ಮೊನ್ನೆ ರಾತ್ರಿ 11 ಗಂಟೆ ಹೊತ್ತು. ಮೈಸೂರಿನ ಕುವೆಂಪು ನಗರದ ಪೊಲೀಸ್ ಠಾಣೆಯ ಪೊಲೀಸರು ಗದಗಿನ ಒಂದು ಪುಸ್ತಕ ಪ್ರಕಾಶನದ ಪುಟ್ಟ ಆಫೀಸಿನ ಬಾಗಿಲು ಬಡಿದರು!
ಅಲ್ಲಿಗೆ ನ್ಯಾಯಾಧೀಶರ ವಾರ್ ಅ್ಯಂಡ್ ಪೀಸ್ ಅಜ್ಞಾನ ಪೊಲೀಸರ ಮೂಲಕ ಮೈಸೂರಿನಿಂದ 500 ಕಿ.ಮೀ ದೂರದ ಗದಗಿಗೂ ಬಂತು. ಮಧ್ಯ ಅದು ಬೆಂಗಳೂರು ದಾಟಿಯೇ ಬಂತು!
ಹೊಸ ಸರ್ಕಾರದ ಬಂದಿದೆ. ಈಗಷ್ಟೇ ಆಟ ಶುರುವಾಗಿದೆ, ಬರಹಗಾರರು, ಪ್ರಕಾಶಕರು ಮತ್ತು ಜನಸ್ನೇಹಿ ಪತ್ರಕರ್ತರು ಎಚ್ಚೆತ್ತುಕೊಳ್ಳುವ ಸಮಯವಿದು.
ಪ್ರಗತಿಪರ ನಿಲುವಿನ ವಿಚಾರಧಾರೆಗಳನ್ನು ಪ್ರಕಟಿಸುತ್ತ ಬಂದಿರುವ ಗದಗಿನ ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿರವರ ವಿಚಾರಣೆಗೆ ರಾತ್ರಿ 11 ಗಂಟೆಗೆ ಆಗಮಿಸುವ ಮೈಸೂರು ಪೊಲೀಸರು, ಪುಸ್ತಕವೊಂದರ ಬಗ್ಗೆ ವಿಚಾರಣೆ ನಡೆಸಿ, ಪ್ರಕಾಶಕರು ಎರಡು ಮೂರು ದಿನದಲ್ಲಿ ಮೈಸೂರಿನ ಪೊಲೀಸ್ ಸ್ಟೇಷನ್ಗೆ ವಿಚಾರಣೆಗೆ ಬರಬೇಕು ಎಂದು ಆದೇಶ ಮಾಡಿ ಹೋಗಿದ್ದಾರೆ!
‘ರಾಮ ಮಂದಿರ ಏಕೆ ಬೇಡ?’ ಎಂಬ ಪುಸ್ತಕವನ್ನು ಮೈಸೂರಿನ ಕೆ.ಎಸ್ ಭಗವಾನ್ ಬರೆದಿದ್ದರು. ಅದನ್ನು ಕಳೆದ ವರ್ಷ ಬಸವರಾಜ ಸೂಳಿಭಾವಿ (ಬಸೂ) ಅವರ ಲಡಾಯಿ ಪ್ರಕಾಶನ ಪ್ರಕಟಿಸಿತು. ಹೋದ ವರ್ಷದ ಡಿಸೆಂಬರ್ ನಲ್ಲಿ ಆ ಪುಸ್ತಕದ ಎರಡನೇ ಮುದ್ರಣ ಹಾಕಿದ ಭಗವಾನ್ ಅವರು (ಇದನ್ನು ಅವರು ಲಡಾಯಿ ಪ್ರಕಾಶನದ ಅನುಮತಿ ಪಡೆಯದೇ ಮಾಡಿದರು ಎಂಬ ಆರೋಪವಿದೆ, ಅದು ಬೇರೆ ವಿಷಯ), ಅದರ ಬಿಡುಗಡೆ ಸಮಾರಂಭದಲ್ಲಿ ‘ಪ್ರಚೋದನಾತ್ಮಕ’ವಾಗಿ ಮಾತಾಡಿದರು ಎಂದು ಒಬ್ಬರು ದೂರು ನೀಡಿದ್ದರು.
ಇಲ್ಲಿವರೆಗೆ ಸುಮ್ಮನಿದ್ದ ಪೊಲೀಸರು ದಿಢೀರ್ ಅಂತಾ ಅಲರ್ಟ್ ಆಗಿಬಿಟ್ಟು ಮೈಸೂರಿಂದ ಗದಗಿಗೆ ಬಂದು ರಾದ್ಧಾಂತ ಮಾಡಿ ಹೋಗಿದ್ದಾರೆ. ಭಗವಾನ್ ‘ಪ್ರಚೋದನಾತ್ಮಕ’ವಾಗಿ ಮಾತಾಡಿದ್ದರೆ ಅವರನ್ನೇ ಅದೇ ಮೈಸೂರಲ್ಲಿ ವಿಚಾರಿಸಬೇಕಿತ್ತಲ್ಲ? ಅದು ಬಿಟ್ಟು ಪುಸ್ತಕ ಮೊದಲ ಬಾರಿಗೆ ಆ ಪ್ರಕಟಿಸಿದವರ ಕಚೇರಿಗೆ ರಾತ್ರೋರಾತ್ರಿ ದಾಳಿ ಇಡುವುದು, ವಿಚಾರಣೆಗೆ ಬನ್ನಿ ಅನ್ನುವುದು ಏನನ್ನು ಸೂಚಿಸುತ್ತದೆ?
ವಾರ್ ಅ್ಯಂಡ್ ಪೀಸ್ ಶುರುವಾಗಿದೆ ಸೈಲೆಂಟ್ ಯುದ್ಧ… ಶಾಂತಿ ಅಂತಾ ಕೂತುಬಿಡೋಣವೇ ಬರಹಗಾರರೇ?