ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪುನರ್ ನಿರ್ಮಿಸಿದ ಸಮಾಧಿಯನ್ನು ಉದ್ಘಾಟಿಸಿದ್ದಾರೆ. ಸುಮಾರು 35 ಟನ್ ತೂಕದ 12 ಅಡಿಯ ಶಂಕರಾಚಾರ್ಯರ ಪ್ರತಿಮೆ ನಿರ್ಮಾಣದ ಕೆಲಸವು 2019 ರಲ್ಲಿ ಪ್ರಾರಂಭವಾಗಿತ್ತು.
ಇದರ ಜೊತೆಗೆ ಪ್ರಧಾನಿ ಕೇದಾರನಾಥದಲ್ಲಿ 400 ಕೋಟಿ ರೂಪಾಯಿಗಳ ಪುನರ್ನಿರ್ಮಾಣ ಯೋಜನೆಗಳ ಉದ್ಘಾಟನೆ ಹಾಗೂ ಅಡಿಪಾಯ ಹಾಕಿದರು.
ಅಲ್ಲಿನ ಪುರೋಹಿತರು ಮತ್ತು ಭಕ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಶ್ರಧ್ದಾ ಕೇಂದ್ರಗಳ ಪುನರಾಭಿವೃದ್ಧಿಯು ಶಂಕರಾಚಾರ್ಯ ಮತ್ತು ಸ್ವಾಮಿ ವಿವೇಕಾನಂದರಂತಹ ಪ್ರಾಚೀನ ಸಂತರು ಮತ್ತು ದಾರ್ಶನಿಕರ ಬಗ್ಗೆಗಿನ ಹೆಮ್ಮೆ ಬಳೆಯುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣೆಯಲ್ಲಿ BJP ಸೋಲಿಸಿದರೆ ಇಂಧನ ದರ ಇಳಿಯುತ್ತದೆ ಎಂಬ ಪಾಠ ಕಲಿಸಿಕೊಟ್ಟ ಮೋದಿ: ಸಿದ್ದರಾಮಯ್ಯ
ಅಯೋಧ್ಯೆಯಲ್ಲಿ ಶತಮಾನಗಳ ನಂತರ ಅದರ ವೈಭವವನ್ನು ಮರುಸ್ಥಾಪಿಸಲು ಭವ್ಯವಾದ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ಕಾಶಿಯಲ್ಲಿ ವಿಶ್ವನಾಥ ಧಾಮ ಯೋಜನೆಯ ಕಾಮಗಾರಿಯು ಪೂರ್ಣಗೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಚಾರ್ಧಾಮ್ ಸರ್ವಋತು ರಸ್ತೆ ಮತ್ತು ಋಷಿಕೇಶ-ಕರ್ಣಪ್ರಯಾಗ ರೈಲು ಸಂಪರ್ಕ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ಉತ್ತರಾಖಂಡದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳುತ್ತಿರುವ ವೇಗದಿಂದಾಗಿ ಕಳೆದ 100 ವರ್ಷಗಳಲ್ಲೇ ಹೆಚ್ಚು ಯಾತ್ರಿಕರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
Speaking at Kedarnath. Watch. https://t.co/QtCLIbRZy7
— Narendra Modi (@narendramodi) November 5, 2021
ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕೇದಾರನಾಥಕ್ಕೆ ಭೇಟಿ ಪ್ರಾರಂಭಿಸಿದ ಮೋದಿ, ಈ ಸ್ಥಳಕ್ಕೆ ಭೇಟಿ ನೀಡುವುದು ಯಾವಾಗಲೂ ನನಗೆ ಅಗಾಧವಾದ ಅನುಭವ ನೀಡುತ್ತದೆ ಎಂದು ಹೇಳಿದ್ದಾರೆ.
ಬೆಳಗ್ಗೆ ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಉತ್ತರಾಖಂಡ ಗವರ್ನರ್ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ), ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳಾದ ಸುಬೋಧ್ ಉನಿಯಾಲ್ ಮತ್ತು ಗಣೇಶ್ ಜೋಶಿ, ಉತ್ತರಾಖಂಡ ವಿಧಾನಸಭೆ ಸ್ಪೀಕರ್ ಪ್ರೇಮಚಂದ್ ಅಗರ್ವಾಲ್ ಅವರು ಬರಮಾಡಿಕೊಂಡರು.
ಇದನ್ನೂ ಓದಿ: ಲಸಿಕೆ ಸರ್ಟಿಫಿಕೇಟ್ನಲ್ಲಿ ಮೋದಿ ಫೋಟೋ ತೆಗೆಯಿರಿ ಎಂದು ಕೇಳುವುದು ಅಪಾಯಕಾರಿ: ಕೇರಳ ಹೈಕೋರ್ಟ್