟೋಕಾಲ್ಗಳನ್ನು ನಿರ್ವಹಿಸುವುದು ಕಷ್ಟಕರವಾಗಿರುವಾಗ ಕಾಂಗ್ರೆಸ್ ತೆಗೆದುಕೊಂಡಿರುವ ನಿರ್ಧಾರವನ್ನು ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಕೂಡ ಅನುಸರಿಸುತ್ತವೆಯೇ ಎಂಬುದನ್ನು ನೋಡಬೇಕಿದೆ.
ಮಂಗಳವಾರ ನಡೆದ ಕಾಂಗ್ರೆಸ್ ತನ್ನ ‘ಲಡ್ಕಿ ಹೂ, ಲಾಡ್ ಸಕ್ತಿ ಹೂ’ (ನಾನು ಹುಡುಗಿ ಮತ್ತು ನಾನು ಹೋರಾಡಬಲ್ಲೆ) ಎಂಬ ಚುನಾವಣಾ ಪ್ರಚಾರದ ಭಾಗವಾಗಿ ಆಯೋಜಿಸಿದ್ದ ಮ್ಯಾರಥಾನ್ನಲ್ಲಿ ನೂರಾರು ಮಹಿಳೆಯರು ಮತ್ತು ಯುವತಿಯರು ಮಾಸ್ಕ್ ಧರಿಸದೆ ಕಾಣಿಸಿಕೊಂಡಿದ್ದರು.
ಅಲಹಾಬಾದ್ ಹೈಕೋರ್ಟ್ ಕಳೆದ ತಿಂಗಳು ಚುನಾವಣಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಪಿ ಚುನಾವಣೆಯನ್ನು ಕೆಲವು ತಿಂಗಳುಗಳವರೆಗೆ ಮುಂದೂಡುವಂತೆ ಮನವಿ ಮಾಡಿತ್ತು. ಆದರೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಚುನಾವಣಾ ಆಯೋಗದ ನಡುವಿನ ಸಭೆಯ ನಂತರ, ಚುನಾವಣೆಯನ್ನು ನಿಗದಿತ ಸಮಯದಲ್ಲಿಯೇ ನಡೆಸುವುದಾಗಿ ಘೋಷಿಸಲಾಯಿತು.