ಉತ್ತರ ಪ್ರದೇಶದ ಪ್ರತಾಪಘಡ ಜಿಲ್ಲೆಯಲ್ಲಿ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಮಾರಾಮಾರಿ ನಡೆದಿದ್ದು, ಗಲಾಟೆಯಲ್ಲಿ ತಂದೆ ಮತ್ತು ಮಗ ಸಾವನಪ್ಪಿದ್ದಾರೆ. ಈ ಸಂಬಂಧ ಇಬ್ಬರನ್ನು ಈವರೆಗೆ ಬಂಧಿಸಲಾಗಿದ್ದು, ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಇನ್ಸ್ಪೆಕ್ಟರ್ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ.
ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಇಬ್ಬರು ವಕೀಲರ ನೇತೃತ್ವದಲ್ಲಿ ಪಂಚಾಯ್ತಿ ಏರ್ಪಡಿಸಲಾಗಿತ್ತು. ಅಲ್ಲಿ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತೆರಳಿ ಹಿಂಸೆಯುಂಟಾಗಿದೆ. ಆದರೆ ನಮ್ಮ ಗಮನಕ್ಕೆ ತರದೆ ಪಂಚಾಯ್ತಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೂ ಮುಂಜಾಗ್ರತೆ ವಹಿಸದ ಕಾರಣಕ್ಕೆ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ.
ಘಟನೆ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಆಸ್ಪತ್ರೆಗೆ ತೆರಳಿದ್ದೇವೆ. ಆದರೆ ದುರಾದೃಷ್ಟವಶಾತ್ ದಯಶಂಕರ್ ಮಿಶ್ರಾ ಮತ್ತು ಆತನ ಮಗ ಆನಂದ್ ಮಿಶ್ರಾ ಎಂಬುವವರು ಮರಣ ಹೊಂದಿದ್ದಾರೆ. ಮೂರು ಜನರು ಗಾಯಾಳುಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್ಪಿ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜೇಶ್ ಕುಮಾರ್ ಮಿಶ್ರಾ ಮತ್ತು ಆತನ ಮಗನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ದಲಿತನೊಬ್ಬ ಗ್ರಾ.ಪಂ ಮುಖ್ಯಸ್ಥನಾದುದ್ದನ್ನು ಸಹಿಸದ ಮೇಲ್ಜಾತಿಗಳು: ಗುಂಡಿಕ್ಕಿ ಕೊಲೆ