ಕಳೆದ 70 ವರ್ಷದಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ದುಡ್ಡಿನ ಮೇಲೆ ಮೋಜು-ಮಸ್ತಿ ನಡೆಸಿದೆ ಎಂದು ಆರೋಪಿಸುವ ಪ್ರಧಾನಿ ಮೋದಿ, ಇಲ್ಲಿಯ ಜನಸಾಮಾನ್ಯರು ಎದುರಿಸುತ್ತಿರುವ ದುಃಖ ದುಮ್ಮಾನಗಳ ನಿವಾರಣೆಗೆ ನಿಮ್ಮ ಯೋಜನೆಗಳೇನು ಎಂದು ಕೇಳುವವರಿಗೆ ದೇಶದ್ರೋಹದ ಪಟ್ಟ ಕಟ್ಟುವುದು ಬಹಿರಂಗವಾಗಿ ನಡೆದಿದೆ.
ಮತ್ತೊಂದೆಡೆ, ದೇಶದ್ರೋಹಿಗಳ ನಿಕಟ ಒಡನಾಡಿಯಾದ ವ್ಯಕ್ತಿ-ಸಂಸ್ಥೆಗಳ ವಹಿವಾಟು ಅಭಿವೃದ್ಧಿಗಾಗಿ ಕಾರ್ಮಿಕರ ಭವಿಷ್ಯನಿಧಿಯನ್ನೇ ಒತ್ತೆ ಇಟ್ಟು ದೇಶಾಭಿಮಾನ ಮೆರೆಯುತ್ತಿದೆ. ಭಾರತೀಯ ಸಂತ-ಸಂಸ್ಕೃತಿಯ ನೈಜ ವಾರಸುದಾರ ಎಂಬ ಖ್ಯಾತಿಯ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರದಲ್ಲಿ ನಡೆದಿದೆ. ಕಾರ್ಮಿಕರ ಭವಿಷ್ಯನಿಧಿಯನ್ನು ದೇಶದ್ರೋಹಿ ಒಡನಾಡಿಯ ಅಭಿವೃದ್ಧಿಗೆ ಉದಾರವಾಗಿ ನೀಡಿ, ತಮ್ಮ ದೇಶಾಭಿಮಾನದ ನೈಜ ಸ್ವರೂಪ ತೋರಿದ್ದಾರೆ.
ಉತ್ತರಪ್ರದೇಶದ ವಿದ್ಯುತ್ ನಿಗಮ ನಿಯಮಿತದ (ಯುಪಿಪಿಸಿಎಲ್) ಕಾರ್ಮಿಕರಿಗೆ ಸೇರಿದ ಒಟ್ಟು 2,600 ಕೋಟಿ ರೂ.ಗಳನ್ನು ದೇಶದ್ರೋಹಿ ದಾವೂದ್ ಇಬ್ರಾಹಿಂ ಸಹಚರ ಇಕ್ಬಾಲ್ ಮಿರ್ಚಿ ಪಾಲುದಾರಿಕೆಯ ಡಿಎಚ್ಎಫ್ಎಲ್ನಲ್ಲಿ (ಮಾರ್ಚ್ -2017 ಹಾಗೂ ಡಿಸೆಂಬರ್-2018ರ ಅವಧಿ) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೂಡಿದ್ದಾರೆ.
ಮುಂಬೈ ಮೂಲದ ಈ ವಿವಾದಿತ ಕಂಪನಿಯಲ್ಲಿ ಬಂಡವಾಳ ಹೂಡಲು ಕಾರ್ಮಿಕರ ಭವಿಷ್ಯ ನಿದಿಯೇ ಬೇಕಿತ್ತೆ? ಅದೂ, ದೇಶದ್ರೋಹಿ ದಾವೂದ್ ಇಬ್ರಾಹಿಂ ಸಹಚರನಾಗಿದ್ದ ಇಕ್ಬಾಲ್ ಮಿರ್ಚಿ ಒಡೆತನದ ಸಂಸ್ಥೆಗೆ ಎಂಬುದೀಗ ಚರ್ಚೆಯ ವಸ್ತುವಾಗುತ್ತಿದೆ.
ಆರ್ಥಿಕ ದುರುಪಯೋಗದ ಗಂಭೀರ ಪ್ರಕರಣವಲ್ಲವೆ?
ಉತ್ತರಪ್ರದೇಶ ವಿದ್ಯುತ್ ನಿಗಮ ನಿಯಮಿತದ ಕಾರ್ಮಿಕರ 2,600 ಕೋಟಿ ರೂ.ಗಳಷ್ಟು ಭವಿಷ್ಯ ನಿಧಿಯನ್ನು ಬೇರೆ ಉದ್ದೆಶಗಳಿಗಾಗಿ ಬಳಸುವುದು ಅಪರಾಧ. ಯೋಗಿ ಆದಿತ್ಯನಾಥ ಸರ್ಕಾರದ ಕಾರ್ಮಿಕರಿಗೆ ಸೇರಿದ ಹಾಗೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾಮ್ಯದ ಭವಿಷ್ಯ ನಿದಿ-ಇಷ್ಟೊಂದು ಭಾರಿ ಮೊತ್ತದ ಹಣವನ್ನು ವಿವಾದಿತ ಕಂಪನಿಯೊಂದರಲ್ಲಿ ಹೂಡಿರುವುದು ಹತ್ತು ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ.
ದೇಶಾಭಿಮಾನಿ ಮುಖ್ಯಮಂತ್ರಿ ಹಾಗೂ ದೇಶದ್ರೋಹಿಯ ಒಡನಾಡಿಯೊಬ್ಬರ ಒಡೆತನದ ಕಂಪನಿಯೊಂದಿಗಿರುವ ಸಂಬಂಧವೂ ಈಗ ಪ್ರಶ್ನಾರ್ಹವಾಗುತ್ತಿದೆ.
ತನಿಖೆ ಆರಂಭವೇ ಭ್ರಷ್ಟಾಚಾರಕ್ಕೆ ಸಾಕ್ಷಿ
ಓತಿಕಾಟಕ್ಕೆ ಬೇಲಿ ಸಾಕ್ಷಿ ಎಂಬಂತೆ, ಉತ್ತರಪ್ರದೇಶ ಸರಕಾರದ (ಇಂಧನ) ಪ್ರಧಾನ ಕಾರ್ಯದರ್ಶಿ ಅಲೋಕಕುಮಾರ್, ಪ್ರಕರಣದ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಸಾಕ್ಷಿ ನುಡಿಯುತ್ತಿದೆ.
ಈಗಾಗಲೇ, ವಿದ್ಯುತ್ ವಲಯ ಕಾರ್ಮಿಕರ ಟ್ರಸ್ಟ್ ಪ್ರಧಾನ ವ್ಯವಸ್ಥಾಪಕ ಪಿ.ಕೆ.ಗುಪ್ತಾ ಅವರನ್ನು ಅಮಾನತುಗೊಳಿಸಿದ್ದು, ಪ್ರಕರಣದ ವಿರುದ್ಧ ಕಾನೂನು ಕ್ರಮ ಜರುಗಿಸಲು ಇಂಧನ ವಿಭಾಗ ನಿರ್ದೇಶಕ ಸುಧೀರ್ ಆರ್ಯ ಅವರಿಗೆ ಸೂಚಿಸಿದ್ದಾರೆ.
ಹೂಡಿಕೆ ವಾಪಸಾತಿಗೆ ಹೆಚ್ಚಿದ ಒತ್ತಡ
ಮತ್ತೊಂದು ಕಂಪನಿಯ ನೆರಳಲ್ಲಿ ಬೆಳೆಯುವ ಕಂಪನಿಯೊಂದಕ್ಕೆ ಪೂರ್ವಾಪರ ತಿಳಿಯದೇ ಕಾರ್ಮಿಕರ ಸಾವಿರಾರು ಕೋಟಿ ರೂ.ಗಳ ಭವಿಷ್ಯ ನಿಧಿ ಹೂಡಿದ್ದನ್ನು ಪ್ರಶ್ನಿಸಿದ್ದು ಮಾತ್ರವಲ್ಲ; ಬಂಡವಾಳ ಹೂಡಿಕೆಯನ್ನು ವಾಪಸ್ ಪಡೆಯಲು ಉತ್ತರಪ್ರದೇಶ ರಾಜ್ಯ ವಿದ್ಯುತ್ ಮಂಡಳಿಯ ಎಂಜಿನಿಯರರ ಸಂಸ್ಥೆಯು (ಯುಪಿಎಸ್ಇಬಿಇಎ) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದು ಆಗ್ರಹಿಸಿದೆ.
ಸುಮಾರು 2600 ಕೋಟಿ ರೂ.ಗಳಿಗೂ ಅಧಿಕ ಹಣ ಡಿ.ಎಚ್.ಎಫ್.ಎಲ್ ನಲ್ಲಿದೆ. ಅದನ್ನು ಮರಳಿ ಪಡೆಯಬೇಕು. ಮಾತ್ರವಲ್ಲ ಪ್ರಧಾನ ಪ್ರಾವಿಡೆಂಟ್ ಫಂಡ್ (ಜಿಪಿಎಫ್) ಹಾಗೂ ಕಾಂಟ್ರಿಬ್ಯೂಟರಿ ಪ್ರಾವಿಡೆಂಟ್ ಫಂಡ್ (ಸಿಪಿಎಫ್) ಟ್ರಸ್ಟ್ ನಿಂದ ಇನ್ನು ಮುಂದೆ ಇಂತಹ ಖಾಸಗಿ ಸಂಸ್ಥೆಗಳಿಗೆ ಹಣ ಹೂಡುವುದಿಲ್ಲ ಎಂಬ ಬಗ್ಗೆ ಭರವಸೆ ನೀಡುವಂತೆ ಯುಪಿಎಸ್ಇಬಿಇಎ ಪ್ರಧಾನ ಕಾರ್ಯದರ್ಶಿ ರಾಜೀವ್ ಕುಮಾರ್ ಮುಖ್ಯಮಂತ್ರಿ ಯೋಗಿ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದಾರೆ.
ಅಲ್ಲದೇ, 2017ರ ಮಾರ್ಚ್ನಿಂದ2018-ಡಿಸೆಂಬರ್ ವರೆಗೆ ಡಿ.ಎಚ್.ಎಫ್.ಎಲ್ ನಲ್ಲಿ ವಿದ್ಯುತ್ ಕಾರ್ಮಿಕರ ಭವಿಷ್ಯ ನಿಧಿಯನ್ನು ಠೇವಣಿಯಾಗಿ ಇರಿಸಲಾಗಿದೆ. ಡಿಎಚ್ಎಫ್ಎಲ್ ಕಂಪನಿಯು ಇತರೆ ಖಾಸಗಿ ವಿವಾದಿತ ಕಂಪನಿಗಳೊಂದಿಗೆ ನಡೆಸುವ ವ್ಯಾಪಾರ-ವಹಿವಾಟುಗಳ ಹಿನ್ನೆಲೆಯಲ್ಲಿ ಮುಂಬೈ ಹೈಕೋರ್ಟ್ ಸಹ ಪ್ರಕರಣವೊಂದರಲ್ಲಿ ತಡೆಯಾಜ್ಞೆ ನೀಡಿದೆ.
ಸುಮಾರು 2,600 ಕೋಟಿ ರೂ.ಗಳಿಗೂ ಅಧಿಕ ಹಣ ಡಿಎಚ್ಎಫ್ಎಲ್ ನಲ್ಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಹೇಳುತ್ತಾರೆ. ಕಾರ್ಮಿಕರಿಗೆ ಸೇರಿದ ಭವಿಷ್ಯನಿಧಿಯು ಖಾಸಗಿ ಕಂಪನಿಯ ವ್ಯವಹಾರಕ್ಕೆ ವರ್ಗಾಯಿಸುವುದು ಗಂಭೀರ ಅಪರಾಧ. ಕಾರ್ಮಿಕರ ಸೇವಾ ನಿವೃತ್ತಿಯ ನಂತರ ಈ ಭವಿಷ್ಯನಿಧಿ ಅವರನ್ನು ಕಾಪಾಡುತ್ತದೆ. ಇಂತಹ ಹಣವನ್ನು ಖಾಸಗಿ ಕಂಪನಿಗೆ ನೀಡುವುದು ಎಷ್ಟು ಸರಿ ಎಂದು ಸಂಸ್ಥೆಯ ಎಂಜಿನಿಯರರು ಪ್ರಶ್ನಿಸುತ್ತಿದ್ದಾರೆ.
ಇನ್ನು ಈ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಕೂಡ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
उप्र भाजपा सरकार ने राज्य के पॉवर कार्पोरेशन के कर्मियों की भविष्य निधि का पैसा DHFL जैसी डिफाल्टर कम्पनी में फँसा दिया है।
किसका हित साधने के लिए कर्मचारियों की 2000 करोड़ से भी ऊपर की गाढ़ी कमाई इस तरह की कम्पनी में लगा दी गई?
कर्मचारियों के भविष्य के ये खिलवाड़ क्या जायज है?
— Priyanka Gandhi Vadra (@priyankagandhi) November 1, 2019
ಪಾರದರ್ಶಕ ಆಡಳಿತಕ್ಕೆ ಸವಾಲು
ತಮ್ಮ ಕಣ್ಣು ತಪ್ಪಿಸಿ ಪ್ರಕರಣ ನಡೆದಿದೆ ಎನ್ನುವುದಾದರೆ ತನಿಖೆ ತೀವ್ರಗೊಳಿಸಲಿ ಎಂದು ಅಖಿಲ ಭಾರತ ವಿದ್ಯುತ್ ಎಂಜಿನಿಯರರ ಒಕ್ಕೂಟದ ಅಧ್ಯಕ್ಷ ಶೈಲೇಂದ್ರ ದುಬೆ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪಾರದರ್ಶಕ ಆಡಳಿತಕ್ಕೆ ಸವಾಲು ಹಾಕಿದ್ದಾರೆ. ಖಾಸಗಿ ಕಂಪನಿಗೆ ಹೂಡಿದ ಹಣವನ್ನು ಶೀಘ್ರವೇ ವಾಪಸ್ ಪಡೆಯಬೇಕು. ಯಾರ ಆದೇಶದ ಮೇರೆಗೆ ಮಂಡಳಿಯು ಕಾರ್ಮಿಕರ ಭವಿಷ್ಯನಿಧಿಯನ್ನು ಖಾಸಗಿ ಕಂಪನಿಯಲ್ಲಿ ಹೂಡಲು ನಿರ್ಧರಿಸಿತು?. ಮಂಡಳಿಯು ಬಹುದೊಡ್ಡ ತಪ್ಪು ಮಾಡಿದೆ. ಬಹುಕೋಟಿ ರೂ.ಗಳ ಹಗರಣ ಇದಾಗಲಿದೆ. ತನಿಖೆಯ ಮೂಲಕವೇ ಬಯಲಿಗೆಳೆಯಬೇಕು ಎಂದು ಆಗ್ರಹಿಸಿದ್ದಾರೆ.
ದುಬೈಯ ವಿವಾದಿತ “ಮಿರ್ಚಿ’ ಸಂಪರ್ಕ
ಭೂ ಅಕ್ರಮಗಳಿಗೆ ಸಂಬಂಧಿಸಿದಂತೆ ದೇಶದ್ರೋಹಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ವ್ಯವಹಾರಗಳು ಬಯಲಿಗೆ ಬರುತ್ತಿದ್ದಂತೆ, ಜಾರಿ ನಿರ್ದೇಶನಾಲಯವು ಡಿ.ಎಚ್.ಎಫ್.ಎಲ್ ಸನ್ ಬ್ಲಿಂಕ್ ರಿಯಲ್ ಎಸ್ಟೇಟ್ ಸಂಸ್ಥೆಗಳ ವಹಿವಾಟುಗಳನ್ನು ಪರಿಶೀಲಿಸಿ ತನಿಖೆಗೆ ಒಳಪಡಿಸಿತ್ತು. ಈ ವಹಿವಾಟುಗಳಿಂದ ದುಬೈಯಲ್ಲಿರುವ “ಮಿರ್ಚಿ’ ಸಂಸ್ಥೆಯ ಮೂಲಕವೇ ದಾವೂದ್ ಗುಂಪಿಗೆ ಹಣ ರವಾನೆಯಾಗುತ್ತಿತ್ತು.
ಡಿ.ಎಚ್.ಎಫ್.ಎಲ್ ಸಂಸ್ಥೆಯ ಅಧ್ಯಕ್ಷ ಕಪಿಲ್ ವಾಧವನ್ ಹಾಗೂ ಆತನ ಸಹೋದರ ಧೀರಜ್ ಅವರನ್ನು ಇತ್ತೀಚೆಗೆ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಒಳಪಡಿಸಿ, ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಸುಮಾರು 2186 ಕೋಟಿ ರೂ.ಗಳ ಸಾಲ ನೀಡಿದ್ದರ ಬಗ್ಗೆ ಪ್ರಶ್ನಿಸಿತ್ತು.
ಕಾರ್ಮಿಕರ ಭವಿಷ್ಯ ನಿಧಿಯನ್ನು ಖಾಸಗಿ ಕಂಪನಿಗೆ ಅದರಲ್ಲೂ ವಿವಾದಿತ ಕಂಪನಿಯಲ್ಲಿ ತೊಡಗಿಸಿದ ಉತ್ತರಪ್ರದೇಶ ಸರ್ಕಾರ ಗಂಭೀರ ಅಪರಾಧ ಎಸಗಿದ್ದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಕೋಟ್ಯಂತರ ರೂ.ಗಳ ದುರುಪಯೋಗಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉತ್ತರಿಸಬೇಕು ಎಂಬ ಆಗ್ರಹ ಹೆಚ್ಚುತ್ತಿದೆ.
(ಮಾಹಿತಿ ಮೂಲ: ನ್ಯಾಷನಲ್ ಹೆರಾಲ್ಡ್)