ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ದೆಹಲಿಯಿಂದ 150 ಕ್ಕೂ ಹೆಚ್ಚು ಹಿರಿಯ ಬಿಜೆಪಿ ನಾಯಕರು ಪಕ್ಷದ ಗೆಲುವಿಗಾಗಿ ಎರಡು ರಾಜ್ಯಗಳಲ್ಲಿ ಸಂಚರಿಸುತ್ತಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದ 44 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮತ್ತು ಬೂತ್ ನಿರ್ವಹಣೆಯನ್ನು ಸಮನ್ವಯಗೊಳಿಸಲು ಮತ್ತು ಸುವ್ಯವಸ್ಥಿತಗೊಳಿಸಲು, 100 ಕ್ಕೂ ಹೆಚ್ಚು ಹಿರಿಯ ನಾಯಕರು ಮತ್ತು ಕಾರ್ಯಕರ್ತರನ್ನು ಜಿಲ್ಲಾ ಉಸ್ತುವಾರಿಗಳಾಗಿ ನಿಯೋಜಿಸಲಾಗಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವ ಬಿಜೆಪಿ ನಾಯಕರ ತಂಡವನ್ನು ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ವಿಜೇಂದರ್ ಗುಪ್ತಾ ಮತ್ತು ಹಾಲಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪ್ರತಾಪ್ ಸಿಂಗ್ ಅವರು ಮೇಲ್ವಿಚಾರಣೆ ಮಾಡುತ್ತಾರೆ ತಿಳಿಸಿದ್ದಾರೆ.
ಇದನ್ನೂ ಓದಿ: ಕುಸ್ತಿಪಟುಗೆ ವೇದಿಕೆಯಲ್ಲಿ ಕಪಾಳಕ್ಕೆ ಭಾರಿಸಿದ ಬಿಜೆಪಿ ಸಂಸದ; ವಿಡಿಯೊ ವೈರಲ್
“ಪಕ್ಷವು ಚುನಾವಣೆಗೆ ಹೋರಾಡುತ್ತಿರುವ ಸಮಯದಲ್ಲಿ ಸಹಾಯ ಮಾಡಲು ವಿವಿಧ ರಾಜ್ಯಗಳಿಂದ ನಾಯಕರನ್ನು ಕಳುಹಿಸುವುದು ಸಾಮಾನ್ಯವಾಗಿದೆ. ಉತ್ತರಾಖಂಡ ಮತ್ತು ಪಶ್ಚಿಮ ಉತ್ತರ ಪ್ರದೇಶಕ್ಕೆ ಸಮೀಪವಿರುವ ದೆಹಲಿಯ ನಾಯಕರು ಇಲ್ಲಿ ಪ್ರಭಾವ ಬೀರುತ್ತಾರೆ” ಎಂದು ದೆಹಲಿ ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ದೆಹಲಿ ನಾಯಕರ ತಂಡವು ಒಂಬತ್ತು ಜಿಲ್ಲೆಗಳ ಈ 44 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 50 ದಿನಗಳ ಕಾಲ ಬೂತ್ ನಿರ್ವಹಣಾ ಕಾರ್ಯತಂತ್ರಗಳನ್ನು ಬಲಪಡಿಸುವಲ್ಲಿ ಸ್ಥಳೀಯ ನಾಯಕರೊಂದಿಗೆ ಕೆಲಸ ಮಾಡುತ್ತಾರೆ. ಉತ್ತರ ಪ್ರದೇಶದ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಈ 44 ಸ್ಥಾನಗಳಲ್ಲಿ 32 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ನಮ್ಮ ಗುರಿ ಕೇವಲ ಅವುಗಳನ್ನು ಉಳಿಸಿಕೊಳ್ಳುವುದಷ್ಟೇ ಅಲ್ಲ, ಸಂಖ್ಯಾಬಲ ಹೆಚ್ಚಿಸುವುದೂ ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ದೆಹಲಿ ಬಿಜೆಪಿ ಉಪಾಧ್ಯಕ್ಷರಾದ ವೀರೇಂದ್ರ ಸಚ್ದೇವ, ಅಶೋಕ್ ಗೋಯೆಲ್ ದೇವ್ರಹಾ ಮತ್ತು ಸುನಿಲ್ ಯಾದವ್, ವಕ್ತಾರರಾದ ವಿಕ್ರಮ್ ಬಿಧುರಿ, ಆದಿತ್ಯ ಝಾ, ಮೋಹನ್ ಲಾಲ್ ಮತ್ತು ಬ್ರಿಜೇಶ್ ರೈ, ಮಾಜಿ ಮೇಯರ್ ಜೈ ಪ್ರಕಾಶ್ ಉತ್ತರ ಪ್ರದೇಶಕ್ಕೆ ನಿಯೋಜಿತರಾದವರಲ್ಲಿ ಸೇರಿದ್ದಾರೆ.
ಇನ್ನು ಉತ್ತರಾಖಂಡದ 20 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ಸ್ಥಳೀಯ ನಾಯಕರೊಂದಿಗೆ ಸಮನ್ವಯ ಸಾಧಿಸಲು 60 ಮಂದಿ ದೆಹಲಿಯ ಬಿಜೆಪಿ ನಾಯಕರನ್ನು ನಿಯೋಜಿಸಲಾಗಿದೆ. ಪಕ್ಷದ ಹಿರಿಯ ನಾಯಕರಾದ ರಾಜೇಶ್ ಭಾಟಿಯಾ ಮತ್ತು ಯೋಗೇಂದರ್ ಚಂದೋಲಿಯಾ ಕ್ರಮವಾಗಿ ತಂಡದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.