ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್ ನವೆಂಬರ್ 9, 2019 ರಂದು ತೀರ್ಪು ನೀಡಿದ ನಂತರ ಚುನಾಯಿತ ಸಾರ್ವಜನಿಕ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಸಂಬಂಧಿಕರು ಅಯೋಧ್ಯೆಯಲ್ಲಿ ಭೂಮಿಯನ್ನು ಸ್ವಾಧಿನಪಡಿಸಿಕೊಂಡಿದ್ದಾರೆ ಅಥವಾ ಖರೀದಿಸಿದ್ದಾರೆ ಎಂಬ ವರದಿ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ.
ಇಂಡಿಯನ್ ಎಕ್ಸ್ಪ್ರೆಸ್ ಈ ಕುರಿತು ತನಿಖಾ ವರದಿಯನ್ನು ಪ್ರಕಟಿಸಿತ್ತು. ವರದಿಯನ್ನು ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ವಹಿವಾಟಿನ ಕುರಿತು ತನಿಖೆ ನಡೆಸಿ ವಾರದೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದೆ ಎಂದು ವರದಿಯಾಗಿದೆ.
ತನಿಖೆ ಬಗ್ಗೆ ದೃಢಪಡಿಸಿರುವ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಂದಾಯ) ಮನೋಜ್ ಕುಮಾರ್ ಸಿಂಗ್, “ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪತ್ರಿಕೆಯ ವರದಿಯನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆ. ಅವರ ನಿರ್ದೇಶನದ ಮೇರೆಗೆ ತನಿಖೆಗೆ ಆದೇಶಿಸಲಾಗಿದೆ. ವಿಶೇಷ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯೊಬ್ಬರಿಗೆ ತನಿಖೆ ನಡೆಸಲು ತಿಳಿಸಲಾಗಿದೆ. ಮುಂದಿನ 5 ರಿಂದ7 ದಿನಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ವರದಿ ನೀಡುವಂತೆ ಸಿಎಂ ಕೇಳಿದ್ದಾರೆ” ಎಂದಿದ್ದಾರೆ.
ರಾಮ ಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಯಲ್ಲಿ ಭೂಮಿಯನ್ನು ಖರೀದಿಸಿದವರಲ್ಲಿ ಕನಿಷ್ಠ 15 ಮಂದಿ ಸ್ಥಳೀಯ ಶಾಸಕರು, ಅಯೋಧ್ಯೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಥವಾ ಸೇವೆ ಸಲ್ಲಿಸುತ್ತಿರುವ ಅಧಿಕಾರಶಾಹಿ ವರ್ಗದ ನಿಕಟ ಸಂಬಂಧಿಗಳು ಮತ್ತು ಭೂ ವ್ಯವಹಾರಗಳನ್ನು ನಡೆಸುವ ಸ್ಥಳೀಯ ಕಂದಾಯ ಅಧಿಕಾರಿಗಳು ಸೇರಿದ್ದಾರೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ: ಹಾಸನ: ವರದಕ್ಷಿಣೆ ಕಿರುಕುಳಕ್ಕೆ ಮದುವೆಯಾದ ಮೂರೇ ವಾರಕ್ಕೆ ಯುವತಿ ಬಲಿ
ಈ ಅಕ್ರಮ ವ್ಯವಹಾರಗಳ ಪ್ರಕರಣಗಳಲ್ಲಿ ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್ (MRVT), ದಲಿತ ಗ್ರಾಮಸ್ಥರಿಂದ ಭೂಮಿಯನ್ನು ಖರೀದಿಸಿದ ಆರೋಪದಲಲ್ಲಿ ತನಿಖೆ ಎದುರಿಸುತ್ತಿದೆ. MRVT ಒಂದು ಡಜನ್ ದಲಿತ ಕುಟುಂಬಗಳಿಂದ ಸುಮಾರು 52,000 ಚದರ ಮೀ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ದಲಿತ ವ್ಯಕ್ತಿ ರೊಂಘಾಯ್ ಎಂಬುವವರನ್ನು ಬಳಸಿಕೊಂಡು ಕೇವಲ 6.38 ಲಕ್ಷ ರೂಪಾಯಿಗೆ ಜಮೀನು ಖರೀದಿಸಿದ. ಪ್ರಸ್ತುತ ಜಮೀನಿನ ದರದ ಮೌಲ್ಯವು ಸುಮಾರು 4.25 ಕೋಟಿಯಿಂದ 9.58 ಕೋಟಿಗಳಷ್ಟಿದೆ.
ಇನ್ನು ಇತರ 12 ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ವತಃ ಭೂಮಿಯನ್ನು ಖರೀದಿಸಿದ್ದಾರೆ. ಇಲ್ಲವೇ ತಮ್ಮ ಸಂಬಂಧಿಕರ ಮೂಲಕ ಭೂಮಿಯನ್ನು ಖರೀದಿಸಿದ್ದಾರೆ. ಅಯೋಧ್ಯೆ ಮೇಯರ್ ರಿಷಿಕೇಶ್ ಉಪಾಧ್ಯಾಯ, ಅಯೋಧ್ಯೆ ನಗರ ಶಾಸಕ ವೇದ್ ಪ್ರಕಾಶ್ ಗುಪ್ತಾ, ಗೋಸೈಗಂಜ್ ಶಾಸಕ ಇಂದ್ರ ಪ್ರತಾಪ್ ತಿವಾರಿ (ಈಗ ಅನರ್ಹಗೊಂಡಿದ್ದಾರೆ), ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಝಾ, ರಾಜ್ಯ ಮಾಹಿತಿ ಆಯುಕ್ತ ಹರ್ಷವರ್ಧನ್ ಶಾಹಿ, ಒಬಿಸಿ ಆಯೋಗದ ಸದಸ್ಯ ಬಲರಾಮ್ ಮೌರ್ಯ, ಈಗ ಕಾನ್ಪುರದಲ್ಲಿರುವ ಮಾಜಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆಯುಷ್ ಚೌಧರಿ, ಸರ್ಕಲ್ ಅಧಿಕಾರಿ, ಪ್ರಾಂತೀಯ ಪೊಲೀಸ್ ಸೇವಾ ಅಧಿಕಾರಿ, ಈಗ ಮೀರತ್ನಲ್ಲಿರುವ ಅರವಿಂದ್ ಚೌರಾಸಿಯಾ, ಯುಪಿ ಕೇಡರ್ನ ನಿವೃತ್ತ ಐಎಎಸ್ ಅಧಿಕಾರಿ ಉಮಾಧರ್ ದ್ವಿವೇದಿ, ಗಂಜಾ ಸುಧಾಂಶು ರಂಜನ್ ಸೇರಿದಂತೆ ಹಲವಾರು ಗ್ರಾಮಗಳ ಕಾನೂಂಗೊ, ಗಂಜಾ ಗ್ರಾಮದ ಬದ್ರಿ ಉಪಾಧ್ಯಾಯದ ಲೇಖ್ಪಾಲ್ ಮತ್ತು ಎಂಆರ್ವಿಟಿ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಸಹಾಯಕ ದಾಖಲೆ ಅಧಿಕಾರಿ ಭಾನ್ ಸಿಂಗ್ನ ಪೇಷ್ಕರ್ ದಿನೇಶ್ ಓಜಾ ಈ ಇಷಟು ಅಧಿಕಾರಿಗಳು ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ದಾರೆ ಅಥವಾ ಸ್ವಾಧಿನಪಡಿಸಿಕೊಂಡಿದ್ದಾರೆ.
ಇಂತಹ ಹಲವು ಪ್ರಕರಣಗಳು ಅಯೋಧಯೆಯಲ್ಲಿ ನಡೆದಿದ್ದು, ಅಧಿಕಾರಿ ವರ್ಗ ಇದರಲ್ಲಿ ಭಾಗಿಯಾಗಿದೆ ಎಂದು ತನಿಖಾ ವರದಿ ಬಹಿರಂಗ ಪಡೆಸಿತ್ತು. ಈ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.