ಪ್ರವಾಹಕ್ಕೆ ಒಳಗಾಗಿರುವ 6 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸಚಿವರೊಂದಿಗೆ ಇಂದು ಪ್ರಧಾನಿ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಪ್ರಧಾನಿಯವರು ನೂತನ ತಂತ್ರಜ್ಞಾನ ಮತ್ತು ಉತ್ತಮ ಸಂವಹನದ ಮೂಲಕ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ಭರವಸೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಕೇರಳ, ಬಿಹಾರ, ಅಸ್ಸಾಂ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಚಿವರು ಸಭೆಯಲ್ಲಿ ಭಾಗವಹಿಸಿದ್ದು, ನೈರುತ್ಯ ಮಾನ್ಸೂನ್ ಎದುರಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಅತಿವೃಷ್ಟಿಯಿಂದ ಬಾಧಿತವಾಗಿರುವ ಕರ್ನಾಟಕಕ್ಕೆ 4 ಸಾವಿರ ಕೋಟಿ ರೂ ಪ್ಯಾಕೇಜ್ ಘೋಷಿಸಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. ರಾಜ್ಯದ 12 ಜಿಲ್ಲೆಗಳಲ್ಲಿನ ಅತಿವೃಷ್ಟಿ ಪರಿಸ್ಥಿತಿಯನ್ನು ವಿವರಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ವಿವಿಧ ಅಧಿಕಾರಿಗಳು ತಕ್ಷಣವೇ ಪರಿಹಾರ ಕೊಡಬೇಕೆಂದು ಒತ್ತಾಯಿಸಿದೆ. ಅಲ್ಲದೇ ರಕ್ಷಣಾ ಕಾರ್ಯಗಳಿಗೆ ಹೆಚ್ಚುವರಿ ನಾಲ್ಕು ಎನ್ಡಿಆರ್ಎಫ್ ತಂಡಗಳನ್ನ ಕಳುಹಿಸಿಕೊಡಬೇಕು ಎಂದೂ ಕೇಳಿಕೊಂಡಿದೆ.
ಭೂಕುಸಿತ ಅಧ್ಯಯನಕ್ಕೆ ಪ್ರತ್ಯೇಕ ತಂಡ ಕಳಿಸಿಕೊಡುವುದು, ಮಳೆ ಹಾನಿಗೆ ಪ್ರತ್ಯೇಕ ಪ್ಯಾಕೇಜ್ ನೀಡುವುದು, ಪರಿಹಾರ ಹಾಗೂ ಪುನರ್ವಸತಿಗಾಗಿ ರಾಜ್ಯಕ್ಕೆ ಎಸ್ಡಿಆರ್ಎಂಎಫ್ನ ಮುಂದಿನ ಕಂತಿನ ರೂ. 395 ಕೋಟಿ ರೂ. ಗಳನ್ನು ತಕ್ಷಣದ ಬಿಡುಗಡೆಗಾಗಿ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಹಲವು ಬೇಡಿಕೆಗಳನ್ನು ರಾಜ್ಯ ಪ್ರಧಾನಿಗಳ ಮುಂದಿಟ್ಟಿದೆ. ಆದರೆ ಪ್ರಧಾನಿಯವರು ಯಾವುದೇ ತತ್ಕ್ಷಣದ ಪರಿಹಾವನ್ನು ಘೋಷಿಸಿಲ್ಲ ಎನ್ನಲಾಗಿದೆ.
ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯ ಕುರಿತು ಇಂದು ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ರಾಜ್ಯದ ಪ್ರವಾಹ ಸ್ಥಿತಿಯ ಮಾಹಿತಿ ಒದಗಿಸಲಾಯಿತು.@narendramodi @CMofKarnataka @BSYBJP
ಈ ಕೆಳಕಂಡ ವಿಷಯಗಳನ್ನು ಮಾನ್ಯ ಪ್ರಧಾನಿಗಳಿಗೆ ಕೋರಲಾಯಿತು pic.twitter.com/vQvyDbRI1k
— Basavaraj S Bommai (@BSBommai) August 10, 2020
ವಿಡಿಯೋ ಸಂವಾದದ ಬಳಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಂಚಿವ ಆರ್. ಅಶೋಕ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮೊಂದಿಗೆ 2 ಗಂಟೆ ಮಾತನಾಡಿದ್ದಾರೆ. ಇಲ್ಲಿಯ ವಸ್ತುಸ್ಥಿತಿಯನ್ನು ಗಮನಕ್ಕೆ ತಂದಿದ್ದೇವೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಆದ ಮಳೆಯ ಬಗ್ಗೆ ಮಾಹಿತಿ ಕೇಳಿದರು. ಆ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇ. 18ರಷ್ಟು ಮಳೆಯಾಗಿದೆ. ಕೊಡಗಿನಲ್ಲಿ ಶೇ. 500ರಷ್ಟು ಹೆಚ್ಚು ಮಳೆಯಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹೆಚ್ಚು ಮಳೆಯಾಗಿದೆ. 56 ತಾಲೂಕಿನ 885 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. 250 ಸೇತುವೆಗಳು ಹಾಳಾಗಿವೆ. 3 ಸಾವಿರ ಮನೆಗಳು ಹಾಳಾಗಿದೆ. 4 ಸಾವಿರ ಕೋಟಿ ರೂ ನಷ್ಟವಾಗಿರುವ ಪ್ರಾಥಮಿಕ ಅಂದಾಜು ಇದೆ ಎಂಬ ಮಾಹಿತಿಯನ್ನು ಪ್ರಧಾನಿಗೆ ತಿಳಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕಳೆದ ವರ್ಷ ಪ್ರವಾಹ ಪರಿಸ್ಥಿತಿ ಕುರಿತು ಕರ್ನಾಟಕವು 35,000 ಕೋಟಿ ರೂ ಅಂದಾಜು ನಷ್ಟ ಸೇರಿ ಪರಿಹಾರಕ್ಕೆ ಮನವಿ ಮಾಡಿದ್ದರೆ, ಕೇಂದ್ರವು 1200 ಕೋಟಿ ರೂ ಮತ್ತು 669 ಕೋಟಿ ರೂ ಸೇರಿ ಎರಡು ಕಂತುಗಳಲ್ಲಿ 1869 ಕೋಟಿ ರೂ ಮಾತ್ರ ಬಿಡುಗಡೆ ಮಾಡಿದೆ.
ಪ್ರತಿಪಕ್ಷಗಳು ರಾಜ್ಯ ಸರ್ಕಾರ ಮೋದಿಯವರ ಬಳಿ ಹೆಚ್ಚು ಪರಿಹಾರ ಕೇಳಲು ವಿಫಲವಾಗಿದೆ. ಹಾಗಾಗಿ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದುದೊಯ್ಯಬೇಕು ಎಂದು ಆಗ್ರಹಿಸಿವೆ.
ಇದನ್ನೂ ಓದಿ: ನಿಲ್ಲದ ಪ್ರವಾಹ, ಬಾರದ ಪರಿಹಾರ: ಇಂದಿನ ಪ್ರಧಾನಿ ಸಭೆಯಲ್ಲಿ ದನಿಯೆತ್ತಲು ವಿಪಕ್ಷಗಳ ಆಗ್ರಹ
Yes