ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ನ ವಿಜ್ಞಾನಿಗಳು ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ್ ರಾಘವನ್ರವರು ಮುಂದಿನ ವರ್ಷದ ಆರಂಭದಲ್ಲಿ ಕೊರೊನಾಗೆ ಲಸಿಕೆ ಲಭ್ಯವಾಗಬಹುದು ಎಂದು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ.
ಆಗಸ್ಟ್ 15ರೊಳಗೆ ಲಸಿಕೆ ಕಂಡುಹಿಡಿಯಬೇಕೆಂದು ಐಸಿಎಂಆರ್ ಹೊರಡಿಸಿದ್ದ ನಿರ್ದೇಶನಕ್ಕೆ ವಿರುದ್ಧವಾಗಿ ವಿಜ್ಞಾನಿಗಳು ಹೇಳಿಕೆ ನೀಡಿದ್ದಾರೆ. ಐಸಿಎಂಆರ್ನ ನಿರ್ದೇಶನವು ಹಲವಾರು ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರಿಂದ ಭಾರೀ ಟೀಕೆಗೆ ಒಳಗಾಗಿತ್ತು.
ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಹವಾಮಾನದ ಸಂಸದೀಯ ಸ್ಥಾಯಿ ಸಮಿತಿಯ ಸಭೆಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸರ್ಕಾರದ ಸನ್ನದ್ಧತೆ ಕುರಿತು ಚರ್ಚಿಸಲು ಶುಕ್ರವಾರ ನಡೆದ ಸಭೆಯಲ್ಲಿ ಸಮಿತಿಯ 30 ಸದಸ್ಯರಲ್ಲಿ ಆರು ಮಂದಿ ಮಾತ್ರ ಭಾಗವಹಿಸಿದ್ದರು.
ಜೈರಾಮ್ ರಮೇಶ್ ಕಳೆದ ಮೂರು ತಿಂಗಳುಗಳಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಮೂರು ಬಾರಿ ಪತ್ರ ಬರೆದಿದ್ದು, ಪ್ಯಾನೆಲ್ ನೇರವಾಗಿ ಸಭೆ ಸೇರಲು ನೀಡುವಂತೆ ಕೋರಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಲಾಕ್ಡೌನ್ ಆರಂಭವಾದ ನಂತರ ಶುಕ್ರವಾರ ಮೊದಲ ಸಭೆ ನಡೆದಿದೆ.
“ನಮ್ಮ ಸ್ಥಾಯಿ ಸಮಿತಿಯು ಇಂದು ಕೋರಂ ಹೊಂದಿರಲಿಲ್ಲ, ಆದರೆ ಇದು ಖಂಡಿತವಾಗಿಯೂ ಔಚಿತ್ಯಪೂರ್ಣವಾಗಿತ್ತು. ಕಠಿಣ ಸಂದರ್ಭದಲ್ಲಿಯೂ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ರಾಜಕೀಯ ಪಕ್ಷಗಳ ಸಹವರ್ತಿ ಸಮಿತಿಯ ಸದಸ್ಯರಿಗೆ ಮತ್ತು ಪ್ರಕ್ರಿಯೆಯನ್ನು ಸಮೃದ್ಧಗೊಳಿಸಿದ ಅಧಿಕಾರಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಇಂತಹ ಸಂವಹನಗಳಿಂದ ನಮ್ಮ ಪ್ರಜಾಪ್ರಭುತ್ವವು ಬಲಗೊಳ್ಳುತ್ತದೆ” ಎಂದು ಸಭೆಯ ನಂತರ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಸಹ ಕೊರೊನಾಗೆ ಲಸಿಕೆ ಈ ವರ್ಷದಲ್ಲಿ ಅಂತ್ಯದಲ್ಲಿ ಸಾಧ್ಯ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ: ತ್ವರಿತ ಲಸಿಕೆ ಹೆಸರಿನಲ್ಲಿ ನಮ್ಮ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿರುವ ICMR!